Sunday, 22nd September 2024

ಅಂಬೇಡ್ಕರರಿಗೆ ಸಿಗದ ಸ್ವಾತಂತ್ರ‍್ಯ !

ವೀಕೆಂಡ್ ವಿತ್ ಮೋಹನ್

ಮೋಹನ್ ವಿಶ್ವ

camohanbbn@gmail.com

ಅಂಬೇಡ್ಕರರಿಗೆ ಸಂವಿಧಾನ ರಚನೆ ಬಗ್ಗೆ ಹಲವು ಕನಸುಗಳಿದ್ದವು. ಶೋಷಿತ ಸಮಾಜದಿಂದ ಬಂದಿದ್ದ ಅವರಿಗೆ ದೇಶದ ಪ್ರಜಾಪ್ರಭುತ್ವದ ಬೇಕಿರುವ ಪರಿಕಲ್ಪನೆಗಳಿದ್ದವು. ಹೀಗಾಗಿ ಕರಡಿನಲ್ಲಿದ್ದ ಹಲವು ಸಮಸ್ಯೆಗಳ ಬಗ್ಗೆ ಅಂಬೇಡ್ಕರ್ ಸಹಜವಾಗಿ ಧ್ವನಿ ಎತ್ತಿದರು.

ನವೆಂಬರ್ 26 – 1949, ಭಾರತದ ‘ಸಂವಿಧಾನ’ವನ್ನು ಸಭೆಯು ಅಂಗೀಕರಿಸಿದ ದಿನ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿತವಾದ ಪ್ರಜಾಪ್ರಭುತ್ವ ಬದ್ಧ ಸಂವಿಧಾನವಿದು. ಇದಕ್ಕೆ ಬೇಕಿರುವ ಹಕ್ಕು ಪ್ರಜೆಗಳಿಂದ ಬರುತ್ತದೆ. ಪ್ರಜೆಗಳಿಂದ ಆಯ್ಕೆ ಆದ ಶಾಸಕರು ಹಾಗೂ ಸಂಸತ್ ಸದಸ್ಯರ ಮೂಲಕ ಸಂವಿಧಾನ ತನ್ನ ಹಕ್ಕು ಪಡೆಯುತ್ತದೆ.

ಭಾರತ ಸಂವಿಧಾನ ರಚನೆಯೇ ಒಂದು ರೋಚಕ ಕಥೆ. ಬ್ರಿಟಿಷರು ಭಾರತ ಬಿಟ್ಟು ಹೊರಡಲು ಸಿದ್ಧರಾದ ನಂತರ ಶುರು ವಾದ ಪ್ರಕ್ರಿಯೆಯ ಹಿಂದೆ ಹಲವು ಕಥೆಗಳಿವೆ. ಅಂದಿನ ಕಾಲಘಟ್ಟದಲ್ಲಿ ಜಗತ್ತಿನಲ್ಲಿದ್ದಂತಹ ಹಲವು ಮುಂದುವರಿದ ದೇಶಗಳ ಸಂವಿಧಾನದ ಅಧ್ಯಯನವೇ ನಮ್ಮ ಸಂವಿಧಾನದ ಕಲ್ಪನೆಗೆ ಪಂಚಾಂಗ. ನೆಹರು ಹಾಗೂ ಸರ್ದಾರ್ ವಲ್ಲಭ್ ಭಾಯ್ ಪಟೇಲರು ಸಂವಿಧಾನದ ರಚನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಾನೂನು ಹಾಗೂ ಸಂವಿಧಾನ ತಜ್ಞರನ್ನು ಬಳಸಿಕೊಳ್ಳಬೇಕೆಂದು ಕೋರಿ ಮಹಾತ್ಮ ಗಾಂಽಯವರ ಬಳಿ ಹೋಗಿದ್ದರು. ಆದರೆ ಅದಕ್ಕೊಪ್ಪದ ಮಹಾತ್ಮ ಭಾರತದಲ್ಲಿ ‘ಅಂಬೇಡ್ಕರ್’ರಂತಹ ತಜ್ಞರಿರುವಾಗ ಇತರೆ ದೇಶದ ತಜ್ಞರ ಅವಶ್ಯಕತೆ ಇಲ್ಲವೆಂಬುದನ್ನು ನೆಹರೂವಿಗೆ ಮನವರಿಕೆ ಮಾಡಿಕೊಟ್ಟರು.

ಸಮಯದ ಅಭಾವವಿರುವ ಕಾರಣ ಅಂತಾರಾಷ್ಟ್ರೀಯ ತಜ್ಞರನ್ನು ಬಳಸಿಕೊಳ್ಳೋಣವೆಂದು ನೆಹರು ಒತ್ತಾ ಯಿಸಿದರೂ ಒಪ್ಪದ ಗಾಂಧಿ ಅಂಬೇಡ್ಕರರ ಸಾಮರ್ಥ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಂಬೇಡ್ಕರರಿಗೆ ಭಾರತೀಯ ಸಂವಿಧಾನ ರಚನೆಯ ಬಗ್ಗೆ ಹಲವು ಕನಸುಗಳಿದ್ದವು. ಸ್ವತಃ ಶೋಷಿತ ಸಮಾಜದಿಂದ ಬಂದಿದ್ದ ಅವರಿಗೆ ಭಾರತೀಯ ಪ್ರಜಾಪ್ರಭುತ್ವಕ್ಕನುಗುಣವಾಗಿ ಅಗತ್ಯ ಸಂವಿಧಾನದ ಸ್ಪಷ್ಟ ಪರಿಕಲ್ಪನೆಗಳಿದ್ದವು. ಹೀಗಾಗಿ ಕರಡಿನಲ್ಲಿದ್ದ ಹಲವು ಸಮಸ್ಯೆಗಳ ಬಗ್ಗೆ ಅಂಬೇಡ್ಕರ್ ಸಹಜವಾಗಿ ಧ್ವನಿ ಎತ್ತಿದರು. ಆದರೆ ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ನೆಹರು ಸ್ವತಃ ಅಧ್ಯಕ್ಷರಾಗಿದ್ದರೂ ಅಂಬೇಡ್ಕರ್ ಅವರಿಗೆ ಹೆಚ್ಚಿನ ಮಹತ್ವ ನೀಡಲು ಬಿಡುತ್ತಿರಲಿಲ್ಲ.

ಕೊನೆಗೂ ಅಮೂಲ್ಯ ಸಲಹೆಗಳನ್ನು ತಿರಸ್ಕರಿಸಿದ ನೆಹರು ತಮ್ಮ ಮೂಗಿನ ನೇರಕ್ಕೆ ಅಳವಡಿಸಿದ ಸಂವಿಧಾನದ ಹಲವು ಪರಿಚ್ಛೇದಗಳನ್ನು ಜಾರಿಗೊಳಿಸಿದ ಪರಿಣಾಮವೇ ಇಂದಿಗೂ ಹಲವು ಸಮಸ್ಯೆಗಳನ್ನು ನಮ್ಮನ್ನು ಕಾಡುತ್ತಿರುವುದು. ‘ಜಮ್ಮು ಹಾಗೂ ಕಾಶ್ಮೀರ’ಕ್ಕೆ ನೆಹರು ನೀಡಿದ ವಿಶೇಷ ಸ್ಥಾನಮಾನವನ್ನು ಅಂಬೇಡ್ಕರರು ಅಂದೇ ನಿರಾಕರಿಸಿದ್ದರು. ದೇಶದಲ್ಲಿ ಎರಡೆರಡು ಸಂವಿಧಾನವಿರುವುದು ಒಳ್ಳೆಯ ಬೆಳವಣಿಗೆಯಲ್ಲವೆಂಬುದನ್ನು ನೇರವಾಗಿ ವಿರೋಧಿಸಿದ್ದರು.
ಅಂಬೇಡ್ಕರರ ದೂರದೃಷ್ಟಿ ಎಷ್ಟಿತ್ತೆಂದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದರಿಂದಾಗುವ ಅನಾಹುತಗಳ ಬಗ್ಗೆ ಸ್ಪಷ್ಟ ಅರಿವಿತ್ತು. ಅವರ ವಿರೋಧದ ನಡುವೆಯೂ ಅಬ್ದುನ ಮಾತು ಕೇಳಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರು ನೆಹರು.

ಪರಿಣಾಮ ಕಣಿವೆ ರಾಜ್ಯದಲ್ಲಿ ಕಳೆದ ಏಳು ದಶಕಗಳಿಂದ ದಂಗೆ-ಗಲಭೆಗಳು ಆಗುತ್ತಲೇ ಇವೆ. ವಿಶೇಷ ಸ್ಥಾನಮಾನ ನೀಡಿದರೂ ಕಾಶ್ಮೀರದ ಪ್ರತ್ಯೇಕತಾವಾದಿ ಗಳು ಪಾಕಿಸ್ತಾನದ ಜೊತೆ ಕೈ ಜೋಡಿಸಿದ್ದಾರೆ, ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಆರ್ಥಿಕತೆಯಲ್ಲೂ ನಿಪುಣ ಅಂಬೇಡ್ಕರರಿಗೆ ವಿತ್ತ ಸಚಿವರಾಗಬೇಕೆಂಬ ಆಸೆಯಿತ್ತು. ಆದರೆ ನೆಹರು ತಮ್ಮ ಸರಕಾರದಲ್ಲಿ ಅವರನ್ನುಕಾನೂನು ಸಚಿವ ಸ್ಥಾನಕ್ಕೆ ಸೀಮಿತಗೊಳಿಸಿದರು. ಅದೂ ಗಾಂಽಜಿ ಹಾಗೂ ಸರ್ದಾರ್ ಪಟೇಲರ ಆಗ್ರಹಕ್ಕೆ ಬಿದ್ದು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು. ಆದರೆ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದ ಬಾಬಾಸಾಹೇಬರ ಪ್ರತಿಭೆಯನ್ನು ದೇಶದ ಹಿತಕ್ಕಾಗಿ ಬಳಸಬಹುದೆಂಬುದು ನೆಹರೂವಿಗೆ ಮಹತ್ವದ ಸಂಗತಿಯಾಗಿ ಕಾಣಿಸಲೇ ಇಲ್ಲ!

ಸಂವಿಧಾನದ ವಿಷಯದಲ್ಲಿ ಅಂಬೇಡ್ಕರರು ಮಾಡಬೇಕಿದ್ದ ಕೆಲಸದ ಸನ್ನಿವೇಶ ಹಾಗು ಹಿನ್ನೆಲೆಗಳನ್ನು ತಿಳಿಯಬೇಕಾದ ಅಗತ್ಯವಿದೆ. ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ಕಾರಣವಾಗಿದ್ದಂತಹ 1935ರ ಕಾನೂನಿನ ಅಧಿನಿಯಮದಲ್ಲಿ ಹೇಳಲಾಗಿದ್ದ ‘ಒಕ್ಕೂಟ ರಾಜ್ಯ’ದ ಕಲ್ಪನೆಯನ್ನು ಅಂಬೇಡ್ಕರರು ಬೆಂಬಲಿಸಿರಲಿಲ್ಲ. ಕರಡು ಸಮಿತಿ ಭಾರತವು ಒಂದು ’ಸಂಘರಾಜ್ಯ’ವೆಂಬಂತೆ ಸ್ಪಷ್ಟಪಡಿಸಲು ಇಚ್ಛಿಸಿತ್ತು. ಯಾವುದೇ ರಾಜ್ಯಕ್ಕೆ ಅದೇ ರೀತಿ ಇನ್ನೊಮ್ಮೆ
ಇಚ್ಛೆಪಟ್ಟು ಪ್ರತ್ಯೇಕಗೊಳ್ಳುವ ಹಕ್ಕಿರುತ್ತದೆ ಎಂದಾಗುತ್ತದೆಯಲ್ಲವೇ? ಆದರೆ ಹಾಗಾಗಲು ಎಂದೂ ಅವಕಾಶಕೊಡ ಬಾರದು. ಇದೇ ಕಾರಣಕ್ಕೆ ಸಮಸ್ಯೆ ಯಾಗದಂತೆ ನೋಡಿಕೊಳ್ಳಲು ಕರಡು ಸಮಿತಿ ‘ಸಂಘರಾಜ್ಯ’ದ ವೈಶಿಷ್ಟ್ಯವನ್ನು ಸ್ಪಷ್ಟಪಡಿಸುವುದು ಉಚಿತವೆಂದು ನಿರ್ಧರಿಸಿತ್ತು. ಸಂವಿಧಾನ ಸಮಿತಿಯಲ್ಲಿದ್ದ ಹೆಚ್ಚಿನ ಸದಸ್ಯರಿಗೆ ದೇಶದ ಭವಿಷ್ಯಕ್ಕಿಂತಲೂ ಸ್ವಂತ ಭವಿಷ್ಯವೇ ಮುಖ್ಯವಾಗಿತ್ತೆಂಬುದು ಅಂಬೇಡ್ಕರರಿಗೆ ತಿಳಿದಿತ್ತು.

ಹೀಗಾಗಿ ಸಂವಿಧಾನದಲ್ಲಿ ಬಳಸಬೇಕಿರುವ ಶಬ್ದಗಳ ಬಗ್ಗೆ ಒಂದಿನಿತೂ ತಪ್ಪಿರಬಾರದೆಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ‘ಅಲ್ಪ ಸಂಖ್ಯಾತ’ವೆಂಬ ಪದ
ಬಳಸಿದರೆ, ತಮ್ಮ ಸ್ವಾರ್ಥಕ್ಕಾಗಿ ಕೆಲವರು ಅದನ್ನೇ ದುರ್ಬಳಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸಬಹುದೆಂಬ ಕಾರಣಕ್ಕೆ ಆ ಜಾಗದಲ್ಲಿ ‘ಸಮಾಜದ ಯಾವುದೇ ಭಾಗ’ವೆಂಬ ಪದವನ್ನು ಬಳಸಿದ್ದರು ಅಂಬೇಡ್ಕರ್.

ಸಂವಿಧಾನ ರಚಿಸುವಾಗ ಸಂಸದರು ಹಾಗೂ ಮಂತ್ರಿಗಳ ಅಸಮಾಧಾನವನ್ನು ಎದುರಿಸಬೇಕಿತ್ತು. ಸಂವಿಧಾನದಲ್ಲಿ ಮೊದಲು 243 ಅನುಚ್ಛೇದಗಳು ಮತ್ತು 13 ಅನುಸೂಚಿಗಳಿದ್ದವು. ಬಾಬಾಸಾಹೇಬರು ಅವುಗಳಿಗೆ ತಿದ್ದುಪಡಿಯ ಸಲಹೆ ನೀಡಿ 395 ಅನುಚ್ಛೇದಗಳು ಹಾಗೂ 8 ಅನುಸೂಚಿಗಳ ಸಂವಿಧಾನ ರಚಿಸಿದರು. ಕೆಲವೊಮ್ಮೆ ಕಾಂಗ್ರೆಸ್ ಸದಸ್ಯರ ಒತ್ತಡಕ್ಕೊಳಗಾಗಿ ಕೆಲವು ವಿಽಗಳನ್ನು ಹಾಗೆಯೆ ಉಳಿಸಿಕೊಳ್ಳಬೇಕಿತ್ತು. ಇಷ್ಟಾದರೂ ಬಾಬಾಸಾಹೇಬರ ವಿರುದ್ಧ
ಹಲವರನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಬಾಬಾಸಾಹೇಬರು ಕೆಲವನ್ನು ನೇರವಾಗಿ ಹೇಳದೆ ಇತರರ ಬಾಯಿಂದ ಹೇಳಿಸಿದ್ದೂ ಇದೆ.

ಅಂತಹವರಿಗೆ ಬಾಬಾಸಾಹೇಬರು ಅದೆಷ್ಟು ಚೆನ್ನಾಗಿ ತರಬೇತಿ ನೀಡುತ್ತಿದ್ದರೆಂದರೆ ಕೇಳುವವರಿಗೆ ವಿಚಾರವೆಲ್ಲವೂ ಬಾಬಾಸಾಹೇಬರದ್ದೇ ಎಂಬುದು ಸ್ಪಷ್ಟ ವಾಗುತ್ತಿತ್ತು. ‘ಅಸ್ಪೃಶ್ಯ’ರಿಗೆ ಪ್ರತ್ಯೇಕ ಮತದಾರರ ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಅವರು ಹಿಂದುಳಿದ ವರ್ಗದ ಪ್ರತಿನಿಧಿ ನಾಗಪ್ಪರವರಿಂದ ಮಾಡಿಸಿ ದ್ದರು. ಆ ದಿನ ಅವರು ಸದನದಲ್ಲಿ ಹಾಜರಿರಲಿಲ್ಲ. ಒಟ್ಟಿನಲ್ಲಿ ಬಾಬಾಸಾಹೇಬರಿಗೆ ತಮ್ಮ ಮನದ ಇಚ್ಛೆಗನುಗುಣವಾಗಿ ಸಂವಿಧಾನವನ್ನು ಸಂಪೂರ್ಣ ರಚಿಸ ಲಾಗಲಿಲ್ಲವೆಂಬ ನೋವು ಇದ್ದೇ ಇತ್ತು. ಅವರ ವಿರೋಧಿಗಳೆಲ್ಲರೂ ‘ಸಂವಿಧಾನವನ್ನು ರಚಿಸಿದವರು ನೀವೇ’ ಎಂದು ಹೇಳಿದಾಗಲೆಲ್ಲ, ಬಾಬಾಸಾಹೇಬರು ‘ಇಲ್ಲ ಸ್ವಾಮಿ ನಾವು ಒಂದು ಪರಂಪರೆಯ ವಾರಸುದಾರರಷ್ಟೇ.

ನೋಡಿ, ಸಂವಿಧಾನ ರಚಿಸಿದವರು ನೀವೆಂದು ಜನ ಹೇಳುತ್ತಿದ್ದಾರೆ, ಆದರೆ ನಾನೊಬ್ಬ ಕತ್ತೆಯಂತೆ ಮಾತ್ರ ದುಡಿದೆ. ನನಗೆ ಏನನ್ನು ಮಾಡಲು ತಿಳಿಸಲಾಗಿತ್ತೋ
ಅದನ್ನು ಮಾಡಿದೆ. ನಾನದನ್ನು ಬಹುತೇಕ ನನ್ನ ಇಚ್ಛೆಗೆ ವಿರುದ್ಧವಾಗಿ ಮಾಡಿದ್ದೇನೆ’ ಎಂದೇ ಹೇಳುತ್ತಿದ್ದರು. ಇಂದು ಹಲವು ನಾಯಕರು ‘ಜಾತ್ಯತೀತತೆ’ಯ
ಹೆಸರಿನಲ್ಲಿ ಮುಸಲ್ಮಾನರ ಹಕ್ಕುಗಳ ಬಗ್ಗೆ ತೋರಿಸುವ ಹೆಚ್ಚಿನ ಪ್ರೀತಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ‘ಜಾತ್ಯತೀತತೆ’ ಕುರಿತು ಬಾಬಾಸಾಹೇಬರು ಯೋಚಿಸಿದ್ದು ಎಷ್ಟು ಸ್ಪಷ್ಟವಾಗಿತ್ತೆಂದರೆ, ಸಂವಿಧಾನದ ಸಭೆಯ ಚರ್ಚೆಯೊಂದರಲ್ಲಿ ಜಾತ್ಯತೀತತೆಯ ನಿಜ ಅರ್ಥವನ್ನು ಅವರು ವಿಶ್ಲೇಷಿಸಿದ್ದರು. ಸಂವಿಧಾನ ರಚನೆ ಸಂದರ್ಭದಲ್ಲಿ ಮುಸಲ್ಮಾನರ ದೃಷ್ಟಿಕೋನ ಬಾಬಾಸಾಹೇಬರಿಗೆ ಅಚ್ಚರಿಯನ್ನೇನೂ ಉಂಟು ಮಾಡಿರಲಿಲ್ಲ.

ರಾಷ್ಟ್ರಭಕ್ತಿಯ ವಿಷಯದಲ್ಲಿ ಅವರೆಂದೂ ಇತರರಿಗೆ ಸಮರಲ್ಲವೆಂಬುದು ತಿಳಿದಿತ್ತು. ಮುಸಲ್ಮಾನರೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ ಗಾಂಧೀಜಿಯವರಿಗೆ ಅವರ ಮಾನಸಿಕತೆಯ ಅರಿವಾಗಲಿಲ್ಲವೆಂಬುದರ ಬಗ್ಗೆ ಬಾಬಾಸಾಹೇಬರಿಗೆ ಸಖೇದಾಶ್ಚರ್ಯವಿತ್ತು. ಮುಸಲ್ಮಾನರಿಂದ ಬಹುದೂರವಿದ್ದಂತಹ ‘ಬರ್ನಾಡ್
ಶಾ’ಗೆ ಅರ್ಥವಾಗಿದ್ದಂತಹ ಸಂಗತಿಯೂ ಗಾಂಧೀಜಿಯವರಿಗೆ ಅರ್ಥವಾಗದಿರುವ ಕುರಿತು ಬೇಜಾರು ಬಾಬಾಸಾಹೇಬರಿಗಿತ್ತು. ವಾಸ್ತವದ ಸಂಪೂರ್ಣ ಅರಿವಿದ್ದ
ಕಾರಣಕ್ಕೇ ಸಂವಿಧಾನ ಪ್ರಕ್ರಿಯೆಯಲ್ಲಿ ಮುಸಲ್ಮಾನರ ನಡವಳಿಕೆಯ ಅಂದಾಜನ್ನು ಬಾಬಾ ಸಾಹೇಬರು ಮೊದಲೇ ಮಾಡಿದ್ದರು. ತಾವು ‘ಅಲ್ಪಸಂಖ್ಯಾತ’ ರಾಗಿದ್ದುಕೊಂಡೇ ತಮ್ಮ ಉದ್ದೇಶ ಈಡೇರಿಸಿಕೊಳ್ಳಬೇಕೆಂಬುದಷ್ಟೇ ಅವರಿಗಿದ್ದ ಲಕ್ಷ್ಯ. ಹಿಂದೂಗಳು ಬಹುಸಂಖ್ಯಾತರೆಂಬ ಕಾರಣ ಮುಂದಿಟ್ಟು, ತಮ್ಮದೇ ಪ್ರತ್ಯೇಕ ಮತದಾರ ಕ್ಷೇತ್ರದ ಬೇಡಿಕೆ ಯನ್ನಿಟ್ಟು ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವುದು ಮುಸಲ್ಮಾನರ ಹುನ್ನಾರವಾಗಿತ್ತು.

ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತರಾಗಿ ವಾಸಿಸುವ ಕೆಲವು ಹೊಸ ಪ್ರಾಂತ್ಯಗಳನ್ನು ರಚಿಸುವ ಯೋಚನೆ ಅವರಿಗಿತ್ತು. ಅವುಗಳನ್ನು ದೃಢ ಹಾಗೂ ಶಕ್ತಿಯುತವಾಗಿ ಮಾಡುವುದೇ ಇವರಿಗೆ ಎಲ್ಲಕ್ಕಿಂತಲೂ ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ಅವರು ಪ್ರತ್ಯೇಕ ‘ಸಿಂಧ್’ ಪ್ರಾಂತ್ಯದಲ್ಲಿ ಜವಾಬ್ದಾರಿಯುತ ಸರ್ಕಾರ ಸ್ಥಾಪಿಸುವುದಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಾಂತ್ಯಗಳಿಗೆ ವಿಶೇಷಾಧಿಕಾರ ನೀಡುವ ಬೇಡಿಕೆಯ ಜತೆಗೆ ಕೇಂದ್ರದಲ್ಲಿ ಹಿಂದುಗಳಿಗೆ ಪ್ರಾತಿನಿಧ್ಯ ಕಡಿಮೆಗೊಳಿಸುವ ಪ್ರಯತ್ನವನ್ನೂ ಮಾಡಿದರು. ಬ್ರಿಟಿಷ್ ಇಂಡಿಯಾ ಇzಗ ನಿರ್ಧರಿಸಲಾಗಿದ್ದ ಸ್ಥಾನಗಳ ಪೈಕಿ ಮೂರನೇ ಒಂದು ಭಾಗದಷ್ಟನ್ನು ಮುಸಲ್ಮಾನರಿಗೆ ನೀಡಬೇಕೆಂಬ ಬೇಡಿಕೆಯನ್ನಿಟ್ಟರು.

ಇವೆಲ್ಲದರ ಅರಿವಿದ್ದ ಕಾರಣಕ್ಕಾಗಿಯೇ ಅಂಬೇಡ್ಕರರು ಹಿಂದೂ ಸಮಾಜದಲ್ಲಿ ಶೋಷಣೆ ಗೊಗಾದರೂ ಮುಸಲ್ಮಾನ್ ಗೆ ಮತಾಂತರವಾಗಲಿಲ್ಲ. ಕ್ರಿಶ್ಚಿಯನ್ ಮಿಷನರಿಗಳ ಅಪಾಯಕಾರಿ ಮತಾಂತರವನ್ನು ವಿರೋಧಿಸಿ ಕ್ರಿಶ್ಚಿಯನ್ ಧರ್ಮಕ್ಕೂ ಮತಾಂತರವಾಗಲಿಲ್ಲ. ಮುಸಲ್ಮಾನರು ಮತಾಂಧರಷ್ಟೇ ಅಲ್ಲ, ಭಾರತದ ರಾಷ್ಟ್ರೀಯತೆಯಲ್ಲಿ ಅವರಿಗಿರುವ ಒಲವು ತುಂಬಾ ಕಡಿಮೆ. ಅದಕ್ಕಾಗಿ ಅವರಿಗೆ ಪ್ರತ್ಯೇಕ ಭೂಭಾಗ ಕೊಟ್ಟು ಅಲ್ಲಿ ಮುಸಲ್ಮಾನರು, ಇಲ್ಲಿ ಹಿಂದೂಗಳು ಎಂಬಂತೆ ಸ್ಥಳಾಂತರಿಸಬೇಕೆಂಬ ಅಭಿಪ್ರಾಯ ಮುಂದಿಟ್ಟದ್ದೂ ಉಂಟು ಅಂಬೇಡ್ಕರರು!

ಸಂವಿಧಾನ ಶಿಲ್ಪಿ ಬಾಬಾಸಾಹೇಬರ ಹೆಸರು ಬಳಸಿಕೊಂಡು ಸಲ್ಲದ ರಾಜಕೀಯ ಮಾಡುವ ಕಾಂಗ್ರೆಸಿಗರು, ಅವರು ಬದುಕಿದ್ದಾಗ ಸಂವಿಧಾನದ ರಚನೆಯ ವಿಷಯದಲ್ಲಿ ಅವರಿಗೆ ಸ್ವಾತಂತ್ರ್ಯ ನೀಡದೆ ಅವಮಾನಿಸಿದ್ದಾರೆ. ಸಂವಿಧಾನ ದಿನದಂದು ಅವರಿಗೆ ಸಂವಿಧಾನ ರಚನೆಯ ವಿಷಯದಲ್ಲಿ ಆದ ಅನ್ಯಾಯಗಳನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.