Sunday, 22nd September 2024

ನಾರಾಯಣಾಚಾರ್ಯರು ಅಪ್ಪಟ ರಾಷ್ಟ್ರೀಯವಾದಿ

Dr K S Narayanacharya

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

ಪುರಾಣಗಳಲ್ಲಿನ ಸಂದರ್ಭ-ಸನ್ನಿವೇಶಗಳನ್ನು ರಾಮಾಯಣ-ಮಹಾಭಾರತದ ಪ್ರಸಂಗಗಳನ್ನು, ಇಂದಿನ ರಾಜಕೀಯಕ್ಕೆ, ಸನ್ನಿವೇಶಗಳನ್ನುವರ್ತಮಾನಕ್ಕೆ ಸಮೀಕರಿಸಿ ಆಚಾರ್ಯರು ಬರೆಯುವುದಕ್ಕೆ ತೊಡಗಿ ಕೆಲವು ವರ್ಷಗಳೇ ಸಂದುಹೋದವು. ಇವತ್ತಿಗೂ ಅವರ ಅಂಕಣಗಳಲ್ಲಿ ಈ ಸಮಾಜದ ಮತ್ತು ರಾಜಕೀ ಯದ ಓರೆಕೋರೆಗಳನ್ನು ತಿದ್ದು ವುದರಲ್ಲಿ, ದೋಷವನ್ನು ಎತ್ತಿಹಿಡಿದು ತೋರುವಲ್ಲಿ ಮೇಲ್ಪಂಕ್ತಿಯಾಗಿವೆ.

ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಅಪ್ಪಟ ರಾಷ್ಟ್ರೀಯವಾದಿ, ಪ್ರಖರ ಚಿಂತಕ ಹಾಗೂ ಬಹುಭಾಷಾ ವಿದ್ವಾಂಸ ಎಂಬುದು ನಿಸ್ಸಂದೇಹ ಮತ್ತು ನಿರ್ವಿವಾದದ್ದು. ಈ ದೇಶ ಕಂಡ ಬಹುದೊಡ್ಡ ವಿದ್ವಾಂಸ, ಚಿಂತಕರಲ್ಲಿ ಅಗ್ರಮಾನ್ಯರಲ್ಲಿ ಆಚಾರ್ಯರು ಕೂಡ ಇದ್ದಾರೆ.

ಅವರು ಈ ನೆಲದ ಸಾಕ್ಷಿಪ್ರಜ್ಞೆಯಂತಿದ್ದ ಹಿರಿಯ ಜೀವ. ಅಪಾರ, ಅಗಾಧ ವಾದಮೇಧಾ ಶಕ್ತಿಯಿರುವ ಅವರು ಕನ್ನಡನಾಡಿನ ಸರಸ್ವತಿ ಪುತ್ರರ ಸಾಲಿನಲ್ಲಿ ಸಲ್ಲುವವರು. ಅವರು, ಬನ್ನಂಜೆಯವರು, ಶತಾವಧಾನಿ ಡಾ.ಆರ್.ಗಣೇಶ ಅವರೇ ಮುಂತಾದ ಕೆಲವರು ನಿಜಾರ್ಥದಲ್ಲಿ ವಿದ್ವಾಂಸರು, ಚಿಂತಕರು. ನಮ್ಮನ್ನಗಲಿರುವ ನಾರಾಯಣ ಆಚಾರ್ಯರಿಗೆ ಈಗ ೮೮ರ ವಸಂತವಾಗಿದ್ದರೆ, ಅವರ ಅರ್ಧದಷ್ಟು ವಯಸ್ಸು ನನ್ನದು. ಆಚಾರ್ಯರು ಬರೆದ ಪುಸ್ತಕಗಳೆಲ್ಲವನ್ನೂ ಓದಲು ನನಗೆ ಸಾಧ್ಯವಾಗಲಿಲ್ಲ ಎಂಬ ಅಳುಕು ಯಾವತ್ತೂ ನನ್ನಲ್ಲಿದೆ.

ಒಬ್ಬ ಲೇಖಕನ ಅದರಲ್ಲೂ ಆಚಾರ್ಯರಂಥ ಅಪ್ರತಿಮ ಚಿಂತಕ ವಿದ್ವಾಂಸರ ಕೃತಿ ರತ್ನಗಳನ್ನು ಓದಲಿಲ್ಲ ವೆಂದರೆ ಅದು ಅವರನ್ನು ಅವಮಾನಿಸಿದಂತೆಯೇ ಸರಿ ಎಂದು ಭಾವಿಸುನೆ. ಸಾಮಾನ್ಯವಾಗಿ ಕನ್ನಡದ ಎಲ್ಲ ಬರಹಗಾರರದ್ದು, ಅಲ್ಲದಿದ್ದರೂ ಬಹುತೇಕ ಬರೆಹಗಾರರ ಪುಸ್ತಕಗಳನ್ನು ಸಾಧ್ಯವಾದಷ್ಟು ಓದುತ್ತೇನಾದರೂ ಎಲ್ಲರ ಎಲ್ಲ ಪುಸ್ತಕಗಳನ್ನು ನನಗೆ ಓದಲು ಸಾಧ್ಯವಾಗಲಿಲ್ಲ. ಈ ನಾಲ್ವರದ್ದು ಬಿಟ್ಟು ಇಂಥವರದ್ದು ಓದಲೇಬೇಕು ಎಂಬ ಪಟ್ಟಿ ನನ್ನಲ್ಲಿದೆ. ಅಂಥ ಪಟ್ಟಿಯಲ್ಲಿ ಇರುವವರ ಪುಸ್ತಕಗಳನ್ನು ಸಾಧ್ಯವಾದಷ್ಟೂ ಕೊಂಡು ಓದುವ ಅಭ್ಯಾಸ, ಹವ್ಯಾಸ ನನಗಿದೆ. ಮೊದಲೆಲ್ಲ ಆಚಾರ್ಯರ ಅಂಕಣಗಳನ್ನು ತರಂಗದಲ್ಲಿ ಪ್ರತಿವಾರ ಕಾದು ಓದುವ ಅತಿ ಹಂಬಲ, ಆಸಕ್ತಿ, ಕುತೂಹಲವಿತ್ತು.

ಯಾವಾಗ ಅವೆಲ್ಲವೂ ಪುಸ್ತಕಗಳ ರೂಪದಲ್ಲಿ ಪ್ರಕಟವಾದವೋ ಆಚಾರ್ಯರು ಇನ್ನೂ ನನಗೆ ಆಪ್ತರೆನಿಸಿದರು. ಆಚಾರ್ಯರನ್ನು ಅವರ ಬರಹದ ಕಸುವನ್ನು ಯಾರೊಂದಿಗೂ ಸಮೀಕರಿಸಲಾಗಲಿ, ಹೋಲಿಕೆ ಮಾಡಲಾಗಲಿ ಸಾಧ್ಯವೇ ಇಲ್ಲವೆಂದು ಭಾವಿಸುತ್ತೇನೆ. ಯಾಕೆಂದರೆ ಆಚಾರ್ಯರು ಎಲ್ಲರಂತೆ ಬರೆಯು ವವರಲ್ಲ. ಎಲ್ಲರ ಹಾಗೂ ಬರೆಯುವವರಲ್ಲ. ಎಲ್ಲದರ ಬಗ್ಗೆಯೂ ಬರೆಯುವವರಲ್ಲ. ಅವರಂತೆ ಬರೆಯಲು ಎಲ್ಲರಿಗೂ ಸಾಧ್ಯವೂ ಇಲ್ಲ. ರಾಷ್ಟ್ರಹಿತ, ಕ್ಷೇಮ, ಪ್ರಜ್ಞೆ, ರಾಷ್ಟ್ರೀಯತೆಯನ್ನು ಬಿಟ್ಟು ಅವರ ಬರಹಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಅಂತೆಯೇ ಅವರ ಮಾತೂ ಕೂಡ.

ಅಧ್ಯಾತ್ಮ, ಪುರಾಣಗಳು, ರಾಮಾಯಣ ಮಹಾಭಾರತ, ವೇದೋಪನಿಷತ್ತು, ಭಗವದ್ಗೀತೆ, ಆಚಾರ್ಯತ್ರಯರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಹರವು, ರಾಜಕೀಯ ಚಿಂತನೆ ಮತ್ತು ಪರಾಮರ್ಶೆ, ಜಾತ್ಯತೀತತೆ, ಭಾರತ ಮತ್ತು ವಿಶ್ವದ ಇತಿಹಾಸ, ಜಾಗತಿಕ ವಿದ್ಯಮಾನಗಳು, ಸಾಹಿತ್ಯ, ಅದರ ವಿಮರ್ಶೆ, ಆತ್ಮಚರಿತ್ರೆ, ಜೀವನ ಚರಿತ್ರೆ, ಸ್ವಾತಂತ್ರ್ಯ ಪೂರ್ವೋತ್ತರ ಭಾರತದ ರಾಜಕಾರಣ, ಅದರ ವೈಚಾರಿಕ ತಾರ್ಕಿಕ ಬೌದ್ಧಿಕ ವಿಮರ್ಶೆ-ಇವು ಆಚಾರ್ಯರ
ಬರೆವಣಿಗೆಯ ವ್ಯಾಪ್ತಿ ಮತ್ತು ವಿಸ್ತಾರ. ಹಾಗಂತ ಉಳಿದ ವಿಷಯ ಕ್ಷೇತ್ರಗಳಲ್ಲಿ ಆಚಾರ್ಯರಿಗೆ ಬರೆಯುವ ಸಾಮರ್ಥ್ಯ ಇಲ್ಲವೆಂದಲ್ಲ. ಸಾಂದರ್ಭಿಕವಾಗಿ ಅವರು ಬರೆದದ್ದೂ ಇದೆ.

ಹಾಗೆ ನೋಡಿದರೆ ಕ್ರೀಡೆಯ ಬಗ್ಗೆ ಆಚಾರ್ಯರು ಬರೆಯಲಿಲ್ಲವೇನೋ! ಅವರ ಬರಹದ ಶಕ್ತಿಯಿರುವುದು ಅದ್ಭುತ ವೆನಿಸಬಹುದಾದ ಚಿಂತನೆಯ ಒಳನೋಟ ಗಳಲ್ಲಿ. ಈವರೆಗೆ ಆಚಾರ್ಯರು ಸುಮಾರು ೨೦೦ಕ್ಕೂ ಪುಸ್ತಕಗಳನ್ನು ಬರೆದಿರಬಹುದು. ಪತ್ರಿಕೆಗಳಿಗೆ ಬರೆದ ಅಂಕಣಗಳಿಗೆ ಲೆಕ್ಕವೇ ಇಲ್ಲವೇನೋ ಎನ್ನುವಷ್ಟಿದೆ. ಹೀಗಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಹೆಚ್ಚಿನ ಅಂಕಣಗಳೆಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ.

ಮೊನ್ನೆಯಷ್ಟೇ ಊರ್ವಶೀ ಪುರೂರವ (ಕಾದಂಬರಿ), ಅಗ್ನಿಹೋತ್ರ ತತ್ವ (ಧಾರ್ಮಿಕ), ನಹುಷ (ಕಾದಂಬರಿ)ಗಳನ್ನು ಈ ಇಳಿವಯಸ್ಸಿನಲ್ಲಿ ಬರೆದು ಮುಗಿಸಿದ್ದಾರೆ. ಇವೆಲ್ಲ ಓದುಗರ ಕೈಸೇರಿ ಓದಿ ಮುಗಿಸುವಷ್ಟರಲ್ಲಿ ಮಹಾಭಾರತ ಆದಿ ಪರ್ವದ ಪಾತ್ರಗಳನ್ನು, ವ್ಯಕ್ತಿತ್ವಗಳನ್ನು- ವ್ಯಾಸದರ್ಶನಕ್ಕನುಸಾರವಾಗಿಯೇ, ಅಂದರೆ ಮೂಲದರ್ಶನಕ್ಕೆ ಕಿಂಚಿತ್ತಾದರೂ ಚ್ಯುತಿಬಾರದಂತೆ-ವೇದ, ಉಪನಿಷತ್ತು, ಭಾಗವತ, ಪುರಾಣಾದಿ ಮೂಲಗಳಿಂದ ಹೆಕ್ಕಿತೆಗೆದು, ಪೂರ್ಣ ರೂಪವನ್ನೇ ಚಿತ್ರಿಸಿ
ಕಾದಂಬರೀಕರಣಗೊಳಿಸಿದ್ದಾರೆ. ಇದು ಅವರ ಓದಿನ ಮತ್ತು ಬರೆಹದ ತಾಕತ್ತು ಮಾತ್ರವಲ್ಲ, ಸತ್ಯವನ್ನು ಜನರಿಗೆ ಉಣಿಸಬೇಕು.

ಅದಮ್ಯ ಮಹತ್ವಾಕಾಂಕ್ಷೆ. ಯಾಕೆಂದರೆ, ಈ ಬಗೆಯ ಕಾದಂಬರೀಕರಣಗೊಳಿಸಿದ ಕನ್ನಡದ ಮತ್ತು ಭಾರತೀಯ ಭಾಷೆಗಳ ಹಲವು ಖ್ಯಾತ ಕಾದಂಬರಿಕಾರರೂ ಇಂತಹ ಪ್ರಯತ್ನ ಮಾಡಿ ಯಶಸ್ಸು ಕಂಡ ಭ್ರಮೆಯಲ್ಲಿರುವವರಾದರೂ, ಮೂಲ ದರ್ಶನಕ್ಕೆ ಅಪಚಾರವೆನಿಸುವಂತೆ, ಆಪಾತ್ರಗಳನ್ನು, ಅವುಗಳ ಸ್ವಭಾವ-ಧೋರಣೆಗಳನ್ನು ಯದ್ವಾತದ್ವಾ ತಿರುಚಿ, ಇತಿಹಾಸಕ್ಕೆ ಅಪಚಾರವೆಸಗಿದ್ದೂ ನಿಜ. ಮೂಲದ ರಸ, ರೋಚಕತೆಗಳ ಅರಿವಿಗೆ ಆ ಲೇಖಕರ ವೇದ ಗ್ರಹಿಕೆಯ ಮಿತಿಯಿದ್ದಿರಬಹುದಾದರೂ, ರಸ, ಶೃಂಗಾರ, ಲೇಖಕನ ಸ್ವಾತಂತ್ರ್ಯ, ಇತ್ಯಾದಿಗಳ ಹೆಸರಿನಲ್ಲಿ ಸಂಸ್ಕೃತ ಬಾರದ ಓದುಗರಿಗೆ, ಇದೇ ನಿಜವಾದ ಮಹಾ ಭಾರತವೆನಿಸುವಂತೆ ಮಾಡಿ ವಂಚಿಸುವುದಂತೂ ಸತ್ಯ.

ಆಚಾರ್ಯರದ್ದು ಕಾಲ್ಪನಿಕ, ಭ್ರಮಾತ್ಮಕ, ಊಹಾತ್ಮಕ ಬೌದ್ಧಿಕತೆಯಲ್ಲ. ಶುಷ್ಕ ವೈಚಾರಿಕತೆಯೂ ಅಲ್ಲ. ಪ್ರತಿಯೊಂದೂ ತಾರ್ಕಿಕ, ವೈಚಾರಿಕ ಲೇಖನಗಳೇ ಆದ್ದರಿಂದ ತಳಸ್ಪರ್ಶಿ ಅಧ್ಯಯನವಿಲ್ಲದೆ ಯಾವುದನ್ನೂ ಅವರು ಬರೆಯಲಾರರು. ತಾನು ಬರೆಯಬೇಕಾದ ಅಥವಾ ಮಾತನಾಡಬೇಕಾದ ವಿಚಾರಗಳ ಬಗ್ಗೆ ಯಾವುದೇ ಅಧ್ಯಯನ ಮಾಡದೆ, ಸಂಶೋಧನೆ ಮಾಡದೆ ಆಚಾರ್ಯರು ಬರೆಯಲಾರರು, ಮಾತನಾಡಲಾರರು. ಸುಳ್ಳನ್ನು ಬರೆಯಲಾರರು. ಅತಿ ರೋಚಕತೆ ಅವರ ಬರೆಹ ದಲ್ಲಿ ಇರುವುದಿಲ್ಲ. ಹೀಗಾಗಿ ರಾಮಾಯಾಣ ಮತ್ತು ಮಹಾ ಭಾರತದ ಪಾತ್ರಗಳ ವಿಶ್ಲೇಷಣೆಯನ್ನು ಆಚಾರ್ಯರ ಹಾಗೆ ನಿರ್ವಚಿಸಲು ಯಾರಿಂದಲೂ ಸಾಧ್ಯವಿಲ್ಲ. ಸಾಧ್ಯವಾಗುವುದೂ ಇಲ್ಲ.

ಪುರಾಣಗಳಲ್ಲಿನ ಸಂದರ್ಭ-ಸನ್ನಿವೇಶಗಳನ್ನು ರಾಮಾಯಣ-ಮಹಾಭಾರತದ ಪ್ರಸಂಗಗಳನ್ನು, ಇಂದಿನ ರಾಜಕೀಯಕ್ಕೆ, ಸನ್ನಿವೇಶಗಳನ್ನುವರ್ತಮಾನಕ್ಕೆ ಸಮೀಕರಿಸಿ ಆಚಾರ್ಯರು ಬರೆಯುವುದಕ್ಕೆ ತೊಡಗಿ ಕೆಲವು ವರ್ಷಗಳೇ ಸಂದುಹೋದವು. ಇವತ್ತಿಗೂ ಅವರ ಅಂಕಣಗಳಲ್ಲಿ ಈ ಸಮಾಜದ ಮತ್ತು ರಾಜಕೀಯದ ಓರೆಕೋರೆಗಳನ್ನು ತಿದ್ದುವುದರಲ್ಲಿ, ದೋಷವನ್ನು ಎತ್ತಿಹಿಡಿದು ತೋರುವಲ್ಲಿ ಮೇಲ್ಪಂಕ್ತಿಯಾಗಿವೆ. ಆನೆ ನಡೆದದ್ದೇ ದಾರಿ ಅಂತಾರಲ್ಲ, ಹಾಗಿರುತ್ತದೆ. ಇದು ಅವರ ಬರಹದ ತಾಕತ್ತು. ದುರ್ದೈವವೇನೆಂದರೆ, ಇನ್ನು ಅಂಥ ಬರಹಗಳು ಸಿಗಲಾರದು.

ರಾಮಾಯಣ ಪಾತ್ರ ಪ್ರಪಂಚ ಮತ್ತು ಮಹಾಭಾರತ ಪಾತ್ರ ಪ್ರಪಂಚ ಎಂಬೆರಡು ಆಚಾರ್ಯರ ಅದ್ಭುತ ಐತಿಹಾಸಿಕ ಕಲಾಕೃತಿಗಳು. ಇವುಗಳಲ್ಲಿ ಬರುವ ಐತಿಹಾಸಿಕ ಪಾತ್ರಗಳ ವಿಶ್ಲೇಷಣೆಯನ್ನು ಮನೋಜ್ಞವಾಗಿ ಆಚಾರ್ಯರು ಮಾಡಿದ್ದಾರೆ. ಎಷ್ಟು ಅಂದರೆ ರಾಮಾಯಣ ಮಹಾಭಾರತಗಳ ಬಗ್ಗೆ ಅಥೆಂಟಿಕ್ ಆಗಿ ನಿರೂಪಿಸಲು ಈ ಎರಡೂ ಕೃತಿಗಳು ಆಕರ ಗ್ರಂಥಗಳಾಗಿ ನಿಲ್ಲುತ್ತವೆ. ಆಚಾರ್ಯರು ನಿಷ್ಠುರವಾಗಿ ಮಾತಾಡಬಲ್ಲವರು, ಬರೆಯಬಲ್ಲವರು. ಅಂತೆಯೇ ದೃಷ್ಟಿಸ
ಬಲ್ಲರು. ಅಷ್ಟೊಂದು ಪ್ರಖರ ಚಿಂತನೆಯನ್ನು ಮಾಡಬಲ್ಲ ಇನ್ನೊಬ್ಬ ವಿದ್ವಾಂಸರನ್ನು ಗುರುತಿಸುವುದು ಕಷ್ಟ ಸಾಧ್ಯ. ಎರಡು ಐತಿಹಾಸಿಕ ಕೃತಿಗಳಲ್ಲಿನ ಪಾತ್ರಗಳ ನಿರೂಪಣೆಯಲ್ಲಿ ಆಚಾರ್ಯರು ತೋರಿದ ಬೌದ್ಧಿಕವಾದ, ವೈಚಾರಿಕವಾದ ಮತ್ತು ತಾರ್ಕಿಕವಾದ ತಾಕತ್ತು ಅಸಾಮಾನ್ಯವಾದುದು, ಇದಮಿತ್ಥಂ ಎಂದು ನಿಖರವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಸತ್ಯಕ್ಕೆ ಅಪಚಾರವಾಗದಂತೆ ಮಹಾಕಾವ್ಯಗಳನ್ನು ಜನ ಸಾಮಾನ್ಯರ ಬುದ್ಧಿಗೆ ದಕ್ಕಿಸಿದ್ದಾರೆ. ಆ ಹದಿನೆಂಟು ದಿನಗಳು, ಶ್ರೀ ಕೃಷ್ಣಾವತಾರದಕೊನೆಯ ಗಳಿಗೆಗಳು, ಶ್ರೀಕೃಷ್ಣಾವತಾರ (೨ಸಂ), ರಾಜಸೂಯದ ರಾಜಕೀಯ, ರಾಜಸೂಯತಂದ ಅನರ್ಥ, ವನದಲ್ಲಿ ಪಾಂಡವರು, ಮಹಾಮಾತೆ ಕುಂತಿ ಕಣ್ತೆರೆದಾಗ, ರಾಮಾಯಣ ಸಂಪೂರ್ಣವಾದಾಗ, ಶ್ರೀ ರಾಮಾಯಣ ಸಾಹಸ್ರೀ(೫ಸಂ), ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ಧ, ಭಾರತ, ಇಸ್ಲಾಮ್ ಮತ್ತು ಗಾಂಧಿ,
ಶ್ರೀ ಮಹಾಭಾರತ ಕಾಲ ನಿರ್ಣಯ, ರಾಷ್ಟ್ರಾವಲೋಕನ, ವನದಲ್ಲಿ ಪಾಂಡವರು, ವಾಲ್ಮೀಕಿ ಯಾರು?, ದಶಾವತಾರ, ಭಾರತೀಯ ಇತಿಹಾಸ ಪುರಾಣಗಳು, ಸಮಾಜ ಮತ್ತು ಆಧ್ಯಾತ್ಮೀಕರಣ, ಶ್ರೀ ರಾಮಾಯಣ ಮಹಾ ಪ್ರಸಂಗಗಳು, ನಳ ದಮಯಂತಿ, ಆಚಾರ್ಯ ಚಾಣಕ್ಯ, ಅಗಸ್ತ್ಯ, ವೇದ, ಪುರಾಣ, ಉಪನಿಷತ್ತು, ಐತಿಹಾಸಿಕ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳ ಬಗ್ಗೆ ಆಚಾರ್ಯರು ಎಷ್ಟು ಸೊಗಸಾಗಿ ಮನಮುಟ್ಟುವಂತೆ ವ್ಯಾಖ್ಯಾನಿಸಬಲ್ಲರೋ ಅಷ್ಟೇ
ಸೊಗಸಾಗಿ ಇತಿಹಾಸ, ಸಂಸ್ಕೃತಿ, ರಾಜ್ಯ, ರಾಷ್ಟ್ರೀಯ, ಅಂ. ರಾ. ರಾಜಕಾರಣ ವಿದ್ಯಮಾನಗಳನ್ನೂ ವ್ಯಾಖ್ಯಾನಿಸಬಲ್ಲರು. ವಿಶ್ಲೇಷಿಸಬಲ್ಲರು.

ತಪ್ಪು ಒಪ್ಪುಗಳನ್ನು ನಿಷ್ಪಕ್ಷಪಾತವಾಗಿ ಕಟ್ಟಿಕೊಡಬಲ್ಲರು. ಈ ವ್ಯಾಖ್ಯಾನ, ವಿಶ್ಲೇಷಣೆಯ ಶಕ್ತಿಯಲ್ಲರುವುದು ಆಚಾರ್ಯರ ಸ್ವಾಧ್ಯಾಯದ ಅಪ್ರತಿಮ ಅಸಾಮಾ
ನ್ಯ ಶಕ್ತಿ. ಇದರಲ್ಲಿರುವ ಅವರ ಜ್ಞಾನ, ತರ್ಕ, ಅರಿವು ಮತ್ತು ಅನುಭವ ಜನ್ಯವಾಗಿ ಹುಟ್ಟಿರುವುದೇ ಹೊರತು ಕಡತಂದ ಅಥವಾ ಆಮದು ಸರಕಲ್ಲ. ಅವರು ಪ್ರಖರ ವಾಗ್ಮಿ, ರಾಷ್ಟ್ರೀಯ ಚಿಂತಕರು. ಅವರು ಬಲಪಂಥೀಯ ಸಿದ್ಧಾಂತಿಗಳು ಎಂಬುದು ಸಾರ್ವಜನಿಕ ಸತ್ಯ. ಇವೆಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿರುವ ಯಾವುದೇ ಚಿಂತನೆ, ವಾದ, ತರ್ಕವನ್ನು ಅವರು ಸಹಿಸಲಾರರು.

ಮಂಡಿಸಲಾರರು. ಇದ್ದುದನ್ನು ಇದ್ದ ಹಾಗೆ ನೇರವಾಗಿ ಹೇಳುವ ಅವರ ಮಾತಿನಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಲ್ಲದ ಆಲೋಚನೆಗಳಿರುವುದಿಲ್ಲ. ಅಂಥ ಬೌದ್ಧಿಕ ಮತ್ತು ವೈಚಾರಿಕ ದಾರಿದ್ರ್ಯ ಇರುವುದಿಲ್ಲ. ಅವರ ಅಂಕಣಗಳ ಸಂಕಲನಗಳ ಸಂಪುಟಗಳನ್ನುಓದಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಆಚಾರ್ಯರ ಚಿಂತನಾ ಲಹರಿಯೇ ವಿಸ್ಮಯ, ಪರಮಾದ್ಭುತ, ರೋಚಕ. ಅವರ ಓದು ಮತ್ತು ಬರಹದ ಕಸುವಿಗೆ ಜ್ಞಾನ, ಅನುಭವ ಮತ್ತು ವಿಷಯದ ಆಳದ ತಾದಾತ್ಮ್ಯ ಇರುತ್ತದೆ.
ಯಾವುದನ್ನೂ ಒಳಹೊಕ್ಕಿ ನೋಡಿ ಸ್ಪರ್ಶಿಸಬಹುದಾದ ತಾಕತ್ತು. ಅವರ ಚಿಂತನೆಯ ದೊಡ್ಡಶಕ್ತಿ. ಆಚಾರ್ಯರನ್ನು ಬೌದ್ಧಿಕವಾಗಿ, ವೈಚಾರಿಕವಾಗಿ, ಅಧ್ಯಾತ್ಮಿಕವಾಗಿ ಒಂದೇ ಹೊಡೆತಕ್ಕೆ ಕೆಳಗೆ ಬೀಳಿಸಲು ಸಾಧ್ಯವಿಲ್ಲ.

ಅಷ್ಟೇ ಅಲ್ಲ. ಅವರ ರಾಷ್ಟ್ರೀಯತೆಯನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ. ಆ ಮಟ್ಟಿಗೆ ಅವರು ಪ್ರಶ್ನಾತೀತರು. ಆಚಾರ್ಯರ ಇನ್ನೊಂದು ವಿಶೇಷತೆಯೆಂದರೆ ಅವರ ರಾಷ್ಟ್ರೀಯ ಬದ್ಧತೆಯಲ್ಲಿ ಮೊದಲಿಂದಲೂ ಎಳ್ಳಷ್ಟೂ ಬದಲಾವಣೆಯಾಗಲಿ, ಸ್ಥಿತ್ಯಂತರಗಳಾಗಲಿ ಆಗಲೇ ಇಲ್ಲ. ಪ್ರಾಯಶಃ ಆಗುವುದೂ ಇಲ್ಲ. ಆ ಮಟ್ಟಿಗೆ ಅವರ ಓದು, ಬರಹಕ್ಕಿಂತ ಅವರ ಕನ್ವಿಕ್ಷನ್ ಇನ್ನೂ ಬಹುದೊಡ್ಡದಾಗಿತ್ತು. ಅಷ್ಟೇ ಅಲ್ಲ, ಅನುಕರಣೀಯವೂ, ಅನುಸರಣೀಯವೂ ಆಗಿತ್ತು, ಆಗಿದೆ. ಆಚಾರ್ಯರ ಓದುಗವಲಯ ಬಹುದೊಡ್ಡದು. ಅವರು ಕನ್ನಡದಲ್ಲಿ ಬರೆದಂತೆ ಇಂಗ್ಲಿಷಿನಲ್ಲೂ ಬರೆದಿದ್ದಾರೆ. ಆದರೆ ಕನ್ನಡದಲ್ಲಿ ಬರೆದದ್ದೇ ಹೆಚ್ಚು. ಅಸ್ಖಲಿತವಾಗಿ ಇಂಗ್ಲಿಷನ್ನು
ಮಾತಾಡಬಲ್ಲಂತೆ ಕನ್ನಡ ಸಂಸ್ಕೃತದಲ್ಲೂ ಅವರು ಅಪ್ರತಿಮ ವಾಗ್ಮಿಯಾಗಿದ್ದಾರೆ.

ಕನ್ನಡದಲ್ಲಿ ಬರೆಯುವಾಗ ಪ್ರಧಾನವಾಗಿ ಸಂಸ್ಕೃತದ ಉಕ್ತಿಗಳು, ಶ್ಲೋಕಗಳು ಸಹಜವಾಗೇ ಇರುತ್ತವೆ. ದೇಶೀಯ ಭಾಷೆಗಳಲ್ಲಿ ಉಲ್ಲೇಖವಾದಂತಹ ವಿಚಾರಗಳೂ ಸಾಕಷ್ಟಿರುತ್ತವೆ. ಆಚಾರ್ಯರು ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ವರು. ಹೀಗಾಗಿ ಅಕಾಡಮಿಕ್ ಡೀಸೆನ್ಸಿ ಬದುಕಲ್ಲಿ, ಬರಹದಲ್ಲಿ ಸಹಜವಾಗೇ ಹಾಸುಹೊಕ್ಕಾಗಿತ್ತು. ಯಾರ ನ್ನೋ ಮೆಚ್ಚಿಸಲು, ಓಲೈಸಲು, ಯಾವುದೋ ಪ್ರಶಸ್ತಿಯನ್ನು ಬಾಚಿಕೊಳ್ಳಲು ಅವರು ಬರೆಯಲಿಲ್ಲ. ಅಸಂಖ್ಯ ಸಂಖ್ಯೆಯ ಓದುಗ ಅಭಿಮಾನಿಗಳನ್ನುಅವರು ಪಡೆದಿದ್ದರು. ಹೀಗಾಗಿ ಅವರಿಗೆ ವಿದ್ವತ್ ವಲಯದಲ್ಲಿ ಸಲ್ಲಬೇಕಾದ ಪ್ರಶಸ್ತಿಗಳು, ಗೌರವ ಸಮ್ಮಾನಗಳು ಸಂದಿವೆ.

ಮಠಮಾನ್ಯಗಳು ಗೌರವಿಸಿವೆ. ಇದಕ್ಕೆ ನಿದರ್ಶನ ವಾಗಿ ವಿದ್ವನ್ಮಣಿ, ವೇದಭೂಷಣ, ವಾಲ್ಮೀಕಿ ಹೃದಯಜ್ಞ, ರಾಮಾಯಣಾಚಾರ್ಯ, ಮಹಾಭಾರತಾ ಚಾರ್ಯ, ಮೊದಲಾದ ಬಿರುದುಗಳು ಸಾಕ್ಷಿಯಾಗಿ ನಿಲ್ಲು ತ್ತವೆ. ಸರಕಾರ ಕೊಡ ಮಾಡುವ ರಾಜ್ಯ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಗಮಕ ರತ್ನಾಕರ ಮುಂತಾದ ಬಿರುದು ಸಮ್ಮಾನಗಳು ಸಂದಿವೆ. ಆದರೆ, ಪದ್ಮ ಪ್ರಶಸ್ತಿ ಸಲ್ಲಲೇ ಇಲ್ಲ. ಜೀವಂತವಾಗಿರುವಾಗ ಸಿಗದ ಪ್ರಶಸ್ತಿ, ಸಮ್ಮಾನಗಳು ನಿಧನ ರಾದ ಮೇಲೆ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂಬ ಮಾತಿದೆ. ಆದರೆ, ನಿಧನರಾದ ಮೇಲೂ ಕೊಡುವ ಪ್ರಶಸ್ತಿ, ಗೌರವಗಳಿಂದ ಸರ ಕಾರ ತನ್ನ ಘನತೆ ಉಳಿಸಿಕೊಳ್ಳಲು ಸಾಧ್ಯವಿದೆ. ನಾರಾಯಣಾ ಚಾರ್ಯರಂಥ ಒಬ್ಬ ಧೀಮಂತ ವ್ಯಕ್ತಿ, ಜ್ಞಾನಭೀಷ್ಮ ನಮ್ಮನ್ನಗಲಿದ ಮೇಲಾದರೂ ಗೌರವಿಸದಿದ್ದರೆ, ನಮ್ಮನ್ನು ನಾವೇ ಅವಮಾನಿಸಿ
ಕೊಂಡಂತೆ! ಮತ್ತು ಮುಖ್ಯವಾಗಿ, ಅಕಾಡೆಮಿಕ್ ನೆಲೆಯಲ್ಲಿ ಅವರ ಕೃತಿಗಳ ಅಧ್ಯಯನವಾಗಬೇಕಿದೆ.