Ramanand Sharma Column: ಕನ್ನಡ ಅಸ್ಮಿತೆ ವೇದಿಕೆಗೆ ಮಾತ್ರ ಸೀಮಿತವೇ ?
ತಮಿಳುನಾಡು ಮತ್ತು ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಭಾಷಾ ಅಸ್ಮಿತೆ ‘ಟಾಪ್ಗೇರ್’ ನಲ್ಲಿರು ವುದು ಹಾಗೂ ಇತ್ತೀಚಿನ ದಿನಗಳಲ್ಲಿ ಅದು ನಿರಂತರವಾಗಿ ಸುದ್ದಿಯಾಗುತ್ತಿರುವುದು, ಸರಕಾರಕ್ಕೆ ಮತ್ತು ಸರಕಾರಿ ಅಧೀನದ ಸಂಸ್ಥೆಗಳ ಗಮನಕ್ಕೆ ಬರುತ್ತಿಲ್ಲವೋ ಅಥವಾ ಇದು ಜಾಣಕುರುಡು/ಜಾಣಕಿವುಡಿನ ದ್ಯೋತಕವೋ, ಅಧಿಕಾರದಲ್ಲಿರುವ ಕನ್ನಡೇತರ ಹಿರಿಯ ಅಧಿಕಾರಿಗಳು ಮಾಡುವ ಎಡವಟ್ಟೋ? ಎಂದು ಕನ್ನಡಿಗರು ಆಶ್ಚರ್ಯ ಪಡುತ್ತಿದ್ದಾರೆ.


ಯಕ್ಷ ಪ್ರಶ್ನೆ
ರಮಾನಂದ ಶರ್ಮಾ
ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ‘ಕರ್ನಾಟಕ ಮಿಲ್ಕ್ ಫೆಡರೇಷನ್’ನ ‘ನಂದಿನಿ’ಯನ್ನು ನಿರ್ಲಕ್ಷಿಸಿ ಗುಜರಾತ್ ಮೂಲದ ‘ಅಮುಲ್’ಗೆ ಮಳಿಗೆ ಸ್ಥಾಪನೆಗೆ ಅನುಮತಿಸಲು ಮುಂದಾದ ಬೆಳವಣಿಗೆಯು ನಿರೀಕ್ಷಿಸಿದಂತೆ ವಿವಾದಕ್ಕೆ ಮತ್ತು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡು ಮತ್ತು ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಭಾಷಾ ಅಸ್ಮಿತೆ ‘ಟಾಪ್ಗೇರ್’ ನಲ್ಲಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ಅದು ನಿರಂತರವಾಗಿ ಸುದ್ದಿಯಾಗುತ್ತಿರುವುದು, ಸರಕಾರಕ್ಕೆ ಮತ್ತು ಸರಕಾರಿ ಅಧೀನದ ಸಂಸ್ಥೆಗಳ ಗಮನಕ್ಕೆ ಬರುತ್ತಿಲ್ಲವೋ ಅಥವಾ ಇದು ಜಾಣ ಕುರುಡು/ಜಾಣಕಿವುಡಿನ ದ್ಯೋತಕವೋ, ಅಧಿಕಾರದಲ್ಲಿರುವ ಕನ್ನಡೇತರ ಹಿರಿಯ ಅಧಿಕಾರಿ ಗಳು ಮಾಡುವ ಎಡವಟ್ಟೋ? ಎಂದು ಕನ್ನಡಿಗರು ಆಶ್ಚರ್ಯ ಪಡುತ್ತಿದ್ದಾರೆ.
ಇಂಥ ಘಟನೆಗಳು ಆಗೊಮ್ಮೆ ಈಗೊಮ್ಮೆ ನಡೆದರೆ ಸರಿ; ಆದರೆ ಇಂಥ ಘಟನೆಗಳಿಂದಾದ ವಿವಾದಗಳು, ಸಂಘರ್ಷಗಳು ಸುದ್ದಿ ಮಾಡುತ್ತಿರುವಾಗ, ಆಕ್ರೋಶ ಇನ್ನೂ ಹೊಮ್ಮುತ್ತಿರುವಾಗ, ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ‘ನಂದಿನಿ’ಯನ್ನುಉಪೇಕ್ಷಿಸಿ ಗುಜರಾತ್ ಮೂಲದ ‘ಅಮುಲ್’ ಉತ್ಪನ್ನಗಳಿಗೆ ಆಸ್ಪದ ನೀಡಲು ಮುಂದಾಗಿರುವುದನ್ನು ಕಂಡು, ‘ಸರಕಾರದ ಕನ್ನಡ ಅಸ್ಮಿತೆ ವೇದಿಕೆಗಳಿಗೆ ಮಾತ್ರ ಸೀಮಿತವಾಗಿದೆಯಾ?’ ಎಂದು ಕನ್ನಡಿಗರು ಪ್ರಶ್ನಿಸುವಂತಾಗಿದೆ.
ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ನಾಮಫಲಕದ ವಿರುದ್ಧದ ಪ್ರತಿಭಟನೆ ಯಿಂದ ಆರಂಭವಾದ ಕನ್ನಡ ಭಾಷಾ ಅಸ್ಮಿತೆಯ ಅಭಿಯಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಒಂದು ಕಾಲಕ್ಕೆ ಸಮಾಜದ ಕೆಲವೇ ವರ್ಗಕ್ಕೆ ಸೀಮಿತವಾಗಿದ್ದ ಇಂಥ ಪ್ರತಿಭಟನೆ/ವಿರೋಧಗಳು ಅಚ್ಚರಿಯೆನ್ನುವ ರೀತಿಯಲ್ಲಿ ಸಮಾಜದ ಮಿಕ್ಕ ಸ್ತರದವರನ್ನೂ ಸೆಳೆದಿವೆ.
ಇದನ್ನೂ ಓದಿ: Ramanand Sharma Column: ಅನುಕೂಲಸಿಂಧು ಹೊಂದಾಣಿಕೆ ದಡ ಸೇರಬಹುದೇ ?
‘ಇದು ತಥಾಕಥಿತ ಹೋರಾಟಗಾರರ ಟೈಮ್ಪಾಸ್ ಕಸರತ್ತು’ ಎಂದು ಒಂದು ಕಾಲಕ್ಕೆ ಟೀಕಿಸಿ ದವರೂ ಈ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ, local is vocal ಎಂಬ ಚಿಂತನೆಗೆ ಸ್ಪಂದಿಸು ತ್ತಿದ್ದಾರೆ. ಹೋರಾಟದ ಹಿಂದಿನ ಉದ್ದೇಶವನ್ನು ತಿಳಿಯುತ್ತಿದ್ದಾರೆ. ಕನ್ನಡಪರ ಹೋರಾಟ ಗಳಲ್ಲಿ ಇವರ ಭಾಗವಹಿಸುವಿಕೆಯು ಕ್ರಮೇಣ ಏರುತ್ತ, ಹೋರಾಟಗಾರರಿಗೆ ನೈತಿಕ ಬೆಂಬಲ ಸಿಗುತ್ತಿದೆ.
ಹಲವರು ನೇರವಾಗಿ ಭಾಗವಹಿಸದಿದ್ದರೂ, ಹಿಂದಿನಂತೆ ಇವರ ಹೋರಾಟವನ್ನು ಲಘುವಾಗಿ ತೆಗೆದುಕೊಳ್ಳುತ್ತಿಲ್ಲ. ಇತ್ತೀಚೆಗೆ, ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ನ ಬ್ರ್ಯಾಂಡ್ ರಾಯಭಾರಿಯಾಗಿ, ಕನ್ನಡಿಗರನ್ನು ನಿರ್ಲಕ್ಷಿಸಿ ಪರಭಾಷಾ ನಟಿ ತಮನ್ನಾ ಭಾಟಿಯಾ ರನ್ನು ಗೊತ್ತುಮಾಡಿದಾಗ, ಈ ನಿಲುವನ್ನು ವಿರೋಧಿಸಿ ರಾಜ್ಯಾ ದ್ಯಂತ ಭಾರಿ ಸಂಖ್ಯೆಯಲ್ಲಿ ಕನ್ನಡಿಗರು ದನಿಯೆತ್ತಿದ್ದರು.
“ಅಖಿಲ ಭಾರತ ಮಾರುಕಟ್ಟೆಯನ್ನು ತಲುಪಲು ಈಕೆಯನ್ನು ಬ್ರ್ಯಾಂಡ್ ರಾಯಭಾರಿಯಾಗಿ ಗೊತ್ತುಮಾಡಲಾಯಿತು. ಕನ್ನಡದವರು ಮುಂದೆ ಬರಲಿಲ್ಲ. ಏಕಮೇವ ಕನ್ನಡತಿ ದೀಪಿಕಾ ಪಡುಕೋಣೆ ಕೇಳಿದ ಸಂಭಾವನೆ ನಮ್ಮ ಬಜೆಟ್ ಅನ್ನು ಮೀರಿಸಿತ್ತು" ಎಂದೆಲ್ಲಾ ಸಂಬಂಧ ಪಟ್ಟವರು ಸ್ಪಷ್ಟೀಕರಣ ನೀಡಿ ಈ ವಿವಾದವನ್ನು ತಣ್ಣಗಾಗಿಸಿದ್ದರು.
ತಮಾಷೆಯೆಂದರೆ, ಕರ್ನಾಟಕದಲ್ಲಿ ಉತ್ಪಾದಿಸಿದ ಸರಕುಗಳ ಪ್ಯಾಕಿಂಗ್ ಮೇಲೆ ಸರಕಿನ ಹೆಸರು ಮತ್ತು ಇತರ ಮಾಹಿತಿಗಳು ಕನ್ನಡದಲ್ಲಿ ಇರಬೇಕು ಎನ್ನುವ ರಾಜ್ಯ ಸರಕಾರದ ನಿರ್ದೇಶನವು, ಕರ್ನಾಟಕ ಸರಕಾರದ ಉದ್ದಿಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ವಿಷಯದಲ್ಲೇ ಇನ್ನೂ ಜಾರಿಯಾಗಿಲ್ಲ. ಹೀಗಾಗಿ ‘ತನ್ನ ಅಧೀನದ ಉದ್ದಿಮೆಯನ್ನೇ ನಿಯಂತ್ರಿಸಲಾಗದ ಸರಕಾರವು ಖಾಸಗಿ ಕಂಪನಿಗಳಿಗೆ ಅಂಕುಶ ಹಾಕಬಹುದೇ?’ ಎಂದು ಕನ್ನಡಿಗರು ಕೇಳುವಂತಾಗಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ಕಾರ್ಯಕ್ರಮವೊಂದರಲ್ಲಿ ‘ಕಭೀ ಕಭೀ ಮೇರೆ ದಿಲ್ ಮೇ’ ಹಿಂದಿ ಹಾಡನ್ನು ಹಾಡಲು ಹೊರಟಿದ್ದಕ್ಕೆ, ‘ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವಾಗಿದ್ದು, ಇಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯ ಹಾಡನ್ನು ಹಾಡು ವಂತಿಲ್ಲ’ ಎಂದು ತಿಳಿಸಿ, ಹಿಂದಿ ಹಾಡನ್ನು ನಿಲ್ಲಿಸಲಾಯಿತಂತೆ.
ಸುದೈವದಿಂದ, “ರಾಷ್ಟ್ರಭಾಷೆಯಾಗಿರುವ ಹಿಂದಿಯನ್ನು ವಿರೋಧಿಸಬಾರದು, ಸಂಗೀತಕ್ಕೆ ಭಾಷೆಯ ನಂಟು ಹಾಕಬಾರದು" ಅಂತ ಯಾರೂ ಹೇಳಲಿಲ್ಲ ಎಂಬುದು ಗಮನಾರ್ಹ. ಹಿಂಡು ಹಿಂಡಾಗಿ ಕರ್ನಾಟಕಕ್ಕೆ ಬರುವ ವಲಸಿಗರ ಒತ್ತಡವೋ, ಅವರ ಅಟ್ಟಹಾಸವೋ/ದರ್ಪವೋ, ಹಿಂಬಾಗಿಲ ಮೂಲಕ ಹಿಂದಿಯನ್ನು ಹೇರುವ ಕೇಂದ್ರ ಸರಕಾರದ ಯತ್ನವೋ ಅಥವಾ ಪ್ರಾದೇಶಿಕ ಭಾಷೆಗಳನ್ನು ಹಿಂದೂಡುವ ತಂತ್ರಗಾರಿಕೆಯೋ- ಒಟ್ಟಿನಲ್ಲಿ ಈ ಎಲ್ಲ ಕಾರಣಕ್ಕೆ ಕನ್ನಡಿಗರು ಇಂದು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತರಾಗಿದ್ದಾರೆ. ಇಷ್ಟಾಗಿಯೂ, ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ‘ಅಮುಲ್’ ಉತ್ಪನ್ನಗಳ ಮಳಿಗೆ ತೆರೆಯಲು ಅನುಮತಿ ನೀಡಬೇಕಿತ್ತೇ? ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯುವುದಕ್ಕೆ ‘ಅಮುಲ್’ಗೆ ಅನುಮತಿಸಿದ್ದನ್ನು ತಪ್ಪು ಎನ್ನಲಾಗದು.
ಕರ್ನಾಟಕವು ದೆಹಲಿಯಲ್ಲಿ ‘ನಂದಿನಿ’ ಉತ್ಪನ್ನಗಳ ಮಾರ್ಕೆಟಿಂಗ್ ಮಾಡುತ್ತಿದೆ. ಜತೆಗೆ ಮತ್ತಷ್ಟು ರಾಜ್ಯಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಅದು ಯೋಜಿಸಿದೆಯಂತೆ. ಇದು ಸ್ವೀಕಾರಾರ್ಹ ನಡೆಯಾದರೆ, ಗುಜರಾತ್ ರಾಜ್ಯವು ತನ್ನ ಹೆಮ್ಮೆಯ ‘ಅಮುಲ್’ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದರಲ್ಲಿ ತಪ್ಪೇನಿದೆ? ‘ನಂದಿನಿ’ ಉತ್ಪನ್ನಗಳು ದೆಹಲಿಯಲ್ಲಿ ಮಾಡಿದ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಗುಜರಾತ್ನ ‘ಅಮುಲ್’ ಉತ್ಪನ್ನಗಳಿಗೆ ಅಂಥ ಅವಕಾಶವನ್ನು ನಿರಾಕರಿಸಬಹುದೇ? ಸಂಸ್ಥೆಯೊಂದು ಭಾರತದ ಯಾವುದೇ ರಾಜ್ಯದಲ್ಲಿ, ಅಲ್ಲಲ್ಲಿನ ಆಂತರಿಕ ಕಾನೂನುಗಳ ಅಡಿಯಲ್ಲಿ ತನ್ನ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದು.
ಆದರೆ, ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ‘ಅಮುಲ್’ಗೆ ಮಳಿಗೆ ತೆರೆಯಲು ಅನುಮತಿಸಿರುವು ದರಲ್ಲಿನ ಸಮಸ್ಯೆ ಸ್ವಲ್ಪ ಭಿನ್ನವಾಗಿದೆ. ಮಳಿಗೆ ನೀಡುವ ವಿಷಯದಲ್ಲಿ ‘ನಂದಿನಿ’ಗೆ ಆದ್ಯತೆ ನೀಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ‘ಅಮುಲ್’ಗೆ ಮಳಿಗೆ ನೀಡುವ ಮಾಹಿತಿ ಹೊರ ಬೀಳುತ್ತಿದ್ದಂತೆ, ಕನ್ನಡದ ಮತ್ತು ಕನ್ನಡಿಗರ ಅಸ್ಮಿತೆಯ ಹೆಸರಲ್ಲಿ ಜನಾಕ್ರೋಶ ಮಾರ್ದನಿಸ ತೊಡಗಿತು, ಆಗ ಸರಕಾರವು ದಿಢೀರ್ ಎಂದು ‘ನಂದಿನಿ’ಯನ್ನು ನೆನಪಿಸಿಕೊಂಡಿತು.
ಕನ್ನಡದ ಮತ್ತು ಕನ್ನಡಿಗರ ಅಸ್ಮಿತೆಯನ್ನು ಉಳಿಸಿ ಬೆಳೆಸುವವಿಷಯದಲ್ಲಿ, ಕರ್ನಾಟಕದಲ್ಲಿ ಈವರೆಗೆ ಆಡಳಿತ ನಡೆಸಿದ ಯಾವುದೇ ಸರಕಾರಕ್ಕೆ ಸಂಪೂರ್ಣ ಅಂಕಗಳು ದೊರೆಯುವುದಿಲ್ಲ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ಆಶಯವುಳ್ಳ ಸರೋಜಿನಿ ಮಹಿಷಿ ವರದಿಯು 1986ರಿಂದ ವಿಧಾನಸೌಧದಲ್ಲಿ ಭದ್ರವಾಗಿ ಕೂತಿದೆ.
ಕರ್ನಾಟಕದಲ್ಲಿ ಎಲ್ಲಾ ಚಿತ್ರಮಂದಿರಗಳು ವರ್ಷದಲ್ಲಿ ಇಂತಿಷ್ಟು ದಿನಗಳು ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಎಂಬ ಕಾನೂನು ಅನುಷ್ಠಾನದ ವಿಷಯದಲ್ಲಿ ಅದೆಷ್ಟು ಪರಿಣಾಮಕಾರಿಯಾಗಿದೆ ಎಂಬುದು ತಿಳಿಯದು. ಮಾತ್ರವಲ್ಲ, ಮಲ್ಟಿಪ್ಲೆಕ್ಸ್ಗಳ ಪ್ರವೇಶದರ ನಿಯಂತ್ರಣ ಏನಾಯಿತು? ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಸಂಬಂಧದ ವಿಧೇಯಕದ ಗತಿ ಏನಾಗಿದೆ? ಎಂಬುದು ತಿಳಿಯದು. ಮದರಸಾಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬೇಕು ಎನ್ನುವ ಪ್ರಸ್ತಾವ ಮುಂದಕ್ಕೆ ಹೋಗಲೇ ಇಲ್ಲ.
ಮೇಲೆ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಉತ್ಪಾದಿಸುವ ಎಲ್ಲಾ ಸರಕುಗಳ ಪ್ಯಾಕಿಂಗ್ ಮೇಲೆ ಸರಕಿನ ಹೆಸರು ಮತ್ತು ಇತರ ಅವಶ್ಯ ಮಾಹಿತಿಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎನ್ನುವ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಲೇ ಇಲ್ಲ. ಇನ್ನು ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಆಶಯವು ನ್ಯಾಯಾಲಯದಲ್ಲಿ ಸೋಲುಂಡಿದೆ. ಅಂಗಡಿ- ಮುಂಗಟ್ಟುಗಳ ನಾಮಫಲಕ ದಲ್ಲಿ ಶೇ.60ರಷ್ಟಾದರೂ ಬರಹ ಕನ್ನಡದಲ್ಲಿರಬೇಕು ಎನ್ನುವ ಆಶಯ ಕೊಂಚ ಮಟ್ಟಿಗಿನ ಸಾಫಲ್ಯ ಕಂಡಿದೆ, ಕ್ರಮಿಸಬೇಕಾದ ದಾರಿ ಇನ್ನೂ ಸಾಕಷ್ಟಿದೆ.
ಸರಕಾರದ ವ್ಯವಹಾರಗಳು ಇನ್ನೂ ಸಂಪೂರ್ಣವಾಗಿ ಕನ್ನಡಮಯವಾಗಿಲ್ಲ. ಕೆಲವೊಂದು ಪತ್ರವ್ಯವಹಾರಗಳು ‘ಗೂಗಲ್ ಕನ್ನಡ’ದಲ್ಲಿ ಇರುತ್ತವೆಯಂತೆ. ಸೋನು ನಿಗಮ್ ಪ್ರಕರಣ, ವಲಸಿಗ ಶೈಲಾದಿತ್ಯರು ಕನ್ನಡಿಗರೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಕೋರಮಂಗಲದ ಹೋಟೆಲ್ ಒಂದರ ಡಿಜಿಟಲ್ ಫಲಕದಲ್ಲಿ ಆದ ಕನ್ನಡಿಗರ ಅವಹೇಳನ, ಬ್ಯಾಂಕಿನ ಶಾಖೆಯೊಂದರಲ್ಲಿ ಮಹಿಳಾ ಮ್ಯಾನೇಜರ್ ಒಬ್ಬರು ಕನ್ನಡ ಭಾಷೆಯನ್ನು ಮಾತನಾಡಲು ಸಾರಾಸಗಟಾಗಿ ನಿರಾಕರಿಸಿದ್ದು, ಬಿಹಾರದಿಂದ ಬಂದಿರುವ ಟೆಕ್ಕಿ ದಂಪತಿಗಳು ಕನ್ನಡಿಗ ಆಟೋವಾಲನ ಮೇಲೆ ಹಲ್ಲೆ ಮಾಡಿ ಆಮೇಲೆ ಕಾಲುಹಿಡಿದು ಕ್ಷಮೆ ಕೇಳಿದ್ದು, ವಲಸಿಗ ಟೆಕ್ಕಿಯೊಬ್ಬಳು ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದು, ಮತ್ತೊಬ್ಬಳು ಫುಡ್ ಡೆಲಿವರಿ ಹುಡುಗನ ಮೇಲೆ ಎರಗಿದ್ದು, ಹೊಟ್ಟೆಪಾಡಿಗೆಂದು ಹರಿಯಾಣದಿಂದ ಬಂದಾಕೆಯೊಬ್ಬಳು ಕನ್ನಡಿಗರನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದು, ಬೆಂಗಳೂರಿನಲ್ಲಿ ಉದ್ಯಮ ಸ್ಥಾಪಿಸಿರುವ ಪುಣೆ ಮೂಲದ ಉದ್ಯಮಿಯೊಬ್ಬರು ‘ಕನ್ನಡಿಗರ ಸಂಗಡ ಬದುಕಲು ಸಾಧ್ಯವಿಲ್ಲ, ಪುಣೆಗೆ ಸ್ಥಳಾಂತರಗೊಳ್ಳುವೆ’ ಎಂದು ಧಮಕಿ ಹಾಕಿದ್ದು, ಕಮಲ್ ಹಾಸನ್ರ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಕೆಲವು ರಾಜಕಾರಣಿಗಳು ಅವರ ಚಲನಚಿತ್ರದ ಬಿಡುಗಡೆಗೆ ಸಹಕರಿಸಬೇಕೆಂದು ಕರೆಕೊಟ್ಟಿದ್ದು ಮುಂತಾದ ಘಟನೆಗಳು ಕನ್ನಡಿಗರನ್ನು ಎಚ್ಚೆತ್ತು ಕೊಳ್ಳುವಂತೆ ಮಾಡಿವೆ.
ತಮ್ಮಿಂದಲೇ ಬೆಂಗಳೂರು ಬೆಳಗುತ್ತಿದೆ, ಇನ್ನಷ್ಟು ಅಭಿವೃದ್ಧಿಯಾಗಿದೆ ಎಂಬ ಧಾಟಿಯ ಕೆಲವು ವಲಸಿಗರ ಧೋರಣೆ ಮತ್ತು ಅಟ್ಟಹಾಸಗಳು ಕನ್ನಡಿಗರನ್ನು ಗಾಢನಿದ್ರೆಯಿಂದ ಎಬ್ಬಿಸಿವೆ. ಹೀಗಾ ಗಿಯೇ, ಕನ್ನಡಿಗರನ್ನು ಘಾಸಿಗೊಳಿಸುವ ಯಾವುದೇ ಘಟನೆಗೆ- ಅದು ದೊಡ್ಡದಿರಲಿ ಅಥವಾ ಸಣ್ಣದಿರಲಿ- ಅವರು ಸ್ಪಂದಿಸುತ್ತಿದ್ದಾರೆ. ವಾಸ್ತವದಲ್ಲಿ, ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನಗಳ ಮಳಿಗೆಗೆ ಅನುವುಮಾಡಿಕೊಡುವ ವಿಷಯವು, ಬ್ಯಾಂಕುಗಳಲ್ಲಿನ ಕನ್ನಡೇತರ ಸಿಬ್ಬಂದಿಗಳು ತೋರುವ ಠೇಂಕಾರದಷ್ಟು ಗಂಭೀರವಾಗಿಲ್ಲ.
ಆದರೂ ಕನ್ನಡದ ಅಸ್ಮಿತೆಯನ್ನು ಕೈಬಿಡಲಾಗದ ಅನಿವಾರ್ಯತೆ ಕನ್ನಡಿಗರಿಗೆ ಇದೆ ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಿಕೊಟ್ಟ ಸಂದರ್ಭ ಇದಾಗಿದೆ. ಮತ್ತೊಬ್ಬರು ತಮ್ಮೆಡೆಗೆ ಬೆರಳನ್ನು ತೋರಿಸಿದರೆ, ಮುಷ್ಟಿಯನ್ನು ಬಿಗಿಹಿಡಿಯುವಷ್ಟರ ಮಟ್ಟಿಗೆ ಕನ್ನಡಿಗರು ಜಾಗೃತರಾಗಿದ್ದಾರೆ ಎಂಬ ಸಂದೇಶವಿಲ್ಲಿ ಧ್ವನಿಸುತ್ತದೆ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)