Tuesday, 24th September 2024

Ravi Hanj Column: ಶರಣರನ್ನು ಜಾತಿಗೆ ಅಂಟಿಸುವುದು ವಿಪರ್ಯಾಸವೇ ಸರಿ !

ಬಸವ ಮಂಟಪ

ರವಿ ಹಂಜ್

ಬಿ.ಎಲ್.ರೈಸ್ ಅವರ ಮೈಸೂರು ಗೆಜೆಟಿಯರಿನ‌ ’ದಂಡನಾಯಕ ಆರಾಧ್ಯ ಬಸವ’, ಅರ್ಜುನವಾಡ ಶಾಸನದ ‘ಜಂಗಮ ಪರುಸ ಮಹಾಮಾಹೇಶ್ವರ ಬಸವಣ ದಂಣಾಯಕ’ ಮತ್ತು ಮುನವಳ್ಳಿ ಶಾಸನದ ’ಪರಮಮಾಹೇಶ್ವರ ದಂಣಾಯಕ ಬಸವಿದೇವ’ ಎಲ್ಲವೂ ಬಸವಣ್ಣನನ್ನು ಜಂಗಮ ಎನ್ನುತ್ತವೆ, ಹರಿಹರನ ಪೌರಾಣಿಕ ರಗಳೆ‌ ಯೊಂದನ್ನು ಹೊರತುಪಡಿಸಿ!

ಹರಿಹರನ ರಗಳೆಯಲ್ಲಿ ’ಪರಮ ಶಿವಭಕ್ತ ವಿಪ್ರನ ಮಗ ಬಸವ’ ಎಂದಿರುವುದು, ರೋಚಕ ಪೌರಾಣಿಕ ಕಥಾಮಾ
ದರಿಯ ಹಿನ್ನೆಲೆಯಲ್ಲಿ ರೋಚಕತೆಯನ್ನು ಹೇರಲೋ, ಮಹತ್ವವನ್ನು ಮೆರೆಯಲೋ, ವಿಪ್ರದ್ವೇಷವನ್ನು ರಂಜನೀ
ಯಗೊಳಿಸಲೋ ಪರಮ ಶಿವಭಕ್ತನಾದ ಬಸವಣ್ಣನನ್ನು ವಿಪ್ರನಾಗಿಸಲಾಗಿದೆ ಎನಿಸುತ್ತದೆ. ಉಳಿದೆ ಹೆಚ್ಚು ಪ್ರಬಲ ವೆನಿಸುವ ಸಾಕ್ಷ್ಯಗಳು ಬಸವಣ್ಣನನ್ನು ಜಂಗಮ ಎಂದಿರುವಾಗ ಕೇವಲ ಪೌರಾಣಿಕ ರಗಳೆಯ ಆಧಾರದ ಮೇಲೆ ಬಸವಣ್ಣನನ್ನು ಬ್ರಾಹ್ಮಣ ಎನ್ನಲಾಗದು. ಈ ರಗಳೆಗೂ ಉಳಿದ ಸಾಕ್ಷ್ಯಗಳಲ್ಲೂ ಬಸವ, ಬಸವಣ್ಣ, ಬಸವಿದೇವ, ಸಂಗನಬಸವ ಮತ್ತು ದಂಣಾಯಕ ಪದಗಳ ಸಾಮ್ಯವಿರುವುದರಿಂದ ಈ ಎಲ್ಲವೂ ಒಬ್ಬನೇ ವ್ಯಕ್ತಿಯ ಕುರಿತಾಗಿವೆ ಎಂದು ಮಾತ್ರ ಖಚಿತವಾಗಿ ಹೇಳಬಹುದು.

ಅಲ್ಲದೆ ಅರ್ಜುನವಾಡದ ಶಿಲಾಶಾಸನವು ಕ್ರಿ.ಶ. ೧೨೬೦ನೇ ಇಸವಿಯದಾಗಿದ್ದರೆ, ಮುನವಳ್ಳಿ ಶಾಸನ ಕ್ರಿ.ಶ. ೧೨೫೨ನೇ
ಇಸವಿಯದಾಗಿದೆ. ಹಾಗಾಗಿ ಈ ಎರಡೂ ಶಾಸನಗಳು ಒಬ್ಬನೇ ವ್ಯಕ್ತಿಯ ಕುರಿತಾಗಿವೆ ಎಂದು ಮತ್ತಷ್ಟು ಖಚಿತ ವಾಗುತ್ತದೆ. ಆದರೆ ಸಂಶೋಧಕ ಎಚ್.ದೇವೀರಪ್ಪನವರು “ಸಂಗನ ಬಸವನ ಅಣ್ಣ ದೇವರಾಜ. ಈಗ ಲಿಂಗೈಕ್ಯ ನಾಗಿರುವ ಆ ದೇವರಾಜ ಮುನಿಪನ ಔರಸಪುತ್ರನೂ ಜಂಗಮ ಪರುಷಪ್ರಾಯನಾದ ಬಸವರಸ (ಬಸವಣ್ಣ)ನ ಕರಕಮಲ ಸಂಜಾತನೂ ಆಗಿರುವ ಕಲಿದೇವರಸನು, ’ಉಳ್ಳವರು ಶಿವಾಲಯವ…’ ಎಂದು ಮೆದುವಾದ ಮಾತಿನಲ್ಲಿ ಬಹು ಸಮರ್ಥ ರೀತಿಯಲ್ಲಿ ಲಿಂಗವಂತ ಧರ್ಮದ ತಿರುಳನ್ನೇ ಪುದುಗೊಳಿಸಿ ಧ್ವನಿ ತುಂಬಿ ಸ್ಥಾವರ ಲಿಂಗಪೂಜೆ ಯನ್ನು ಖಂಡಿಸಿರುವ ಬಸವಣ್ಣನವರ ಅಣ್ಣನ(?) ಮಗನೋ ಮೊಮ್ಮಗನೋ ಮರಿಮಗನೋ ಒಂದು ಸಾಮಾನ್ಯ ವಾದ ಶಿವಮಂದಿರದ ಪೂಜಾರಿಯಾಗಿದ್ದನೆನ್ನುವುದು, ಹಾಗೆ ನಂಬುವುದು, ಅದನ್ನು ಪ್ರಚಾರ ಮಾಡುವುದು ಬಸವಣ್ಣನವರನ್ನೂ ಅವರ ವಿಶ್ವಮಾನ್ಯ ತತ್ವಗಳನ್ನೂ ಕೊಲೆ ಮಾಡಿದಂತೆ” ಎಂದು ಹೇಳಿ ತಮ್ಮ ‘ಅರ್ಜುನ ವಾಡದ ಶಿಲಾಲೇಖ’ ಎಂಬ ಲೇಖನದಲ್ಲಿ ಈ ಶಾಸನವೊಂದು ‘ಕೂಟಶಾಸನ’ ಎಂದು ಖಂಡಿಸಿ ಈ ಶಾಸನದ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ (ಪುಟ ೪೮೪, ಕೃತಿ ‘ಸಂಶೋಧನ ಸಂಪುಟ’; ಪ್ರಕಾಶಕರು: ಎನ್.ಆರ್. ವಿಶುಕುಮಾರ್, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ).

ಆದರೆ ಈ ಕೂಟ ಶಾಸನವನ್ನು ಬಿಟ್ಟರೆ ಬಸವಣ್ಣನ ವಂಶವನ್ನಾಗಲಿ ದೈವತ್ವವನ್ನಾಗಲಿ ಕಟ್ಟಿಕೊಡಲು ಯಾವ ‘ಮಾಟ ಶಾಸನ’ಗಳೂ ಇಲ್ಲ ಎಂಬುದು ವಾಸ್ತವ. ಅಲ್ಲದೆ ೧೯೪೦ರಲ್ಲಿ ಮುಂಬಯಿ ಸರಕಾರದ ಕನ್ನಡ ಸಂಶೋಧನಾ
ಸಮಿತಿಯು ತನ್ನ ಧಾರವಾಡದ ಕನ್ನಡ ರಿಸರ್ಚ್ ಆಫೀಸು ಮೂಲಕ ಪ್ರಕಟಿಸಿರುವ ಗೋವಿಂದ ಪೈಗಳ ‘ಮೂರು
ಉಪನ್ಯಾಸಗಳು’ ಕೃತಿಯಲ್ಲಿ ಎರಡನೇ ಉಪನ್ಯಾಸವಾದ ‘ಬಸವೇಶ್ವರನ ಕಾಲನಿರ್ಣಯ’ವು ಸಮಗ್ರವಾಗಿ ಬಸವಣ್ಣ
ಮತ್ತು ಬಿಜ್ಜಳರ ಕುರಿತಾದ ಹಲವಾರು ಶಾಸನಗಳನ್ನು ಪರಿಗಣಿಸಿ ಬಸವಣ್ಣನ ಕಾಲ ನಿರ್ಣಯಿಸುವಲ್ಲಿ ಅರ್ಜುನ ವಾಡದ ಶಾಸನವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ.

ಅರ್ಜುನವಾಡ ಶಾಸನವು ಕೂಟ ಶಾಸನವಾಗಿದ್ದರೆ ಇದರ ಕಾಲಮಾನವಲ್ಲದೆ ಬಸವಿದೇವ ಸಾಮ್ಯತೆಯನ್ನು ಮುನವಳ್ಳಿಯ ಶಾಸನದ ಜತೆ ಗುರುತಿಸಲಾಗಿದೆ. ಹಾಗಾಗಿ ಮುನವಳ್ಳಿಯ ಶಾಸನ ಸಹ ಕೂಟ ಶಾಸನವೇ? ಇನ್ನು ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಧಾರವಾಡ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ತುಮಕೂರು ಜಿಗಳಾದ್ಯಂತ ಇರುವ ೧೧ ಮತ್ತು ೧೨ನೇ ಶತಮಾನದ ಕಾಳಾಮುಖ ದೇವಸ್ಥಾನಗಳನ್ನು, ಶಾಸನ ಗಳನ್ನು ಡೇವಿಡ್ ಲೊರೆಂಜೆನ್ ಗುರುತಿಸಿ ದಾಖಲಿಸಿದ್ದಾರೆ.

ಈ ಎಲ್ಲಾ ದೇವಸ್ಥಾನಗಳ ಕಾಲಮಾನ, ಖಚಿತ ದಾಖಲೆ, ಶಿಲಾಶಾಸನದ ವಿವರಗಳು ಮತ್ತು ಪುರಾವೆಗಳು ಸಂಶೋ ಧಕ ಡೇವಿಡ್ ಲೊರೆಂಜೆನ್ ಅವರ The Kapalikas and Kalamukhas Two Lost Saivite Sects ಕೃತಿಯ ೨೧೮ರಿಂದ ೨೪೫ ಪುಟಗಳವರೆಗಿದೆ. ಇಲ್ಲಿನ ಶಿಲಾಶಾಸನಗಳು ಆದಷ್ಟೂ ಮುನವಳ್ಳಿಯ ಶಾಸನದ ರೂಪದ ಇವೆ. ಹಾಗಾಗಿ ಮುನವಳ್ಳಿಯ ಶಾಸನವನ್ನು ಕೂಟ ಶಾಸನ ಎನ್ನಲಾಗದು, ಹಾಗೆಯೇ ಅದರ ಸಾಮ್ಯತೆಯಿರುವ ಅರ್ಜುನವಾಡದ ಶಾಸನವನ್ನು ಸಹ!

ಹಾಗಾಗಿ ಈ ಎಲ್ಲಾ ಕೂಟ ಶಾಸನ/ಮಾಟ ಶಾಸನ, ಪ್ರಕ್ಷೇಪ ವಚನ/ನಿಕ್ಷೇಪ ವಚನಗಳ ಹಿನ್ನೆಲೆಯಲ್ಲಿ ಮತ್ತು
ವಚನ ಗಳ ಆಧಾರದಲ್ಲಿಯೇ ಬಸವಣ್ಣನನ್ನು ಕಟ್ಟಿಕೊಳ್ಳಬೇಕಿರುವುದು ಅನಿವಾರ್ಯ. ಈ ಸಂಪನ್ಮೂಲಗಳನ್ನು ಬಿಟ್ಟರೆ ಬೇರೆ ಯಾವುದೇ ಆಕರಗಳು ಲಭ್ಯವಿಲ್ಲ. ಹಾಂ, ಚೆನ್ನಬಸವಣ್ಣ, ಅಲ್ಲಮಪ್ರಭು, ನಾಗಲಾಂಬಿಕೆ, ಬಹುರೂಪಿ
ಚೌಡಯ್ಯ ತಮ್ಮ ವಚನಗಳಲ್ಲಿ ‘ಬಸವಿದೇವ’ ಎಂದು ಬಸವಣ್ಣನನ್ನು ಕರೆದಿzರೆ ಸಹ. ಬಸವಣ್ಣನು ತನ್ನನ್ನು ತಾನೇ
‘ಬಸವದಣ್ಣಾಯಕ’ನೆಂದು ಕರೆದುಕೊಂಡಿರುವುದಲ್ಲದೆ, ಅಕ್ಕಮಹಾದೇವಿ ಮತ್ತು ಚೆನ್ನಬಸವಣ್ಣರು ಸಹ ಬಸವಣ್ಣ
ನನ್ನು ‘ದಣ್ಣಾಯಕ’ ಎಂದಿದ್ದಾರೆ.

ಹಾಗಾಗಿ ವಚನಗಳ ಮೂಲದಿಂದಲೂ ‘ಬಸವಿದೇವ’ ಮತ್ತು ‘ದಂಣಾಯಕ’ ಎಂಬ ಅಂಶಗಳು ಪೂರಕ ಆಕರವಾ ಗುತ್ತವೆ. ಆದರೆ ಇವುಗಳಲ್ಲಿ ಪ್ರಕ್ಷೇಪಗಳನ್ನು ಪ್ರಕ್ಷೇಪವೆನ್ನಲು ತಾರ್ಕಿಕ ಕಾರಣಗಳಿರಬೇಕೇ ಹೊರತು ಸಂಶೋಧಕನ ಭಾವನೆಗಳಲ್ಲ. ಹಾಗಾಗಿ ಇಲ್ಲಿ ದೇವೀರಪ್ಪನವರ ಬರಹದ ಹಿಂದಿನ ಭಾವುಕ ಭಕ್ತಿಯ ಭಾವನೆ ಯನ್ನು ಮತ್ತು ‘ಸಾಮಾನ್ಯ ಪೂಜಾರಿ’ ಎಂಬ ದನಿಯ ಹಿಂದಿನ ಜಂಗಮ ದ್ವೇಷವನ್ನು ನಿರ್ಲಕ್ಷಿಸ ಬೇಕಾಗುತ್ತದೆ. ಇಷ್ಟೆ ಬಸವಣ್ಣನ ಜಾತಿಯ ಕುರಿತಾದ ವೈಜ್ಞಾನಿಕ ವಿಧದ ಐತಿಹಾಸಿಕ ಮಾಹಿತಿಯಿದ್ದೂ ಕಾಲ್ಪನಿಕ ಪುರಾಣವನ್ನು ಸಾಕ್ಷಿ ಮಾಡಿ ಕೊಂಡು ಬ್ರಾಹ್ಮಣ ಎಂದು ಸಂಶೋಧಕರು ನಿರ್ಣಯಿಸಿರುವುದು ಏಕೆ?!? ಕಮ್ಯುನಿಸ್ಟ್-ಪ್ರಣೀತ ಚಿಂತಕರ, ಸಂಶೋಧಕರ ಹೇರಿಕೆ ಅವರ ಪ್ರತಿಯೊಂದು ನಡೆನುಡಿಯಲ್ಲೂ ಸ್ಫಟಿಕದ ಶಲಾಕೆಯಂತೆ ಸುಸ್ಪಷ್ಟವಾಗಿದೆ.

ಇನ್ನು, ಸಂಶೋಧಕರು ಬಸವಣ್ಣನು ತನ್ನನ್ನು ಹಾರುವ ಎಂದು ಕರೆದುಕೊಂಡಿದ್ದಾನೆನ್ನುವ ಈ ಎರಡು ವಚನಗಳನ್ನು ಸಹ ಈ ಹಿನ್ನೆಲೆಯಲ್ಲಿ ಅವಲೋಕಿಸೋಣ: “ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ, ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ. ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,
ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ, ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ, ಅಶುದ್ಧನ ಶುದ್ಧನ ಮಾಡಿದನಾಗಿ”. (ಸಮಗ್ರ ವಚನ ಸಂಪುಟ:೧. ವಚನದ ಸಂಖೆ: ೭೧೬) “ಸೆಟ್ಟಿಯೆಂದೆನೆ ಸಿರಿಯಾಳನ
ಮಡಿವಾಳ ನೆಂಬೆನೆ ಮಾಚಯ್ಯನ
ಡೋಹರನೆಂಬೆನೆ ಕಕ್ಕಯ್ಯನ
ಮಾದಾರನೆಂಬೆನೆ ಚೆನ್ನಯ್ಯನ
ಆನು ಹಾರುವನೆಂದಡೆ ಕೂಡಲಸಂಗಯ್ಯ
ನಗುವನಯ್ಯಾ”.

(ಸಮಗ್ರ ವಚನ ಸಂಪುಟ:೧. ವಚನದ ಸಂಖ್ಯೆ: ೩೪೫) ಅನುಭವ ಮಂಟಪದಲ್ಲಿ ನಡೆದ ಚರ್ಚೆಗಳು ದಾಖಲೆ
ಯಾಗಿ ವಚನಗಳನ್ನು ರಚಿಸಲಾಗಿದೆ ಎಂದು ಶೂನ್ಯ ಸಂಪಾದನೆಯಲ್ಲಿ ಹೇಳಲಾಗಿದೆ. ಹಾಗಾಗಿ ವಚನಗಳನ್ನು ಸಭಾ ಸಂಭಾಷಣಾ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಆ ಹಿನ್ನೆಲೆಯಲ್ಲಿ ಮೊದಲ ವಚನದಲ್ಲಿ ಕರ್ಮ ಸಿದ್ಧಾಂತವನ್ನು ಎತ್ತಿಹಿಡಿಯುವ ಬ್ರಾಹ್ಮಣರನ್ನು ಉದ್ದೇಶಿಸಿ ಬಸವಣ್ಣನು ‘ನೀವು ಹಾಗೆಂದು ನುಡಿಯದೆ ಹೀಗೆ ಬ್ರಾಹ್ಮಣರಾಗಿದ್ದೇವೆ ಎಂದು ನುಡಿಯಿರಿ’ ಎಂದು ಸೂಚ್ಯವಾಗಿ ಹೇಳಿರುವ ಸಾಧ್ಯತೆ ಹೆಚ್ಚಿದೆ.

ಅದೇ ರೀತಿ ಚರ್ಚಾಗೋಷ್ಠಿಯಲ್ಲಿ ನೆರೆದವರಿಗೆ, ನೀವು ಇತರರನ್ನು ಹೀಗಳೆದು ನಿಮ್ಮನ್ನು ನೀವು (ಆನು) ಉತ್ತಮ ಕುಲಸ್ಥನು ಎಂದರೆ ನಗು ಬರುತ್ತದೆ ಎಂಬರ್ಥದಲ್ಲಿ ವಾಚ್ಯವಾಗಿ ಹೇಳಿದ್ದಾನೆ. ಏಕೆಂದರೆ ಇಂಥ ವಾಚ್ಯ ಸೂಚ್ಯಗಳ
ಬಳಕೆಯನ್ನು ವಚನಗಳಾದ್ಯಂತ ಕಾಣಬಹುದು. ಬಸವಣ್ಣನ ಅನೇಕ ವಚನಗಳೂ ಹೀಗೆಯೇ ವಾಚ್ಯ ಸೂಚ್ಯ ವಾಗಿವೆ. ಹಾಗಾಗಿ ಚರ್ಚೆಯ ಹಿನ್ನೆಲೆಯಲ್ಲಿ ಹೇಳಿದ ಈ ವಚನವನ್ನು ಬಸವಣ್ಣನು ತನ್ನನ್ನೇ ಉದ್ದೇಶಿಸಿ ಹೇಳಿಕೊಂಡಿzನೆ ಎಂದು ಹೇಳಲಾಗದು.

‘ನಾನೇ ದೇವರು, ನಾನೇ ಮಾರ್ಗ’ ಎಂಬ ಯೇಸುವಿನ ವಾಣಿ ಯೇಸುವೇ ದೇವರು, ಯೇಸುವೇ ಮಾರ್ಗವೆನಿಸದೆ
‘ನಾನು’ ಎಂಬ ಆತ್ಮವಿರುವ ಪ್ರತಿಯೊಬ್ಬನೂ ದೇವನಾಗಿ ಆತನ ಮಾರ್ಗವನ್ನು ಕಂಡುಕೊಳ್ಳಬಹುದು ಎಂಬ ಪಾರಮಾ ರ್ಥವನ್ನು ಕೊಡುತ್ತದೋ ಅಂಥ ಪಾರಮಾರ್ಥದಲ್ಲಿ ಈ ಎರಡು ವಚನಗಳನ್ನು ಪರಿಗಣಿಸಬೇಕು.
ಎ ವಚನ ಸಂಪಾದಕರೂ ವಚನಗಳನ್ನು ಮತ್ತು ವಚನ ಚಳವಳಿಯನ್ನು ತಮ್ಮ ತಮ್ಮ ಭಾವನೆ, ಸಿದ್ಧಾಂತ, ಬೌದ್ಧಿಕ ಮಟ್ಟ, ನಂಬಿಕೆ, ಪಂಥಗಳಿಗೆ ಕಟ್ಟಿಹಾಕಿದ್ದಾರೆಯೇ ಹೊರತು ಆ ಚಳವಳಿಯ ಸಂಘರ್ಷ, ಸಾಮಾಜಿಕ ಸನ್ನಿವೇಶ, ರಾಜಕೀಯ ಪಲ್ಲಟ, ವಿದೇಶಿ ಆಕ್ರಮಣಗಳು ಸೃಷ್ಟಿಸಿದ ಧಾರ್ಮಿಕ ನಿರ್ವಾತಗಳ ಆಯಾಮಗಳ ಹಿನ್ನೆಲೆಯಲ್ಲಿ ಅಲ್ಲ. ವಚನಕಾರರನ್ನು ದಾರ್ಶನಿಕ ಮಹಾಮಾನವರೆಂದು ಅವಲೋಕಿಸಿzರೆಯೇ ಹೊರತು ಅಂದಿನ ಸಾಮಾಜಿಕ ಸಹಮಾನವರಾಗಿಯಲ್ಲ.

ತಮ್ಮ ತಮ್ಮ ಮಾನಸಿಕ ತುಮುಲ, ಅಸಹನೆ, ಅಸಹಾಯಕತೆ, ಪಲ್ಲಟಗೊಂಡ ಆದ್ಯರ ಮಾರ್ಗದರ್ಶನ,
ತಬ್ಬಲಿತನಗಳೆಲ್ಲವನ್ನು ಎಲ್ಲಾ ವಚನಕಾರ/ಕಾರ್ತಿಯರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದರೂ ಅದನ್ನು ಸಂಶೋಧಕರು ಅಷ್ಟಾಗಿ ಗಮನಿಸಿಲ್ಲ. ಧಾರ್ಮಿಕ ನೆಲೆಯ ಕುದುರೆಯ ಕಣ್ಣುಪಟ್ಟಿ ಕಟ್ಟಿಕೊಂಡು ವಚನ ಸಾಹಿತ್ಯವನ್ನು ಧರ್ಮದ ಹಿನ್ನೆಲೆಯಲ್ಲಿ ಅಬ್ಬಬ್ಬಾ ಎಂದರೆ ಅಸಮಾನತೆಯ ವಿರುದ್ಧದ ಹೋರಾಟ ಎಂಬ ತಮ್ಮ ವರ್ತಮಾನದ ಸೀಮಿತ ದೃಷ್ಟಿಯಲ್ಲಿ ಸಂಕಥನಗಳನ್ನು ಕಟ್ಟಿಕೊಡಲಾಗಿದೆ ಎಂಬುದು ಅವಲೋಕಿಸಿದಷ್ಟೂ ಮತ್ತೆ ಮತ್ತೆ ಸಾಬೀತಾಗುತ್ತದೆ. ಇದೆಲ್ಲವೂ ವಚನಗಳ ವಚನಗಳಷ್ಟೇ ಸರಳ ಸತ್ಯವಾಗಿ ಸುಂದರವಾಗಿ ಸನಾತನ ಶೈವವಾಗಿ ಅಡಕವಾಗಿವೆ.

ಇದನ್ನು ಅಷ್ಟೇ ಸತ್ಯವಾಗಿ ಸುಂದರವಾಗಿ ಶೈವವಾಗಿ ಕಾಣುವ ಸರಳ ವೈಧಾನಿಕ ದೃಷ್ಟಿ ಮಾತ್ರ ಸಾಕಾಗಿತ್ತು. ಆದರೆ ಆ ಸರಳತೆಯನ್ನು ಸಿದ್ಧಾಂತಗಳ ಸಂಕೀರ್ಣತೆಯ ರೂಪದಲ್ಲಿ ಸಂಶೋಭಿ(ಧಿ)ಸಿದಾಗ ಈಗಿರುವಂಥ ಕುರುಡು ಸಂಕಥನಗಳು ಹುಟ್ಟಿಬಿಡುತ್ತವೆ. ಆದರೆ ಇದೆಲ್ಲಕ್ಕಿಂತ ಪ್ರಮುಖವಾಗಿ ಬಸವನು ಜಂಗಮ, ಬ್ರಾಹ್ಮಣ, ಮಾದಾರ ಅಲ್ಲದೆ ಈ ಶಾಸನದಲ್ಲಿ ಹಾಲಬಸ ವಿದೇವನೆಂದಿದೆಯೆಂದು ಅವನು ಹಾಲುಮತದವನೆಂದೋ ದಂಣಾಯಕ ಪದವಿದೆಯೆಂದು ಬೇಡರ ನಾಯಕ ಪಡೆಯವನೆಂದೋ ಮತ್ತೊಂದೆಂದೋ ಜಾತಿಯವನೆನ್ನುವುದು ಅರ್ಥಹೀನ.

ಏಕೆಂದರೆ ಅವನು ಹುಟ್ಟಿದ ಕಾಲಘಟ್ಟದಲ್ಲಿ ಜಾತಿಯು ಹುಟ್ಟಿನಿಂದ ನಿರ್ಧಾರವಾಗುತ್ತಲೇ ಇರಲಿಲ್ಲ! ಇಸ್ಲಾಂ ಬಂಡುಕೋರರು ಸೃಷ್ಟಿಸಿದ ಧಾರ್ಮಿಕ ನಿರ್ವಾತವನ್ನು ತಕ್ಷಣಕ್ಕೆ ತುಂಬಿಕೊಳ್ಳಲು ಹಿಂದೂ ಸಂಸ್ಕೃತಿಯು
‘ಹುಟ್ಟಿನಿಂದ ಜಾತಿ’ ನೀತಿಯನ್ನು ಅಪ್ಪಿಕೊಂಡಿತು. ಸಾಮಾಜಿಕ ಪಲ್ಲಟದಿಂದ ಜಾರಿಯಾದ ಈ ‘ಹುಟ್ಟಿನಿಂದ
ಜಾತಿ’ ನೀತಿಯನ್ನು ವಿರೋಧಿಸಿ ಸನಾತನವಾಗಿದ್ದ ‘ವೃತ್ತಿಯಿಂದ ಜಾತಿ’ಯೇ ಇರಲೆಂದು ಕಾಯಕಕ್ಕೆ ಒತ್ತು ಕೊಟ್ಟು ‘ಕಾಯಕವೇ ಕೈಲಾಸ’ ಎನ್ನುತ್ತ ಭಾರತದ ಯಾರೂ ಈ ನೀತಿಗಾಗಿ ಹೋರಾಡಲಾರದಷ್ಟು ಸಾಮೂಹಿಕವಾಗಿ ಸಾಮಾಜಿಕವಾಗಿ ಹೋರಾಡಿದ ಶರಣರನ್ನು ಚಿಂತಕರೆನಿಸಿಕೊಂಡವರೇ ಜಾತಿಗೆ ಅಂಟಿಸುವುದು, ಮತ್ತವರ
ಅನುಯಾಯಿಗಳೆಂದು ಕರೆದುಕೊಳ್ಳುವವರು ಧಾರ್ಮಿಕ ಪ್ರತ್ಯೇಕತೆಗೆ ಹೋರಾಡುವುದು ಶರಣರ ಉಗ್ರ
ವಿಪರ್ಯಾಸವೇ ಸರಿ!

(ಲೇಖಕರು ದಾವಣಗೆರೆ ಮೂಲದ
ಶಿಕಾಗೊ ನಿವಾಸಿ ಮತ್ತು ಸಾಹಿತಿ)