ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂಗಾರಿಗೆ ಜನ ಜೀವನ ಕಂಗಾಲ

ಮಳೆಯ ಅಬ್ಬರದಿಂದ ಹಳ್ಳ, ಕೊಳ್ಳಗಳಲ್ಲಿ ಕೊಚ್ಚಿ ಹೋದವರ ನೆನೆದಾಗ ಜೀವನ ಇಷ್ಟೇ ಮಲೆನಾಡಿನ ಜನರದ್ದು ಅನಿಸಿದ್ದಿದೆ. ಮಲೆನಾಡಲ್ಲಿ ಹೇಗೆಲ್ಲ ಅಭಿವೃದ್ಧಿಯಾಗಬೇಕು ಎನ್ನುವ ಯೋಚನೆ, ಯೋಜನೆ ಜನಪ್ರತಿನಿಧಿಗಳ ತಲೆಯಲ್ಲಿರಬೇಕು. ಹೇಗೆ ಅದನ್ನು ಕಾರ್ಯರೂಪಕ್ಕೆ ಇಳಿಸಿದರೆ ಸಾಧ್ಯ ಎನ್ನುವುದನ್ನು ಮಾಡಿ ತೋರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ..!

ಮುಂಗಾರಿಗೆ ಜನ ಜೀವನ ಕಂಗಾಲ

Profile Ashok Nayak Jun 18, 2025 1:20 PM

ವಿನುತಾ ಹೆಗಡೆ, ಶಿರಸಿ

ರಾಜಕೀಯ ಬಿಟ್ಟು ಅಭಿವೃದ್ಧಿ ಆಗಬೇಕು

ಬೇಸಿಗೆ ಬದಲು ಮಳೆಗಾಲದ ರಜೆ ಬೇಕು

ಎಲ್ಲರೂ ತಪ್ಪು ಮಾಡುತ್ತಾರೆ, ಅಧಿಕಾರಿಗಳು, ರಾಜಕಾರಣಿಗಳು, ಸಾರ್ವಜನಿಕರು, ನಾವು, ನೀವೂ ಎಲ್ಲರೂ. ಆದರೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದರೆ ಅದನ್ನು ಸಹಿಸಿಕೊಳ್ಳುವವರು ಕೂಡ ಎಷ್ಟೆಂದು ಸಹಿಸಿಕೊಳ್ಳಬೇಕು? ಇದು ಉತ್ತರ ಕನ್ನಡ ಜಿಲ್ಲೆಯ ಮಳೆಗಾಲದ ಸದ್ಯದ ಸ್ಥಿತಿ. ಪ್ರತೀ ಮಳೆಗಾಲದಲ್ಲಿಯೂ ಎಲ್ಲೆಲ್ಲಿ ಹಳ್ಳಕೊಳ್ಳ ತುಂಬಿ ಹರಿಯುತ್ತವೆ.

ಯಾವಾಗ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ, ಯಾವ ಕಡೆ ರಸ್ತೆ ಮೇಲೆ ಗುಡ್ಡ ಕುಸಿಯುತ್ತದೆ ಎನ್ನುವುದೂ ಗೊತ್ತಿದೆ. ಮಳೆಗಾಲದ ನಡುಗಡ್ಡೆ ಯಾವ ಪ್ರದೇಶದ ಜನ , ಗ್ರಾಮ ಮಳೆಗಾಲದಲ್ಲಿ ನಡುಗಡ್ಡೆಯಲ್ಲಿ ಉಳಿಯುತ್ತಾರೆ ಎನ್ನುವುದು ಗೊತ್ತು ಇದೆಲ್ಲವೂ ಅರಿವಿರುವಾಗ ಎಲ್ಲೋ ಒಂದು ಕಡೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಇದರ ಅರಿವಿದ್ದೂ ಇಷ್ಟು ವರ್ಷಗಳಕಾಲ ಸುಮ್ಮ ನಿದ್ದಿರುವುದೇಕೆ ?

ಮಳೆಯ ಅಬ್ಬರದಿಂದ ಹಳ್ಳ, ಕೊಳ್ಳಗಳಲ್ಲಿ ಕೊಚ್ಚಿ ಹೋದವರ ನೆನೆದಾಗ ಜೀವನ ಇಷ್ಟೇ ಮಲೆನಾಡಿನ ಜನರದ್ದು ಅನಿಸಿದ್ದಿದೆ. ಮಲೆನಾಡಲ್ಲಿ ಹೇಗೆಲ್ಲ ಅಭಿವೃದ್ಧಿಯಾಗಬೇಕು ಎನ್ನುವ ಯೋಚನೆ, ಯೋಜನೆ ಜನಪ್ರತಿನಿಧಿಗಳ ತಲೆಯಲ್ಲಿರಬೇಕು. ಹೇಗೆ ಅದನ್ನು ಕಾರ್ಯರೂಪಕ್ಕೆ ಇಳಿಸಿದರೆ ಸಾಧ್ಯ ಎನ್ನುವವುದನ್ನು ಮಾಡಿ ತೋರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ..!

ಇದನ್ನೂ ಓದಿ: Sirsi News: ಮಾಧ್ಯಮ ಕ್ಷೇತ್ರದಲ್ಲಿ ಕೈ ಹಿಡಿದು ಬರೆಸಬಲ್ಲ, ಮಾರ್ಗದರ್ಶನ ನೀಡುವ ಹಿರಿಯರ ಕೊರತೆ ಸಾಕಷ್ಟಿದೆ

ಪರಸ್ಪರ ಆರೋಪಗಳು

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಆದರೆ ಯಾವ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ವೆಂದು ಹೇಳುವ ಬಿಜೆಪಿ ನಾಯಕರು. ಕೇಂದ್ರ ಯಾವುದೇ ರೀತಿಯ ಅನುದಾನ ನೀಡುತ್ತಿಲ್ಲವೆಂದು ಹೇಳುವ ಕಾಂಗ್ರೆಸ್ ನಾಯಕರು. ಪ್ರತಿ ಗ್ರಾಮದಲ್ಲಿ ಅಭಿವೃದ್ಧಿಯಲ್ಲಿ ರಾಜಕೀಯ ಬಂದರೆ ಅಭಿವೃದ್ಧಿ ಹೇಗೆ ಸಾಧ್ಯ ? ಅಬಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳುವಂಥ ನಾಯಕರೇ ರಾಜಕೀಯ ಮಾಡಿಕೊಂಡು ಆಗುವ ಅಭಿವೃದ್ಧಿಗೂ ಅಡಿಗಲ್ಲು ಹಾಕುವ ಮುನ್ನವೇ ಕಲ್ಲು ಹಾಕುತ್ತಿದ್ದಾರೆ.

ಅಪಾಯಗಳ ಸರಮಾಲೆ:

ಮಲೆನಾಡಲ್ಲಿಯ ರಸ್ತೆಗಳ ಅವಾಂತರ, ಗುಡ್ಡ ಕುಸಿಯುವ ಭೀತಿ, ಕುಸಿತದ ಅವ್ಯವಸ್ಥೆ, ಹಳ್ಳ ಕೊಳ್ಳಗಳು ಹರಿಯುವ ಪರಿ.. ಅಬ್ಬಾ , ಇದರ ನಡುವೆ ರಸ್ತೆಯಲ್ಲೇ ಉರುಳುವ ಮರಗಳು, ವಿದ್ಯುತ್ ಕಂಬಗಳು ನೀಡುವ ಅಪಾಯ, ಒಂದೇ ಎರಡೇ ಮಲೆನಾಡಿನ ಮಳೆಗಾಲ ಅಂದರೆ ಮನೆಯಿಂದ ಆಚೆ ಹೋಗಲೂ ಭಯ. ಆದರೆ ಮಲೆನಾಡಿಗರು ಮಳೆಯೊಂದಿಗೆ ಸೆಣೆಸುತ್ತಲೇ ಬದುಕಬೇಕು. ಬೇರೆ ದಾರಿ ಇಲ್ಲ.

ಬೇಕು ಮಳೆಗಾಲದ ರಜೆ

ಧೋ ಎಂದು ಸುರಿವ ಮಳೆ. ಮಳೆಯಲ್ಲಿ ನೆನೆಯಬಾರದೆಂದು ಕೈನಲ್ಲಿ ಹಿಡಿದ ಕೊಡೆಯೋ ಗಾಳಿಯ ರಭಸಕ್ಕೆ ಇನ್ನಷ್ಟು ನೀರನ್ನು ಸೇರಿಸಿಕೊಂಡು ಹಾರುತ್ತದೆ. ಕಾಲಡಿಯಿಂದ ಮೊಳಕಾಲಿ ನವರೆಗೆ ಕೆಂಪನೆಯ ಮಣ್ಣು ನೀರು. ಹೊಳೆಯಲ್ಲಿಯೇ ನಡೆಯುವ ಅನುಭವ. ಇತ್ತ ಮೈ ಮೇಲಿನ ಸಮವಸ್ತ್ರ ಒದ್ದೆಯಾಗಿ ಕೈ ಕಾಲೆಲ್ಲ ನಡುಗುತ್ತಿತ್ತು. ನಿಜವಾಗಿಯೂ ಅನಿಸಿದ್ದಿಷ್ಟೇ ಬೇಸಿಗೆಯ ರಜೆಯ ಬದಲಾಗಿ ನಮ್ಮಲ್ಲಿ ಮಳೆಗಾಲದ ರಜೆ ಇದ್ದರೆ ಚೆಂದ ಎಂದು. ಈ ಮಳೆ, ಹಳ್ಳ, ಒದ್ದೆ ಬಟ್ಟೆ, ಸೂರ್ಯನ ಕಾಣಲಾರದ ಮೋಡ ಕವಿದ ವಾತಾವರಣ. ಮಳೆಗಾಲವೆಂದರೆ ಮಲೆನಾಡಿನ ಶಾಲಾ ಮಕ್ಕಳಿಗೆ ಒಂದು ರೀತಿ ಖುಷಿ ಇದ್ದರೂ ಅದು ತಂದು ಕೊಡುವ ಅನುಭವ ಹಾರಿಬಲ್..!

ಶಾಲಾ ಮಕ್ಕಳ ಫಜೀತಿ

ಗ್ರಾಮೀಣ ಭಾಗದ ಮನೆಗಳಲ್ಲಿಯೂ ಅಷ್ಟೇ ಮಕ್ಕಳು ಶಾಲೆಯಿಂದ ಬರುವವರೆಗೂ ನೆಮ್ಮದಿ ಇಲ್ಲ. ಮಕ್ಕಳು ಎಷ್ಟೊತ್ತಿಗೆ ಬರುತ್ತಾರೆಂದು ಕಾಯುವುದೇ ದಿನದ ಆತಂಕದ ಕೆಲಸ. ಸರಿಯಾದ ಸಂಪರ್ಕ ಸೇತುವೆ ಇರುವುದಿಲ್ಲ. ಯಾವುದೇ ದೂರ ಸಂವಹನ ಕ್ರಿಯೆಗೆ ಚರ, ಸ್ಥಿರ ದೂವಾಣಿಗಳು ಸ್ಥಬ್ದ ವಾಗಿರುತ್ತವೆ. ಉಸಿರು ಬಿಗಿ ಹಿಡಿದು ಮಕ್ಕಳಿಗಾಗಿ ಪಾಲಕರು, ಹಲವು ಬಾರಿ ಪಾಲಕರಿಗಾಗಿ ಮಕ್ಕಳು ಚಡಪಡಿಸುವುದು ಇಲ್ಲಿ ಸಾಮಾನ್ಯ.

ಘಟ್ಟದ ಮೇಲೆ -ಕಳಗೆ

’ಮಲೆನಾಡಿನ ಘಟ್ಟದ ಮೇಲಿನ ಭಾಗದಲ್ಲಿ ಮಳೆ ರಭಸವಾಗಿ ಸುರಿದರೆ ಸಾಕು ಬಿಸಿಲಿರುವ ಕರಾವಳಿ ಯಲ್ಲಿ ಪ್ರವಾಹ. ಇದು ಉತ್ತರ ಕನ್ನಡ ಜಿಲ್ಲೆಯ ಸ್ಥಿತಿ. ಒಂದು ಜಿಲ್ಲೆಯಲ್ಲಿ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಣೆ ಮಾಡಿ ಶಾಲಾ ಕಾಲೇಜಿಗೆ ರಜೆ ನೀಡಿದರೆ ಯಾವ ಭಾಗದಲ್ಲಿ ಎಂದು ಯೋಚಿಸ ಬೇಕಿದೆ. ಒಂದು ಭಾಗದಲ್ಲಿ ಸುರಿದ ಮಳೆ ಇನ್ನೊಂದು ಭಾಗದಲ್ಲಿ ಸುರಿಯುತ್ತದೆ ಎನ್ನುವುದು ಖಚಿತವಿಲ್ಲ. ಕೆಲವೊಮ್ಮೆ ಘಟ್ಟದ ಮೇಲೆ ಮಳೆ ಸುರಿದು ಮಕ್ಕಳು ಅಪಾಯಕ್ಕೊಳ ಪಡುತ್ತಾರೆಂದರೆ ನಮ್ಮಲ್ಲಿ ಮಳೆ ಇದೆ ಎಂದು ಜಿಲ್ಲಾಧಿಕಾರಿಗೋ, ಶಿಕ್ಷಣಾಧಿಕಾರಿಗೋ ತಿಳಿಸಬೇಕು. ಏಕೆಂದರೆ ಘಟ್ಟದ ಮೇಲಿನ ವಾತಾವರಣ ಘಟ್ಟದ ಕೆಳಭಾಗದ ವಾತಾವರಣ ಒಂದೇ ಸಮ ಇರುವುದೇ ಇಲ್ಲ.

ಮಳೆ ಕಾಲಿಡುವ ಮುನ್ನ

ಅದೇನೇ ಇರಲಿ ಮಳೆಗಾಲ ಬಂತು ಎಂದರೆ ಎಚ್ಚೆತ್ತುಕೊಳ್ಳುವ ಕಾರ್ಯ ಆರಂಭಕ್ಕೆ ಮಾಡುವು ದಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ ಈ ಮಳೆಗಾಲದಲ್ಲಿ ಎಲ್ಲೆಲ್ಲಿ ಅನಾಹುತವಾಗಿದೆ. ಗುಡ್ಡ ಕುಸಿದಿದೆ, ರಸ್ತೆಗೆ ಮರ ಬಿದ್ದಿದೆ. ಎಲ್ಲೆಲ್ಲಿ ಮಕ್ಕಳು ಶಾಲೆಗೆ ಹೋಗಲು ಸಂಕವಿಲ್ಲದೆ ಪರದಾಡು ತ್ತಿದ್ದಾರೆ.. ಹೀಗೆ ಹಲವು ಬಗೆ ಯೋಚಿಸಿ ಮತ್ತೊಂದು ಮಳೆಗಾಲ ಕಾಲಿಡುವ ಮುನ್ನ ಎಚ್ಚರ ವಹಿಸಿದರೆ ಅರ್ಧದಷ್ಟಾದರೂ ಆಗುವ ಹಾನಿ ತಪ್ಪಿಸಬಹುದು. ಜನಪ್ರತಿನಿಧಿಗಳು, ಅಧಿಕಾರಿಗಳು ಇರುವುದು ಜನರ ಸೇವೆಗಾಗಿ. ಆದರೆ ಈ ಕಾರ್ಯವನ್ನ ಸರಿಯಾಗಿ ನಿರ್ವಹಿಸುತ್ತಿಲ್ಲ ವೆಂಬದು ಮಲೆನಾಡಿಗರ ಹತಾಶೆಯ ದೂರು.

ಹೊಣೆಗಾರರು ಯಾರು?

ಶಿರಸಿ- ಕುಮಟಾ ರಸ್ತೆಗಳ ಬಿಡಿ, ಕರಾವಳಿ ಹೆದ್ದಾರಿಯ ಬಗ್ಗೆ ಮಾತನಾಡದೇ ಇರುವುದೇ ಒಳಿತು. ಏಕೆಂದರೆ ಏಳೆಂಟು ವರ್ಷಗಳೇ ಕಳೆದವು. ಅಂದರೆ ಅಷ್ಟು ಮಳೆಗಾಲ ದಾಟಿದವು. ಆದರೆ ಇಲ್ಲಿ ಯಾವ ಸಮಸ್ಯೆ ಬಗೆಹರಿದಿಲ್ಲ. ಮಳೆಗಾಲದಲ್ಲಿ ಆಗುವ ಅನಾಹುತಗಳು, ರಸ್ತೆ ಸಂಪರ್ಕ ಕಡಿತ, ಇವೆಲ್ಲವೂ ಜೀವಂತವಾಗಿವೆ. ಇದಕ್ಕ್ಲೆ ಯಾವೊಬ್ಬ ಅಧಿಕಾರಿ, ರಾಜಕಾರಣಿ ಕಾರಣವಲ್ಲ. ಇದಕ್ಕೆ ಇವರಿಬ್ಬರೂ ಹೊಣೆ. ತಾಪತ್ರಯ ಅನುಭವಿಸುವವರು ಮಾತ್ರ ಶ್ರೀಸಾಮಾನ್ಯರು..!

ಈಗಲಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣಿಗಳು ರಾಜಕೀಯ ಮಾಡದೇ ಸ್ಪಂದಿಸಬೇಕಿದೆ. ಈ ಮಳೆಗಾಲದಲ್ಲಿ ಆದ ತೊಂದರೆ, ಸಮಸ್ಯೆ ಗಮನದಲ್ಲಿಟ್ಟುಕೊಂಡು ಮುಂದಿನ ಮಳೆಗಾಲಕ್ಕಾದರೂ ಸಮಸ್ಯೆ ಪುನರಾವರ್ತನೆ ಆಗದಿರಲಿ ಅಷ್ಟೇ..!