ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. Mahesh Joshi: ಸಚಿವ ದರ್ಜೆ ಸ್ಥಾನಮಾನ ವಾಪಸ್‌ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ: ಮಹೇಶ್‌ ಜೋಶಿ

Dr. Mahesh Joshi: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನವನ್ನು ಹಿಂಪಡೆಯಬೇಕು ಎಂದು ದುರದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬಂದಾಗಲೇ ಮುಖ್ಯಮಂತ್ರಿಗಳಿಗೆ ದಾಖಲೆ ಸಹಿತ ಪತ್ರ ಬರೆದು ವಾಸ್ತವಾಂಶಗಳನ್ನು ತೆರೆದಿಟ್ಟಿದ್ದೇನೆ ಎಂದು ಹೇಳಿದ್ದಾರೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ.

ಸಚಿವ ದರ್ಜೆ ಸ್ಥಾನಮಾನ ವಾಪಸ್‌ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ

Profile Prabhakara R May 31, 2025 8:30 PM

ಬೆಂಗಳೂರು: ತಮಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದರ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಸಚಿವ ದರ್ಜೆ ಸ್ಥಾನ ಮಾನ ನೀಡಿದ ಮೇಲೆ ಎಲ್ಲಿಯೂ ಅದರ ಗೌರವಕ್ಕೆ ಚ್ಯುತಿ ಬಾರದ ಹಾಗೆ, ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳದ ಹಾಗೆ ಕಾರ್ಯ ನಿರ್ವಹಿಸಿದ್ದೇನೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಮಹೇಶ್‌ ಜೋಶಿ (Dr. Mahesh Joshi) ತಿಳಿಸಿದ್ದಾರೆ.

ಸಚಿವ ದರ್ಜೆ ಸ್ಥಾನಮಾನ ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನವನ್ನು ಹಿಂಪಡೆಯಬೇಕು ಎಂದು ದುರದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬಂದಾಗಲೇ ಮುಖ್ಯಮಂತ್ರಿಗಳಿಗೆ ದಾಖಲೆ ಸಹಿತ ಪತ್ರ ಬರೆದು ವಾಸ್ತವಾಂಶಗಳನ್ನು ತೆರೆದಿಟ್ಟಿದ್ದೇನೆ ಎಂದು ಹೇಳಿದ್ದಾರೆ.



ಸಿಎಂಗೆ ಬರೆದ ಪತ್ರದಲ್ಲೇನಿದೆ?

ಮೈಸೂರು ಮಹಾರಾಜರಾದ ʼರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ʼ ಅವರ ಪೋಷಣೆಯೊಂದಿಗೆ 1915ರ ಮೇ 5ರಂದು ರಂದು ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ, ನಾಲ್ವಡಿಯವರು ಯಾವತ್ತೂ ಹಸ್ತಕ್ಷೇಪ ಮಾಡದೇ ಆದರ ಸ್ವಾಯತ್ತತೆ ಮತ್ತು ಸ್ವಾತಂತ್ರತೆ ಮತ್ತು ರಾಜಕೀಯ ತಟಸ್ಥತೆಯನ್ನು ಕಾಪಾಡಿ ಆದರ್ಶ ಪರಂಪರೆಯನ್ನು ಸ್ಥಾಪಿಸಿದ್ದರು. ಇದೇ ರೀತಿ ತಮ್ಮ ಸರ್ಕಾರ ಕೂಡ ಕಸಾಪ ಸ್ವಾಯತ್ತತೆ ಮತ್ತು ಸ್ವಾತಂತ್ರತೆಯನ್ನು ಗೌರವಿಸುತ್ತಾ ಬಂದಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿರುವುದರ ಕುರಿತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದರಲ್ಲೂ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಹಾಗೂ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕೈಜೋಡಿಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಮನವಿ ಪತ್ರವನ್ನು ಸಲ್ಲಿಸಿ ಸಚಿವ ದರ್ಜೆ ಸ್ಥಾನಮಾನವನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿರುವುದನ್ನು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಹೀಗಾಗಿ ತಾವು ಕಸಾಪ ಅಧ್ಯಕ್ಷ ಸಚಿವ ದರ್ಜೆಯ ಸ್ಥಾನಮಾನ ಹಿಂಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದೀರಿ ಎಂದು ತಿಳಿದು ಬಂದಿರುವುದರಿಂದ ಕೆಲವು ಮಾಹಿತಿಗಳನ್ನು ತಮ್ಮ ಗಮನಕ್ಕೆ ತರುವ ಅನಿವಾರ್ಯತೆ ಉಂಟಾಗಿದೆ.

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜಯಪ್ರಕಾಶಗೌಡ ಅವರು ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ನೀಡಿದ್ದ 25 ಕೋಟಿ ಅನುದಾನದಲ್ಲಿ 25 ಲಕ್ಷ ರೂ.ಗಳನ್ನು ಮಂಡ್ಯದ ಕರ್ನಾಟಕ ಸಂಘದ ಕಟ್ಟಡಕ್ಕೆ ನೀಡಬೇಕೆಂದು ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಪೈಸೆಯೂ ನೀಡಲು ಸಾಧ್ಯವಿಲ್ಲವೆಂದು ಕಡಾಖಂಡಿತವಾಗಿ ತಿಳಿಸಿದ್ದೆ. ಅವರು ಕೇಳಿದ ಹಣ ನೀಡಲಿಲ್ಲ ಎಂಬ ಕಾರಣದಿಂದ ಅಸೂಯೆಯಿಂದ ಹಗೆತನ, ದ್ವೇಷವನ್ನು ಸಾಧಿಸಿಕೊಂಡು ಪಟ್ಟಭದ್ರ ಹಿತಾಸಕ್ತಿಗಳ ಜತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನನ್ನ ವಿರುದ್ಧ ಹಾಗೂ ಕಾರ್ಯಕಾರಿ ಸಮಿತಿಯ ವಿರುದ್ಧ ದ್ವೇಷವನ್ನು ಕಾರುತ್ತಾ, ಸುಳ್ಳು ಸುದ್ದಿಯೊಂದಿಗೆ ಅಪಪ್ರಚಾರ ಮಾಡುತ್ತಿದ್ದಾರೆ.

ಇನ್ನು ಕಸಾಪ ಅಧ್ಯಕ್ಷರು, ಸಚಿವ ದರ್ಜೆಯ ಸ್ಥಾನ ಮಾನವನ್ನು ಕೇಳಿ ಪಡೆದಿರುವುದಿಲ್ಲ, ಅವರನ್ನು ಕನ್ನಡದ ಸಾಹಿತ್ಯಕ ರಾಯಭಾರಿ ಎಂದು ಪರಿಗಣಿಸಿ, ಸರ್ಕಾರವೇ ಈ ಸ್ಥಾನಮಾನ ನೀಡಿದೆ. ಇದು ವೈಯುಕ್ತಿಕವಾಗಿ ನನಗೆ ನೀಡಿರುವಂತಹದ್ದಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಿಗೆ ನೀಡಿರುವಂತಹದ್ದು. ಇದನ್ನು ಸ್ಥಾನಕ್ಕೆ ನೀಡಿರುವ ಗೌರವವೇ ಹೊರತು, ವ್ಯಕ್ತಿಗತವಲ್ಲ. ಇದು ರಾಜ್ಯ ಸಚಿವರ ಸ್ಥಾನ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿರುವುದು ಗೌರವದ ಸಂಕೇತವಾಗಿದೆ ಹೊರತು ಪ್ರತಿಷ್ಠೆಯ ಸಂಕೇತವಾಗಿರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಶಿಷ್ಟಾಚಾರದ ಸೌಲಭ್ಯವನ್ನು ನೀಡುವ ಚರ್ಚೆ ನನ್ನ ಕಾಲದಲ್ಲಿ ಆರಂಭವಾಗಿದ್ದಲ್ಲ.

1994ರ ಫೆ.11ರಂದು ನಡೆದ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಗಿನ ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಶಿಷ್ಟಾಚಾರದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಸೂಚಿಸಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲಿಸಿ, 1994ರ ಫೆ.4ರಂದು ಸರ್ಕಾರ ಆದೇಶ ಹೊರಡಿಸಿ, "ಪರಿಷತ್ತಿನ ಅಧ್ಯಕ್ಷರಿಗೆ ಕನ್ನಡ ಭಾಷೆ ಹಾಗೂ ಸಾಹಿತ್ಯ ಪ್ರಚಾರಕ್ಕಾಗಿ ಮಾಡುವ ಅವರ ಪ್ರವಾಸ ಕಾಲದಲ್ಲಿ ವಾಹನ, ವಸತಿ ಹಾಗೂ ಇತರ ಶಿಷ್ಟಾಚಾರ ವ್ಯವಸ್ಥೆಯನ್ನು ಆಯಾ ಜಿಲ್ಲಾಧಿಕಾರಿಗಳು ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದರು.

ಆದರೆ ಅಂದಿನ ಆದೇಶದಲ್ಲಿ ಶಿಷ್ಟಾಚಾರ ಸೌಲಭ್ಯಗಳನ್ನು ಕಲ್ಪಿಸಲು 'ಲಭ್ಯತೆಗೆ ಒಳಪಟ್ಟು' ಎಂಬ ಶಬ್ದವನ್ನು ಉಪಯೋಗಿಸಿದ್ದರಿಂದ. ಸರ್ಕಾರದ ಆದೇಶ ಮೌಲ್ಯಹೀನವಾಗಿದೆ ಎಂದು ಆ ಆದೇಶವನ್ನು ಖಂಡಿಸಿ, ಅಂದಿನ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರ ನೇತೃತ್ವದ ನಿಯೋಗದಲ್ಲಿ ಮುಖ್ಯಮಂತ್ರಿಗಳನ್ನು ಮನವಿ ಸಲ್ಲಿಸಿತ್ತು. ಅದರಂತೆ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಅದರಲ್ಲೂ, 'ಲಭ್ಯತೆಗೆ ಒಳಪಟ್ಟು' ಎಂಬ ಶಬ್ದವನ್ನು ಅಧಿಕಾರಿಗಳು ಬಳಸಿದ್ದನ್ನು ಸಿಎಂ ಖಂಡಿಸಿ, ತಮ್ಮ ಸರ್ಕಾರ ಕನ್ನಡಿಗರ ಧ್ವನಿಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಅತ್ಯಂತ ಗೌರವ ಹೊಂದಿದೆ ಎಂದು ತಿಳಿಸಿ, ಕಸಾಪ ಅಧ್ಯಕ್ಷರನ್ನು 'ಹಿರಿಯ ಗಣ್ಯವ್ಯಕ್ತಿ' ಎಂದು ಗೌರವಿಸಿ, ಆದ್ಯತೆಯ ಮೇಲೆ ಅವರಿಗೆ ಪ್ರವಾಸ ಕಾಲದಲ್ಲಿ ವಾಹನ, ವಸತಿ, ಪೊಲೀಸ್ ರಕ್ಷಣೆ ಹಾಗೂ ಎಲ್ಲಾ ಶಿಷ್ಟಾಚಾರವನ್ನು ಒದಗಿಸುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿ, ಮುಖ್ಯ ಕಾರ್ಯದರ್ಶಿಗೆ ಹೊಸ ಆದೇಶ ಹೊರಡಿಸಬೇಕೆಂದು ಸೂಚಿಸಿದ್ದರು.

ಇದಕ್ಕೆ ಸಂಬಂಧಿಸಿ 2021ರ ಫೆ.6ರಂದು ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನ ಮಾನ ನೀಡುವಂತೆ ಕೋರಿದ್ದರು. ಅದೇ ರೀತಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನ ಮಾನ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ 2022ರ ಆ.3ರಂದು ಸರ್ಕಾರದ ಆದೇಶದ ಅನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಲಾಗಿತ್ತು.

ಈಗಾಗಲೇ ತಮ್ಮ ಗಮನಕ್ಕೆ ಬಂದಂತೆ, ಸಚಿವ ದರ್ಜೆ ಸ್ಥಾನಮಾನವನ್ನು ನಾನು ಕೇಳಿರುವುದಲ್ಲ, ಕೇಳಿದ್ದು, ಕನ್ನಡ, ಕನ್ನಡಿಗ, ಕರ್ನಾಟಕದ ಕಾರ್ಯವನ್ನು ನಿರ್ವಹಿಸಲು ಅನುಕೂಲವಾಗುವಂತೆ, ಶಿಷ್ಟಾಚಾರ ಪರಿಪಾಲನೆಯಲ್ಲಿ ವಿನಾಯತಿಯನ್ನು ಮಾತ್ರ. ಸಚಿವ ದರ್ಜೆ ಸ್ಥಾನ ಮಾನ ನೀಡಿದ ಮೇಲೆಯೂ ಎಲ್ಲಿಯೂ ಅದರ ಗೌರವಕ್ಕೆ ಚ್ಯುತಿ ಬಾರದೆ ಹಾಗೆ, ಅದರ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳದ ಹಾಗೆ ಕಾರ್ಯ ನಿರ್ವಹಿಸಿದ್ದೇನೆ. ಸಚಿವ ದರ್ಜೆ ಸ್ಥಾನದ ನೀಡಿಕೆ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವನ್ನು ಪರಿಗಣಿಸಿ ನೀಡಿರುವ ಸೌಲಭ್ಯವೇ ಹೊರತು, ವೈಯುಕ್ತಿಕವಾದದ್ದಲ್ಲ. ನಾನು ಯಾವುದೇ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳದೇ, ಅನಿವಾರ್ಯತೆಯಲ್ಲಿ ಮಾತ್ರ ಲಭ್ಯವಿರುವ ಸೌಲಭ್ಯಗಳನ್ನು, ಅದರಲ್ಲೂ ಶಿಷ್ಟಾಚಾರಕ್ಕೆ ಮಾತ್ರ ಉಪಯೋಗಿಸುತ್ತಿದ್ದೇನೆ ಎಂಬುದನ್ನು ತಮಗೆ ತಿಳಿಸಲು ಬಯಸುತ್ತೇನೆ.

ಈ ಸುದ್ದಿಯನ್ನೂ ಓದಿ | Dr. Mahesh joshi: ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ದೊರಕುವ ಗೌರವವೆಂದರೆ ಕನ್ನಡಿಗರಿಗೆ ದೊರಕುವ ಗೌರವ. ಹೀಗಾಗಿ, ಏಕಾಏಕೀ ಕೆಲ ವ್ಯಕ್ತಿಗಳ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು, ಈ ಗೌರವವನ್ನು ಹಿಂಪಡೆಯುವ ಪ್ರಕ್ರಿಯೆ ನಡೆಸುವುದು ಕನ್ನಡಿಗರಿಗೆ ಮಾಡುವ ಅವಮಾನ, ಅಪಮಾನ ಹಾಗೂ ಕನ್ನಡ ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಧಕ್ಕೆ ತರುವ ಕ್ರಮವೂ ಆಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರದ ನಡುವೆ ಇರುವ ಸೌಹಾರ್ದಯುತ ಸಂಬಂಧಕ್ಕೆ ತೊಡಕು ಉಂಟಾಗಿ, ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯೂ ಈ ಮೂಲಕ ಸೃಷ್ಟಿಯಾಗುತ್ತದೆ. ಹೀಗಾಗಿ, ಪಟ್ಟಭದ್ರ ಹಿತಾಸಕ್ತಿಗಳ ಒಳ ಉದ್ದೇಶ (Hidden Agenda) ಕ್ಕೆ ಸೊಪ್ಪು ಹಾಕಿದಂತಾಗುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರುವ ಅನಿವಾರ್ಯತೆ ಉಂಟಾಗಿದ್ದು, ತಾವು ಈ ಕುರಿತು ತಪ್ಪು ತಿಳಿಯುವುದಿಲ್ಲವೆಂದು ಭಾವಿಸುತ್ತೇನೆ ಎಂದು ಮಹೇಶ್‌ ಜೋಶಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.