ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಕೆಪಿಎಸ್‌ಸಿ ಕರ್ಮಕಾಂಡದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಬೇಕು: ಜೋಶಿ ಆಗ್ರಹ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಆಡಳಿತ ವ್ಯವಸ್ಥೆ, ಕಾರ್ಯತತ್ಪರತೆ ದಿನೇ ದಿನೇ ಯಾವ ರೀತಿ ಕುಸಿಯುತ್ತಿದೆ ಎಂಬುದಕ್ಕೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಬಯಲಾದ ಈ ಲೋಪದೋಷಗಳೇ ನಿದರ್ಶನ. ಈ ಪರಿಸ್ಥಿತಿಗೆ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತು ಕೂಡಲೇ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿ ಕರ್ಮಕಾಂಡದ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಬೇಕು: ಜೋಶಿ

Profile Siddalinga Swamy May 6, 2025 8:26 PM

ನವದೆಹಲಿ: ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಸಮಗ್ರ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ಆಗ್ರಹಿಸಿದ್ದಾರೆ. ಕೆಪಿಎಸ್‌ಸಿ ಸಂಸ್ಥೆಯ ಪರೀಕ್ಷೆ ಪ್ರಹಸನಗಳು ಒಂದೆರೆಡಲ್ಲ. ಬೆಳಗ್ಗೆ ಪರೀಕ್ಷೆ ಇದ್ದರೆ ಸಂಜೆವರೆಗೂ ಅರ್ಜಿ ಸ್ವೀಕಾರ, ಮಧ್ಯರಾತ್ರಿವರೆಗೂ ಹಾಲ್‌ ಟಿಕೆಟ್‌ ವಿತರಣೆ, ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ತಪ್ಪು ಪ್ರಶ್ನೆಗಳ ಮುದ್ರಣ, ಪ್ರಶ್ನೆ ಪತ್ರಿಕೆ ಸೋರಿಕೆ ಸಾಲದ್ದಕ್ಕೆ ಈಗ ʼಕಾರ್‌ ಪಂಕ್ಚರ್‌ʼ ಎಂಬ ಹೊಸದೊಂದು ನಾಟಕ ಎಂದು ಆರೋಪಿಸಿರುವ ಸಚಿವರು, ಇದಲ್ಲದರ ಹೂರಣ ಬಯಲಾಗಲು ಸರ್ಕಾರ ಸಮಗ್ರ ತನಿಖೆ ನಡೆಸಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತರಾತುರಿಯಲ್ಲಿ ಪರೀಕ್ಷೆ ಯಾರ ಸುಖಕ್ಕೆ?

384 ಪ್ರೊಬೇಷನರಿಸ್‌ ಹುದ್ದೆಗಳಿಗೆ ರಾತ್ರೋರಾತ್ರಿ ಹಾಲ್‌ ಟಿಕೆಟ್‌ ವಿತರಿಸಿ ಬೆಳಗ್ಗೆ ಪರೀಕ್ಷೆ ನಡೆಸುವ ಜರೂರತ್‌ ಏನಿತ್ತು? ಇದು ಯಾರ ಸುಖಕ್ಕಾಗಿ? ಎಂದು ಪ್ರಶ್ನಿಸಿರುವ ಸಚಿವ ಜೋಶಿ, ಕೆಪಿಎಸ್‌ಸಿ ಸಾಲು ಸಾಲು ಲೋಪವೆಸಗಿದ ಈ ದುರಂತ ಪರೀಕ್ಷೆ ಅಭ್ಯರ್ಥಿಗಳ ಮನೋಸ್ಥೈರ್ಯವನ್ನೇ ಕುಗ್ಗಿಸಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಡಕತ್ತರಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ

ಲಕ್ಷಾಂತರ ಅಭ್ಯರ್ಥಿಗಳು ನಾಗರಿಕ ಸೇವೆಯ ಕನಸಿನಲ್ಲಿ ವರ್ಷಗಟ್ಟಲೇ ಪರಿಶ್ರಮ ವಹಿಸಿ ಅಭ್ಯಾಸ ಮಾಡಿ ಕೊನೆಯ ಹಂತ ಎನ್ನುವಂತೆ ಅತ್ಯಂತ ಶ್ರದ್ಧೆಯಿಂದ ಪರೀಕ್ಷೆ ಬರೆಯುತ್ತಾರೆ. ಅವರ ಪರಿಶ್ರಮ, ಅಭ್ಯಾಸದ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಅರಿವಿದಿಯೇ? ಎಂದು ಪ್ರಶ್ನಿಸಿದ ಸಚಿವರು, ಕೆಪಿಎಸ್‌ಸಿಯ ಈ ಪ್ರಹಸನ ಕುರಿತು ಸರ್ಕಾರ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅವಘಡಕ್ಕೆ ಸರ್ಕಾರವೇ ನೇರ ಕಾರಣ

ರಾಜ್ಯ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಕೆಪಿಎಸ್‌ಸಿ ಪರೀಕ್ಷಾ ತಯಾರಿ ನಡೆಸಿದ ವಿದ್ಯಾರ್ಥಿಗಳ ಭವಿಷ್ಯವನ್ನು ಅಡಕತ್ತರಿಗೆ ಸಿಲುಕಿದಂತಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನಜೀವನ ದುಸ್ತರ ಮಾಡಿರುವ ಈ ಕಾಂಗ್ರೆಸ್‌ ಸರ್ಕಾರ ಸಾಲದ್ದಕ್ಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೂ ಚೆಲ್ಲಾಟವಾಡುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಆಡಳಿತ ವ್ಯವಸ್ಥೆ, ಕಾರ್ಯತತ್ಪರತೆ ದಿನೇದಿನೇ ಯಾವ ರೀತಿ ಕುಸಿಯುತ್ತಿದೆ? ಎಂಬುದಕ್ಕೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಬಯಲಾದ ಈ ಲೋಪದೋಷಗಳೇ ನಿದರ್ಶನ. ಈ ಪರಿಸ್ಥಿತಿಗೆ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತು ಕೂಡಲೇ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂ ಕೆಪಿಎಸ್‌ಸಿ ವಿರುದ್ಧ ದರ್ಪ ಪ್ರದರ್ಶಿಸಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ನಿಷ್ಠಾವಂತ ಮತ್ತು ಖಡಕ್‌ ಅಧಿಕಾರಿಗಳ ವಿರುದ್ಧ ದರ್ಪ ತೋರುವುದನ್ನು ಬಿಟ್ಟು ದೇಶದಲ್ಲೇ ಒಂದು ಕಪ್ಪು ಚುಕ್ಕೆಯಂತೆ ಬೇಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆಪಿಎಸ್‌ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಚಾಟಿ ಬೀಸಿದ್ದಾರೆ.

ಕೆಪಿಎಸ್‌ಸಿ ಕೊಟ್ಟ ಸ್ಪಷ್ಟೀಕರಣ ದುರಂತ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷಾರ್ಥಿಗಳು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಕೆಪಿಎಸ್‌ಸಿ ಬಾಲಿಶ ಸ್ಪಷ್ಟೀಕರಣ ನೀಡಿದ್ದು, ನಿಜಕ್ಕೂ ದುರಂತ. ಪರೀಕ್ಷೆಯಲ್ಲಿ ಯಾವುದೇ ಸಂದೇಹಗಳಿಗೆ ಆಸ್ಪದವಾಗದಂತೆ ನೋಡಿಕೊಳ್ಳುವುದು ಅಗತ್ಯ ಮತ್ತು ಕಡ್ಡಾಯವಾಗಿತ್ತು ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Traffic Jam: ನಿಮಿಷ, ಗಂಟೆ, ದಿನವಲ್ಲ... ಬರೋಬ್ಬರಿ 2 ವಾರಗಳ ಟ್ರಾಫಿಕ್ ಜಾಮ್ ಹೇಗಿತ್ತು ಗೊತ್ತೆ?

ಕೆಪಿಎಸ್‌ಸಿ, ಪರೀಕ್ಷಾರ್ಥಿಗಳಿಗೆ ಅದ್ಯಾವ ಸಂದೇಶ ರವಾನಿಸಲು ಈ ರೀತಿಯ ಸ್ಪಷ್ಟೀಕರಣ ನೀಡುತ್ತಿದೆ? ಕೆಪಿಎಸ್‌ಸಿಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದೇ? ವಿಶೇಷವಾಗಿ ನಮ್ಮ ಪರೀಕ್ಷಾ ತಯಾರಿಗೆ ನಿಮ್ಮ ಅಮೂಲ್ಯ ಸಮಯವನ್ನು ಕಳೆಯಬೇಡಿ ಎಂದೇ? ಅಥವಾ ಕೆಪಿಎಸ್‌ಸಿ ತನ್ನ ಕೆಲಸವನ್ನು ಗಂಭೀರವಾಗಿ ಮಾಡುತ್ತಿಲ್ಲ ಎಂಬರ್ಥದಲ್ಲಿ ಸಲ್ಲದ ಸ್ಪಷ್ಟೀಕರಣ ನೀಡಿದೆಯೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.