ನಟಿ ಉಮಾಶ್ರೀ, ಕಲಾವಿದೆ ಬಿ.ಜಯಶ್ರೀ ಸೇರಿ 16 ಸಾಧಕಿಯರಿಗೆ 'ವಾವ್' ಪ್ರಶಸ್ತಿ
ಬೆಂಗಳೂರಿನಲ್ಲಿ ಉಬುಂಟು ಮಹಿಳಾ ನಿಯೋಗವು ಬುಧವಾರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಖ್ಯಾತ ರಂಗಭೂಮಿ ಗಾಯಕಿ ಮತ್ತು ಮಾಜಿ ಸಂಸದೆ ಪದ್ಮಶ್ರೀ ಬಿ. ಜಯಶ್ರೀ ಹಾಗೂ ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಸೇರಿದಂತೆ 16 ಮಹಿಳಾ ಸಾಧಕಿಯರಿಗೆ ʼವುಮೆನ್ ಆಫ್ ವರ್ತ್ʼ (ವಾವ್) ಪ್ರಶಸ್ತಿ ಪ್ರದಾನ ಮಾಡಿತು.


ಬೆಂಗಳೂರು: ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಖ್ಯಾತ ರಂಗಭೂಮಿ ಗಾಯಕಿ ಮತ್ತು ಮಾಜಿ ಸಂಸದೆ ಪದ್ಮಶ್ರೀ ಬಿ. ಜಯಶ್ರೀ ಹಾಗೂ ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಬುಧವಾರ ಬೆಂಗಳೂರಿನ ಯಶವಂತಪುರದ ಖಾಸಗಿ ಹೋಟೆಲ್ನಲ್ಲಿ ಉಬುಂಟು ಮಹಿಳಾ ನಿಯೋಗವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ʼವುಮೆನ್ ಆಫ್ ವರ್ತ್ʼ (ವಾವ್)ನ 2025ರ 5ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲೆ, ಸಂಸ್ಕೃತಿ, ಉದ್ಯಮ ಮತ್ತು ಸಾರ್ವಜನಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಸಾಧನೆಗೈದ 16 ಮಹಿಳಾ ಸಾಧಕಿಯರಿಗೆ ʼವಾವ್ʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ನಿಯೋಗದ ಸ್ಥಾಪಕಿ ಕೆ. ರತ್ನಪ್ರಭಾ ಮಾತನಾಡಿ, ʼಆತ್ಮದೊಂದಿಗೆ ಬೆಳವಣಿಗೆʼ ಎಂಬ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಕರ್ನಾಟಕ ಜಾಗತಿಕ ಹೂಡಿಕೆದಾರರ ಸಭೆಗಳಂತಹ ವೇದಿಕೆಗಳಲ್ಲಿ ಅವರಿಗೆ ಅವಕಾಶಗಳನ್ನು ಸೃಷ್ಟಿಸಿದ ಕಾರ್ಯಗಳನ್ನು ನೆನಪಿಸಿಕೊಂಡರು. ʼಉಬುಂಟುʼ ಎಂದರೆ ನಾವಿದ್ದೇವೆ, ಒಟ್ಟಿಗೆ ಬೆಳೆಯುತ್ತೇವೆ ಎಂಬ ತತ್ವಶಾಸ್ತ್ರದೊಂದಿಗೆ ನಿಂತಿದ್ದೇವೆ ಎಂದರು.
ಇದೇ ವೇಳೆ ಡಿಜಿಟಲ್ ಕೌಶಲ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು 1,000 ಮಹಿಳಾ ಉದ್ಯಮಿಗಳಿಗೆ ನೂತನ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಕ್ರಮವನ್ನು ಕೂಡ ಕೆ. ರತ್ನಪ್ರಭಾ ಘೋಷಿಸಿದರು.

ಸೈಬರ್ ಸುರಕ್ಷತೆ, ಇ-ಕಾಮರ್ಸ್ ಮತ್ತು ವ್ಯವಹಾರ ಜಾಲಗಳ ಕುರಿತು ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಥಿಂಕ್ ಥ್ರೂ ಕನ್ಸಲ್ಟಿಂಗ್ನ ಜಾಗತಿಕ ವ್ಯವಸ್ಥಾಪಕ ಪಾಲುದಾರರು ಮತ್ತು ಅಸೋಸಿಯೇಷನ್ ಆಫ್ ಬಿಸಿನೆಸ್ ವುಮೆನ್ ಇನ್ ಕಾಮರ್ಸ್ನ ಸಮಾಲೋಚಕ ಸಂಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ಪಾರುಲ್ ಸೋನಿ ಮಾತನಾಡಿ, ಮಹಿಳೆಯರು ನಡೆಸುವ ಉದ್ಯಮಗಳಿಗೆ ಅವಕಾಶಗಳನ್ನು ಸೃಷ್ಟಿಸುವಲ್ಲಿ ಇ-ಪ್ಲಾಟ್ಫಾರಂಗಳ ಪಾತ್ರವನ್ನು ಒತ್ತಿ ಹೇಳಿದರು. ವಾಲ್ಮಾರ್ಟ್ ಮತ್ತು ಫ್ಲಿಪ್ಕಾರ್ಟ್ನಂತಹ ವೇದಿಕೆಗಳಲ್ಲಿ ಪಾಲುದಾರಿಕೆಯ ಮಹತ್ವವನ್ನು ತಿಳಿಸಿಕೊಟ್ಟರು. ಇ- ಕಾಮರ್ಸ್ ಪ್ಲಾಟ್ಫಾರಂಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಅವರ ಸಾಮರ್ಥ್ಯವನ್ನು ಬಲಗೊಳಿಸುವ ಕುರಿತಾಗಿ ಮಾಹಿತಿ ಹಂಚಿಕೊಂಡರು.
ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಖತ್ರಿ ಮಾತನಾಡಿದರು. ಕರ್ನಾಟಕದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕ ನಿತೇಶ್ ಕೆ. ಪಾಟೀಲ್ ಮಾತನಾಡಿ, ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಡಿಜಿಟಲ್ ಮಾರ್ಕೆಟಿಂಗ್ ವೇದಿಕೆಗಳ ಕುರಿತು ವಿವರವಾದ ಮಾಹಿತಿಯನ್ನು ಹಂಚಿಕೊಂಡರು.
ಈ ಸುದ್ದಿಯನ್ನೂ ಓದಿ | Pravasi Prapancha: ಪ್ರವಾಸಿಗರಿಗೆ ಮೌಲ್ಯಯುತ ಮಾರ್ಗದರ್ಶಿ ʼಪ್ರವಾಸಿ ಪ್ರಪಂಚʼ: ಸಿಎಂ ಸಿದ್ದರಾಮಯ್ಯ
ಇದೇ ವೇಳೆ ಜಾಗತಿಕವಾಗಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುತ್ತಿರುವ ಉಬುಂಟು ನಿಯೋಗವು 2030ರ ವೇಳೆಗೆ 195 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಮಹಾತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿತು. 1.95 ಮಿಲಿಯನ್ ಸದಸ್ಯರು ಮತ್ತು 44 ಮಹಿಳಾ ಅಧ್ಯಕ್ಷರನ್ನು 44 ದೇಶಗಳಲ್ಲಿ ಪ್ರತಿನಿಧಿಸುವ ಗುರಿಯನ್ನು ಹೊಂದಿರುವುದಾಗಿ ಘೋಷಿಸಿತು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸ್ಟಾಲ್ಗಳು ಹಾಗೂ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸುಮಾರು 300 ಪ್ರತಿನಿಧಿಗಳು ಭಾಗವಹಿಸಿದ್ದರು.