Keshav Prasad B Column: ಐಪಿಎಲ್ ಹಣದ ಹೊಳೆಯೂ, ಅಭಿಮಾನಿಗಳ ಅಮಾಯಕತೆಯೂ !
ರಾಯಲ್ ಚಾಲೆಂಜ್ ಎಂದರೆ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ವಿಸ್ಕಿ ಬ್ರಾಂಡ್ನ ಹೆಸರು. ಅದುವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಆರ್ಸಿಬಿ ಹೆಸರಾಯಿತು. ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಗೆದ್ದಿರುವ ತಂಡವಾದರೂ, ಇದು ಅತ್ಯಂತ ಜನಪ್ರಿಯ ತಂಡವಾಗಿ ಹೊರ ಹೊಮ್ಮಿದೆ. 2009, 2011 ಮತ್ತು 2016ರಲ್ಲಿ ಫೈನಲ್ ತನಕ ಅದು ಹೋಗಿತ್ತು.


ಮನಿ ಮೈಂಡೆಡ್
ಕ್ರಿಕೆಟ್ ಎಂದರೆ 11 ಮೂರ್ಖರು ಆಡುವುದನ್ನು 11 ಸಾವಿರ ಮೂರ್ಖರು ನೋಡುವ ಆಟ" ಎಂದು ವಿಶ್ವ ವಿಖ್ಯಾತ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ 19ನೇ ಶತಮಾನದಲ್ಲಿಯೇ ಹೇಳಿದ್ದರು. ರವಿ ಕಾಣದ್ದನ್ನು ಕವಿ ಕಂಡ ಹಾಗೆ ಷಾ ಅಂದೇ ಭವಿಷ್ಯದ ದುರಂತವನ್ನು ಕಂಡಿದ್ದರೇನೋ. ಇವತ್ತು 21ನೇ ಶತಮಾನದಲ್ಲಿ ನಾವು ಜೀವಿಸುತ್ತಿದ್ದೇವೆ.
ಬರ್ನಾರ್ಡ್ ಷಾ ಅವರ ಬುದ್ಧಿಮಾತನ್ನು ಜನ ಪಾಲಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಜನ ಒಳ್ಳೆಯ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದು ಕಡಿಮೆ. ಪಾಲಿಸುವುದು ಮತ್ತೂ ಕಡಿಮೆ. ಇವತ್ತು ಕ್ರಿಕೆಟ್ ನೋಡುಗರ ಸಂಖ್ಯೆ 11 ಸಾವಿರವಲ್ಲ. ಅದು ಕೋಟಿಗಳ ಲೆಕ್ಕದಲ್ಲಿದೆ. ಆರ್ಸಿಬಿ ಸಂಭ್ರಮಾಚರಣೆಯಲ್ಲಿ 11 ಮಂದಿ ಅಮಾಯಕರು ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿ ದ್ದಾರೆ. ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ. ಸಂಭ್ರಮಾಚರಣೆಯು ಸೂತಕದಲ್ಲಿ ಪರ್ಯವ ಸಾನವಾಗಿರುವುದು ಘೋರ ದುರಂತ. ಹಾಗಾದರೆ ಜನ ಇವತ್ತು ಅಗತ್ಯವಾಗಿ ಮನನ ಮಾಡಿಕೊಳ್ಳ ಬೇಕಾಗಿರುವ ವಿಚಾರಗಳೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವತ್ತು ಜನಪ್ರಿಯ ಕ್ರಿಕೆಟ್ ತಂಡ. ಆರ್ಸಿಬಿ ಎಂಬುದು ಸಂಕ್ಷಿಪ್ತ ಹೆಸರು. ಆರ್ಸಿಬಿ ಎಂದರೆ ಎಲ್ಲರಿಗೂ ಗೊತ್ತು. ಆದರೆ 2025ರ ಐಪಿಎಲ್ನಲ್ಲಿ ಆರ್ಸಿಬಿ ಚಾರಿತ್ರಿಕ ಚಾಂಪಿಯನ್ ಆಗಿ ಗೆದ್ದಾಗ ಇಂಟರ್ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಆದ ಪದ ಯಾವುದು ಗೊತ್ತೇ?- 'RCB Owner'. ಯಾರು ಆರ್ಸಿಬಿಯ ಮಾಲೀಕರು ಎಂಬುದನ್ನು ಅನೇಕ ಮಂದಿ ಜಾಲಾಡಿದ್ದರು!
ಇದನ್ನೂ ಓದಿ: Keshav Prasad B Column: ಭಾರತದ ರಕ್ಷಣೆಗೆ ದೇವರು ಕಳಿಸಿದ ತೆರಿಗೆ ಜಿಎಸ್ಟಿ !
ಇತರ ಐಪಿಎಲ್ ತಂಡಗಳಾದ ಪಂಜಾಬ್ ಕಿಂಗ್ಸ್ನ ಒಡತಿ ಪ್ರೀತಿ ಜಿಂಟಾ, ಮುಂಬಯಿ ಇಂಡಿಯನ್ಸ್ ನ ನೀತಾ ಅಂಬಾನಿ, ಕೋಲ್ಕತಾ ನೈಟ್ ರೈಡರ್ಸ್ನ ಶಾರುಖ್ ಖಾನ್ ಇವರೆಲ್ಲ ಆಟ ನಡೆಯುವಾಗ ಸ್ಟೇಡಿಯಂನ ಇದ್ದು ಎಲ್ಲರ ಕಣ್ಣ ಮುಂದಿರುತ್ತಾರೆ. ಕ್ಯಾಮೆರಾ ಕಣ್ಣುಗಳೂ ಇವರ ಮೇಲೆ ಇರುತ್ತವೆ. ಆದರೆ ಆರ್ಸಿಬಿ ಓನರ್ ಹಾಗೆಲ್ಲ ಕಾಣಿಸುವುದಿಲ್ಲ!
ಈ ಸಲ ಅನೇಕ ಮಂದಿ ವಿಜಯ್ ಮಲ್ಯ ಅವರ ಎಕ್ಸ್ ಖಾತೆಯಲ್ಲಿ, ಅವರೇ ಆರ್ಸಿಬಿ ಮಾಲೀಕರಿರ ಬೇಕು ಎಂದು ತಪ್ಪಾಗಿ ಭಾವಿಸಿ, “ಐಪಿಎಲ್ನಲ್ಲಿ ಗೆದ್ದ ಹಣವನ್ನು ಭಾರತೀಯ ಬ್ಯಾಂಕ್ಗಳಿಂದ ಪಡೆದಿರುವ ಸಾಲ ತೀರಿಸಲು ಬಳಸಿ" ಎಂಬ ಪುಕ್ಕಟೆ ಸಲಹೆ ಕೊಟ್ಟರು. ಆದರೆ ಪಾಪ, ಅವರಿಗೆ ತಿಳಿಯದ ಸಂಗತಿ ಏನೆಂದರೆ ವಿಜಯ್ ಮಲ್ಯ ಆರ್ ಸಿಬಿಯ ಈಗಿನ ಮಾಲೀಕರಲ್ಲ ಎಂಬುದು.
ಬೆಂಗಳೂರು ಮೂಲದ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರು ಆರ್ಸಿಬಿಯನ್ನು ಹುಟ್ಟು ಹಾಕಿದರು. ಆದರೆ ಈಗ ಅದರ ಮೇಲೆ ಯಾವ ಹಕ್ಕೂ ಅವರಿಗಿಲ್ಲ. ಹೆಚ್ಚೆಂದರೆ ಎಕ್ಸ್ ಖಾತೆಯಲ್ಲಿ ಶುಭಾಶಯಗಳನ್ನು ಕೋರಬಹುದು. ಹಳೆಯ ನೆನಪುಗಳನ್ನು ಹಂಚಿಕೊಳ್ಳಬಹುದು. ಆದ್ದರಿಂದ ಆರ್ಸಿಬಿಯ ನಿಜವಾದ ಮಾಲೀಕರು ಯಾರು? ಐಪಿಎಲ್ ಇಕಾನಮಿ, ಆರ್ಸಿಬಿ ಮಾಲೀಕರು ಮಾಡುವ ಹೂಡಿಕೆಗಳು, ಅದರ ಹಿಂದಿನ ವಾಣಿಜ್ಯಾಸಕ್ತಿ, ಆದಾಯ-ಲಾಭದ ಲೆಕ್ಕಾಚಾರಗಳನ್ನೆಲ್ಲ ಅರಿತುಕೊಂಡರೆ, ನಾವು ಒಂದು ಖಾಸಗಿ ಕ್ರಿಕೆಟ್ ತಂಡದ ಮೇಲೆ ಎಂಥ ಮೂರ್ಖತನದ, ಹುಚ್ಚು ತನದ ಭಾವನೆಗಳನ್ನು ಇಟ್ಟುಕೊಂಡು ಯಾವ ಸುಖವನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದು ಅರ್ಥವಾಗದಿರದು.

ನಾವಿಲ್ಲಿ ಕ್ರಿಕೆಟ್ ಆಟಗಾರರನ್ನು ತೀವ್ರವಾಗಿ ಆರಾಧಿಸುವ ಹೊತ್ತಿನಲ್ಲಿ ಅವರನ್ನು ಆಡಿಸುವ ಐಪಿಎಲ್ ತಂಡಗಳ ಮಾಲೀಕರು ಕೋಟಿ ಕೋಟಿ ಎಣಿಸುತ್ತಿರುತ್ತಾರೆ. ಭಾವನೆಗಳನ್ನು ಎನ್ ಕ್ಯಾಶ್ ಮಾಡಿಕೊಳ್ಳುತ್ತಾರೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರು ವಿಜಯ್ ಮಲ್ಯ ಅವರಲ್ಲ. ಹಾಗಾದರೆ ಯಾರು? ಯುನೈಟೆಡ್ ಸ್ಪಿರಿಟ್ಸ್ ಲಿಮಿಡೆಡ್ (ಯುಎಸ್ಎಲ್) ಎಂಬ ಕಂಪನಿ. ಈ ಹಿಂದೆ ಈ ಕಂಪನಿಯೂ ಮಲ್ಯ ಅವರದ್ದಾಗಿತ್ತು. ಆದರೆ ಈಗ ಅವರ ಕೈ ತಪ್ಪಿದೆ.
ಬ್ರಿಟನ್ ಮೂಲದ ಬಹುರಾಷ್ಟ್ರೀಯ ಮದ್ಯ ಉತ್ಪಾದಕ ಕಂಪನಿಯಾಗಿರುವ ಡಿಯಾಜಿಯೊ, ಈಗ ನಾವೆಲ್ಲ ನಮ್ಮದೇ ಬ್ರ್ಯಾಂಡ್ ಎಂಬ ಭ್ರಮೆಯಿಂದ ಆರಾಧಿಸುತ್ತಿರುವ ಕ್ರಿಕೆಟ್ ತಂಡದ ಮಾಲೀಕ. ಡಿಯಾಜಿಯೊ ನೇರವಾಗಿ ಆರ್ಸಿಬಿಯನ್ನು ನಿರ್ವಹಿಸುತ್ತಿದೆ. ಯುನೈಟೆಡ್ ಸ್ಪಿರಿಟ್ಸ್ ಇದೇ ಡಿಯಾಜಿಯೊದ ಅಧೀನ ಕಂಪನಿಯಾಗಿದೆ. ಪ್ರವೀಣ್ ಸೋಮಶೇಖರ್ ಎಂಬುವರು ಯುನೈಟೆಡ್ ಸ್ಪಿರಿಟ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಡಿಯಾಜಿಯೊದ ಈಗಿನ ಸಿಇಒ ಡೆಬ್ರಾ ಕ್ರ್ಯೂ ಆರ್ಸಿಬಿ 2008ರಲ್ಲಿ ಐಪಿಎಲ್ನ ಮೂಲ ಫ್ರಾಂಚೈಸಿಗಳಲ್ಲಿ ಒಂದಾಗಿ ಅಸ್ತಿತ್ವಕ್ಕೆ ಬಂದಾಗ ಮೊದಲು ಖರೀದಿಸಿದವರು ವಿಜಯ್ ಮಲ್ಯ. ಆಗ ಅವರೇ ಯುನೈಟೆಡ್ ಸ್ಪಿರಿಟ್ಸ್ನ ಮಾಲೀಕರಾ ಗಿದ್ದರು.
ಮನಿ ಕಂಟ್ರೋಲ್ ವರದಿಯ ಪ್ರಕಾರ, ಆಗ 476 ಕೋಟಿ ಕೊಟ್ಟು ಆರ್ಸಿಬಿಯನ್ನು ಖರೀದಿಸಿದ್ದರು. ಆಗ ಎರಡನೇ ದುಬಾರಿ ತಂಡ ಇದಾಗಿತ್ತು. ರಾಯಲ್ ಚಾಲೆಂಜ್ ಎಂದರೇ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ವಿಸ್ಕಿ ಬ್ರಾಂಡ್ನ ಹೆಸರು. ಅದುವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಆರ್ಸಿಬಿ ಹೆಸರಾಯಿತು.
ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಗೆದ್ದಿರುವ ತಂಡವಾದರೂ, ಇದು ಅತ್ಯಂತ ಜನಪ್ರಿಯ ತಂಡವಾಗಿ ಹೊರಹೊಮ್ಮಿದೆ. 2009, 2011 ಮತ್ತು 2016ರಲ್ಲಿ ಫೈನಲ್ ತನಕ ಅದು ಹೋಗಿತ್ತು. ಆದರೆ ಚಾಂಪಿಯನ್ ಆಗಲಿಕ್ಕೆ 2025ರ ತನಕ ಕಾಯಬೇಕಾಯಿತು. ಕಿಂಗ್ಫಿಶರ್ ಏರ್ಲೈನ್ಸ್ ಸಾಲದ ಸುಳಿಗೆ ಸಿಲುಕಿದಾಗ ವಿಜಯ್ ಮಲ್ಯ ಅವರಿಗೂ ಕಷ್ಟದ ಕಾಲ ಬಂತು. 2016 ರಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮತ್ತು ಆರ್ಸಿಬಿ ಎರಡರ ಮೇಲಿನ ಮಾಲೀಕತ್ವ ವನ್ನೂ ಕಳೆದುಕೊಳ್ಳಬೇಕಾಯಿತು.
ಆಗ ಡಿಯಾಜಿಯೊ ಇವರೆಡನ್ನೂ ಖರೀದಿಸಿತು. ಹಾಗಾದರೆ ಡಿಯಾಜಿಯೊ, ಯುನೈಟೆಡ್ ಸ್ಪಿರಿಟ್ಸ್ ಇತ್ಯಾದಿ ಐಪಿಎಲ್ ತಂಡಗಳ ಮಾಲೀಕತ್ವವಿರುವ ಕಂಪನಿಗಳಿರಬಹುದು, ಇತರ ಘಟಾನುಘಟಿ ಮಾಲೀಕರಿರಬಹುದು, ಅವರಿಗೆ ಐಪಿಎಲ್ ತಂಡವನ್ನು ನಡೆಸುವುದರಿಂದ ಏನು ಲಾಭ? ಅದೊಂದು ದೊಡ್ಡ ಬಿಸಿನೆಸ್. ಬಿಸಿಸಿಐಗೆ ಮಾಧ್ಯಮ ಹಕ್ಕುಗಳು, ಪ್ರಾಯೋಜಕತ್ವ ಶುಲ್ಕಗಳ ರೂಪದಲ್ಲಿ ಸಿಗುವ ಕೋಟ್ಯಂತರ ಆದಾಯದಲ್ಲಿ ಐಪಿಎಲ್ ತಂಡಗಳ ಮಾಲೀಕರಿಗೂ ಪಾಲು ಸಿಗುತ್ತದೆ.
ಟಿಕೆಟ್ ಮಾರಾಟದಲ್ಲೂ, ಸ್ಪಾನ್ಸರ್ಶಿಪ್ ಡೀಲ್ ಗಳು, ಸೇಲ್ಸ್ ರೂಪದಲ್ಲೂ ಆದಾಯ ಸಿಗುತ್ತದೆ. ಅನುಪಮ್ ಶುಕ್ಲಾ ಎಂಬ ಎನ್ಐಎಸ್ಎಂ ಪ್ರಮಾಣೀಕೃತ ಮಾರುಕಟ್ಟೆ ಸಂಶೋಧಕರು ಲಿಂಕ್ಡ್ ಇನ್ನಲ್ಲಿ ‘ಐಪಿಎಲ್ ಬಿಲಿಯನ್ ಡಾಲರ್ ಕ್ರಿಕೆಟಿಂಗ್ ಎಂಪೈರ್’ ಎಂಬ ಲೇಖನ ಬರೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹೇಗೆ ವಿಶ್ವದ ಎರಡನೇ ಶ್ರೀಮಂತ ಕ್ರೀಡಾಕೂಟ ಆಗಿದೆ ಎಂಬು ದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದ್ದಾರೆ. 2023ರ ಐಪಿಎಲ್, ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ ಬಳಿಕ ಎರಡನೇ ಸಿರಿವಂತ ಪಂದ್ಯಾವಳಿಯಾಗಿದೆ. ಇದು ಕೇವಲ ಕ್ರಿಕೆಟ್ ಆಗಿಲ್ಲ. ದೊಡ್ಡ ಉದ್ದಿಮೆಯಾಗಿದೆ.
ಮೀಡಿಯಾ ರೈಟ್ಸ್ನಿಂದ ಸ್ಪಾನ್ಸರ್ಶಿಪ್ಗಳ ತನಕ ಹಣದ ಹೊಳೆ ಹರಿಯುವ ವಾಣಿಜ್ಯ ಚಟುವಟಿಕೆ ಯಾಗಿದೆ. ಐಪಿಎಲ್ನಲ್ಲಿ ಮುಖ್ಯವಾಗಿ ಮೂರು ವಿಧಗಳಲ್ಲಿ ಹಣ ಹರಿದುಬರುತ್ತದೆ. 60-70 ಪರ್ಸೆಂಟ್ ಆದಾಯವು ಮಾಧ್ಯಮ ಮತ್ತು ಪ್ರಸಾರದ ಹಕ್ಕುಗಳಿಂದ ಸಿಗುತ್ತದೆ. ಈ ಹಕ್ಕುಗಳನ್ನು ಟಿವಿ ಚಾನೆಲ್ ನೆಟ್ವರ್ಕ್ಗಳು ಮತ್ತು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ಗಳಿಗೆ ಮಾರಲಾಗುತ್ತದೆ.
ಇದರಿಂದ ಕೋಟ್ಯಂತರ ರುಪಾಯಿ ಸಿಗುತ್ತದೆ. ಟೈಟಲ್ ಪ್ರಾಯೋಜಕತ್ವಕ್ಕೆ ಜಾಗತಿಕ ಬ್ರ್ಯಾಂಡ್ಗಳು ಪೈಪೋಟಿ ನಡೆಸುತ್ತವೆ. ಎರಡನೆಯದಾಗಿ ಜಾಹೀರಾತು ಮತ್ತು ಪ್ರಾಯೋಜಕತ್ವಕ್ಕೆ ಕಾರ್ಪೊರೇಟ್ ಕಂಪನಿಗಳು ಹೂಡಿಕೆ ಮಾಡುತ್ತವೆ. ‘ಸ್ಟ್ರಾಟಜಿಕ್ ಟೈಮ್ ಔಟ್’, ‘ಆರಾಮ್ಕೊ ಪರ್ಪಲ್ ಕ್ಯಾಪ್’ ಹೆಚ್ಚುವರಿ ಆದಾಯಕ್ಕೆ ದಾರಿಗಳಾಗಿವೆ. ಇವುಗಳಿಂದ 20-30 ಪರ್ಸೆಂಟ್ ಆದಾಯ ಸಿಗುತ್ತದೆ. ಮೂರನೆಯದಾಗಿ ಟಿಕೆಟ್ ಗಳ ಮಾರಾಟ, ಟೀಮ್ ಜೆರ್ಸಿ, ಕ್ಯಾಪ್, ಅಸೆಸರೀಸ್ಗಳ ಮಾರಾಟದಿಂದ ಶೇ.10ರಷ್ಟು ಆದಾಯ ಬರುತ್ತದೆ.
ಬ್ಯಾಟ್ ಗಳು, ಹೆಲ್ಮೆಟ್ಗಳು, ಎಲ್ಇಡಿ ಸ್ಟೇಡಿಯಂ ಸ್ಕ್ರೀನ್ಗಳ ಪ್ರಾಯೋಜಕತ್ವದಿಂದ ಹಣ ಸಿಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್, ಸಾಮಾಜಿಕ ಜಾಲತಾಣಗಳ ಪ್ರಮೋಶನ್ಸ್ ಮೂಲಕ ಆದಾಯ ಬರುತ್ತದೆ. ಟಿಕೆಟ್ ಮಾರಾಟವೊಂದರಿಂದಲೇ ಐಪಿಎಲ್ ಪಂದ್ಯವೊಂದಕ್ಕೆ ಸರಾಸರಿ 4-5 ಕೋಟಿ ರುಪಾಯಿ ಆದಾಯ ಸಿಗುತ್ತದೆ.
2024ರಲ್ಲಿ ಬಿಸಿಸಿಐ ಐಪಿಎಲ್ನ ಪ್ರಧಾನ ಆದಾಯ ಮೂಲಗಳಿಂದ 7143 ಕೋಟಿ ರುಪಾಯಿ ಸಂಪಾದಿಸಿತ್ತು. ಎಲ್ಲ ಸೇರಿ ಪ್ರತಿಯೊಂದು ಐಪಿಎಲ್ ಫ್ರಾಂಚೈಸಿಯೂ 500- 600 ಕೋಟಿ ಸಂಪಾ ದಿಸುತ್ತವೆ. 2023-24ರಲ್ಲಿ ಬಿಸಿಸಿಐ ಮತ್ತು ಫ್ರಾಂಚೈಸಿಗಳು ಒಟ್ಟಾಗಿ 33000 ಕೋಟಿ ರುಪಾಯಿ ಆದಾಯ ಗಳಿಸಿದ್ದವು. 2023ರಲ್ಲಿ ಬಿಸಿಸಿಐ ಎಲ್ಲ ಖರ್ಚು ಕಳೆದು 5121 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.
ಹಾಗಾದರೆ ಒಂದು ಬಿಸಿನೆಸ್ ಆಗಿ ಐಪಿಎಲ್ ಭವಿಷ್ಯವೇನು? ಅತ್ಯಂತ ಉಜ್ವಲವಾಗಿದೆ ಎಂಬು ದರಲ್ಲಿ ಎರಡು ಮಾತೇ ಇಲ್ಲ. ಆರ್ಸಿಬಿಯ ಅಭೂತಪೂರ್ವ ಯಶಸ್ಸಿನಿಂದ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ಷೇರಿನ ದರದಲ್ಲೂ ಏರಿಕೆಯಾಗಿದೆ. ಕಳೆದ ಒಂದು ವರ್ಷದಿಂದ ಕಂಪನಿಯ ಷೇರಿನ ದರದಲ್ಲಿ ಶೇ.24.55ರಷ್ಟು ಹೆಚ್ಚಳವಾಗಿದೆ. 1317 ರುಪಾಯಿಗಳಿಂದ 1626 ರುಪಾಯಿಗೆ ಷೇರಿನ ದರ ಏರಿಕೆಯಾಗಿದೆ.
ಕಳೆದ 6 ತಿಂಗಳಿನಿಂದ ಶೇ.7ರಷ್ಟು ವೃದ್ಧಿಸಿದೆ. “ನಾನು ಆರ್ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಕ್ರಿಕೆಟ್ನ ಲೆಜೆಂಡರಿ ಕಿಂಗ್ ಹಾಗೂ ಆಗ ಎಳೆಯರಾಗಿದ್ದ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದೆ. ಬಳಿಕ ಕ್ರಿಸ್ ಗೇಲ್ ಅವರನ್ನು ಕರೆತಂದೆ. ಎಬಿ ಡಿವಿಲಿಯರ್ಸ್ ಅವರನ್ನು ಸೇರಿಸಿದೆ. ಕೊನೆಗೂ ಐಪಿಎಲ್ ಟ್ರೋಫಿ ಬೆಂಗಳೂರಿಗೆ ಬಂದಿದೆ. ಆರ್ಸಿಬಿ ಅಭಿಮಾನಿಗಳು ಅತ್ಯಂತ ಶ್ರೇಷ್ಠ ಮತ್ತು ಟ್ರೋಫಿಗೆ ಅರ್ಹರು" ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಜತೆಗೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಅಸುನೀಗಿದ ಅಭಿಮಾನಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಉದ್ದಿಮೆಯಾಗಿರುವ ಕ್ರಿಕೆಟ್ನ ಇತರ ಆಯಾಮಗಳ ಬಗ್ಗೆಯೂ ಅರಿತು ಜಾಗೃತರಾಗುವುದರಿಂದ, ಭಾವುಕರಾಗಿ ಸಂಭಾವ್ಯ ಅವಘಡಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದೇನೋ...