ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಕಪ್‌ ನಮ್ಮದಾಯ್ತು, ಹಲವರ ಬದುಕು ಕಪ್ಪಾಯ್ತು !

ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚೊಚ್ಚಲ ಐಪಿಎಲ್ ಕಪ್ ಗೆದ್ದಿದ್ದರ ಸಂಭ್ರ ಮಾಚರಣೆಗೆಂದು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಗ್ಗೆಯಿಡುತ್ತಿದ್ದಾರೆಂದು ಗೊತ್ತಾಗಿದ್ದೇ ಆಗ! ಉಸಿರಾಡುವುದಕ್ಕೂ ತಿಣುಕಾಡುವಷ್ಟು ಜನದಟ್ಟಣೆ ರೈಲಿನಲ್ಲಿ. ನನ್ನ ನಿಲ್ದಾಣ ಬರುತ್ತಿದ್ದಂತೆ ಹರಸಾಹಸಪಟ್ಟು ಇಳಿದಿದ್ದಾಯ್ತು. ಎಲ್ಲೆಡೆ ‘ಆರ್‌ಸಿಬಿ.. ಆರ್‌ಸಿಬಿ’ ಘೋಷಣೆ. ಅಭಿಮಾನದ ಪರಾಕಾಷ್ಠೆ.

ಕಪ್‌ ನಮ್ಮದಾಯ್ತು, ಹಲವರ ಬದುಕು ಕಪ್ಪಾಯ್ತು !

Profile Ashok Nayak Jun 6, 2025 8:57 AM

ರಾಯಲ್‌ ಮಿಸ್ಟೇಕ್‌

ರವೀ ಸಜಂಗದ್ದೆ

ನಾನು ಆಫೀಸ್ ಮುಗಿಸಿ, ಮುಂದಿನ ಮೀಟಿಂಗ್ ಶುರುವಾಗುವುದರೊಳಗೆ ಮನೆ ತಲುಪುವ ಲೆಕ್ಕಾಚಾರದಲ್ಲಿ ಜೂನ್ 4ರ ಸಂಜೆ 4 ಗಂಟೆಗೆ ಮೆಟ್ರೋ ನಿಲ್ದಾಣ ತಲುಪಿದರೆ, ಎಂದಿಗಿಂತ ಹೆಚ್ಚು ಜನ ಕಾಯುತ್ತಿದ್ದರು. ರೈಲು ಬಂದಾಗಲೇ ಮುಕ್ಕಾಲು ಭರ್ತಿಯಾಗಿತ್ತು, ಮುಂದಿನ ಎಲ್ಲಾ ನಿಲ್ದಾಣ ಗಳಲ್ಲಿ 500ಕ್ಕೂ ಹೆಚ್ಚು ಮಂದಿ ಹತ್ತಲು ಕಾಯುತ್ತಿದ್ದರು.

ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚೊಚ್ಚಲ ಐಪಿಎಲ್ ಕಪ್ ಗೆದ್ದಿದ್ದರ ಸಂಭ್ರಮಾಚರಣೆಗೆಂದು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಗ್ಗೆಯಿಡುತ್ತಿದ್ದಾರೆಂದು ಗೊತ್ತಾಗಿದ್ದೇ ಆಗ! ಉಸಿರಾಡುವುದಕ್ಕೂ ತಿಣುಕಾಡುವಷ್ಟು ಜನದಟ್ಟಣೆ ರೈಲಿನಲ್ಲಿ. ನನ್ನ ನಿಲ್ದಾಣ ಬರುತ್ತಿದ್ದಂತೆ ಹರಸಾಹಸಪಟ್ಟು ಇಳಿದಿದ್ದಾಯ್ತು. ಎಲ್ಲೆಡೆ ‘ಆರ್‌ಸಿಬಿ.. ಆರ್‌ಸಿಬಿ’ ಘೋಷಣೆ. ಅಭಿಮಾನದ ಪರಾಕಾಷ್ಠೆ.

18 ವರ್ಷಗಳ ನಿರಂತರ ಕಾಯುವಿಕೆಯ ನಂತರ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಿದ್ದರ ನಿಮಿತ್ತ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯು ದಾರುಣ ಅಂತ್ಯವನ್ನು ಕಂಡಿತು. ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳಲು, ಮೆಚ್ಚಿನ ಆಟಗಾರರನ್ನು ಪ್ರತ್ಯಕ್ಷ ಕಾಣಲು ತವಕಿಸಿ ಸ್ಟೇಡಿಯಂಗೆ ಹೋದ ಏಕೈಕ ಕಾರಣಕ್ಕೆ ಅನೇಕರು ಅಸು ನೀಗಿದ್ದಾರೆ. ಅಲ್ಲಿಗೆ, 18 ವರ್ಷ ಕಾದ ನಂತರ ಕಪ್ ಗೆದ್ದ ಸಂಭ್ರಮ, 18 ಗಂಟೆಯೊಳಗಾಗಿ ಸೂತಕವಾಗಿ ಬದಲಾಯಿತು.

ಇದನ್ನೂ ಓದಿ: Ravi Sajangadde Column: ರಾಷ್ಟ್ರೋತ್ಥಾನ @60: ವಿದ್ಯಯಾ ವಿಂದತೇ ಅಮೃತಂ !

ಹೀಗಾಗಬಾರದಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಕ್ರೀಡಾಭಿಮಾನಿಗಳ ಒಳಪ್ರವೇಶಕ್ಕೆ ಯಾವ ಗೇಟ್ ತೆರೆಯಬೇಕು ಎಂಬ ವಿಚಾರದಲ್ಲಿ ಸ್ಟೇಡಿಯಂನ ಸಿಬ್ಬಂದಿ ನಡುವೆ ಗೊಂದಲ ಗಳಾಗಿವೆ. ಸ್ಟೇಡಿಯಂ ತುಂಬುತ್ತಿದ್ದಂತೆ ಗೇಟುಗಳನ್ನು ಮುಚ್ಚಲಾಯಿತು. ಒಳಗೆ ಹೋಗಲು ಪಾಸ್ ಇಲ್ಲದೆ ಹೊರಗೆ ನಿಂತಿದ್ದ ಸಾವಿರಾರು ಅಭಿಮಾನಿಗಳು, ಒಳಗೆ ನಡೆಯುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಹೇಗಾದರೂ ಮಾಡಿ ಸ್ಟೇಡಿಯಂ ಪ್ರವೇಶಿಸಲು ಕಸರತ್ತು ಮಾಡುತ್ತಿದ್ದರು.

ಇದರ ಭಾಗವಾಗಿ ಕೆಲವರು ಕಾಂಪೌಂಡ್ ಹತ್ತಿದ್ದಾರೆ, ಪಾಸ್ ಇಲ್ಲದೇ ಒಳನುಗ್ಗಿದ್ದಾರೆ. ಆಗ ನೂಕು ನುಗ್ಗಲಾಗಿ ಕಾಲ್ತುಳಿತವಾಗಿದೆ. ಪೊಲೀಸರು ಮತ್ತು ಸ್ಟೇಡಿಯಂ ಸಿಬ್ಬಂದಿಯ ನಿಯಂತ್ರಣಕ್ಕೆ ಸಿಗದೇ ಈ ಅನಾಹುತವಾಗಿದೆ. ಕಾಲ್ತುಳಿತಕ್ಕೆ ಸಿಕ್ಕವರು ಉಸಿರಾಡಲು ಸಾಧ್ಯವಾಗದೆ ಸಾವಿಗೀಡಾಗಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.

ಸ್ಟೇಡಿಯಂ ಸುತ್ತ ಜಮೆಯಾಗಿದ್ದ ಅಗಾಧ ಸಂಖ್ಯೆಯ ಜನರನ್ನು ನಿಯಂತ್ರಿಸಲು ವಿಫಲವಾದದ್ದು, ಸರಿಯಾಗಿ ಯೋಜಿಸದೆ ಕಾರ್ಯಕ್ರಮ ಮಾಡಿಯೇ ತೀರುವ ಆತುರಕ್ಕೆ ಪಟ್ಟಭದ್ರರು ನಿರ್ಧರಿಸಿದ್ದು ಈ ದುರಂತಕ್ಕೆ ಕಾರಣ. ಇದನ್ನು ಯಾರೂ ಊಹಿಸಿರಲಿಲ್ಲ. ಆಟಗಾರರ ಅಭಿನಂದನಾ ಸಮಾರಂಭ, ತೆರೆದ ವಾಹನದ ಶೋಭಾಯಾತ್ರೆ ಮಾಡುವ ಬಗ್ಗೆ ಕಪ್ ಗೆದ್ದ ತಡರಾತ್ರಿ ನಿರ್ಧರಿಸಲಾಗಿತ್ತಾದರೂ, ಕರ್ನಾಟಕ ಸರಕಾರ, ಗೃಹ/ಪೊಲೀಸ್ ಇಲಾಖೆ ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರ್ವಹಿಸು ವಲ್ಲಿ ವಿಫಲವಾಗಿದ್ದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಸಾಲದೆಂಬಂತೆ, ಸ್ಟೇಡಿಯಂ ಪರಿಸರದಲ್ಲಿ ತುರ್ತು ಸಂದರ್ಭದಲ್ಲಿ ನೆರವಾಗಲು ಕನಿಷ್ಠ ಒಂದು ಆಂಬುಲನ್ಸ್ ಕೂಡ ಇಲ್ಲದಿದ್ದುದು/ಅದು ಸೂಕ್ತ ಸಮಯದಲ್ಲಿ ದೊರೆಯದಿದ್ದುದು ಸಾವಿನ ಸಂಖ್ಯೆ ಏರಲು ಕಾರಣವಾಯಿತು. ಆರ್‌ಸಿಬಿ ಆಟಗಾರರನ್ನು ವಿಮಾನ ನಿಲ್ದಾಣ ಅಥವಾ ಅವರು ಉಳಿದು ಕೊಂಡಿದ್ದ ಹೋಟೆಲ್‌ನಿಂದ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಕರೆತಂದಿದ್ದರೆ ಜನರು ಅಲ್ಲಲ್ಲಿ ಚದುರುತ್ತಿದ್ದರು, ಅಪಾಯಕಾರಿ ಎನಿಸುವಷ್ಟು ಜನರು ಒಂದೇ ಕಡೆ ಜಮೆಯಾಗುತ್ತಿರಲಿಲ್ಲ.

ಇದರಿಂದ ಟ್ರಾಫಿಕ್ ವ್ಯವಸ್ಥೆಗೆ ಕೊಂಚ ತೊಂದರೆಯಾಗುತ್ತಿತ್ತಾದರೂ ಯಾರ ಪ್ರಾಣವೂ ಹೋಗು ತ್ತಿರಲಿಲ್ಲ. ಆದರೆ, ಆರ್‌ಸಿಬಿ ವಿಜಯದ ಕ್ರೆಡಿಟ್ ತೆಗೆದುಕೊಳ್ಳುವ ಮತ್ತು ಪ್ರಚಾರದ ತೆವಲಿಗೆ ಕೆಲವರು ಹಪಹಪಿಸಿದ್ದರಿಂದಾಗಿ, ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದುದರಿಂದಾಗಿ ಅಮಾಯಕ ಅಭಿಮಾನಿಗಳು ಅಸುನೀಗುವಂತಾಯಿತು.

ಭಾರತ ಕ್ರಿಕೆಟ್ ತಂಡವು ಕೆಲ ತಿಂಗಳ ಹಿಂದೆ ಟಿ-20 ವಿಶ್ವ ಚಾಂಪಿಯನ್ಸ್ ಟ್ರೋಫಿ ಗೆದ್ದು ಮುಂಬೈಗೆ ಬಂದಿಳಿದಾಗ, ಅಲ್ಲಿನ ಸರಕಾರವು ಇಡೀ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಾಗೂ ವಾಂಖೆಡೆ ಕ್ರೀಡಾಂಗಣದ ಸುತ್ತಮುತ್ತಲ ಜನರನ್ನು ನಿರ್ವಹಿಸಿದ ಕಾರ್ಯತಂತ್ರವು ಇಲ್ಲಿನವರಿಗೆ ಮಾದರಿ ಯಾಗಬೇಕಿತ್ತು.

ಏಕೆಂದರೆ, ಮೊನ್ನೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ನೆರೆದಿದ್ದವರಿಗಿಂತ 5 ಪಟ್ಟು ಹೆಚ್ಚು ಜನರು ಅಂದು ಅಲ್ಲಿ ಜಮೆಯಾಗಿದ್ದರು. ಕೋಟಿಗಳ ಲೆಕ್ಕದಲ್ಲಿ ಜನರು ಸೇರಿದ್ದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಕೆಲವು ಕಿಡಿಗೇಡಿಗಳು ಸುಳ್ಳು ಮಾಹಿತಿ ಹರಡಿದುದರ ಪರಿಣಾಮ ಸಂಭವಿಸಿದ ಕಾಲ್ತುಳಿತವನ್ನು ಜೋರಾಗಿ ಖಂಡಿಸಿದವರು, ಈಗ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಸೇರಿದ್ದ ಜನರನ್ನು ಈ ದುರ್ಘಟನೆಗೆ ದೂಷಿಸುತ್ತಿರುವುದಕ್ಕೆ ಏನನ್ನುವುದು? ಸಂಭ್ರಮಾಚರಣೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮುಂದಾಗಿದ್ದಾದರೂ ಏಕೆ? ಅಂದು ಬೆಳಗ್ಗೆಯಿಂದಲೇ ಗಂಟೆಗೊಮ್ಮೆ-ಗಳಿಗೆಗೊಮ್ಮೆ ಮನಬಂದಂತೆ ಕಾರ್ಯಕ್ರಮದ ರೂಪುರೇಷೆಯಲ್ಲಿ ಬದಲಾವಣೆಗಳಾದವು.

ಆಟಗಾರರ ರೋಡ್ ಷೋ ಇದೆ ಅಥವಾ ಇಲ್ಲ ಎಂಬುದರ ವಿವರ ಮಧ್ಯಾಹ್ನದವರೆಗೂ ಸಾಕಷ್ಟು ಮಂದಿಗೆ ಗೊತ್ತಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರೆ ವ್ಯವಸ್ಥೆಗಳನ್ನು ಹೇಗೆ ಮಾಡಬಹುದು ಎಂಬ ಬಗ್ಗೆಯೂ ಸಂಬಂಧಪಟ್ಟವರಿಗೆ ಖಚಿತ ಆಲೋಚನೆ ಇರಲಿಲ್ಲ. ದುಡ್ಡು ಕೊಟ್ಟು ಬರುವ ಸಾಮಾನ್ಯ ಐಪಿಎಲ್ ಪಂದ್ಯಕ್ಕೇ ಜನಸಾಗರ ಇರುತ್ತದೆ.

ಹೀಗಿರುವಾಗ ಉಚಿತವಾಗಿ ಬಂದು ಅಚ್ಚುಮೆಚ್ಚಿನ ತಂಡವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕರೆ ಅಭಿಮಾನಿಗಳ ದಟ್ಟಣೆ ಹೆಚ್ಚಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಸಂಬಂಧಪಟ್ಟ ನಿರ್ವಾಹಕರಿಗೆ ಇಲ್ಲದಾಯಿತೇ? ಕ್ರೀಡಾಂಗಣದ ಒಳಗೆ ಹೋಗಲು ಪಾಸ್ ಇದೆಯಾ ಇಲ್ಲವಾ ಎಂಬುದರ ಕುರಿತೂ ಸರಿಯಾದ ಮಾಹಿತಿಯಿರಲಿಲ್ಲ. ಆ ಪಾಸ್ ಸಿಗುವುದೆಲ್ಲಿ, ಪಡೆದುಕೊಳ್ಳುವುದು ಹೇಗೆ ಎಂಬ ವಿಚಾರದಲ್ಲೂ ಸ್ಪಷ್ಟತೆ ಇರಲಿಲ್ಲ, ಮುಂದಾಲೋಚನೆ-ಮುಂಜಾಗ್ರತೆಯನ್ನಂತೂ ಕೇಳಲೇಬೇಡಿ.

ಇವೆಲ್ಲದರ ಪರಿಣಾಮವಾಗಿ ಇಷ್ಟೊಂದು ಸಾವು-ನೋವು ಸಂಭವಿಸಿತು. ಇದಕ್ಕೆ ಯಾರು ಹೊಣೆ? ಫೈನಲ್ ಪಂದ್ಯ ಗೆದ್ದವರು ಸ್ಟೇಡಿಯಂ ಒಳಗೆ ‘ಕಪ್’ ಅನ್ನು ತಬ್ಬಿ ಸಂಭ್ರಮಿಸುತ್ತಿದ್ದರೆ, ಅಭಿಮಾನ ತೋರಿಸಲು ಬಂದು ಕಾಲ್ತುಳಿತಕ್ಕೆ ಸಿಕ್ಕಿ ಅಸುನೀಗಿದವರ ಕುಟುಂಬದವರು ಹಾಗೆ ತಮ್ಮನ್ನ ಗಲಿದವರನ್ನು ತಬ್ಬಿ ರೋದಿಸುತ್ತಿದ್ದರು. ಇಷ್ಟು ದೊಡ್ಡ ಕಾರ್ಯಕ್ರಮವನ್ನು, ಕಪ್ ಗೆದ್ದ 10 ಗಂಟೆಯೊಳಗೆ ತರಾತುರಿಯಲ್ಲಿ ನಿರ್ಧರಿಸಿ ಮಾಡಿ ಮುಗಿಸುವ ದರ್ದು ಏನಿತ್ತು? ಯಾರಿಗೆ ಮತ್ತು ಯಾಕೆ ಇಷ್ಟು ಆತುರವಿತ್ತು? ಈ ಪ್ರಶ್ನೆಯನ್ನು ಯಾರಿಗೆ ಕೇಳೋದು? ಅದಕ್ಕೆ ಉತ್ತರಿಸುವವರಾರು? ಒಟ್ಟಿನಲ್ಲಿ, ಗೆಲುವಿನ ಆನಂದವು ಕೆಲವರಿಂದಾಗಿ ಕೈತಪ್ಪಿ ಹೋಯಿತು, ಅಷ್ಟೇ!

ಆಗಬಾರದ್ದು ಆಗಿಹೋಗಿದೆ, ಪರಸ್ಪರ ದೋಷಾರೋಪ ಮುಂದುವರಿದಿದೆ. “ದುರಂತಕ್ಕೆ ಪೊಲೀಸ ರಾಗಲೀ, ಸರಕಾರವಾಗಲೀ ಹೊಣೆಯಲ್ಲ. ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಜನಸಾಗರ ತುಂಬಿತ್ತು, ಹಾಗಾಗಿ ಜನರನ್ನು ನಿಯಂತ್ರಿಸಲು ಕಷ್ಟವಾಯಿತು.

ಜನರನ್ನು ಮತ್ತು ಪರಿಸ್ಥಿತಿಯನ್ನು ತಹಬಂದಿಗೆ ತರಲಾಗದೆ ಹೀಗಾಗಿದೆ. ಚಿನ್ನಸ್ವಾಮಿ ಕ್ರೀಡಾಂ ಗಣದ ಗೇಟುಗಳನ್ನು ಕಿತ್ತು ಬಿಸಾಡಲಾಗಿದೆ. ಭಾರಿ ನೂಕುನುಗ್ಗಲಾಗಿದ್ದಕ್ಕೆ ಕಾಲ್ತುಳಿತ ಸಂಭವಿಸಿದೆ. ಈ ರೀತಿಯ ಘಟನೆ ಆಗಬಾರದಿತ್ತು. ಇದರಿಂದ ತುಂಬಾ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಸಂಬಂಧಪಟ್ಟವರು ಹೇಳಿ ಕೈತೊಳೆದುಕೊಂಡಿದ್ದಾರೆ. ಈ ನಡುವೆ ಐಪಿಎಲ್‌ನ ಚೇರ್ಮನ್ ಅರುಣ್ ಧುಮಾಲ್ ಅವರು, “ನಾವು ಆರ್‌ಸಿಬಿ ತಂಡಕ್ಕೆ ಯಾವುದೇ ಸಂಭ್ರಮಾಚರಣೆಗೆ ಅನುಮತಿ ನೀಡಿರಲಿಲ್ಲ" ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಆದರೆ, ಐಪಿಎಲ್ ಕಪ್ ಗೆದ್ದ ಸಂದರ್ಭದಲ್ಲಿ ಕೊಹ್ಲಿಯವರ ಕಣ್ಣೀರನ್ನು ನೋಡಿದ 18 ಗಂಟೆ ಗಳೊಳಗೆ, ಸೋದರನನ್ನೋ ಸೋದರಿಯನ್ನೋ ಮಗ-ಮಗಳು-ಮೊಮ್ಮಕ್ಕಳನ್ನೋ ಕಳೆದುಕೊಂಡ ಕುಟುಂಬಗಳ ರೋದನ ಮುಗಿಲುಮುಟ್ಟಿದೆ. ಈ ಸಾವು ನ್ಯಾಯವೇ? ಅಭಿಮಾನದ ಹೆಸರಲ್ಲಿನ ಇಂಥ ಅತಿರೇಕಗಳು ಇನ್ನಾದರೂ ಕೊನೆಯಾಗಲಿ.

ಪ್ರತಿಯೊಂದು ಯಶಸ್ಸೂ ಒಂದಿಷ್ಟು ತ್ಯಾಗವನ್ನು/ಬಲಿ ನ್ನು ಬೇಡುತ್ತದೆ ಎಂಬುದು ಗೊತ್ತಿರುವ ಸತ್ಯ. ಆದರೆ ಆರ್ ಸಿಬಿ ಯಶಸ್ಸಿಗೆ/ಗೆಲುವಿಗೆ ಅದರ ಅಭಿಮಾನಿಗಳ ಬಲಿದಾನವಾಗಿದ್ದನ್ನು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಇಷ್ಟೆಲ್ಲಾ ರಂಪ- ರಾದ್ಧಾಂತ, ಸಾವು-ನೋವುಗಳನ್ನು ಐಪಿಎಲ್ ‘ಕಪ್’/ಗೆಲುವು ಬೇಡುತ್ತದೆ ಎಂದಾಗಿದ್ದಿದ್ದರೆ, ಅಂಥ ಕಪ್ ಅನ್ನು ಗೆಲ್ಲುವುದೇ ಬೇಡ ವಾಗಿತ್ತು ಎನಿಸುತ್ತದೆ. ಐಪಿಎಲ್ ‘ಕಪ್’ ನಮ್ಮದಾಯ್ತು, ಜತೆಗೆ ಕಾಲ್ತುಳಿತದಿಂದಾಗಿ ಹಲವು ಕುಟುಂಬಗಳ ಬದುಕೂ ಕಪ್ಪಾಯ್ತು.... ಛೇ! ಹೀಗಾಗಲೇಬಾರದಿತ್ತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)