ಟ್ರೋಫಿ ಗೆದ್ದರೂ ಆಟಗಾರರಿಗೆ ಖಡಕ್ ಎಚ್ಚರಿಕೆ ಕೊಟ್ಟ ತಂಡದ ನಿರ್ದೇಶಕ ಬೊಬಾಟ್
Mo Bobat: ಆರ್ಸಿಬಿಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟೀದಾರ್ ಈ ಸಾಧನೆ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಪಂದ್ಯ ಆಡದೆ ಐಪಿಎಲ್ ಟ್ರೋಫಿ ಗೆದ್ದ ನಾಯಕರ ಪಟ್ಟಿಗೆ ಸೇರಿದ್ದಾರೆ. ಜತೆಗೆ ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಕಪ್ ಗೆದ್ದು ದಿಗ್ಗಜ ಶೇನ್ ವಾರ್ನ್ ಜತೆ ಎಲೈಟ್ ಪಟ್ಟಿಗೆ ಸೇರಿದರು.


ಅಹಮದಾಬಾದ್: ಆರ್ಸಿಬಿ(RCB) 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ(IPL Final) ಗೆದ್ದು ಅಭಿಮಾನಿಗಳ ಮತ್ತು ತಂಡದ ಕಪ್ ಬರ ನೀಗಿಸಿದ್ದರೂ ತಂಡದ ಕಾರ್ಯನಿರ್ವಹಣೆ ಮುಖ್ಯಸ್ಥ ಮೊ ಬೊಬಾಟ್(Mo Bobat), ಮುಂದಿನ ಆವೃತ್ತಿ ಆರಂಭಕ್ಕೂ ಮುನ್ನವೇ ಆಟಗಾರರಿಗೆ ಎಚ್ಚರಿಕೆ ಮತ್ತು ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ. ಮುಂದಿನ ಆವೃತ್ತಿಯಲ್ಲಿಯೂ ತಂಡ ಕಪ್ ಗೆಲ್ಲಬೇಕು ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ನಲ್ಲಿ ಆರ್ಸಿಬಿ 6 ರನ್ ಅಂತರದಿಂದ ಗೆದ್ದು ಚೊಚ್ಚಲ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಪಂದ್ಯದ ಬಳಿಕ ಆಟಗಾರರು ಮತ್ತು ತಂಡದ ಎಲ್ಲ ಸಿಬ್ಬಂದಿಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ತಂಡದ ಪ್ರದರ್ಶನ ಮತ್ತು ಸಾಧನೆಗೆ ಮೆಚ್ಚುಗೆ ಸೂಚಿಸಿದ ಮೊ ಬೊಬಾಟ್, ಇದು ಆರಂಭವಷ್ಟೇ. ಕೆಲವು ತಂಡಗಳಷ್ಟೇ ಸತತವಾಗಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ನಾವು ಕೂಡ ಇದನ್ನು ಸಾಧಿಸಬೇಕು. ಜತೆಗೆ ನಮ್ಮ ತಂಡದ ಶಕ್ತಿಯಾಗಿರುವ ಬೆಂಗಳೂರಿನಲ್ಲಿ ಫೈನಲ್ ನಡೆಯುತ್ತದೆ. ಅಭಿಮಾನಿಗಳ ಮುಂದೆ ಕಪ್ ಗೆಲ್ಲುವುದು ನಮ್ಮ ಗುರಿಯಾಗಬೇಕು. ಒಂದು ಕಪ್ ಗೆದ್ದವು ಎಂದು ಇಲ್ಲಿಗೆ ನಮ್ಮ ಉತ್ಸಾಹ ಮತ್ತು ಛಲವನ್ನು ಬಿಟ್ಟುಕೊಡಬಾರದುʼ ಎಂದು ಹೇಳುವ ಮೂಲಕ ಆಟಗಾರರಿಗೆ ಮುಂದಿನ ಆವೃತ್ತಿಗೂ ಮುನ್ನವೇ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಹುತೇಕ ಈ ಬಾರಿ ಫೈನಲ್ ಆಡಿದ ಆಟಗಾರರನ್ನು ಆರ್ಸಿಬಿ ಮುಂದಿನ ಮಿನಿ ಹರಾಜಿನಲ್ಲಿಯೂ ರೀಟೇನ್ ಮಾಡಿಕೊಳ್ಳುವ ಸಾಧ್ಯತೆ ಇದೆ.
Season 2 : Defend the title in front of Chinnaswamy
— Fearless🦁 (@ViratTheLegend) June 4, 2025
has been announced by Director Mo Bobat 🔥 pic.twitter.com/r2HE6lRRnm
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ 9 ವಿಕೆಟ್ಕೆ 190 ರನ್ ಗಳಿಸಿತ್ತು. ಜವಾಬಿತ್ತ ಪಂಜಾಬ್ ಕಿಂಗ್ಸ್ ಉತ್ತಮ ಆರಂಭದ ಹೊರತಾಗಿಯೂ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್ಗೆ 184 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್ ಅಂತರದಿಂದ ಸೋಲೊಪ್ಪಿಕೊಂಡಿತು.
ಮಧ್ಯಮ ಓವರ್ಗಳಲ್ಲಿ ಪಂಜಾಬ್ ಮೇಲೆ ಒತ್ತಡ ಹಾಕಿದ ಕೃನಾಲ್ ಪಾಂಡ್ಯ 4 ಓವರ್ಗೆ ಕೇವಲ 17 ರನ್ ನೀಡಿ 2 ವಿಕೆಟ್ ಕಿತ್ತು ಮಿಂಚಿದರು. ಕೃನಾಲ್ಗೆ ಇದು ತವರಿನ ಮೈದಾನವೂ ಆಗಿತ್ತು. ಹೀಗಾಗಿ ಅವರು ತವರಿನ ಲಾಭವೆತ್ತಿ ಎದುರಾಳಿ ತಂಡಕ್ಕೆ ಸೋಲುಣಿಸುವಲ್ಲಿ ಮಹತ್ವ ಕೊಡುಗೆ ಸಲ್ಲಿಸಿದರು.
ಇದನ್ನೂ ಓದಿ IPL 2025: ʼಈ ಸಲ ಕಪ್ ನಮ್ದೆʼ ಖುಷಿ ಹೊರಹಾಕಿದ ಸಿಎಂ ಸಿದ್ದರಾಮಯ್ಯ