Saturday, 18th May 2024

ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

ವಾತಾವರಣ

ಡಾ.ಮುರಲೀ ಮೋಹನ್ ಚೂಂತಾರು

ನಮ್ಮ ದೇಹದ ಗಾತ್ರ, ತೂಕ, ವಯಸ್ಸು, ಆರೋಗ್ಯ ಮತ್ತು ಹವಾಮಾನಕ್ಕನುಗುಣವಾಗಿ ನಾವು ನಿರಂತರವಾಗಿ ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಅಂದರೆ ದಿನಕ್ಕೆ ೩ ರಿಂದ ೪ ಲೀಟರ್‌ಗಳಷ್ಟು ಸೇವಿಸಲೇಬೇಕು. ಇಲ್ಲವಾದ್ದಲ್ಲಿ ದೇಹದ ಆಂತರಿಕ ಸಮತೋಲನದಲ್ಲಿ ಏರುಪೇರಾಗಿ ರೋಗ ರುಜಿನಗಳಿಗೆ ಎಡೆ ಮಾಡಿ ಕೊಡಬಹುದು.

ಈ ಬಾರಿ ಭೀಕರ ಬರಗಾಲದ ಬಳಿಕ ಬೇಸಿಗೆ ಶುರುವಾಗುವ ಮೊದಲೇ, ರಾಜ್ಯಾದ್ಯಂತ ಬಿಸಿಲಿನ ಬೇಗೆ ಕಾಣಿಸಿಕೊಂಡಿತ್ತು. ಇಡೀ ರಾಜ್ಯದಲ್ಲಿ ಈಗ
ಎಲ್ಲಿಯೇ ಹೋದರೂ ಸುಡು ಬಿಸಿಲಿನ ಅನುಭವ. ಸುಡುಬಿಸಿಲಿನಿಂದ ರಕ್ಷಿಸಿಕೊಳ್ಳಲು ನೂರಾರು ದಾರಿಯನ್ನು ಜನ ಕಂಡುಕೊಳ್ಳುತ್ತಿದ್ದರೂ, ನಿರ್ಜಲೀಕರ ಣದಿಂದ ತಪ್ಪಿಸಿಕೊಳ್ಳುವುದು ಮಾತ್ರ ಸುಲಭವಿಲ್ಲ.

ನಮ್ಮ ದೇಹದ ತೂಕದ ಸುಮಾರು ಶೇ. ೬೦ರಷ್ಟು ನೀರಿನಾಂಶ ಇದ್ದು, ದೇಹದ ಬಹುತೇಕ ಜೈವಿಕ ಕ್ರಿಯೆಗಳಿಗೆ ನೀರು ಅತ್ಯಗತ್ಯ. ಸುಮಾರು ೭೦ ಕೆ.ಜಿ
ತೂಕದ ವ್ಯಕ್ತಿಯಲ್ಲಿ ಸರಿಸುಮಾರು ೪೦ ಲೀಟರ್ ಗಳಷ್ಟು, ಅಂದರೆ ದೇಹದ ತೂಕದ ಶೇ.೬೦ರಷ್ಟು ನೀರಿರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ
ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ) ದೇಹದಿಂದ ಹೊರ ಹಾಕಲಾಗುತ್ತದೆ.

ಬೇಸಿಗೆ ಸಮಯದಲ್ಲಿ ಬೆವರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ದೇಶಕ್ಕೆ ಬೇಕಾಗುವ ಅಗತ್ಯ ನೀರಿನ ಪ್ರಮಾಣಕ್ಕಿಂತ ಕಡಿಮೆಯಾಗುತ್ತದೆ. ಆದರೆ ನೀರಿನ ಪ್ರಮಾಣವನ್ನು ಸರಿಯಾಗಿರುವಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಅತಿ ಅಗತ್ಯ. ಈ ಪ್ರಮಾಣದಲ್ಲಿ ಏರುಪೇರು ಉಂಟಾದಲ್ಲಿ ದೇಹದೊಳಗಿನ, ನೀರಿನ ಅಂಶ ಕಡಿಮೆಯಾದರೆ, ಆ ದೈಹಿಕ ಸ್ಥಿತಿ ಯನ್ನು ‘ನಿರ್ಜಲೀಕರಣ’ ಅಥವಾ ಇಂಗ್ಲಿಷನ್‌ನಲ್ಲಿ ‘ಡಿಹೈಡ್ರೇಷನ್’ ಎಂದು ಕರೆಯುತ್ತಾರೆ.

ಕಾರಣಾಂತರಗಳಿಂದ ನಮ್ಮ ನೀರಿನ ಸೇವನೆಯ ಪ್ರಮಾಣ ಕಡಿಮೆಯಾದಾಗ ನಿರ್ಜಲೀಕರಣ ಉಂಟಾಗುತ್ತದೆ. ಸರಿಯಾದ ಸುರಕ್ಷಿತ ನೀರಿನ ಕೊರತೆ, ಕೆಲಸ ದೊತ್ತಡದಿಂದ ನೀರು ಸೇವಿಸದಿರುವುದು, ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತ ನೀರಿನ ಅಲಭ್ಯತೆ, ಅಸೌಖ್ಯದಿಂದಾಗಿ ನೀರು ಸೇವಿಸದಿರುವುದು
ಅಥವಾ ಇನ್ನಾವುದೇ ಕಾರಣದಿಂದ ನೀರಿನ ಸೇವನೆ ಕಡಮೆಯಾದಲ್ಲಿ ನಿರ್ಜಲೀಕರಣ ಉಂಟಾಗಬಹುದು.

ಅಧ್ಯಯನದ ಪ್ರಕಾರ ನಮ್ಮ ದೇಹಕ್ಕೆ ಪ್ರತಿದಿನ ಕನಿಷ್ಠ ಸುಮಾರು ಮೂರರಿಂದ ನಾಲ್ಕು ಲೀಟರ್ ನೀರು ಅತ್ಯಾವಶ್ಯಕ. ದಿನಕ್ಕೆ ನೀವು ಇಂತಿಷ್ಟೇ ನೀರು
ಕುಡಿಯಬೇಕು ಎಂದು ನಿಖರವಾಗಿ ಹೇಳಲು ಕಷ್ಟವಾಗಬಹುದು, ಏಕೆಂದರೆ ಒಬ್ಬ ವ್ಯಕ್ತಿಯ ದೈನಂದಿನ ನೀರಿನ ಅವಶ್ಯಕತೆ ಆತನ ವಯಸ್ಸು,
ಶರೀರದ ಗಾತ್ರ, ತೂಕ, ಆರೋಗ್ಯ ಮತ್ತು ಹವಾಮಾನ ಮುಂತಾದ ಅಂಶಗಳಿಗೆ ನೇರವಾಗಿ ಸಂಬಂಧ ಹೊಂದಿರುತ್ತದೆ. ಆದರೆ ಸಾಮಾನ್ಯವಾಗಿ
ಆರೋಗ್ಯವಂಥ ೪೦ ಕೆ.ಜಿ. ತೂಕದ ಮಧ್ಯ ವಯಸ್ಕ ಮನುಷ್ಯರಿಗೆ ಸುಮಾರು ೩ ರಿಂದ ೪ ಲೀಟರ್ ನೀರಿನ ಅವಶ್ಯಕತೆ ಹೆಚ್ಚಾಗಬಹುದು ಮತ್ತು
ಚಳಿಗಾಲದಲ್ಲಿ ನೀರಿನ ಅವಶ್ಯಕತೆ ಕಡಮೆಯಾಗಬಹುದು. ಒಟ್ಟಿನಲ್ಲಿ ನಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಮತ್ತು ನಮ್ಮ ದೇಹದ ಆರೋಗ್ಯವ ನ್ನು ಸಮತೋಲನದಲ್ಲಿ ಇಟ್ಟುಗೊಳ್ಳಲು ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಅನಿವಾರ್ಯ.

ನಿರ್ಜಲೀಕರಣಕ್ಕೆ ಕಾರಣವೇನು?

ಬೇಸಗೆಯ ವಾತಾವರಣದಲ್ಲಿ ತಾಪಮಾನ ಜಾಸ್ತಿಯಾಗಿ ವಿಪರೀತ ಬೆವರುವಿಕೆಯಿಂದಾಗಿ ದೇಹದ ನೀರಿನಾಂಶ ಮತ್ತು ಲವಣಾಂಶ ನಷ್ಟವಾಗಿ, ನಿರ್ಜಲೀಕರಣ ಉಂಟಾಗುತ್ತದೆ. ಸಮುದ್ರ ಮಟ್ಟದಲ್ಲಿರುವ ಕರಾವಳಿಯ ಪ್ರದೇಶಗಳಲ್ಲಿ ವಾತಾವರಣದ ತಾಪಮಾನ ಹೆಚ್ಚಾಗಿರುವುದರೊಂದಿಗೆ ಲವಣದ ಸಾಂದ್ರತೆಯೂ ಹೆಚ್ಚಾಗಿರು ವುದರಿಂದ ದೇಹದಿಂದ ನೀರಿನ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದರೊಂದಿಗೆ ಕೆಫಿನ್ ಪದಾರ್ಥಗಳಾದ ಕಾಫಿ, ಟೀ, ಚಾಕೊಲೇಟ್‌ಗಳ ಅತಿಯಾದ ಸೇವನೆ, ಇಂಗಾಲಯುಕ್ತ ಪಾನೀಯಗಳಾದ ಪೆಪ್ಸಿ, ಕೋಲಾ, ಸೋಡಾ ಮುಂತಾದವುಗಳ ಅತಿಯಾದ ಬಳಕೆಯಿಂದಲೂ ನಿರ್ಜಲೀಕರಣವಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ ಎನ್ನುವುದು ಸಂಶೋಧನೆಯಿಂದ ಬಹಿರಂಗವಾಗಿದೆ. ಅತಿಯಾದ ವಾಂತಿ, ಭೇದಿಯಿಂದಾಗಿ ದೇಹ ದಲ್ಲಿನ ನೀರಿನಾಂಶ ಮತ್ತು ಲವಣಾಂಶ (ಇಲೆಕ್ರೋ ಲೈಟ್ಸ್) ನಾಶವಾಗುತ್ತದೆ ಅಥವಾ ಸೋರಿ ಹೋಗುತ್ತದೆ ಮತ್ತು ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದರೊಂದಿಗೆ ವಿಪರೀತ ಜ್ವರ ಬಂದಾಗ, ಅತಿಯಾದ ಬೆವರುವಿಕೆಯಿಂದ,
ನೀರಿನ ನಷ್ಟವಾಗಿ ನಿರ್ಜಲೀಕರಣವಾಗಬಹುದು. ಅತಿಯಾದ ಮಧುಮೇಹ ರೋಗ ಅಥವಾ ಅತಿಯಾದ ಔಷಧಿ ಸೇವನೆಯಿಂದಲೂ ನಿರ್ಜಲೀಕರಣ ವಾಗುವ ಸಾಧ್ಯತೆಯಿದೆ.

ಅತಿಯಾದ ಲವಣಾಂಶ ಸೇವನೆ, ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾದಾಗ ಕೂಡಾ ನೀರಿನ ಕೊರತೆಯಾಗಬಹುದು. ಕೆಲವರು ಹಲವು ಬಾರಿ ಉಪವಾಸ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಈ ರೀತಿ ಪದೇಪದೆ ಮಾಡಿದಾಗಲೂ, ಕೆಲಸದ ಒತ್ತಡದಿಂದ ಅತಿಯಾದ ಚಿಂತೆ, ಉದ್ವೇಗ, ಭಾದಿಸಿ ದಾಗಲೂ ನಿರ್ಜಲೀಕರಣವಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ದೇಹದ ತೂಕ ಕಡಿಮೆಯಿರುವ ಕಾರಣದಿಂದಾಗಿ, ನಿರ್ಜಲೀ ಕರಣವಾದರೂ ಅವರಿಗೆ ಇದರ ಅನುಭವ ಅಥವಾ ಯಾವುದೇ ಲಕ್ಷಣಗಳು ನಿಖರವಾಗಿ ಕಾಣಿಸುವುದಿಲ್ಲ. ಮಕ್ಕಳು ಸಾಮಾನ್ಯವಾಗಿ ಚುರುಕಾಗಿದ್ದು, ಯಾವಾಗಲೂ ಬಿಸಿಲಲ್ಲಿ ಆಟವಾಡುವ ಸಾಧ್ಯತೆ ಜಾಸ್ತಿ ಇರುವ ಕಾರಣ, ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸುವ ಅನಿವಾರ‍್ಯತೆ ಇರುತ್ತದೆ.

ಗುರುತಿಸುವುದು ಹೇಗೆ? ಬಾಯಿ ಒಣಗುವುದು, ವಿಪರೀತ ಬಾಯಾರಿಕೆ. ಯಾವಾಗಲೂ ಉಲ್ಲಸಿತವಾಗಿರುವ ಮಕ್ಕಳು, ಸುಸ್ತಾಗಿ ಮಂಕಾಗಿದ್ದು ಯಾವುದೇ ಚಟುವಟಿಕೆ ಇಲ್ಲದೆ ಇರುವುದು. ಮೂತ್ರದ ಪ್ರಮಾಣ ಕಡಮೆಯಾಗುವುದು ಮತ್ತು ಮೂತ್ರದ ಬಣ್ಣ ಬದಲಾಗಬಹುದು. ದಿನವೊಂದರಲ್ಲಿ ಸಾಮಾನ್ಯ ನಡು ವಯಸ್ಸಿನ ಆರೋಗ್ಯವಂಥ ವ್ಯಕ್ತಿ ಒಂದೂವರೆ ಲೀಟರ್‌ನಷ್ಟು ಮೂತ್ರ ವಿಸರ್ಜಸುತ್ತಾನೆ. ಮೂತ್ರದ ಬಣ್ಣ ತಿಳಿಯಾಗಿದ್ದು ಯಾವುದೇ ಬಣ್ಣ ವಿರುವುದಿಲ್ಲ. ನಿರ್ಜಲೀಕರಣವಾದಂತೆ ಮೂತ್ರದ ಪ್ರಮಾಣ ಕಡಿಮೆಯಾದರೆ, ಮೂತ್ರದ ಬಣ್ಣ ಹಳದಿ ಬಣ್ಣಕ್ಕೆ ತಿರುಗಬಹುದು.

ಚರ್ಮ ಒಣಗುವುದು, ಸುಕ್ಕುಗಟ್ಟುವುದು, ಚರ್ಮದ ಕಾಂತಿ ಕುಂದುತ್ತದೆ. ತಲೆನೋವು, ಮಲಬದ್ಧತೆ, ತಲೆ ಸುತ್ತುವುದು, ತಲೆ ಬಾರವಾಗುವುದು, ಇತ್ಯಾದಿ ಕಾಣಿಸಿಕೊಳ್ಳಬಹುದು. ದೃಷ್ಟಿ ಮಂಜಾಗುವುದು, ಮೈಕೈ ನೋವು, ಮಾಂಸಖಂಡಗಳು ಹಿಡಿದುಕೊಳ್ಳುವುದು, ಸ್ನಾಯು ಸೆಳೆತ ಕಾಣಿಸಿಕೊಳ್ಳಬಹುದು.
ರಕ್ತದ ಒತ್ತಡ ಕಡಮೆಯಾಗಬಹುದು. ಮಕ್ಕಳಲ್ಲಿ ನಿರಾಸಕ್ತಿ, ಬಳಲಿಕೆ, ಆಟವಾಡಲು ನಿರಾಸಕ್ತಿ, ಉತ್ಸಾಹ ಹೀನತೆ, ಯುವಕರಲ್ಲಿ ಕೆಲಸ ಮಾಡಲು ನಿರಾಸಕ್ತಿ.

ಮಕ್ಕಳಲ್ಲಿ ನಿದ್ರಾಹೀನತೆ, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಳುವುದು ಮತ್ತು ಸಿಡಿದೇಳುವುದು. ಹೃದಯದ ಬಡಿತ ಜೋರಾಗುವುದು, ಜೋರಾದ ಉಸಿರಾಟ, ಮಕ್ಕಳು ಅಳುವಾಗ ಕಣ್ಣೀರು ಬಾರದಿರುವುದು, ಕಣ್ಣಿನ ಗೋಲುಗಳು ಕಣ್ಣಿನೊಳಗೆ ಹುಗಿದಂತೆ ಭಾಸವಾಗುವುದು. ಅತಿಯಾದ ನಿರ್ಜಲೀ ಕರಣವಾದಲ್ಲಿ, ವಿಪರೀತವಾದ ಗೊಂದಲ ಉಂಟಾಗಬಹುದು, ಬುದ್ದಿ ಮಂಕಾಗುತ್ತದೆ ಮತ್ತು ವ್ಯಕ್ತಿ ತಾನೆಲ್ಲಿದ್ದೇನೆ ಎಂಬುದರ ಅರಿವಿಲ್ಲದಿರುವುದು ಮತ್ತು ಕೊನೆ ಹಂತದಲ್ಲಿ ಮೂರ್ಛೆ ತಪ್ಪುವುದು ಕೂಡಾ ಆಗುವ ಸಾಧ್ಯತೆ ಇದೆ.

ತಡೆಗಟ್ಟುವುದು ಹೇಗೆ?
ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಿರ್ಜಲೀಕರಣವನ್ನು ತಡೆಗಟ್ಟಲು ಹಲವು ಮಾರ್ಗಗಳಿವೆ. ಪ್ರಮುಖವಾಗಿ, ಪ್ರತಿ ಗಂಟೆಗೊಮ್ಮೆ ದ್ರವಾಹಾರ ಸೇವಿಸಿ ನೀರು ಅತಿ ಉತ್ತಮವಾದ ದ್ರವಾಹಾರ. ನೀರು ನಿಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಅತಿ ಅಗತ್ಯ. ಸಾಕಷ್ಟು ಹಣ್ಣು ಹಂಪಲುಗಳನ್ನು ಸೇವಿಸಿ, ಹಣ್ಣುಗಳಲ್ಲಿ ಪೋಷಕಾಂಶಗಳ ಮತ್ತು ನೀರಿನಾಂಶ ಎರಡೂ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ ೮೦ರಷ್ಟು ನೀರಿನಾಂಶ ಇರುತ್ತದೆ ಮತ್ತು ಬೇಸಗೆಯಲ್ಲಿ ಹೆಚ್ಚು ಸೆವೀಸಬಹುದು. ಬೇಸಿಗೆಯಲ್ಲಿ ನಿತ್ಯ ಏಳೆಂಟು ಗಂಟೆ ನಿದ್ರೆ ಅತ್ಯಗತ್ಯ. ಆದ್ದರಿಂದ ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು.

ಹಗಲು ಹೊತ್ತಲ್ಲಿ ತಾಪಮಾನ ಜಾಸ್ತಿಯಾಗಿದ್ದಲ್ಲಿ, ಬಿಸಿಲಿಗೆ ಹೋಗುವುದನ್ನು ಕಡಮೆ ಮಾಡಿ. ಅನಿವಾರ‍್ಯವಿದ್ದಲ್ಲಿ ಮಾತ್ರ ಹೋಗಬೇಕು. ಮಕ್ಕಳನ್ನೂ ಕೂಡಾ ಬಿಸಿಲಿನಲ್ಲಿ ಗಂಟೆಗಟ್ಟಲೆ ಆಟವಾಡದಂತೆ ಎಚ್ಚರಿಸಬೇಕು. ಆಹಾರದಲ್ಲಿ ಉಪ್ಪಿನಾಂಶ ಜಾಸ್ತಿ ಬಳಸಬೇಡಿ. ದೇಹದಲ್ಲಿ ಸೋಡಿಯಂ ಲವಣ ಜಾಸ್ತಿಯಾದಂತೆ, ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು. ಕೆಫೆನ್ ಯುಕ್ತ ಮತ್ತು ಇಂಗಾಲಯುಕ್ತ ಪಾನೀಯಗಳಾದ ಕೊಕ್, ಪೆಪ್ಸಿ, ಕಾಫಿ, ಟೀ ಸೇವನೆಯನ್ನು ಕಡಿಮೆ ಮಾಡಿ. ರಾಸಾಯನಿಕ ಮತ್ತು ಲವಣಾಂಶ ಜಾಸ್ತಿ ಯಿರುವ ಜಂಕ್ ಫುಡ್ ಸೇವಿಸಬೇಡಿ. ಈ ಲವಣಗಳೊಂದಿಗೆ ದೇಹದಿಂದ ನೀರಿನಾಂಶವೂ ಕಳೆದು ಹೋಗಿ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.

ನೈಸರ್ಗಿಕ ಪಾನೀಯಗಳಾದ ತಾಜಾ ಹಣ್ಣಿನ ರಸ, ಎಳನೀರು, ಮಜ್ಜಿಗೆ ಮುಂತಾದವುಗಳನ್ನು ಹೆಚ್ಚು ಸೇವಿಸಿ, ಹೆಚ್ಚು ಸಕ್ಕರೆ ಹಾಕಿದ, ಕೃತಕ ಹಣ್ಣಿನ
ರಸವನ್ನು ಸೇವಿಸಲೇಬಾರದು. ತಾಜಾ ಹಣ್ಣಿನ ರಸವನ್ನು ಸಕ್ಕರೆ ಬೇರಸದೇ ಸೇವಿಸಬೇಕು. ಹಸಿ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ, ಜಾಸ್ತಿ
ಮಸಾಲೆಯುಕ್ತ, ಲವಣಯುಕ್ತ ಆಹಾರಗಳನ್ನು ವರ್ಜಿಸಿ ಹಾಲಿನ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅತಿಯಾದ ಬಾಯಿ ಒಣಗುವಿಕೆ
ಉಂಟಾಗಿ, ಬಾಯಾರಿಕೆಯಾದಲ್ಲಿ ಸ್ವಲ್ಪ ಸಕ್ಕರೆ, ಉಪ್ಪು ಸೇರಿಸಿದ ನೀರನ್ನು ಕುಡಿಯಿರಿ. ಮಾರುಕಟ್ಟೆಯಲ್ಲಿ ಸಿಗುವ ಒಆರ್‌ಎಸ್ ನೀರು ಸೇರಿಸಿ ಸೇವಿಸ ಬಹುದು.

ಕೊನೆ ಮಾತು
ನೀರು ನಮ್ಮ ದೇಹದ ಎಲ್ಲಾ ಮೂಲಭೂತ ಜೈವಿಕ ಕ್ರಿಯೆಗಳಿಗೆ ಅತಿ ಅವಶ್ಯಕ. ನಮ್ಮ ದೇಹದ ಗಾತ್ರ, ತೂಕ, ವಯಸ್ಸು, ಆರೋಗ್ಯ ಮತ್ತು
ಹವಾಮಾನಕ್ಕನುಗುಣವಾಗಿ ನಾವು ನಿರಂತರವಾಗಿ ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಅಂದರೆ ದಿನವೊಂದರಲ್ಲಿ ೩ ರಿಂದ ೪ ಲೀಟರ್
ಗಳಷ್ಟು ಸೇವಿಸಲೇಬೇಕು. ಇಲ್ಲವಾದ್ದಲ್ಲಿ ದೇಹದ ಆಂತರಿಕ ಸಮತೋಲನದಲ್ಲಿ ಏರುಪೇರಾಗಿ ರೋಗ ರುಜಿನಗಳಿಗೆ ಎಡೆ ಮಾಡಿ ಕೊಡಬಹುದು. ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೈಸರ್ಗಿಕವಾಗಿ ಉಚಿತವಾಗಿ ದೊರಕುವ ಅತೀ ಉತ್ತಮ ಔಷದಿ ಎಂದರೆ ‘ನೀರು’ ಮಾತ್ರ.

ಇಂದಿನ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ನಾವು ದಿನಕ್ಕೊಂದರಂತೆ ಹೊಸ ಹೊಸ ರೋಗಗಳನ್ನು ಸೃಷ್ಟಿಸಿ ಕೊಂಡು, ಹೊಸ ಹೊಸ ರೋಗಾಣುಗಳನ್ನು ಹುಟ್ಟಿಸಿಕೊಂಡು, ಆಹಾರಕ್ಕಿಂತ ಜಾಸ್ತಿ ಔಷಽಯನ್ನು ಸೇವಿಸುವ ಅನಿವಾರ್ಯತೆಗೆ ಸಿಕ್ಕಿ ಹಾಕಿಕೊಂಡಿ ದ್ದೇವೆ ಎಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಜೀವನಶೈಲಿ, ಆಹಾರ ಪದ್ಧತಿಯನ್ನು ಪುನರ್ ವಿಮರ್ಷಿಸಿಕೊಂಡು, ನಮ್ಮ ಜೀವನಶೈಲಿ ಯನ್ನು ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಾಲಕ್ಕೆ ತಕ್ಕಂತೆ ನಮ್ಮ ಅವಶ್ಯಕತೆಗಳು ಬದಲಾಗುವಂತೆ, ದೈಹಿಕ ಆರೋಗ್ಯಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಂಡು, ದೇಹದ ಆರೋಗ್ಯಕ್ಕೆ ಪೂರಕವಾದ ನೀರು ಆಹಾರವನ್ನು ಸೇವಿಸುವುದಲ್ಲಿಯೇ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.

(ಲೇಖಕರು : ಹವ್ಯಾಸಿ ಬರಹಗಾರರು ಹಾಗೂ
ವೈದ್ಯರು)

Leave a Reply

Your email address will not be published. Required fields are marked *

error: Content is protected !!