ಬೆಂಗಳೂರು : ಒಳ ಉಡುಪುಗಳ ಮೇಲೆ ಕನ್ನಡದ ಧ್ವಜದ ಬಣ್ಣ ಮತ್ತು ಕರ್ನಾಟಕ ಸರ್ಕಾರದ ಲಾಂಛನ ಬಳಸಿ ಕನ್ನಡಿಗರ ಅಸ್ಮಿತೆಗೆ, ಸಾರ್ವಭೌಮತ್ವಕ್ಕೆ ಧಕ್ಕೆ ಆಗುವಂತೆ ಮಾಡಿರುವ ಕೆನಡಾದ ಅಮೆಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರಗಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೂಗಲ್ ಸಂಸ್ಥೆ ಇಂತಹದೇ ಅಚಾತುರ್ಯದ ಕೆಲಸವನ್ನು ಮಾಡಿ ಕನ್ನಡಿಗ ರಿಂದ ಛೀಮಾರಿ ಹಾಕಿಸಿಕೊಂಡ ನಂತರ ಕ್ಷಮೆಯನ್ನು ಕೂಡ ಯಾಚಿಸಿದ್ದು ಹಸಿಯಾಗಿರುವಾಗಲೇ ಶನಿವಾರ ಅಮೆಜಾನ್ ಸಂಸ್ಥೆ ಉದ್ಧಟತನ ಮೆರೆದಿರು ವುದು ಕನ್ನಡಿಗರ ಸೌಮ್ಯ ಭಾವನೆಯನ್ನು ಕೆರಳಿಸಿದೆ. ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಅದೂ ಒಳ ಉಡುಪುಗಳ ಮೇಲೆ ಅಖಂಡ ಕನ್ನಡ ಮನಸ್ಸುಗಳು ಗೌರವಿಸುವ, ಪೂಜ್ಯಭಾವನೆಯಿಂದ ನೋಡಲಾಗುವ ರಾಜ್ಯದ ಧ್ವಜ ಮತ್ತು ಕರ್ನಾಟಕ ಸರ್ಕಾರದ ಲಾಂಛನ ಬಳಸಿ, ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಇಂತಹವರನ್ನು ಹೀಗೆ ಬಿಟ್ಟರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹಾಗಾಗಿ ಇಂತಹ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗು ವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಕೆನಡಾದ ಅಮೆಜಾನ್ ಸಂಸ್ಥೆ ಕೂಡಲೇ ಕ್ಷಮೆಯಾಚಿಸಬೇಕು ಮತ್ತು ಈ ರೀತಿ ಒಳಉಡುಪುಗಳ ಮೇಲೆ ರಾಜ್ಯದ ಲಾಂಛನವನ್ನು ಬಳಸಲು ಆದೇಶಿಸಿದ ಆಡಳಿತ ಮಂಡಳಿ, ಅಧಿಕಾರಿ ಮತ್ತು ನೌಕರರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.