ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಇಂದೂ ಸಹ ಬೆಂಗಳೂರಿನಲ್ಲಿ ಮುಂದುವರಿದಿವೆ.
ಬಿಸಿಯೂಟ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗೆ ಇಳಿಯಲಿದ್ದಾರೆ. 11.30ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಲಿರುವ ಬಿಸಿಯೂಟ ಕಾರ್ಯಕರ್ತೆಯರು, ಬಳಿಕ ಫ್ರೀಡಂ ಪಾರ್ಕ್ವರೆಗೆ ರ್ಯಾಲಿ ಹೊರಡಲಿದ್ದಾರೆ.
ಪ್ರತಿಭಟನೆ ಹಿನ್ನೆಲೆ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ. ಬಿಜಾಪುರ, ಬಾಗಲಕೋಟೆ, ಗದಗನಿಂದ ನೂರಾರು ಅಕ್ಷರ ದಾಸೋಹದ ಕಾರ್ಯಕರ್ತೆಯರು ಆಗಮಿಸಿದ್ದಾರೆ. ವೇತನ ಹೆಚ್ಚಳ, ಪಿಂಚಿಣಿ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಸಿಐಟಿಯು ವರಲಕ್ಷ್ಮಿ ನೇತೃತ್ವದಲ್ಲಿ ಬಿಸಿ ಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ನವೆಂಬರ್ನಿಂದ ಸಂಬಳ ನೀಡದ ಕಾರಣ, ದಿಢೀರ್ ಕೆಲಸದಿಂದ ವಜಾ ಮಾಡುತ್ತಿರುವ ಬಗ್ಗೆ ಬಿಸಿಯೂಟ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ಜೊತೆ ಸಿಐಟಿಯು ಹಮಾಲಿ ಕೆಲಸಗಾರರು ಸಹ ಜಮಾವಣೆಯಾಗಲಿದ್ದಾರೆ.
ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಇಂದಿಗೆ ಮಾತ್ರ ಸೀಮಿತವಾಗಿಲ್ಲ. ಹತ್ತು ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಯಲಿದೆ. ನಾಳೆ ರಾಜಧಾನಿಯಲ್ಲಿ ಅತೀ ದೊಡ್ಡ ಪ್ರತಿಭಟನೆ ನಡೆಯಲಿದೆ.