ಆಂದ್ರ ಸಂಪುಟದಲ್ಲಿ ಅನಿರೀಕ್ಷಿತ ಪ್ರಾತಿನಿಧ್ಯ ಸಿಕ್ಕಿದ್ದೇಕೆ?
ಆಯ್ಕೆಯಲ್ಲಿ ರಾಜಕಾರಣಕ್ಕಿಂತ ಆರ್ಎಸ್ಎಸ್ ಮೇಲುಗೈ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಪ್ರಲ್ಹಾದ್ ಜೋಶಿ ಸೇರಿದಂತೆ ರಾಜ್ಯದ ಐವರು ಸಂಸದರು ಸಚಿವರಾಗಿದ್ದು, ಇದು ರಾಜ್ಯಕ್ಕೆ ಸಿಕ್ಕ ನಿರೀಕ್ಷೆಗೂ ಮೀರಿದ ಪ್ರಾತಿನಿಧ್ಯ ಎಂದು ಬಣ್ಣಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು 2024ರ ಕುರುಕ್ಷೇತ್ರಕ್ಕಾಗಿ ಪಕ್ಷದ ಚಾಣಕ್ಯ ವರಿಷ್ಠರು ರಾಜ್ಯಕ್ಕೆ ಪಂಚ ಪಾಂಡವರನ್ನು ನಿಯೋಜಿಸತಾಗಿದೆ.
ಅಂದರೆ ಕೇಂದ್ರ ಸಂಪುಟದ ಸಚಿವರಾಗಿ ಪ್ರಮಾಣ ಸ್ವೀಕರಿಸಿ ರಾಜ್ಯಕ್ಕೆ ಬರುವ ಸಚಿವರು ಅಷ್ಟು ಸುಲಭವಾಗಿ ಸುಮ್ನನೆ ಕೂರುವುದಕ್ಕೆ ಅಲ್ಲ. ಬದಲಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಝಂಡಾ ರಾರಾಜಿಸುವಂತೆ ಮಾಡಲು ಸಜ್ಜುಗೊಳಿಸಿದ ಪಡೆ ಎಂದರೂ ತಪ್ಪಲ್ಲ. ಅಷ್ಟೇ ಅಲ್ಲ, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಎಲ್ಲಿಯೂ ಹಳಿ ತಪ್ಪದಂತೆ ನೋಡಿಕೊಳ್ಳುವ ಕೆಲವು ಸ್ಥಳೀಯ ಜವಾಬ್ದಾರಿಗಳನ್ನು ಈ ತಂಡಕ್ಕೆ ಹೊರಿಸಿ ದಂತಾಗಿದೆ.
ಹೌದು.. ಪ್ರಧಾನಿ ನರೇಂದ್ರ ಮೋದಿ ಸರಕಾರ ಬೇರೆ ರಾಜ್ಯಗಳಲ್ಲಿ ಹೇಗೆ ಪ್ರಾತಿನಿಧ್ಯ ನೀಡಿದೆಯೋ ಏನೋ, ಆದರೆ ರಾಜ್ಯದಲ್ಲಿ ಮಾತ್ರ ಅಪ್ಪಟ ಸಾಮಾಜಿಕ ಮತ್ತು ಭೌಗೋಳಿಕ ಪ್ರಾತಿನಿಧ್ಯದ ಸಮಾನತೆಯ ಸಮೀಕರಣ ಮಾಡುವುದರಲ್ಲಿ ಸೈ ಎನಿಸಿ ಕೊಂಡಿದೆ. ಅಷ್ಟೇ ಅಲ್ಲ, ಇಲ್ಲಿ ಕೆಲಸ ಮಾಡುವವರಿಗೆ ಮಾತ್ರ ಅವಕಾಶ. ಇಲ್ಲವಾದರೆ ಸಂಘಟನೆಯಲ್ಲಿ ದುಡಿಯ ಬೇಕಾಗುತ್ತದೆ ಎನ್ನುವ ಸಂದೇಶ ನೀಡಿ ರಾಜ್ಯದಲ್ಲಿ ನಾಲ್ವರು ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಿದೆ.
ಹೀಗಾಗಿ ಹೊಸ ಸಚಿವರು ಈಗ ವಿಶ್ರಾಂತಿಗೆ ಹೋಗಿರುವ ಕೇಂದ್ರ ಸಚಿವರ ಮಾದರಿಯಲ್ಲಿ ಅಧಿಕಾರ ಅನುಭವಿಸುವ ಬದಲು ಪಕ್ಷದ ಮತ್ತು ಸರಕಾರದ
ವರ್ಚಸ್ಸು ಹೆಚ್ಚಿಸಲು ಶ್ರಮಿಸಬೇಕಾಗುತ್ತದೆ. ಈ ಮೂಲಕ ನೂತನ ಸಚಿವರು ರಾಜ್ಯದಲ್ಲಿ ೨೮ ಕ್ಷೇತ್ರಗಳನ್ನೂ ಗೆಲ್ಲುವಂತೆ ಮಾಡಿ ಮತ್ತೆ ಕೇಂದ್ರದಲ್ಲಿ
ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕೆನ್ನುವ ಸ್ಪಷ್ಟ ಸೂಚನೆಯೊಂದಿಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.
ರಾಜ್ಯಕ್ಕೆ ಹೆಚ್ಚು ಸ್ಥಾನ ಸಿಕ್ಕಿದ್ದು ಏಕೆ?: ಕರ್ನಾಟಕದ ಇತಿಹಾಸದ ಕೇಂದ್ರದ ಸಂಪುಟದಲ್ಲಿ ಐವರು ಮಂತ್ರಿಯಾಗಿದ್ದ ಉದಾಹರಣೆಗಳಿಲ್ಲ. ಐವರು ಸಂಸದರು ಕೇಂದ್ರ ಸಚಿವರಾಗುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಹೆಚ್ಚೆಂದರೆ ರಾಜ್ಯದ ಇಬ್ಬರಿಗೆ ಮಂತ್ರಿ ಸ್ಥಾನ ಸಿಗಬಹುದು
ಎನ್ನಲಾಗಿತ್ತು. ಆದರೂ ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಹಾಗೂ ರಾಜೀವ್ ಚಂದ್ರಶೇಖರ್ ಸೇರಿದಂತೆ ನಾಲ್ಕು ಹೊಸ
ಮುಖ ಮತ್ತು ಈಗಾಗಲೇ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರಿಗೆ ಅವಕಾಶ ನೀಡಿರುವುದು ಏಕೆ ಎನ್ನುವ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ
ಹುಡುಕುತ್ತಿದ್ದಾರೆ. ಈ ಪ್ರಶ್ನೆಯ ಹಿಂದೆ ರಾಜ್ಯದ ನಾಯಕತ್ವ ವಿಚಾರವೂ ಪ್ರರೋಕ್ಷವಾಗಿ ಸ್ಪಷ್ಟವಾಗುತ್ತಿದೆ.
ಅಂದರೆ ಸಂಪುಟ ಪುನಾರಚನೆಯಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿ ಯಡಿಯೂರಪ್ಪ ಬದಲಾವಣೆ ಮಾಡಲಾಗುತ್ತದೆ ಎನ್ನುವ ವದಂತಿಗೆ ಪರೋಕ್ಷ ಇತಿಶ್ರೀ ಹಾಡಿದಂತಾಗಿದೆ. ಈಗ ಸಂಪುಟ ಸೇರಿದ ಐವರು ಸಂಸದರೂ ಮೂಲತಃ ಆರ್ಎಸ್ಎಸ್ ನಿಂದ ಬಂದವರಾಗಿದ್ದು, ಇವರೆಲ್ಲರೂ ಸಂಘದ ಶಿಫಾರಸ್ಸಿನಂತೆಯೇ ಸಂಪುಟ ಸೇರಿದ್ದಾರೆ ಎನ್ನಲಾಗಿದೆ.
ಯಾವ ಸಚಿವರ ಹಿಂದೆ ಯಾರು ?
ಚಿತ್ರದುರ್ಗದ ಎ.ನಾರಾಯಣಸ್ವಾಮಿ ಸಚಿವರಾಗಿರುವ ಹಿಂದೆ ವರಿಷ್ಠ ಮಂಡಳಿಯಲ್ಲಿರುವ ಬಿ.ಎಲ್.ಸಂತೋಷ್ ಕೃಪೆ ಇದೆ ಎನ್ನಲಾಗಿದೆ. ಇದೇ ರೀತಿ
ಉಡುಪಿ- ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ ಅವರ ಆಯ್ಕೆ ಹಿಂದೆ ಆರ್ಎಸ್ ಎಸ್ನ ಮುಕುಂದ್ ಅವರ ಸಹಕಾರ ಇರಬಹುದು ಎಂದು ಹೇಳಲಾಗಿದೆ.
ಬೆಂಗಳೂರಿನ ರಾಜೀವ್ ಚಂದ್ರಶೇಖರ್ ಮೇಲೆ ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ಆಶೀರ್ವಾದವಿದೆ ಎಂದು ತಿಳಿದುಬಂದಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಅನಿರೀಕ್ಷಿತವಾಗಿ ಸಂಪುಟ ಸೇರಿರುವ ಭಗವಂತ ಖೂಬಾ ಅವರ ಪರ ಬಾಬಾ ರಾವ್ದೇವ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ
ಅವರ ಶಿ-ರಸು ಕೆಲಸ ಮಾಡಿದೆ ಎಂದು ದೆಹಲಿ ಬಿಜೆಪಿ ಕಚೇರಿ ಮೂಲಗಳು ತಿಳಿಸಿವೆ.