ಬೆಂಗಳೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಚುನಾವಣೆ ಆರಂಭದಿಂದಲೂ ಬಿಜೆಪಿಗೆ ಬಂಡಾಯದ ಬಿಸಿ ತಾಗಿತ್ತಾದರೂ ಅಂತಿಮವಾಗಿ ಮತದಾರ ಬಿಜೆಪಿಯ ಅಧಿಕೃತ ಅಭ್ಯರ್ಥಿ ಚಿದಾನಂದ ಗೌಡರನ್ನು ಗೆಲ್ಲಿಸಿದ್ದಾರೆ. 24,217 ಮತಗಳನ್ನು ಪಡೆಯುವ ಮೂಲಕ ಚಿದಾನಂದ ಗೌಡ, ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರನ್ನು ಸೋಲಿಸಿದ್ದಾರೆ.
ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆದಿತ್ತು. ನ.2ರಂದೇ ನಡೆಯಬೇಕಿದ್ದ ಮತ ಎಣಿಕೆಯನ್ನು ನವೆಂಬರ್ 10ಕ್ಕೆ ಚುನಾವಣಾ ಆಯೋಗ ಮುಂದೂಡಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 14 ಟೇಬಲ್ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಚಿದಾನಂದಗೌಡ 24,217 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.