ಕೊರಟಗೆರೆ: ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿಲ್ಲ, ಬೀದಿ ದ್ವೀಪ ಇಲ್ಲದೇ ಕತ್ತಲೆ ಕವಿದಿದೆ, ಚರಂಡಿ ಸ್ವಚ್ಚತೆಯೇ ಇಲ್ಲದೇ ಸಾಂಕ್ರಮಿಕ ರೋಗದ ಭೀತಿ ಮತ್ತು ಮೂಲಭೂತ ಸೌಕರ್ಯವೇ ಮರೀಚಿಕೆ ಆಗಿದೆ ಎಂದು ಆರೋಪಿಸಿ ಬಸವೇಶ್ವರ ನಗರದ ಮತದಾರರು ಗ್ರಾಪಂ ಚುನಾವಣೆೆ ಮತದಾನ ಮಾಡುವುದಿಲ್ಲ ಎಂದು ಬುಧವಾರ ಬಹಿಷ್ಕಾರ ಮಾಡಿದ್ದಾರೆ.
ತಾಲೂಕು ಹೊಳವನಹಳ್ಳಿ ಗ್ರಾಮದ ಮೊದಲನೇ ವಾರ್ಡಿನ ಬಸವೇಶ್ವರ ನಗರದಲ್ಲಿ 80ಕ್ಕೂ ಹೆಚ್ಚು ಮನೆಗಳ 400ಕ್ಕೂ ಅಧಿಕ ಮತದಾರರು ಈ ಭಾರಿ ಗ್ರಾಪಂ ಚುನಾವಣೆಗೆ ಬಹಿಷ್ಕರಿಸಿ ತಮ್ಮ ಬಡಾವಣೆಗೆ ಬರುವ ನಾಲ್ಕು ಮಾರ್ಗಗಳ ದಾರಿಗಳನ್ನು ಮುಚ್ಚಿ ಗ್ರಾಪಂ ಪಿಡಿಓ ಮತ್ತು ತಾಪಂ ಇಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬಸವೇಶ್ವರ ಬಡಾವಣೆಯ ವಾಸಿಯಾದ ಆಟೋಗೋವಿಂದರಾಜು ಮಾತನಾಡಿ ಕಳೆದ ಭಾರಿ ಮೊದಲನೇ ವಾರ್ಡ್ನಿಂದ ಆಯ್ಕೆ ಯಾದ ಮಾಜಿ ಗ್ರಾಪಂ ಸದಸ್ಯರುಗಳು ನಮ್ಮ ವಾರ್ಡ್ನ ಸಮಸ್ಯೆಗಳು ಕಣ್ಣಿಗೆ ಕಾಣದೇ ಇರುವ ಕಾರಣ ಸಮಸ್ಯೆಗಳು ಎದುರಾಗಿದೆ. ಸಮಸ್ಯೆಯ ಬಗ್ಗೆ ಗ್ರಾಪಂ ಪಿಡಿಓ ಮತ್ತು ತಾಪಂ ಇಓಗಳ ಗಮನಕ್ಕೆ 4ತಿಂಗಳಿಂದ ತಂದರೂ ಪ್ರಯೋಜವಾಗದ ಪರಿಣಾಮ ನಾವು ಈ ಭಾರಿ ಗ್ರಾಪಂ ಚುನಾವಣೆಗೆ ಬಹಿಷ್ಕಾರ ಮಾಡಿದ್ದೇವೆ ಎಂದು ಹೇಳಿದರು.
ಸ್ಥಳೀಯ ಮಹಿಳೆ ಭಾಗ್ಯಲಕ್ಷ್ಮೀ ಮಾತನಾಡಿ, 4 ತಿಂಗಳಿಂದ ಕುಡಿಯುವ ನೀರು ಸ್ಥಗೀತವಾಗಿದೆ. ಕಳೆದ ಐದು ವರ್ಷದಿಂದ ಚರಂಡಿ ಸ್ವಚ್ಚತೆ ಇಲ್ಲದೇ ಸಾಂಕ್ರಾಮಿಕ ರೋಗ ಹರಡುತ್ತೀದೆ. ಕೊರೊನಾ ರೋಗಕ್ಕಿಂತ ಚರಂಡಿಯ ದುರ್ವಾಸನೆಯೇ ಹೆಚ್ಚಾ ಗಿದೆ. ಈ ಭಾಗದ ನಾವು ವಾಸಿಸಲು ಕಷ್ಟ ಸಾಧ್ಯವಾಗಿದೆ. ನಮಗೆ ಸೌಲಭ್ಯ ನೀಡದ ಮೇಲೆ ನಾವು ಗ್ರಾಪಂ ಚುನಾವಣೆಗೆ ಮತದಾತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಆರೋಪ ಮಾಡಿದರು.
ಮತದಾನ ಬಹಿಷ್ಕರಿಸಿದ ಬಡಾವಣೆಯ ಮತದಾರರನ್ನು ಮನವೋಲಿಸಿದ ಕೊರಟಗೆರೆ ಎಎಸ್ಐ ಯೊಗೀಶ್ ತಕ್ಷಣ ಈ ಭಾಗಕ್ಕೆ ನೀರು ಸರಬರಾಜು ಮಾಡುವಂತೆ ಪಿಡಿಓಗೆ ಸೂಚನೆ ನೀಡಿದರು. ಪಿಡಿಓ ಚೆಲುವರಾಜು ಸ್ಥಳದಲ್ಲಿ ಮೋಕ್ಕಾಂ ಹೂಡಿ ಕುಡಿ ಯುವ ನೀರು ಸರಬರಾಜು ಆದ ನಂತರ ಸ್ವಚ್ಚತೆಯ ಕೆಲಸ ಮಾಡುವುದಾಗಿ ಭರವಸೆ ನೀಡಿದ ಘಟನೆ ನಡೆಯಿತು.
ಮತದಾನ ಬಹಿಷ್ಕಾರ ಸಂದರ್ಭದಲ್ಲಿ ಸ್ಥಳೀಯರಾದ ಬಸವರಾಜು, ನಾಗರಾಜು, ದೇವರಾಜು, ಪಾರ್ವತಮ್ಮ, ಲಕ್ಷ್ಮಮ್ಮ, ಶಶಿಕುಮಾರ್, ರಾಮಾಂಜಿನಪ್ಪ, ರಂಗಯ್ಯ, ಅನ್ವರ್ಬಾಷ, ಹನುಮಂತರಾಜು, ರಾಮಯ್ಯ, ಕುಮಾರ್, ಸಿದ್ದಪ್ಪ, ತಿಮ್ಮಯ್ಯ, ಸೋಮಣ್ಣ ಸೇರಿದಂತೆ ಇತರರು ಇದ್ದರು.