ತುಮಕೂರು: ಡ್ರೀಮ್ ಫೌಂಡೇಷನ್ ಟ್ರಸ್ಟ್, ಆಕ್ಸಿಜನ್ ಸ್ಪೋರ್ಟ್ಸ್ ಕ್ಲಬ್, ಜೈ ಭಾರತ ಯುವಸೇನೆ (ರಿ.) ಮತ್ತು ತುಮಕೂರು ಜಿಲ್ಲಾ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ನಗರದ ಬಿ.ಎಚ್.ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು (ಜಿಪಿಟಿ) ಮೈದಾನದಲ್ಲಿ ಭಾನುವಾರ ಪ್ರಪ್ರಥಮ ಭಾರಿಗೆ ರಾಜ್ಯ ಮಟ್ಟದ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ಈ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿಗೆ ಸಿದ್ಧಲಿಂಗ ಮಹಾಸ್ವಾಮಿಗಳು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು ನಗರದಲ್ಲಿ ಇಂದು ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಎಂದು ನಾವು ಹೇಳ ಬೇಕಾಗುತ್ತದೆ. ಎಲ್ಲೋ ಬೇರೆ ಕಡೆ ಐಪಿಎಲ್ ನಡೆಯುತ್ತಿದೆ ಎಂದರೆ ಅದಕ್ಕಿಂತಲೂ ಮಹತ್ವವಾದುದು ಈ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿ ಇಲ್ಲಿ ನಡೆಯುತ್ತಿರು ವುದು ಅತ್ಯಂತ ಹೆಮ್ಮೆ ಪಡುವಂತಹ ಸಂಗತಿ ಎಂದರು.
ಆಟಗಾರರು ಕ್ಷೇತ್ರರಕ್ಷಣೆ ಮಾಡುತ್ತಿರುವ ಪರಿ ನಿಜಕ್ಕೂ ಕಾಲಿರುವವರೂ ಇಂತಹ ಅದ್ಭುತ ಆಟ ಪ್ರದರ್ಶನ ನೀಡುತ್ತಿರಲಿಲ್ಲ ವೇನೋ ಎಂದು ಭಾಸ ವಾಗುತ್ತದೆ. ಅಷ್ಟರ ಮಟ್ಟಿಗೆ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರಿಗೆ ಭಗವಂತ ಕಾಲು ಕೊಡದಿದ್ದರೂ ಕಾಲು ಇರುವವರಿಗಿಂತಲೂ ಮನಸ್ಸು ಹೆಚ್ಚಾಗಿ ಕೊಟ್ಟಿದ್ದಾನೆ. ಅವರನ್ನು ನೋಡಿದರೆ ನಮಗೆಲ್ಲಾ ಸ್ಪೂರ್ತಿ ಎಂದು ಬಣ್ಣಿಸಿದರು.
ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಆಟಗಾರರಿಗೆ ಆತ್ಮವಿಶ್ವಾಸ ಮತ್ತಷ್ಟು ದೃಢವಾಗಿ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಹೋಗಲಿ, ಇಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಆಯೋಜಕರಾದ ಡ್ರೀಮ್ ಫೌಂಡೇಷನ್ನ ಶ್ರೀಹರ್ಷ ಮಾತನಾಡಿ, ಅಂಗವಿಕಲರ ಆಶ್ರಮ ಮಾಡಬೇಕೆನ್ನುವ ಉದ್ಧೇಶದಿಂದ ಅದಕ್ಕೆ ಪೂರಕವಾಗಿ ಡ್ರೀಮ್ ಫೌಂಡೇಷನ್ ಟ್ರಸ್ಟ್ ವೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಇದರಿಂದ ಅಂಗವಿಕಲರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ ಎಂದರು.
ಈ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ತುಮಕೂರು, ಬೆಂಗಳೂರು, ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಸ್ಥಳೀಯ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಭಾರತ ಯುವಸೇನೆ ಅಧ್ಯಕ್ಷರಾದ ಪ್ರದೀಪ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಪ್ರಕಾಶ್, ಕನ್ನಡ ಮಹೇಶ್, ವಿಶ್ವನಾಥರೆಡ್ಡಿ, ಬಸವರಾಜ್ ಉಮ್ರಾಣಿ, ನರಸೇಗೌಡ್ರು, ಗುರುದೇವಯ್ಯ, ಶಿವದೇವು, ಚಂಗಾವಿ ರವಿ, ದರ್ಶನ್, ಕಾರ್ತೀಕ್, ಡ್ರೀಮ್ ಫೌಂಡೇಷನ್ ಟ್ರಸ್ಟ್ನ ಸ್ವಯಂ ಸೇವಕರಾದ ಶ್ರೀಹರ್ಷ, ಚನ್ನಬಸವದೇವರು, ಕೇಬಲ್ ರಾಜಣ್ಣ, ಲೋಹಿತ್, ರಂಜನ್, ಶ್ರೀಧರ್, ಪ್ರದೀಪ್, ಕೋಮಲ ಸೇರಿದಂತೆ ಹಲವರು ಭಾಗವಹಿಸಿದ್ದರು.