ರಾಣೆಬೆನ್ನೂರು: ನಗರದ ದುರ್ಗಾ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಬೆಂಕಿ ದುರಂತ ಸಂಭವಿಸಿದ್ದು, 100ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದೆ.
ತರಕಾರಿ, ಹಣ್ಣು, ದಿನಸಿ ಅಂಗಡಿಗಳಲ್ಲಿನ ವಸ್ತುಗಳು ಸುಟ್ಟು ಭಸ್ಮವಾಗಿವೆ. ದುಷ್ಕರ್ಮಿಗಳು ದುರುದ್ದೇಶದಿಂದ ಮಾರುಕಟ್ಟೆಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.
ನನ್ನ ಅಂಗಡಿಗೆ ಬೆಂಕಿ ಬಿದ್ದು ಸುಮಾರು ₹4 ಲಕ್ಷ ನಷ್ಟವಾಗಿದೆ. ಜೀವನ ನಡೆಸಲು ಇದ್ದ ಅಂಗಡಿ ಸುಟ್ಟು ಕರಕಲಾಗಿದೆ. ಪರಿಹಾರ ಕೊಡಿಸಿ ಸ್ವಾಮಿ’ ಎಂದು ಕಿರಾಣಿ ಅಂಗಡಿ ವ್ಯಾಪಾರಿ ಅನ್ನಪೂರ್ಣ ಕುಂಕುಮಗಾರ ದುಃಖ ತೋಡಿಕೊಂಡರು.
ಸ್ಥಳಕ್ಕೆ ಪೊಲೀಸರು, ನಗರಸಭೆ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದರು. ರಾಣೆಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.