Saturday, 26th October 2024

ಪೆರೇಸಂದ್ರ ಎಎಸ್‌ಐ ಮನೆ ದರೋಡೆ ಪ್ರಕರಣ, ಆರೋಪಿಗಳ ಬಂಧನ: ಐಜಿಪಿ ಚಂದ್ರಶೇಖರ್

ಚಿಕ್ಕಬಳ್ಳಾಪುರ: ಪೆರೇಸಂದ್ರದಲ್ಲಿರುವ ಎಎಸ್‌ಐ ನಾರಾಯಣಸ್ವಾಮಿ ಅವರ ಮನೆಯ ಮೇಲಿನ ದರೋಡೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಐದು ಮಂದಿ ಅಂತರರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು.

ಉತ್ತರ ಪ್ರದೇಶದ ಬಿಜನೂರ್ ಜಿಲ್ಲೆಯ ಚಾಂದ್‌ಪೂರದ ಹೈದರ್ ಅಲಿ (೨೬) ಬಹಿರಂ ನಗರದ ಮಹಮ್ಮದ್ ಆರೀಫ್ ಅನ್ಸಾರಿ (೩೫), ರಾಮ್‌ಪುರ ಜಿಲ್ಲೆಯ ಚಿಂತಮಾನಖಾತೆ ಗ್ರಾಮದ ಜಮ್‌ಷೀದ್ ಖಾನ್ (೨೭), ನವದೆಹಲಿಯ ವೀರೇಂದ್ರ ಸಿಂಗ್ (೫೫) ಮತ್ತು ಆಂಧ್ರಪ್ರದೇಶದ ಕದಿರಿ ನಗರದ ಪಠಾಣ್ ಮಹಮ್ಮದ್ ಹ್ಯಾರಿಸ್ ಖಾನ್ (೩೦) ಬಂಧಿತರು ಎಂದು ತಿಳಿಸಿದರು.

ಆರೋಪಿಗಳಾದ ಹೈದರ್ ಅಲಿ, ವೀರೇಂದ್ರ ಸಿಂಗ್ ಠಾಕೂರ್ ಮತ್ತು ಹ್ಯಾರಿಸ್ ಖಾನ್ ಕೋಲಾರ, ವಿಜಯಪುರ, ಡೆಹ್ರಾಡೂನ್, ಆಂಧ್ರಪ್ರದೇಶದ ರೇಣುಗಂಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದರು.

ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ. ಮೂರು ನಾಡ ಪಿಸ್ತೂಲ್, ಖಾಲಿ ಮ್ಯಾಗ್ಜಿನ್ ಒಳಗೊಂಡ ಒಂದು ಪಿಸ್ತೂಲ್, ೪೬ ಜೀವಂತ ಬುಲೆಟ್‌ಗಳು,  ೩.೫ ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ೭೧  ಗ್ರಾಂ ಚಿನ್ನದ ಆಭರಣ, ಬೆಳ್ಳಿಯ ೨೧ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದರು.

ಆ0ಧ್ರ ಪ್ರದೇಶದ ಕದಿರಿ ಪೊಲೀಸರು ಮತ್ತು ನಿಜಾಮಾಬಾದ್ ಜಿಲ್ಲೆಯ ಇಂದಲವಾಯಿ ಮತ್ತು ಗಾಜಿಯಾಬಾದ್‌ನ ಅಪರಾಧ ಪತ್ತೆ ದಳದ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಪ್ರಕರಣದ ಹಿನ್ನೆಲೆ: ಪೆರೇಸಂದ್ರದಲ್ಲಿರುವ ಬಾಗೇಪಲ್ಲಿ ಪೊಲೀಸ್ ಠಾಣೆ ಎಎಸ್‌ಐ ನಾರಾಯಣಸ್ವಾಮಿ ಅವರ ನಿವಾಸಕ್ಕೆ  ನ.೯ರಂದು ರಾತ್ರಿ ನುಗ್ಗಿ ದಡೋಡೆ ನಡೆಸಿದ್ದರು. ನಾರಾಯಣಸ್ವಾಮಿ ಅವರ ಪುತ್ರ ಶರತ್ ಮೇಲೆ ಗುಂಡು ಹಾರಿಸಿದ್ದರು. ನಾರಾಯಣಸ್ವಾಮಿ ಅವರ ತಲೆಗೆ ಹಲ್ಲೆ ನಡೆಸಿದ್ದರು. ಪೊಲೀಸ್ ಅಧಿಕಾರಿ ಮನೆಯಲ್ಲಿಯೇ ದರೋಡೆ ನಡೆದಿದ್ದು ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

ಎಸ್ಪಿ ಡಿ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ವಿ.ಕೆ.ವಾಸುದೇವ್ ನೇತೃತ್ವದಲ್ಲಿ ಸಿಪಿಐಗಳಾದ ಬಿ.ರಾಜು, ಲಿಂಗರಾಜ, ಕೆ.ಪಿ.ಸತ್ಯನಾರಾಯಣ್, ಇನ್‌ಸ್ಪೆಕ್ಟರ್ ಡಿ.ಆರ್.ನಾಗರಾಜ್, ಡಿ.ಮಂಜುನಾಥ್, ಸಿಬ್ಬಂದಿ ನಾರಾಯಣಸ್ವಾಮಿ, ಮುರುಳಿ, ರವಿಕುಮಾರ್, ಮುನಿಕೃಷ್ಣ, ರಿಜ್ವಾನ್, ಅಶ್ವತ್ಥ್, ಎನ್.ಆನಂದ್, ಮಾರುತಿ, ಬಾಬಾಜಾನ್, ಶ್ರೀನಿವಾಸ್, ಕರಿಬಾಬು, ದಕ್ಷಿಣ ಮೂರ್ತಿ, ಅರುಣ್, ಆನಂದ್, ಮೋಹನ್, ಧನಂಜಯ್, ಅಶೋಕ್, ಸಾಗರ್, ವಿನಾಯಕ್, ಮಂಜುನಾಯ್ಕ್, ಸಂತೋಷ್ ಕುಮಾರ್ ಅವರ ತಂಡ ಆರೋಪಿಗಳ ಬಂಧನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಡಿವೈಎಸ್‌ಪಿ ವಿ.ಕೆ.ವಾಸುದೇವ್ ಇದ್ದರು.