Saturday, 26th October 2024

ಅಂಗನವಾಡಿ ನೌಕರರ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಅಂಗನವಾಡಿ ನೌಕರರು ಎದುರಿಸುತ್ತಿರುವ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಗೌರವಧನವನ್ನು ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ನಿಗದಿತ ಅವಧಿಯ ಒಳಗೆ ಮೊಟ್ಟೆಗಳನ್ನು ಪೂರೈಸಬೇಕು. ಗ್ಯಾಸ್ ಸ್ಟೌಗಳು ಹಾಳಾಗಿದ್ದು ಈ ಬಗ್ಗೆ ಅಧಿಕಾರಿ ಗಳಿಗೆ ಮಾಹಿತಿ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗನವಾಡಿ ನೌಕರರ ಜಿಲ್ಲಾ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಅಂಗನವಾಡಿ ಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಸಮಸ್ಯೆಗಳ ಪರಿಹಾರದ ವಿಚಾರದಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.

ಬಾಕಿಯಿರುವ ತರಕಾರಿ, ಗ್ಯಾಸ್ ಹಣ ನೀಡಬೇಕು. ಮೂರು ವರ್ಷಗಳಿಂದ ಅಂಗನವಾಡಿಗಳಿಗೆ ಅಡುಗೆ ಸಾಮಗ್ರಿಗಳನ್ನು ನೀಡಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಐಸಿಡಿಎಸ್ ಕೆಲಸಗಳನ್ನು ಮಾತ್ರ ಮಾಡಿಸಬೇಕು. ಇಲಾಖೆಯು ಮೊಬೈಲ್ ಕೊಟ್ಟು ಮೂರ್ನಾಲ್ಕು ವರ್ಷಗಳಾಗಿವೆ. ಅವು ಕೆಲಸ ಮಾಡುತ್ತಿಲ್ಲ. ಅವುಗಳನ್ನು ವಾಪಸ್ ಪಡೆದು ಹೊಸ ಮೊಬೈಲ್ ನೀಡಬೇಕು. ಸಾಕ್ಷರತೆಯಲ್ಲಿ ಅಂಗನವಾಡಿ ನೌಕರರನ್ನು ತೊಡಗಿಸಿಕೊಳ್ಳಬಾರದು ಎಂದು ಹೇಳಿದರು.

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್ ಮತ್ತು ?ಪುಸ್ತಕಗಳನ್ನು ಉಚಿತವಾಗಿ ನೀಡಬೇಕು. ಕೇಂದ್ರಗಳಿಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಶ್ವತ್ಥಮ್ಮ, ಸುಜಾತಾ, ಮಂಜುಳಾ, ವೆಂಕಟಲಕ್ಷ್ಮಮ್ಮ, ಜಿ.ಪದ್ಮಾ, ಸರೋಜಮ್ಮ, ಭಾಗ್ಯಮ್ಮ, ಕೆ.ರತ್ನಮ್ಮ, ಎಂ.ಪಿ.ಮುನಿ ರತ್ನಮ್ಮ, ಗುಲ್ಜಾರ್, ಸೌಭಾಗ್ಯಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.