Monday, 16th September 2024

ಜನ ಬೆಂಬಲದಿಂದ ಮುಂದಿನ‌ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಮುಖ್ಯಮಂತ್ರಿ ವಿಶ್ವಾಸ

ತುಮಕೂರು: ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ರಾಜ್ಯದ ಜನ ಬೆಂಬಲ ಕೊಡುತ್ತಿರುವುದನ್ನು ನೋಡಿದರೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಈಗ ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆ ಮಾಡು ತ್ತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈಗಾಗಲೇ ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆ ನಡೆಯು ತ್ತಿದೆ. ಅದರಂತೆ ತುಮಕೂರು ಜಿಲ್ಲೆಗೂ ಬಂದಿದ್ದೇವೆ. ಈಗ ಕುಣಿಗಲ್ ಮತ್ತು ಕೊರಟಗೆರೆ ಕ್ಷೇತ್ರಗಳಲ್ಲಿ ಯಾತ್ರೆ ನಡೆಯ ಲಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ೧೧ ಕ್ಷೇತ್ರಗಳಲ್ಲೂ ಜನಸಂಕಲ್ಪ ಯಾತ್ರೆ ನಡೆಯುತ್ತದೆ ಎಂದರು.
ಕುಣಿಗಲ್ ಕ್ಷೇತ್ರದ ಬಿಜೆಪಿ ಅಕಾಂಕ್ಷಿ ಅಭ್ಯರ್ಥಿ ಗಲಾಟೆ ವಿಚಾರದ ಬಗ್ಗೆ ಮಾತನಾಡಿ, ಎಲ್ಲಿ ಪಕ್ಷ ಆರಿಸಿ ಬರುತ್ತದೆ ಎನ್ನುವ ಭರವಸೆ ಇರುತ್ತದೋ ಅಲ್ಲಿ ಪೈಪೋಟಿ ಇದ್ದೇ ಇರುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ ಆಗಿರುವುದರಿಂದ ಇವೆಲ್ಲವನ್ನು ಸರಿದೂಗಿಸಿ ವಿಜಯ ಪತಾಕೆ ಹಾರಿಸುತ್ತೇವೆ ಎಂದರು.
ಕೊಲೆ ಸುಪಾರಿ ತನಿಖೆ ನಡೆಯುತ್ತಿದೆ
ಮಾಜಿ ಶಾಸಕ ಸುರೇಶ್‌ಗೌಡ ಕೊಲೆಗೆ ಸುಫಾರಿ ಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ಮಾಡಿ ಯಾರು ಯಾರು  ಕಾರಣೀಭೂತರಿದ್ದಾರೆ, ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಈ ಪ್ರಕರಣದ ಸಂಬಂಧ ನಾನು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ತನಿಖೆಯಾದ ಮೇಲೆ ಎಲ್ಲವೂ ಹೊರಗೆ ಬರುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಗೈರು ವಿಚಾರದ ಬಗ್ಗೆ ಮಾತನಾಡಿ, ಯಡಿಯೂರಪ್ಪನವರಿಗೆ ಇನ್ನೊಂದು ವಿಶೇಷ ಕಾರ್ಯಕ್ರಮ ಇದೆ. ಹಾಗಾಗಿ ಗೈರಾಗಿದ್ದಾರೆ. ಇದುವರೆಗೆ ಎಲ್ಲ ಸಂಕಲ್ಪ ಯಾತ್ರೆಗೂ ಬಂದಿದ್ದಾರೆ ಎಂದು ಉತ್ತರಿಸಿದರು.