Thursday, 19th September 2024

ದೀಪಿಕಾ ಕೇಸರಿ ಕಿರಿಕ್ – ಆಪರೇಷನ್‌ ವಿಮಲ

ತುಂಟರಗಾಳಿ

ಸಿನಿಗನ್ನಡ

ನಟ ಸುದೀಪ್ ಅವರನ್ನು ರಮ್ಮಿ ಆಡಿಸ್ತಾರೆ, ಜನರನ್ನು ದಿವಾಳಿ ಮಾಡ್ತಾರೆ ಅಂತ ಬಯ್ದುಕೊಂಡೇ ಸಾಕಷ್ಟು ಹೆಸರು ಮಾಡಿದವರು ಅಹೋರಾತ್ರ ಎಂಬ ವ್ಯಕ್ತಿ. ಆ ಕಾರಣಕ್ಕೆ ಸುದೀಪ್ ಅವರ ಅಭಿಮಾನಿಗಳು ಅವರ ಬಗ್ಗೆ, ಅವರ ಕುಟುಂಬ ದವರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಅದು ದೊಡ್ಡ ರಂಪ ಆಗಿತ್ತು.

ಈಗಲೂ ಅಹೋರಾತ್ರ, ಸುದೀಪ್ ಅವರನ್ನು ಕಂಡರೆ ಕೆಂಡ ಕಾರುತ್ತಾರೆ. ಜೊತೆಗೆ ಕೆಂಡ ಪದದ ಪ್ರಾಸ ಆಗಬಲ್ಲ ಪದ ಬಳಸಿ ಸುದೀಪ್ ಮತ್ತು ಅವರ ಅಭಿಮಾನಿಗಳನ್ನು ನಿಂದಿಸುತ್ತಾರೆ. ಈಗ ಅವರ ಕೆಂಗಣ್ಣು ನಟ ದರ್ಶನ್ ಅವರ ಮೇಲೆ ಬಿದ್ದಿದೆ. ದರ್ಶನ್ ಇತ್ತೀಚೆಗೆ ಅದೃಷ್ಠ ದೇವತೆ ಬಗ್ಗೆ ಅಶ್ಲೀಲ ವಾಗಿ ಮಾತಾಡಿದರು ಅನ್ನೋ ಕಾರಣಕ್ಕೆ ಅಹೋರಾತ್ರ, ಅವರ ವಿರುದ್ಧ
ಸೋಷಿಯ್ ಮೀಡಿಯಾದಲ್ಲಿ ವಾಗ್ದಾಳಿ ಮಾಡಿದ್ದರು. ಈಗ ಮತ್ತೆ ಹಿಸ್ಟರಿ ರಿಪೀಟ್ ಆಗಿದೆ.

ಸುದೀಪ್ ಅಭಿಮಾನಿಗಳೇ ಅಷ್ಟು ಕೆಟ್ಟದಾಗಿ ಮಾತಾಡಿರುವಾಗ, ನಾವು ಹೇಳಿ ಕೇಳಿ ದರ್ಶನ್ ಅಭಿಮಾನಿಗಳು, ನಾವು ಸುಮ್ಮನೆ ಇರ್ತೀವಾ ಅನ್ನೋ ರೀತಿ, ದರ್ಶನ್ ಅಭಿಮಾನಿಗಳು ಅಹೋರಾತ್ರ ಅವರ ಮೇಲೆ ಮುಗಿಬಿದ್ದಿದ್ದಾರೆ. ನಿನ್ನನ್ನು ಬಿಡೋದಿಲ್ಲ ಮುಗಿಸುತ್ತೇವೆ ಅನ್ನೋ ಬೆದರಿಕೆ ಗಳಿಂದ ಹಿಡಿದು ತಮ್ಮ ಟ್ರೇಡ್ ಮಾರ್ಕ್ ಅಶ್ಲೀಲ ಪದಗಳಿಂದ ಅಹೋರಾತ್ರ ಅವರಿಗೆ ಕಾಲ್ ಮಾಡಿ, ಸೋಷಿಯಲ್ ಮೀಡಿಯಾ ಗಳಲ್ಲಿ   ಹಾಕಿ ಅಹೋರಾತ್ರ ಅವರನ್ನು ಅಹೋರಾತ್ರಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಕಲಹದ ಬೆಂಕಿಯನ್ನು ನಂದಿಸುವ ಕೆಲಸ ಮಾಡ್ತಾ ಯಾರೂ ಮಾಡ್ತಾ ಇಲ್ಲ. ಈಗ ಮತ್ತೆ ಅಹೋರಾತ್ರ ಅವರು ಸುದೀಪ್ ಅಭಿಮಾನಿ ಗಳಿಗೆ ಕೊಟ್ಟ ಡೋಸ್ ಅನ್ನೇ ದರ್ಶನ್ ಅಭಿಮಾನಿಗಳಿಗೂ ವಿಡಿಯೋ ಮೇಲೆ ವಿಡಿಯೋ ಮಾಡಿ ಕೊಡ್ತಾ ಇದ್ದಾರೆ.

ಆದರೆ, ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಅಭಿಮಾನಿಗಳು ಎನಿಸಿಕೊಂಡವರು ತಮ್ಮ ನಟ ಏನೇ ಮಾಡಿದರೂ, ಏನೇ ಹೇಳಿದ್ರೂ ಅದನ್ನ ಸಮರ್ಥನೆ ಮಾಡಿಕೊಂಡು ಅವರ ವಿರುದ್ಧ ಮಾತನಾಡುವ ಈ ಸಂಪ್ರದಾಯ ನಿಜಕ್ಕೂ ಸರಿಯಾದ ಬೆಳವಣಿಗೆ ಅಲ್ಲ. ನಿಜವಾದ ಅಭಿಮಾನಿ ತನ್ನ ನಟನ ಸರಿ, ತಪ್ಪುಗಳನ್ನು ವಿಶ್ಲೇಷಣೆ ಮಾಡಿ ಅದಕ್ಕೆ ತಕ್ಕಂತೆ ತನ್ನ ಅಭಿಮಾನ ತೋರಿಸುತ್ತಾನೆ. ಆದರೆ, ಇಲ್ಲಿ ಮಾತ್ರ ತಮ್ಮ ನೆಚ್ಚಿನ ನಟ ಹೇಳಿದ್ದೇ ಸರಿ ಅಂತ ಎದ್ದು ಬಿದ್ದು ಅಹೋರಾತ್ರ ಅವರನ್ನು
ನಿಂದಿಸುತ್ತಿರುವ ದರ್ಶನ್ ಅಭಿಮಾನಿಗಳ ‘ಬೇಶರಮ್ ರಂಗ್’ ಎದ್ದು ಕಾಣುತ್ತಿರೋದಂತೂ ಸತ್ಯ.

ಲೂಸ್ ಟಾಕ್
ಬಾಯ್ಕಾಟ್ ಬಾಯ್ (ಕಾಲ್ಪನಿಕ ಸಂದರ್ಶನ)
ಏನ್ರಪ್ಪಾ ಇದು, ದೀಪಿಕಾ ಪಡುಕೋಣೆ ಬಿಕಿನಿ ಕಲರ್ ಬಗ್ಗೆ ಇಷ್ಟೊಂದ್ ಗಲಾಟೆ ಮಾಡ್ತಾ ಇದ್ದೀರಾ?
-ಮತ್ತೆ? ಕೋಣೆ ಒಳಗೆ ಮಾಡೋದನ್ನೆ ಈ ಪಡುಕೋಣೆ, ಕ್ಯಾಮೆರಾ ಮುಂದೆ ಮಾಡಿದ್ರೆ, ಇನ್ನೇನ್ ಮಾಡೋದು ನಾವು. ಅದರಲ್ಲೂ ಕೇಸರಿ ಬಿಕಿನಿ ಹಾಕ್ಕೊಂಡು, ಅದೂ ಶಾರೂಖ್ ಖಾನ್ ಜೊತೆ,

ಸರಿ, ಈಗೇನು, ದೀಪಿಕಾ ಪಡುಕೋಣೆ ಬಿಕಿನಿ ಹಾಕಿದ್ದು ತಪ್ಪು ಅಂತಾನಾ?

-ಅಯ್ಯೋ, ಅಯ್ಯೋ ಹಂಗೆ ತಪ್ಪು ತಿಳ್ಕೊಬೇಡ್ರೀ, ಬಿಕಿನಿ ಹಾಕ್ಬೇಡಿ ಅಂತ ನಾವೆಲ್ಲಿ ಹೇಳಿದ್ವಿ? ಕೇಸರಿ ಕಲರ್ ಬಿಕಿನಿ ಬೇಡ ಅಂತ ಅಷ್ಟೇ. ದೀಪಿಕಾ ಮೈ ತುಂಬಾ ಬಟ್ಟೆ ಹಾಕ್ಕೊಬೇಕು ಅಂತ ಹೇಳುವಷ್ಟು ದಡ್ಡರಲ್ಲ ನಾವು.

ಆಹಾಹ, ನಿಜವಾದ ಬೇಶರಮ್ ರಂಗ್ ಅಂದ್ರೆ ನಿಮ್ಮದು ಕಣ್ರೀ, ಸರಿ, ಅಕ್ಷಯ್ ಕುಮಾರ್ ಇದೇ ಕೇಸರಿ ಬಿಕಿನಿ ಹಾಕಿದ ಕತ್ರಿನಾ ಜೊತೆ ರೊಮ್ಯಾ ಮಾಡುವಾಗ ನೀವು ಸುಮ್ಮನೇ ಇದ್ರಲ್ಲ 
-ನೋಡಿ ಅವರು ಅಕ್ಷಯ್ ಕುಮಾರ್, ಅಕ್ಷಯ್ ಖಾನ್ ಅಲ್ಲ, ಅದಕ್ಕೆ ಅವರಿಗೆ ಗ್ರೀನ್ ಸಿಗ್ನಲ್ ಕೊಟ್ವಿ.

ಅಯ್ಯೋ, ನಿಮಗೆ ಗ್ರೀನ್ ಕಂಡ್ರೆ ಆಗಲ್ವಲ್ರೀ, ಅದೆಂಗೆ ಗ್ರೀನ್ ಸಿಗ್ನಲ್ ಕೊಟ್ರಿ? ಹೋಗ್ಲಿ, ಜನ ನಿಮ್ ಮಾತು ಕೇಳಿ ಪಠಾಣ್ ಸಿನಿಮಾನ ಬಾಯ್ಕಾಟ್ ಮಾಡ್ತಾರೆ ಅಂತ ನಿಮಗನ್ನಿಸುತ್ತಾ?
-ಮಾಡಿದ್ರೆ ಖುಷಿ. ಇಂದ್ರೆ ಆಪರೇಷನ್ ವಿಫಲ

ನಿಮ್ಮ ನಿಲುವನ್ನು ವಿರೋಧಿಸೋರು, ಕೇಸರಿ ವಿಷಯದಲ್ಲಿ ನೀವು ಮಾತಾಡ್ತಾ ಇರೋದು ಸರಿ ಇಲ್ಲ ಅಂತ ‘ಪಾನ್ ಪರಾಗ್’ ಹಾಕ್ಕೊಂಡು ನಿಮ್ಮನ್ನ ಉಗೀತಾ ಇದಾರಲ್ಲ?
-ಹೌದು ಅದೊಂಥರಾ ಆಪರೇಷನ್ ‘ವಿಮಲ’

ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್ಗೆ ಅಪ್ಲೈ ಮಾಡೋದು ಅಂತ ತೀರ್ಮಾನ ಮಾಡಿದ್ರು. ಹಂಗೆ ಮಾಡಿದ್ರು. ಕೋರ್ಟ್‌ನಲ್ಲಿ ಜಸ್ಟ್ ತುಂಬಾ ಸಂಭಾವಿತರು. ಹಾಗಾಗಿ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಜೊತೆಯಾಗಿ ಬದುಕೋಕೆ ಸಲಹೆ ನೀಡಿದ್ರು.

ನೋ ಯೂಸ್, ಖೇಮು, ಖೇಮುಶ್ರೀ ಇಬ್ರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜq ಇವರಿಬ್ಬರಿಗೂ ಡೈವೋರ್ಸ್ ಕೋಡೋಕೆ ಅನುಮತಿ ಕೊಟ್ರು, ಈಗ ವಿಷಯ ಜೀವನಾಂಶಕ್ಕೆ ಬಂತು. ಖೇಮುಶ್ರೀ ‘ನಂಗೆ
ತಿಂಗಳಿಗೆ ೨೦ ಸಾವಿರ ರುಪಾಯಿ ಜೀವನಾಂಶ ಬೇಕು’ ಅಂತ ಪಟ್ಟು ಹಿಡಿದು ಕೂತಳು. ಖೇಮು ‘ನನ್ ಕೈಲಿ ಸಾಧ್ಯಾನೇ ಇಲ್ಲ’ ಅಂತ ಕೂತ. ಕೊನೆಗೆ ಖೇಮುನ ಒಟ್ಟಾರೆ ಇನ್ಕಮ, ಖೇಮುಶ್ರೀಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ಜq ತೀರ್ಪು ಕೊಟ್ಟರು. ‘ಎಲ್ಲ ದಾಖಲೆಗಳನ್ನು ನೋಡಿ, ಖೇಮುಶ್ರೀಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿ ತಿಂಗಳು ೨೦ ಸಾವಿರ
ರುಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ’ ಎಂದರು.

ಅದನ್ನು ಕೇಳಿದ ಖೇಮು ಫುಲ್ ಖುಷಿಯಾಗಿ ಹೇಳಿದ ‘ನಿಮ್ದು ಭಾಳಾ ದೊಡ್ ಮನಸು ಸ್ವಾಮಿ, ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಅಲ್ಪ ಸ್ವಲ್ಪ ದುಡ್ ಕೊಡೋಕೆ ಟ್ರೈ ಮಾಡ್ತೀನಿ’

ಲೈನ್ ಮ್ಯಾನ್

ನಟ ಅಭಿಷೇಕ್ ಅಂಬರೀಷ್ ಇಷ್ಟು ದಿನ ಅವಿವಾಹಿತ.

-ನಾಳೆ ಅವಿವಾ ಬಿದ್ದಪ್ಪ ಜೊತೆ ಮದುವೆ ಆದಮೇಲೂ ‘ಅವಿವಾ’ಹಿತ

ರಜೆ ಕಳೆಯೋಕೆ ಅಂತ Hill station ಗೆ ಹೋಗಿ ಅಲ್ಲಿ ಆರೋಗ್ಯ ಕೆಟ್ಟರೆ

-ಅದು Ill station

ಹೆಂಡತಿ ಗಂಡನಿಗೆ ತುಂಬಾ ಕಿರುಕುಳ ಕೊಡ್ತಾ ಇದ್ರೆ ಅವಳು

-ಮಿಸ್-ಸ್ಟ್ರೆಸ್ 

ಬಿಜೆಪಿಯವರು ಹೇಳೋ ಮಾತು- ಕೇಸರಿಬಾತ್ ಎಎಪಿಯವರು ಹೇಳೋ ಮಾತು- ಕೇಜ್ರಿಬಾತ್ ಹಿಂದಿ ಮಾತಾಡೋಕೆ ಬರದೇ ಇರೋರೆ ಭಾರತೀಯರಲ್ಲ, ವಿದೇಶಕ್ಕೆ ಹೋಗಿ-ಬಿಜೆಪಿ ಸಚಿವ -ಹಂಗಾದ್ರೆ, ನಮ್ಮೂರಲ್ಲಿ ಗೋಲ್ ಗಪ್ಪ ಮಾರ್ತಾ ಇರೋರೆಲ್ಲ, ಮನೆಯಿಂದ ಬರುವಾಗ ಫಾರಿನ್ನಿಗ್ ಹೋಗ್ತಾ ಇದ್ದೀವಿ ಅಂತ ಹೇಳಿ ಬಂದಿರ್ತಾರಾ?

ಐಪಿಎಲ್ ನಲ್ಲಿ Pan’ India star  ಯಾರು?

-ರಿಯಾನ್ ‘ಪರಾಗ್’ 
ಬಾಲಿವುಡ್ ಖಾನ್‌ಗಳು ಇನ್ನೊಬ್ಬರಿಗೆ ಹೇಳೋ ಕಿವಿ ಮಾತನ್ನ ಏನಂತಾರೆ?

-ಕಾನ್ ಕೀ ಬಾತ್
‘ನಮ್ ಹೊಲದಲ್ಲಿ ೩ ಸಲ ಬೋರ್ ಹಾಕಿಸಿದೆ, ಆದ್ರೂ ನೀರ್ ಬೀಳಲಿಲ್ಲ, ಇನ್ನೊಂದ್ಸಲ ಹಾಕಿಸ್ಬೇಕು’
-‘೩ ಸಲ ಹಾಕ್ಸಿದ್ ಮೇಲೂ ನಿಮಗೆ ಬೋರ್ ಆಗಿಲ್ವಾ’
ಕೆಲವರಿಗೆ ಎಲ್ಲಾ ಹೇಳಿದ್ರೂ ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು
-ಕುರುಡರ ಜೊತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?
ಯಾರಿಗೂ ಗೊತ್ತಾಗದ ಹಾಗೆ ‘ಮೆಲ್ಲಗೆ’ ಟೇಬಲ್ ಕೆಳಗಿಂದ ಹುಡುಗಿ ಕಾಲು ಟಚ್ ಮಾಡೋನು
-‘ಜೆಂಟಲ್’ ಮ್ಯಾನ್