Friday, 18th October 2024

ಮಹಿಳೆಯರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ

ವಿಜಯಪುರ : ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಕುಟುಂಬ, ತನ್ನ ವೃತ್ತಿ, ತನ್ನ ಹವ್ಯಾಸದಲ್ಲಿ ಅವಳೊಬ್ಬಳು ನಾಯಕಿಯೇ. ಇಂದಿನ ಯುಗದಲ್ಲಿ ಮಹಿಳೆ ಹಲವಾರು ವಲಯಗಳಲ್ಲಿ ಮುಂದುವರೆದಿದ್ದು ಪಂಚಾಯಿತಿ ಮಟ್ಟದಿಂದ ಹಿಡಿದು ಪ್ರಧಾನಿಯಾಗುವವರೆಗೆ ಮುಂದುವರೆದಿದ್ದಾಳೆ, ಬೆಳೆದಿದ್ದಾಳೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಒಂದು ವೇದಿಕೆ ಕಲ್ಪಿಸುವ ಸಲುವಾಗಿಯೇ ಕಾಂಗ್ರೆಸ್ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ್ ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪ್ರಿಯಾಂಕ ಗಾಂಧಿಯವರು ಬರುತ್ತಿದ್ದು, ರಾಜ್ಯಾದ್ಯಂತ ಹಲವಾರು ವಲಯಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಹಿಳೆಯರು ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಚೀಟಿ ಹಾಕಬಹುದು ಎಂದರು.

ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರಣಾಳಿಕೆ ಮಾಡುತ್ತಿದ್ದು, ಇದಕ್ಕೆ ಎಲ್ಲ ಮಹಿಳೆಯರು ಸಲಹೆ ಸೂಚನೆ ನೀಡಬಹುದು ಎಂದರು. ನಮ್ಮ ಜಿಲ್ಲೆಯಿಂದಲೂ ಹಲವಾರು ನಾಯಕಿಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದೆ ವೇಳೆ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ನಮ್ಮ ಜಿಲ್ಲೆಯಿಂದ 3 ಸಾವಿರ ನಾಯಕಿ ಗುಣಧರ್ಮ ಹೊಂದಿರುವ ಮಹಿಳೆಯರನ್ನು ಗುರುತಿಸಿದ್ದು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ 6 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಯಾರಿಗಾದರೂ ಸರಿ ಮಹಿಳೆಯರಿಗೆ ಟಿಕೆಟ್ ನೀಡಿ ಅಂತ ನಮ್ಮ ಜಿಲ್ಲೆಯಿಂದ ಮನವಿ ಮಾಡಿದ್ದೇವೆ. ಬಸವನ ಬಾಗೇವಾಡಿಯಿಂದ ನಾನೂ ಆಕಾಂಕ್ಷಿಯಾಗಿದ್ದು ಎಂದು ವಿದ್ಯಾರಾಣಿ ತುಂಗಳ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ್, ಮಹಿಳಾ ಜಿಲ್ಲಾ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ,ಅರ್ಚನಾ ಚವ್ಹಾಣ್ ಉಪಸ್ಥಿತರಿದ್ದರು.