Friday, 25th October 2024

ಜೆ.ಪಿ.ನಡ್ಡಾ ನಾಳೆ ರಾಜ್ಯ ಪ್ರವಾಸ

J P Nadda

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಾಳೆ (ಶನಿವಾರ) ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಅಂದು ಬೆಳಗ್ಗೆ ದೆಹಲಿಯಿಂದ ಕಲಬುರಗಿಗೆ ಆಗಮಿಸುವ ಅವರು ಬಳಿಕ ವಿಜಯಪುರದಲ್ಲಿ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಈ ಸಂದರ್ಭ ದಲ್ಲಿ ಹಾಜರಿರುವರು.

ಮಧ್ಯಾಹ್ನ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಅಭಿಯಾನ ಉದ್ಘಾಟಿಸುವರು. ಮನೆಮನೆಗೆ ಭೇಟಿ, ಕರಪತ್ರ ವಿತರಣೆ, ಗೋಡೆ ಬರಹ, ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನದಲ್ಲೂ ಭಾಗವಹಿಸುವರು.

ಬಳಿಕ ಸಿಂಧಗಿಗೆ ತೆರಳುವ ಅವರು ಅಲ್ಲಿ ಆರ್.ಡಿ.ಕಾಲೇಜು ಮುಂಭಾಗದ ಚೌಧರಿ ಲೇಔಟ್‍ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.  ನಂತರ ಕಲಬುರಗಿಯಿಂದ ದೆಹಲಿಗೆ ನಡ್ಡಾ ಅವರು ಹಿಂತಿರುಗಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ತಿಳಿಸಿದ್ದಾರೆ.