Saturday, 26th October 2024

ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಿ ಇಲ್ಲವೇ ಬೃಹತ್ ಹೋರಾಟ ಎದುರಿಸಿ

ರೂಟ್ಸ್ ಫಾರ್ ಪ್ರೀಡಂ ಕರ್ನಾಟಕ ಸಂಘಟನೆಯಿ0ದ ಬೈಕ್ ರ‍್ಯಾಲಿ ಮೂಲಕ ಎಚ್ಚರಿಕೆ

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ೨೯೮೪ ಮಂದಿಗೆ ಜೀತದಾಳುಗಳಿಗೆ ಜಿಲ್ಲಾಡಳಿತದ ವತಿಯಿಂದ ಜೀತ ವಿಮುಕ್ತಿ ಪತ್ರ ಸಿಕ್ಕಿದ್ದರೂ ಕೂಡ ಈವರೆಗೆ ಅವರಿಗೆ ಪುನರ್ವಸತಿ ಕಲ್ಪಿಸದೆ ಸರಕಾರ ನಿರ್ಲಕ್ಷö್ಯ ತೋರಿದೆ ಎಂದು ದೂರಿಸುವ ರೂಟ್ಸ್ ಫಾರ್ ಪ್ರೀಡಂ ಕರ್ನಾಟಕ ಮತ್ತು ಜೈಭೀಮ್ ಜೀವಿಕ ಸಂಘಟನೆ ಚಿಕ್ಕಬಳ್ಳಾಪುರ ಘಟಕ ಬೃಹತ್ ಬೈಕ್ ರ‍್ಯಾಲಿಯ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಗಣರಾಜ್ಯೋತ್ಸವದ ದಿನವಾದ ಗುರುವಾರ ಮಧ್ಯಾಹ್ನ ನಗರದ ಅಂಬೇಡ್ಕರ್ ವೃತ್ತದಿಂದ ಹೊರಟ ಬೈಕ್ ರ‍್ಯಾಲಿಯ ಮೆರವಣಿಗೆ ಎಂಜಿರಸ್ತೆ ಮೂಲಕ ಕೃಷಿ ಮಾರುಕಟ್ಟೆ ವರೆಗೆ ಸಾಗುತ್ತಾ ಜೀತ ಬೇಡ ಭೂಮಿ ಬೇಕು, ಜೀತಗಾರರಿಗೆ ಪುನರ್ವಸತಿ ಕಲ್ಪಿಸಿ ಇಲ್ಲವೇ ಹೋರಾಟ ಎದುರಿಸಿ, ಜೈಭೀಮ್, ಅಂಬೇಡ್ಕರ್‌ಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಜೈಬೀಮ್ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಭೆ ಸೇರಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರೂಟ್ಸ್ ಫಾರ್ ಪ್ರೀಡಂ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಗೋಪಾಲ್ ಮಾತನಾಡಿ ಗಣರಾ ಜ್ಯೋತ್ಸವ ಅಂಗವಾಗಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳ ಲಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಸರಕಾರಗಳು ನಡೆಯುತ್ತಿವೆ.ಜಿಲ್ಲೆಯಲ್ಲಿ ಜೀತವಿಮುಕ್ತಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ಮತ್ತು ಸರಕಾರ ವಿಫಲವಾಗಿವೆ.ಸರಕಾರದಿಂದ ಈವರೆಗೆ ಇವರಿಗೆ ಯಾವ ಸೌಲಭ್ಯವೂ ಸಿಕ್ಕಿಲ್ಲ.ಈ ಬಗ್ಗೆ ನಮ್ಮ ಸಂಘಟನೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಹೀಗಾಗಿಯೇ ನಾವು ರ‍್ಯಾಲಿಯನ್ನು ಆಯೋಜಿಸಿದ್ದೇವೆ.

ನಮ್ಮ ಸಂಘಟನೆಯಿ0ದ ೧೨೬೪ ಜೀತದಾಳುಗಳನ್ನು ಗುರ್ತಿಸಿ ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರೂ ಏನೂ ಮಾಡಿಲ್ಲ. ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಜಾಗೃತೆ ವಹಿಸಿ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ರೂಪಿಸಿ ಜಡ್ಡುಗಟ್ಟಿದ ವ್ಯವಸ್ಥೆಗೆ ಚಳಿ ಬಿಡಿಸುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೀವಿಕ ರತ್ನಮ್ಮ ಮಾತನಾಡಿ ಸಂವಿಧಾನದ ಆಶಯದಂತೆ ನಾಗರೀಕರ ಹಕ್ಕುಗಳನ್ನು ಕಾಪಾಡುವುದು ಸರಕಾರದ ಆದ್ಯಕರ್ತವ್ಯವಾಗಿದೆ.ಜೀತ ವಿಮುಕ್ತರಿಗೆ ಪುನರ್ವಸತಿ ಕಲ್ಪಿಸದ ಕಾರಣ ಅವರು ಅನಿವಾರ್ಯವಾಗಿ ಜೀತದಾಳುಗಳಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾರು ಕಾರಣ ಎಂದರೆ ನಮ್ಮನ್ನಾಳುವ ವ್ಯವಸ್ಥೆಯೇ ಆಗಿದೆ.ಜಿಲ್ಲೆಯಲ್ಲಿ ಬಿಡುಗಡೆ ಆಗಿರುವ ೧೨೬೪ ಜೀತದಾಳುಗಳಿಗೆ ಕೂಡಲೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು. ರೂಟ್ ಸಂಸ್ಥೆ ರಚನೆ ಮಾಡಿರುವ ಮಹಿಳಾ ಸ್ವಸಹಾಯ ಸಂಸ್ಥೆಗಳಿಗೆ ನಿಗಮದಿಂದ ಸಹಾಯಧನ ನೀಡಬೇಕು. ಜೀತ ವಿಮುಕ್ತಿ ಪತ್ರ ದೊರೆತಿರುವ ೨೯೮೪ ಮಂದಿ ಜೀತದಾಳುಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂಧಣಿ ಮಾಡಿಕೊಳ್ಳಬೇಕು.೨೦೧೩ರಲ್ಲಿ ಬಿಡುಗಡೆ ಆಗಿರುವ ೯೨೩ ಜೀತದಾಳುಗಳಿಗೆ ೮೦ ಸಾವಿರ ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು.

ಬೈಕ್ ರ‍್ಯಾಲಿಯಲ್ಲಿ ಜೀವಿಕ ಜಿಲ್ಲಾ ಸಂಘಟನೆಯ ಕೃಷ್ಣಪ್ಪ,ಚಂದ್ರಪ್ಪ,ಮಧು,ರೂಪ,ಶಿವಣ್ಣ, ಅ0ಬರೀಶ್ ಮತ್ತಿತರರು ಇದ್ದರು.