Monday, 16th September 2024

ಅಂಕಪಟ್ಟಿ ಕೊಡಲು ವಿಳಂಬ: ಪ್ರಾಂಶುಪಾಲರ ಬೆಂಕಿ ಹಚ್ಚಿಹತ್ಯೆ

ಇಂದೋರ್​: ಅಂಕಪಟ್ಟಿ ಕೊಡಲು ವಿಳಂಬ ಮಾಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತ ಶರ್ಮಾ ಮೇಲೆ ಮಾಜಿ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ (24) ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ವೇಳೆ, ವಿಮುಕ್ತಾರ ದೇಹ ಶೇ. 90ರಷ್ಟು ಸುಟ್ಟ ಗಾಯಗಳಾಗಿತ್ತು. ಕೂಡಲೇ ಅವರನ್ನು ಚೋಯಿತ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ವಿಮುಕ್ತ ಶನಿವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಸಹೋದರ ಅರವಿಂದ್ ತಿವಾರಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇಂದೋರ್ ಆಡಳಿತವು ಅಶುತೋಷ್ ಶ್ರೀವಾಸ್ತವ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಮೂಲಕ ವಿಚಾರಣೆ ಪ್ರಾರಂಭಿಸಿದೆ.