Thursday, 19th September 2024

ಸಂತ್ರಸ್ತರಿಗೆ ಕ್ಲೈಮ್ ಪಾವತಿ: ಎಲ್‌ಐಸಿಯಿಂದ ಹಲವು ರಿಯಾಯಿತಿ

ಮುಂಬೈ: ಒಡಿಶಾದ ಬಾಲಸೋರ್ ರೈಲು ದುರಂತದ ಸಂತ್ರಸ್ತರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಭಾರತೀಯ ಜೀವ ವಿಮಾ ನಿಗಮ ಹಲವು ನಿಯಮಗಳ ಸಡಿಲಿಕೆಗಳನ್ನು ಪ್ರಕಟಿಸಿದೆ.

ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ, ಸಂತ್ರಸ್ತರ ಸಂಬಂಧಿಕರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಸಡಿಲಿಕೆಗಳನ್ನು ಘೋಷಿಸಿದರು.

“ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಿಂದ ನಾವು ತೀವ್ರ ದುಃಖಿತ ರಾಗಿದ್ದೇವೆ. ಎಲ್‌ಐಸಿ ಸಂತ್ರಸ್ತರಿಗೆ ಬೆಂಬಲ ನೀಡಲು ಬದ್ಧವಾಗಿದೆ ಮತ್ತು ಹಣಕಾಸಿನ ಪರಿಹಾರವನ್ನು ಒದಗಿಸಲು ಕ್ಲೈಮ್ ಪಾವತಿಯನ್ನು ತ್ವರಿತಗೊಳಿಸುತ್ತದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಎಲ್‌ಐಸಿ ಪಾಲಿಸಿಗಳ ಹಕ್ಕುದಾರರ ಕಷ್ಟಗಳನ್ನು ತಗ್ಗಿಸಲು ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಸಹ ನಿಗಮವು ಅನೇಕ ರಿಯಾಯಿತಿಗಳನ್ನು ನೀಡಿದೆ.

ಕ್ಲೈಮ್-ಸಂಬಂಧಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮತ್ತು ಹಕ್ಕುದಾರರಿಗೆ ಸಹಾಯವನ್ನು ಒದಗಿಸಲು ಕಾರ್ಪೊರೇಷನ್ ವಿಭಾಗೀಯ ಮತ್ತು ಶಾಖೆಯ ಮಟ್ಟದಲ್ಲಿ ವಿಶೇಷ ಸಹಾಯ ಕೇಂದ್ರ ಮತ್ತು ಸಹಾಯವಾಣಿ ಕೇಂದ್ರವನ್ನು (022-68276827) ಸ್ಥಾಪಿಸಿದೆ.

ಇಂಡಿಯನ್ ರೈಲ್ವೆ ಕೇಟರಿಂಗ್ ಆಯಂಡ್ ಟೂರಿಸಮ್ ಕಾರ್ಪೊರೇಷನ್ (ಐಆರ್‌ಸಿಟಿಸಿ) ತನ್ನ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ವಿಮೆ ಆಯ್ಕೆ ಮಾಡಿಕೊಂಡವರಿಗೆ ರೂ. 10 ಲಕ್ಷದವರೆಗೆ ವಿಮಾ ರಕ್ಷಣೆ ಒದಗಿಸುತ್ತದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೃತರಿಗೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು. ಐಆರ್‌ಸಿಟಿಸಿಯಲ್ಲಿ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ತೆಗೆದುಕೊಳ್ಳುವ ಪ್ರಯಾಣ ವಿಮೆಗೆ ಐಆರ್‌ಸಿಟಿಸಿ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.