Friday, 20th September 2024

ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಸುರೇಶ್​ ಅಂಗಡಿ ಅಂತ್ಯಕ್ರಿಯೆ

ನವದೆಹಲಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಲಿಂಗಾಯತ ಸಂಪ್ರದಾಯದಂತೆ ದೆಹಲಿಯಲ್ಲಿ ನೆರವೇರಿತು.

ಕರೊನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್​ ಅಂಗಡಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಮೃತಪಟ್ಟರು. ದೆಹಲಿಯ ದ್ವಾರಕಾ ಸೆಕ್ಟರ್​ 24ರಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಹಾಗೂ ಕೋವಿಡ್​ ನಿಯಮದಂತೆ ನೆರವೇರಿಸ ಲಾಯಿತು.

ಅಂತ್ಯಕ್ರಿಯೆಯನ್ನು ಬೆಳಗಾವಿ ನಿವಾಸದಿಂದಲೇ ಆನ್​ಲೈನ್​ ಲೈವ್​ ಮೂಲಕ ಅವರ ತಾಯಿ ಸೋಮವ್ವ ವೀಕ್ಷಿಸುತ್ತ ಕಣ್ಣೀರಿಡು ತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸಚಿವರ ಹಿರಿಯ ಮಗಳು-ಮೊಮ್ಮಗಳು ಸೇರಿದಂತೆ ಕುಟುಂಬಸ್ಥರು ಗುರುವಾರ ಬೆಳಗ್ಗೆ ದೆಹಲಿಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಸಚಿವ ಜಗದೀಶ ಶೆಟ್ಟರ್​, ಡಿಸಿಎಂ ಲಕ್ಷ್ಮಣ್​ ಸವದಿ, ಅಣ್ಣಾ ಸಾಹೇಬ್​ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.