Friday, 25th October 2024

ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪನೆ: 12 ವರ್ಷಗಳ ನಂತರ ಚಪ್ಪಲಿ ಧರಿಸಿದ ರೈತ…!

ನಿಜಾಮಾಬಾದ್: ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೇ ಸುಮಾರು 12 ವರ್ಷಗಳ ನಂತರ ರೈತರೊಬ್ಬರು ಕಾಲಿಗೆ ಚಪ್ಪಲಿ ಹಾಕಿದ್ದಾರೆ.

ಉತ್ತಮ ಬೆಲೆಯಿಲ್ಲದೆ ಅರಿಶಿನ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಪಡೆಯಲು ರಾಜ್ಯದಲ್ಲಿ ಮಂಡಳಿ ಸ್ಥಾಪಿಸಬೇಕು ಎಂದು ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ಮಂಡಲದ ಪಾಲೆಂ ಗ್ರಾಮದ ರೈತ ಮುತ್ಯಾಲ ಮನೋಹರ ರೆಡ್ಡಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ಮುತ್ಯಾಲ ಮನೋಹರರೆಡ್ಡಿ ಅವರು ನವೆಂಬರ್ 4, 2011 ರಿಂದ ಚಪ್ಪಲಿ ಧರಿಸದಿರಲು ನಿರ್ಧರಿಸಿದರು. ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರಗಳನ್ನು ನೀಡಿದ್ದಾರೆ.

2013ರಲ್ಲಿ ಆರ್ಮೂರ್‌ನಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ತೆರಳಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಆದ್ರೆ, ಇತ್ತೀಚೆಗೆ ಪ್ರಧಾನಿ ಮೋದಿಯವರು ಅರಿಶಿನ ಮಂಡಳಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಬಳಿಕ ಮನೋಹರ್ ರೆಡ್ಡಿ ಅವರು  ನಿಜಾಮಾಬಾದ್ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಚಪ್ಪಲಿ ಧರಿಸಿದರು. ಈ ವೇಳೆ ಬಹುದಿನಗಳ ಅವರ ಕನಸು ನನಸಾಗಿದ್ದಕ್ಕೆ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ತೆಲಂಗಾಣ ರಾಜ್ಯದಲ್ಲಿ ಅರಿಶಿನ ಬೆಳೆಯ ಹೆಸರು ಹೇಳಿದರೆ ನಿಜಾಮಾಬಾದ್ ಜಿಲ್ಲೆ ನೆನಪಾಗುತ್ತದೆ. ದಶಕಗಳಿಂದ ಇಲ್ಲಿನ ರೈತರು ಅರಿಶಿನ ಕೃಷಿ ಮಾಡುವ ಮೂಲಕ ವಿಶೇಷ ಮನ್ನಣೆ ಗಳಿಸಿದ್ದಾರೆ.