Friday, 20th September 2024

ಮಾರತ್ತಹಳ್ಳಿ ಸಮೀಪ ಬೆಂಕಿ ಅವಘಡ

ಬೆಂಗಳೂರು: ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಮೂರಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಬೆಂಕಿಯ ಕೆನ್ನಾಲಿಗೆಗೆ ಕಟ್ಟಡದಲ್ಲಿದ್ದ ಬಟ್ಟೆ ಅಂಗಡಿ ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಟ್ಟಡದ ಮುಂದೆ ಇದ್ದ ತೆಂಗಿನ ಮರ, ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್​​ಫಾರ್ಮರ್ ಕೂಡ ಬೆಂಕಿಗಾಹುತಿ ಆಗಿವೆ. ಪಕ್ಕದ ಕಟ್ಟಡಕ್ಕೂ ಬೆಂಕಿ ಆವರಿಸಿ ಮೂರ್ನಾಲ್ಕು ಅಂಗಡಿಗೂ ತಗುಲಿದೆ.

ಬೆಂಕಿ ಅವಘಡಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ.

ಅಂಗಡಿ ಪಕ್ಕದಲ್ಲೇ ಇದ್ದ ಟ್ರಾನ್ಸ್​​ಫಾರ್ಮರ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಪಕ್ಕದ ಕಟ್ಟಡಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಇನ್ನೋರ್ವನನ್ನು ಕಟ್ಟಡಕ್ಕೆ ಏಣಿ ಹಾಕಿ ಕೆಳಕ್ಕೆ ಇಳಿಸಿಕೊಳ್ಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದ್ದವು. ಈ ವೇಳೆ ಓರ್ವ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಂಗಡಿಯಲ್ಲಿದ್ದ ಬಟ್ಟೆ ಸುಟ್ಟು ಕರಕಲಾಗಿದೆ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಏಣಿ ಮೂಲಕ ಮೊದಲ ಮಹಡಿಗೆ ಎಂಟ್ರಿ ಕೊಟ್ಟ ಸಿಬ್ಬಂದಿ ಹೊಗೆ ಮಧ್ಯೆ ಬಿಎ (ಬ್ರೀತಿಂಗ್ ಅಪರೇಟ್​​​) ಧರಿಸಿ ಕಟ್ಟಡದೊಳಗೆ ಪ್ರವೇಶಿಸಿದ್ದಾರೆ. ಉಸಿರಾಟ ಸಲಕರಣೆ ಧರಿಸಿ ಕಟ್ಟಡದ ತುದಿಯಲ್ಲಿ ಕುಳಿತು ಬೆಂಕಿ ನಂದಿಸಿದ್ದಾರೆ.