Friday, 20th September 2024

ಪೋಕ್ಸೋ ಪ್ರಕರಣ: ಎಲ್ಲವನ್ನು ಎದುರಿಸೋಣ ಎಂದ ಬಿಎಸ್ ಯಡಿಯೂರಪ್ಪ

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಉಪಕಾರ ಮಾಡಿದ್ರೆ ನನ್ನ ವಿರುದ್ಧ ಹೀಗೆ ಮಾಡಿದ್ದಾರೆ ಎಂದು ತಾವು ನಿರಪರಾಧಿ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು.

ತಾಯಿ- ಮಗಳು ಹಲವು ಬಾರಿ ಬಂದು ಹೋಗುತ್ತಿದ್ದರು. ಅವರನ್ನು ಮನೆಯ ಒಳಗೆ ಕರೆಸಿ ಸಮಸ್ಯೆ ಕೇಳಿದ್ದೇನೆ. ಈ ವೇಳೆ ತಮಗೆ ಅನ್ಯಾಯವಾಗಿದೆ ಎಂದಿದ್ದರು. ಆಮೇಲೆ ನನ್ನ ಮೇಲೆ ಏನೇನೋ ಮಾತನಾಡಲು ಶುರು ಮಾಡಿದರು.

ಕಮಿಷನರ್‌ಗೆ ಕರೆ ಮಾಡಿ ಅವರನ್ನು ಕಳುಹಿಸಿಕೊಟ್ಟೆ” ಎಂದಿದ್ದಾರೆ. ಆದರೆ, ಈಗ ಅವರು ನನ್ನ ವಿರುದ್ಧವೆ ಏನೋ ಮಾಡುತ್ತಿದ್ದಾರೆ. ಹೆಣ್ಮಗಳು ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಆರೋಪ ನಿರಾಧಾರವಾಗಿದೆ. ಇರಲಿ, ಎಲ್ಲವನ್ನು ಎದುರಿಸೋಣ. ಇದು ರಾಜಕೀಯ ಪ್ರೇರಿತ ಎಂದು ಹೇಳಲು ಇಷ್ಟ ಪಡುವುದಿಲ್ಲ. ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಮಾರ್ಚ್ ೧೪ರ ಗುರುವಾರ ತಡರಾತ್ರಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ ಪರಮೇಶ್ವರ್, “ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ನಿನ್ನೆ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಇದರನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸಲು ಸಾಧ್ಯವಿಲ್ಲ. ಇದು ಒಬ್ಬ ಮಾಜಿ ಮುಖ್ಯಮಂತ್ರಿ ವಿಷಯಕ್ಕೆ ಸಂಬಂಧಿಸಿ ದ್ದಾಗಿದೆ. ಇದು ಬಹಳ ಸೂಕ್ಷ್ಮ ವಿಷಯವಾಗಿದೆ. ಮಹಿಳೆಗೆ ರಕ್ಷಣೆ ಅಗತ್ಯ ಬಿದ್ದರೆ ಕೊಡುತ್ತೇವೆ” ಎಂದಿದ್ದಾರೆ.

ಇದು ಒಬ್ಬ ಮಾಜಿ ಸಿಎಂಗೆ ಸಂಬಂಧಿಸಿದ ವಿಷಯ. ಎಚ್ಚರಿಕೆಯಿಂದ ಮಾತನಾಡಬೇಕು” ಎಂದು ಹೇಳಿದ್ದಾರೆ.

ಫೆಬ್ರುವರಿ 2 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಯಡಿಯೂರಪ್ಪ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ದೂರು ನೀಡಿದ್ದಾರೆ.