Friday, 18th October 2024

ಮೈತ್ರಿಕೂಟದ ನಾಯಕರು ಸೇರಿ ಪ್ರಧಾನಿ ಆಯ್ಕೆ: ಜೈರಾಮ್‌ ರಮೇಶ್‌

ಚಂಡೀಗಢ: ‘ಭಾರತದ ಚುನಾವಣೆಯು ಸೌಂದರ್ಯ ಸ್ಪರ್ಧೆಯಲ್ಲ. ದೇಶದಲ್ಲಿ ಚುನಾವಣೆಯು ರಾಜಕೀಯ ಪಕ್ಷ ಕೇಂದ್ರಿತವೇ ಹೊರತು ವ್ಯಕ್ತಿಕೇಂದ್ರಿತವಲ್ಲ. ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬರುತ್ತದೆ. ಮೈತ್ರಿಕೂಟದ ನಾಯಕರು ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ ಎಂದು ಜೈರಾಮ್‌ ರಮೇಶ್‌ ಹೇಳಿದರು.

ಆಯ್ಕೆಯಾದವರು ಐದು ವರ್ಷಗಳವರೆಗೂ ಅದೇ ಸ್ಥಾನದಲ್ಲಿ ಇರಲಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಶುಕ್ರವಾರ ಹೇಳಿದರು.

ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ದೇಶವು ಐದು ವರ್ಷಗಳಲ್ಲಿ ಐವರು ಪ್ರಧಾನಿಗಳನ್ನು ನೋಡಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಚುನಾವಣಾ ರ್‍ಯಾಲಿಗಳಲ್ಲಿ ನೀಡುತ್ತಿರುವ ಹೇಳಿಕೆಗೆ ಜೈರಾಮ್‌ ರಮೇಶ್‌ ಅವರು ಪ್ರತಿಕ್ರಿಯೆ ನೀಡಿದರು.

‘ಭಾರತ ಪ್ರಕಾಶಿಸುತ್ತಿದೆ’ ಎಂಬ ಪ್ರಚಾರದ ನಡುವೆಯೂ 2004ರಲ್ಲಿ ಯುಪಿಎ ಸರ್ಕಾರ ರಚಿಸಿತ್ತು. ಫಲಿತಾಂಶ ಬಂದ ಮೂರು ದಿನಗಳಲ್ಲಿ ಡಾ.ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಘೋಷಿಸಲಾಗಿತ್ತು. ಈ ಬಾರಿ ಮೂರು ದಿನವೂ ಬೇಕಾಗುವುದಿಲ್ಲ’ ಎಂದರು.