Thursday, 19th September 2024

ತಿರುಮಲೆಗೆ ತೆರಳುವ ದ್ವಿಚಕ್ರ ವಾಹನಗಳಿಗೆ ನಿರ್ಬಂಧ

ತಿರುಪತಿ: ತಿಮ್ಮಪ್ಪ ಭಕ್ತರ ಸುರಕ್ಷತೆ ದೃಷ್ಟಿಯಿಂದ ತಿರುಮಲೆಗೆ ತೆರಳುವ ದ್ವಿಚಕ್ರ ವಾಹನಗಳ ಮೇಲೆ ತಿರುಪತಿ-ತಿರುಮಲ ದೇವಸ್ಥಾನ ಸಮಿತಿ(ಟಿಟಿಡಿ)ನಿರ್ಬಂಧ ಹೇರಿದೆ.

ಆ.12ರ ಸೋಮವಾರದಿಂದ ಸೆಪ್ಟೆಂಬರ್ 30 ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ.

ತಿರುಮಲೆಯಲ್ಲಿ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಬರುವ ಎರಡೂ ಘಾಟ್ ರಸ್ತೆಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಾಡು ಪ್ರಾಣಿಗಳ ಸಂತಾನವೃದ್ಧಿ ಹೆಚ್ಚಾಗಿರುತ್ತದೆ. ಇವು ಮಾರ್ಗದ ಮೇಲೆ ಸಂಚರಿಸುತ್ತಿರುತ್ತವೆ. ಭಕ್ತಾದಿಗಳು ಹಾಗೂ ವನ್ಯಜೀವಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಅರಣ್ಯ ಉಪ ಸಂರಕ್ಷಣಾ ಧಿಕಾರಿ ಕಚೇರಿ ತಿಳಿಸಿದೆ.

ಇತ್ತೀಚೆಗೆ ತಿರುಮಲೆಯಿಂದ ತಿರುಪತಿಗೆ ಬರುತ್ತಿದ್ದ ದ್ವಿಚಕ್ರವಾಹನ ಆಯತಪ್ಪಿ ಬಸ್​ ಕೆಳಗೆ ಬಿದ್ದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದರು.