Thursday, 24th October 2024

Shivaji statue Collapsed: ತಾವೇ ಲೋಕಾರ್ಪಣೆಗೊಳಿಸಿದ್ದ ಶಿವಾಜಿ ಪ್ರತಿಮೆ ಕುಸಿತ; ಕ್ಷಮೆಯಾಚಿಸಿದ ಪ್ರಧಾನಿ ಮೋದಿ

Shivaji statue collapsed

ಮುಂಬೈ: ಲೋಕಾರ್ಪಣೆಗೊಂಡು ಒಂದೇ ವರ್ಷ ಪೂರೈಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು(Shivaji statue Collapsed) ಬಿದ್ದಿರುವ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi)ಕ್ಷಮೆಯಾಚಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ದೇವರು ಛತ್ರಪತಿ ಶಿವಾಜಿ ಮಹಾರಾಜರಲ್ಲಿ ತಲೆಬಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ ಎಂಬುದು ನಮಗೆ ಕೇವಲ ಹೆಸರಲ್ಲ… ಇಂದು ನಾನು ನನ್ನ ದೇವರು ಛತ್ರಪತಿ ಶಿವಾಜಿ ಮಹಾರಾಜರಲ್ಲಿ ತಲೆಬಾಗಿ ಕ್ಷಮೆಯಾಚಿಸುತ್ತೇನೆ. ನಮ್ಮ ಮೌಲ್ಯಗಳು ವಿಭಿನ್ನವಾಗಿವೆ, ಭಾರತ ಮಾತೆಯ ಮಹಾನ್ ಮಗ, ಈ ನೆಲದ ಮಗ ವೀರ್ ಸಾವರ್ಕರ್ ಅವರನ್ನು ನಿಂದಿಸುವ ಮತ್ತು ಅವಮಾನಿಸುವಂತಹ ಜನರಲ್ಲ ನಾವು. ಅವರು ಕ್ಷಮೆ ಕೇಳಲು ಸಿದ್ಧರಿಲ್ಲ, ನ್ಯಾಯಾಲಯದ ಮೊರೆ ಹೋಗಿ ಹೋರಾಟಕ್ಕೆ ಸಿದ್ಧರಿದ್ದಾರೆ ಎಂದು ಪ್ರತಿಪಕ್ಷಗಳಿಗೆ ಟಾಂಗ್‌ ಕೊಟ್ಟರು.

ಏನಿದು ಪ್ರಕರಣ?

ಕಳೆದ ವರ್ಷ ಡಿಸೆಂಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಯ ದಿನಾಚರಣೆಯ ಅಂಗವಾಗಿ ಸಿಂಧುದುರ್ಗದಲ್ಲಿ ಮೊದಲ ಬಾರಿಗೆ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಪ್ರತಿಮೆಯು ಮರಾಠಾ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆಯ ಪರಂಪರೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ ಮತ್ತು ಆಧುನಿಕ ಭಾರತೀಯ ನೌಕಾಪಡೆಯೊಂದಿಗೆ ಅದರ ಐತಿಹಾಸಿಕ ಸಂಬಂಧವನ್ನು ಹೊಂದಿದೆ.   35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಇನ್ನು ಈ ಘಟನೆ ತನಿಖೆಗಾಗಿ ಭಾರತೀಯ ನೌಕಾಪಡೆಯ ನೇತೃತ್ವದ ಜಂಟಿ ತಾಂತ್ರಿಕ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ತಾಂತ್ರಿಕ ತಜ್ಞರ ಪ್ರತಿನಿಧಿಗಳೊಂದಿಗೆ ರಚಿಸಲಾಗುತ್ತಿದೆ. ಸಿಂಧುದುರ್ಗದ ಮಾಲ್ವಾನ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಪತನಗೊಂಡ ಪ್ರತಿಮೆಯ ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ಅವರನ್ನು ಗುರುವಾರ ರಾತ್ರಿ ಕೊಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಈ ಘಟನೆ ನಡೆದಿದ್ದು, ಬಳಿಕ ಪಾಟೀಲ್ ಪರಾರಿಯಾಗಿದ್ದರು, ಇದು ಭಾರೀ ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ಕೋಲಾಹಲವನ್ನು ಹುಟ್ಟುಹಾಕಿತ್ತು. ಇನ್ನು ಪ್ರತಿಮೆಯ ನಿರ್ಮಿಸಿದ ಶಿಲ್ಪಿ ಜಯದೀಪ್ ಆಪ್ಟೆ ಇನ್ನೂ ಪೊಲೀಸ್ ಕಣ್ತಪ್ಪಿಸಿ ಭುಗತಗೊಂಡಿದ್ದಾರೆ. ಕೊಲ್ಹಾಪುರ ಪೊಲೀಸರು, ಸಿಂಧುದುರ್ಗ ಪೊಲೀಸರು ಮತ್ತು ಥಾಣೆ ಪೊಲೀಸರ ಕನಿಷ್ಠ ಆರು ತನಿಖಾ ತಂಡಗಳು ಪಾಟೀಲ್‌ ಮತ್ತು ಆಪ್ಟೆಯ ಪತ್ತೆಗಾಗಿ ಬಲೆ ಬೀಸಿದ್ದವು. ಭಾರೀ ಹುಡುಕಾಟದ ಬಳಿಕ ನಿನ್ನೆ ರಾತ್ರಿ ಪಾಟೀಲ್ ಸಿಕ್ಕಿಬಿದ್ದಿದ್ದಾರೆ.

https://youtu.be/KxEmYDNpbk4?si=4pVnaXu8ayhJSLh7

ಬಿಜೆಪಿ ವಿರುದ್ಧ ಕಿಡಿ

ಇನ್ನು ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿರುವ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕಿಡಿ ಕಾರಿವೆ. ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರತಿಮೆ ನಿರ್ಮಾಣದ ವಿಷಯದಲ್ಲಿ ಆಡಳಿತಾರೂಢ ಸರ್ಕಾರದ ಭ್ರಷ್ಟಾಚಾರ ಎಸಗಿದೆ. ಅದರ ಪರಿಣಾಮವಾಗಿಯೇ ಇಂತಹ ದುರಂತ ಸಂಭವಿಸಿದೆ ಎಂದು ದೂರಿದೆ. ಅಲ್ಲದೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆಗೆ ಒತ್ತಾಯಿಸಿದೆ.

https://x.com/ANI/status/1829458383646367942