Thursday, 19th September 2024

Kannanjaru Movie: ‘ಕಣಂಜಾರಿ’ನ ಪ್ರೇಮ ಶೃಂಗಾರಕ್ಕೆ ಮನಸೋತ ಫ್ಯಾನ್ಸ್

Kannanjaru Movie

ಬೆಂಗಳೂರು: ‘ಕಣಂಜಾರು’ ಚಿತ್ರವು (Kannanjaru Movie) ‘ಪ್ರೇಮ ಶೃಂಗಾರದ’ ಮೂಲಕ ಗಮನ ಸೆಳೆಯುತ್ತಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಆರ್‌.ಪಿ. ಫಿಲ್ಮ್ಸ್ ಬ್ಯಾನರ್ ಅಡಿ ಆರ್.ಬಾಲಚಂದ್ರ ಅವರು ನಿರ್ಮಿಸಿ, ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಸಿನಿಮಾವು, ಕ್ಯಾಚಿ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿದ್ದು, ಸದ್ಯ ರೊಮ್ಯಾಂಟಿಕ್ ಹಾಡಿನ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ಸಂಚಲನ ಮೂಡಿಸಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದೆ. ಇದೀಗ ಸಿನಿಮಾ ತಂಡ ಅದ್ಭುತವಾದ ಹಾಡನ್ನು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ.

ಅಂದಹಾಗೆ ಕಣಂಜಾರು ಚಿತ್ರದ ಸುಂದರವಾದ ಹಾಡನ್ನು ಸ್ಯಾಂಡಲ್‌ ವುಡ್‌ನ ಅನೇಕ ಗಣ್ಯರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಾಟೇರ, ಭೀಮ ಸೇರಿ ಅನೇಕ ಹಿಟ್ ಸಿನಿಮಾಗಳಿಗೆ ಡೈಲಾಗ್ ಬರೆದಿರುವ ಖ್ಯಾತ ಡೈಲಾಗ್ ರೈಟರ್ ಮಾಸ್ತಿ, ನಟರಾದ ನಕುಲ್ ಗೌಡ, ಶ್ರೇಯಸ್ ಮಂಜು, ವಿಕ್ಕಿ ಹಾಗೂ ನಿರ್ದೇಶಕ ಮಹೇಶ್ ಗೌಡ, ನಟಿಯರಾದ ಕಾರುಣ್ಯ ರಾಮ್, ಅನುಷಾ ರೈ ಸೇರಿ ಅನೇಕ ಗಣ್ಯರು ಕಣಂಜಾರು ಸಿನಿಮಾದ ಹಾಡನ್ನು ರಿಲೀಸ್ ಮಾಡಿ ಸಿನಿಮಾಗೆ ಸಾಥ್ ನೀಡಿದರು.

Kannanjaru Movie

ಕಣಂಜಾರು ಸಿನಿಮಾದಲ್ಲಿ ನಾಯಕ ಆರ್.ಬಾಲಚಂದ್ರನ್ ಜತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಪೂರ್ವ ಸಿನಿಮಾ ಖ್ಯಾತಿಯ ನಟಿ ಅಪೂರ್ವ ನಾಯಕಿಯಾಗಿ ಮಿಂಚಿದ್ದಾರೆ. ಈ ಹಾಡಿನಲ್ಲಿ ಅಪೂರ್ವ ಸಿಕ್ಕಪಟ್ಟೆ ಗ್ಲಾಮರಾಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ‘ಪ್ರೇಮ ಶೃಂಗಾರ…’ ಸಾಲುಗಳಿರುವ ಈ ಪ್ರೇಮ ಗೀತೆ ನಿಜಕ್ಕೂ ರವಿಚಂದ್ರನ್ ಅವರ ಸಿನಿಮಾಗಳ ಹಾಡುಗಳನ್ನು ನೆನಪಿಸುತ್ತಿದೆ. ಅಂದಹಾಗೆ ಈ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆಯಿದೆ, ಸಂತೋಷ್ ನಾಯಕ್ ಸಾಹಿತ್ಯ ರಚಿಸಿದ್ದು, ಮೋಹನ್ ಮಾಸ್ಟರ್ ಕೊರಿಯೋಗ್ರಫಿ ಇದೆ.

ಹಾಡು ರಿಲೀಸ್ ಬಳಿಕ ಮಾತನಾಡಿದ ನಾಯಕ, ನಿರ್ದೇಶಕ ಬಾಲಚಂದ್ರ, ‘ಯೂಟ್ಯೂಬ್ ನಲ್ಲಿ ರಿಲೀಸ್ ಮಾಡೋಣ ಅಂತ ಅಂದುಕೊಂಡಿದ್ದೆ. ಆದರೆ ಕೆಲವರು ಅದ್ಭುತವಾಗಿದೆ ಅಂತ ಹೇಳಿದ್ರು, ಹಾಗಾಗಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿದ್ದೀವಿ. ನನ್ನನ್ನು ಹೊಸಬ ಅಂತ ಅಂದುಕೊಳ್ಳದೆ ನಾಯಕಿ ಅಪೂರ್ವಾ ಕೂಡ ಒಪ್ಪಿಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ತುಂಬಾ ಸಹಾಯ ಮಾಡಿದ್ದಾರೆ. ಇತ್ತೀಚಿಗಷ್ಟೇ ತರುಣ್ ಸುಧೀರ್ ಮತ್ತು ಸೋನಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಈ ಹಾಡನ್ನು ಅರ್ಪಿಸುತ್ತಿದ್ದೇನೆ’ ಎಂದರು.

ನಾಯಕಿ ಅಪೂರ್ವ ಮಾತನಾಡಿ, ‘ಸಿನಿಮಾದ ಟೀಸರ್ ರಿಲೀಸ್ ಆದ್ಮೇಲೆ ಅದ್ಭುತವಾದ ರೆಸ್ಪಾನ್ಸ್ ಬಂದಿದೆ. ಈ ಸಿನಿಮಾದ ಕತೆ ತುಂಬಾ ಚೆನ್ನಾಗಿದೆ. ಹಾಗಾಗಿ ಈ ಸಿನಿಮಾವನ್ನು ನಾನು ಒಪ್ಪಿಕೊಂಡೆ. ನಾನು ಮೊದಲು ಕಥೆಗೆ ಆದ್ಯತೆ ನೀಡುತ್ತೇನೆ. ಜನ ಸಿನಿಮಾ ನೋಡಲ್ಲ ಅಂತ ಹೇಳ್ತಾರೆ, ಆದ್ರೆ ಒಳ್ಳೆ ಸಿನಿಮಾ ಬಂದ್ರೆ ಖಂಡಿತ ಜನ ಥಿಯೇಟರಿಗೆ ಬರ್ತಾರೆ. ಈ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದರು. ಸದ್ಯ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಕಣಂಜಾರು ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.