Thursday, 19th September 2024

Kannada Film Industry: ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ದೌರ್ಜನ್ಯ; ತನಿಖಾ ಸಮಿತಿ ರಚಿಸಲು ಸಿಎಂಗೆ ಕನ್ನಡದ ಪ್ರಮುಖ ಕಲಾವಿದರ ಪತ್ರ

Kannada Film Industry

ಬೆಂಗಳೂರು: ಕೇರಳ ಚಿತ್ರರಂಗದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಬೆಳಕಿಗೆ ತರಲು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಹೇಮಾ ಕಮಿಟಿ (Hema committee report) ರಚಿಸಲಾಗಿತ್ತು. ಕಮಿಟಿ ಸಲ್ಲಿಸಿದ್ದ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಇದೀಗ ಕನ್ನಡ ಚಿತ್ರರಂಗದಲ್ಲೂ (Kannada Film Industry) ಲೈಂಗಿಕ ಕಿರುಕುಳ ಸೇರಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ಫಿಲ್ಮ್‌ ಇಂಡಸ್ಟ್ರಿ ಫಾರ್‌ ರೈಟ್ಸ್‌ ಆ್ಯಂಡ್‌ ಈಕ್ವಾಲಿಟಿ (FIRE) ಸಂಸ್ಥೆಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದ್ದು, ಇದಕ್ಕೆ ಪ್ರಮುಖ ನಟರಾದ ಸುದೀಪ್‌, ನಟಿಯರಾದ ರಮ್ಯಾ, ಐಂದ್ರಿತಾ ರೇ, ಶ್ರುತಿ ಹರಿಹರನ್‌ ಮತ್ತಿತರ  153 ಕಲಾವಿದರು ಸಹಿ ಮಾಡುವ ಬೆಂಬಲ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ಹಿಂಸೆಯ ಸಮಸ್ಯೆಗಳು ಸೇರಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಸಂಸ್ಥೆಯು (FILM INDUSTRY RIGHTS & EQUALITY) ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತಿದೆ. ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರೆ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಂತರ, ಕರ್ನಾಟಕ ಸರ್ಕಾರವು ಕನ್ನಡ ಚಲನಚಿತ್ರೋದ್ಯಮದಲ್ಲಿನ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ಕನ್ನಡ ಚಲನಚಿತ್ರೋದ್ಯಮದಲ್ಲಿ ದೇಶದ ಮೊದಲ ಚಲನಚಿತ್ರೋದ್ಯಮದ ಆಂತರಿಕ ದೂರುಗಳ ಸಮಿತಿಯನ್ನು (ICC) ಸ್ಥಾಪಿಸುವಲ್ಲಿ ನಮ್ಮ ಫೈರ್ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಹಾಗೆಯೇ, ಲೈಂಗಿಕ ಕಿರುಕುಳದ ಸಂತ್ರಸ್ತರನ್ನು (2017 ರಿಂದ ಈ ವರೆಗೂ) ನಮ್ಮ ಸಂಸ್ಥೆ ಬೆಂಬಲಿಸುತ್ತಲೇ ಬಂದಿದೆ. ಸದ್ಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾದ ಅಂಶವೆಂದು ನಾವು ಭಾವಿಸುತ್ತೇವೆ. ಈ ಹಿನ್ನಲೆಯಲ್ಲಿ, ಈ ಕೆಳಕಂಡ ಅಂಶಗಳನ್ನು ಪರಿಶೀಲಿಸುವುದಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ನಾವು ಕರ್ನಾಟಕ ಸರ್ಕಾರವನ್ನು ಕೇಳುತ್ತಿದ್ದೇವೆ:

  • ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದಲ್ಲಿ (ಕೆಎಫ್‌ಐ) ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ತನಿಖೆ ಮಾಡುವುದು.
  • ಚಿತ್ರೋದ್ಯಮದಲ್ಲಿ ಎಲ್ಲಾ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಸಲು ಅದಕ್ಕೆ ತಕ್ಕ ಪಾಲಿಸಿಗಳನ್ನು ರಚಿಸುವುದು.

ಈ ಸಮಿತಿಯ ನೇತೃತ್ವ ವಹಿಸಲು ತಮ್ಮ ವೃತ್ತಿಜೀವನದುದ್ದಕ್ಕೂ ಲಿಂಗ ಸಮಾನತೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ನಾವು ಸೂಚಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಮ್ಮ ನೆರವು ಅಗತ್ಯವಾದಲ್ಲಿ, FIRE ಸಂಸ್ಥೆಯು ಸಹಾಯ ನೀಡಲು ಸಿದ್ಧವಾಗಿದೆ.

ಈ ವರದಿಯನ್ನು 3 ತಿಂಗಳುಗಳ ಒಳಗಾಗಿ ಸಂಪೂರ್ಣಗೊಳಿಸಬೇಕೆಂದು FIRE ಸಂಸ್ಥೆಯು ವಿನಂತಿಸಿಕೊಳ್ಳುತ್ತಿದೆ. ಅದರ ವಿವರಗಳನ್ನು ಮತ್ತು ಫಲಿತಾಂಶವನ್ನು ಶೀಘ್ರವಾಗಿ ಸಾರ್ವಜನಿಕಗೊಳಿಸಬೇಕೆಂದು ನಾವು ಬಯಸುತ್ತೇವೆ. ಈ ತನಿಖೆಗೆ ಅಗತ್ಯವಾದಲ್ಲಿ ಸಹಾಯ ಮಾಡಲು ಅಥವಾ ಸಂಪರ್ಕ ಕೊಂಡಿಯಾಗಿರಲು ಫೈರ್ ಸಂಸ್ಥೆ ಸಿದ್ಧವಾಗಿದೆ ಎಂದು ತಿಳಿಸಿದೆ.

ಕೆಎಫ್‌ಐ ಸೇರಿದಂತೆ ಹಲವಾರು ಸಂಸ್ಥೆಗಳ ಜನರು ಫೈರ್‌ ಸಂಸ್ಥೆಯು ಬೇಡಿಕೆಗೆ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ಅವರ ಹೆಸರುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ