Friday, 20th September 2024

BJP Raita Morcha: ಸೆ.9ರಂದು ಧನಶೆಟ್ಟಿ ಮಂಗಲ ಕಾರ್ಯಾಲಯ

ಇಂಡಿ: 984 ಕೋಟಿ ರೂ.ಗಳಲ್ಲಿ ಮಂಜೂರು ಆಗಿರುವ ಮಹಾರಾಷ್ಟ್ರದ ಮುರುಮದಿಂದ ವಿಜಯಪುರದ ವರೆಗಿನ ರಾಷ್ಟ್ರೀಯ ಹೆದ್ದಾರಿ ಭೂಮಿಪೂಜೆ ಸಮಾರಂಭ ಸೆ.9 ರಂದು ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹಾಗೂ ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆದ್ದಾರಿ ಸಚಿವ ನಿತೀನ ಗಡ್ಕರಿ ಅವರ ನೇತ್ರತ್ವದಲ್ಲಿ ದೇಶಾದ್ಯಂತ ಉತ್ತಮ ಹೆದ್ದಾರಿಗಳು ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರ ಪರಿಶ್ರಮದಿಂದ 9 ಹೆದ್ದಾರಿಗಳು ಬಂದಿವೆ. ಮಹಾರಾಷ್ಟ್ರದ ಮುರುಮದಿಂದ ಮಾಶ್ಯಾಳ, ಕರಜಗಿ, ಮಣೂರ, ಅಗರಖೇಢ, ಇಂಡಿ, ರೂಗಿ, ಅಥರ್ಗಾ, ನಾಗಠಾಣ ಮಾರ್ಗವಾಗಿ ವಿಜಯಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ಹೆದ್ದಾರಿ ಕಾಮಗಾರಿಯಲ್ಲಿ ಇಂಡಿ,ಅಥರ್ಗಾ,ನಾಗಠಾಣ ಗ್ರಾಮಗಳಲ್ಲಿ ಹೊರವರ್ತೂಲ ರಸ್ತೆಗಳು ಹಾಗೂ ಅಲಿಯಾಬಾದ ಬಳಿ ರೈಲು ಮೇಲ್ಸೇತುವೆ ಒಳಗೊಂಡು ವಿಜಯಪುರದ ಸುಭಾಷಚಂದ್ರ ಬೋಸ್ ವೃತ್‌ದವರೆಗೆ ಒಟ್ಟು ೧೦೨.೩೧೦ ಕಿಮೀ ಉದ್ದದ ಒಟ್ಟು ಬೃಹತ್ ಸೇತುವೆಗಳು, ೧೦ ಕಿರು ಸೇತುವೆಗಳು,೧೭೩ ಕನ್ವರ್ಟ ಗಳನ್ನು ಒಳಗೊಂಡಿದೆ ಎಂದು ಹೇಳಿದರು.‌

ಈ ಕಾರ್ಯಕ್ರಮಕ್ಕೆ ಸಂಸದ ರಮೇಶ ಜಿಗಜಿಣಗಿ ಅವರು ಸೇರಿದಂತೆ ಜಿಲ್ಲೆಯ ಮುಖಂಡರು ಆಗಮಿಸಲಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು, ಸಂಸದ ರಮೇಶ ಜಿಗಜಿಣಗಿ ಅಭಿಮಾನಿ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಒಬಿಸಿ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಬಿಜೆಪಿ ಮುಖಂಡರಾದ ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ಮಂಜು ದೇವರ, ಸಂತೋಷಗೌಡ ಪಾಟೀಲ, ಧರ್ಮು ಮದರಖಂಡಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.