Thursday, 19th September 2024

Gubbi Crime News: ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಕರಿ ಮಾಲೀಕ ಬಲಿ : ಮೊಬೈಲ್ ವಿಡಿಯೋ ಮಾಡಿಟ್ಟು ಆತ್ಮಹತ್ಯೆ

ಗುಬ್ಬಿ: ಪಟ್ಟಣ ಹೊರ ವಲಯದ ಸಿಐಟಿ ಕಾಲೇಜು ಬಳಿ ಇರುವ ಬೇಕರಿ ಮಾಲೀಕ ಬಸವರಾಜು(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿ ಮಾಡಿದ ವಿಡಿಯೋನಲ್ಲಿ ಮೀಟರ್ ಬಡ್ಡಿ ದಂಧೆ, ಕಿರುಕುಳ ಬಗ್ಗೆ ಬಿಗ್ ಟ್ವಿಸ್ಟ್ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಸಿಐಟಿ ಕಾಲೇಜು ಮುಂಭಾಗ ಬೇಕರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಬಸವರಾಜು ಚೆಕ್ ನೀಡಿ ಪಡೆದಿದ್ದ ಸಾಲಕ್ಕೆ ಮೀಟರ್ ಬಡ್ಡಿ ನೀಡುವಂತೆ ಮಾಡಿದ್ದ ಮೀಟರ್ ಬಡ್ಡಿ ನಾಗ ಎಂಬ ವ್ಯಕ್ತಿಯ ಬಗ್ಗೆ ನೇರ ಆರೋಪ ಮಾಡಿ ನನಗೆ ಕಿರುಕುಳ ನೀಡುತ್ತಿರುವ ಬಗ್ಗೆ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ನಂತರ ಬೇಕರಿ ಯಲ್ಲೇ ಆತ್ಮಹತ್ಯೆ ಶರಣಾಗಿರುವ ಘಟನೆ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದೆ.

ನಾನು ಸಾಲ ಎಲ್ಲ ಕೊಟ್ಟಿದ್ದೀನಿ ನಾಗುಗೆ. ಅವನು ಕೊಟ್ಟಿದ್ದ ಚೆಕ್ ವಾಪಸ್ ಕೊಡದೆ ಎದುರಿಸುತ್ತಿದ್ದಾನೆ. ತುಂಬಾ ರೌಡಿಸಂ ಮಾಡುತ್ತಿದ್ದಾನೆ ಮೀಟರ್ ಬಡ್ಡಿ ನಾಗ. ನಂದಿನಿ ಪಾರ್ಲರ್ ನವನು ಓಡಿ ಹೋಗಲು ಇವನೇ ಕಾರಣ. ಯಾವುದೇ ಸಾಲ ಇಲ್ಲದಿದ್ದರೂ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಎಷ್ಟೋ ಜನ ಇವನಿಂದ ಹೆದರಿ ಓಡಿ ಹೋಗಿ ದ್ದಾರೆ. ತುಂಬಾ ರೌಡಿಸಂ ಮಾಡುತ್ತಾನೆ. ನನಗೆ ಅವರು ಗೊತ್ತು ಇವರು ಗೊತ್ತ ಎಂದು ಹೆದರಿಸುತ್ತಾನೆ. ಈತನ ಬಗ್ಗೆ ಹಲವು ಬಾರಿ ಕೇಸ್ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಡಿಯೋದಲ್ಲಿ ಹೇಳಿರುವ ಮೃತನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಜೊತೆಗೆ ಡೆತ್ ನೋಟ್ ಬರೆದು ಹಲವರ ಹೆಸರು ಬರೆದಿರುವ ಮಾಹಿತಿ ಇದ್ದು ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸಿ ಮೀಟರ್ ಬಡ್ಡಿ ದಂಧೆಗೆ ಎಡೆಮುರಿ ಕಟ್ಟುವರೇ ಕಾದು ನೋಡಬೇಕಿದೆ.