Thursday, 19th September 2024

Ganesh Chaturthi: ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಬೆಳಗಾವಿ ಡಿಸಿ ಮೊಹಮ್ಮದ್‌ ರೋಷನ್‌

Ganesh Chaturthi

ಬೆಳಗಾವಿ: ರಾಜ್ಯಾದ್ಯಂತ ಸಂಭ್ರಮದಿಂದ ಗಣೇಶ ಹಬ್ಬವನ್ನು (Ganesh Chaturthi) ಆಚರಸಲಾಗುತ್ತಿದೆ. ಈ ನಡುವೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ (Mohammad Roshan) ಅವರು ಡಿಸಿ ಕಚೇರಿಯಲ್ಲಿ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಪ್ರತಿವರ್ಷದಂತೆ ಡಿಸಿ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗಿದೆ. ಈ ಬಾರಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪತ್ನಿ ಅಂಕಿತಾ, ಪುತ್ರ ಹಾಗೂ ಸಿಬ್ಬಂದಿ ಜತೆ ಪೂಜೆಯನ್ನು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಇರುವ ಗಣಪತಿ‌ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

2015ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾದ ಮೊಹಮ್ಮದ್ ರೋಷನ್ ಅವರು ಜುಲೈನಲ್ಲಿ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೈದರಾಬಾದ್‌ ಮೂಲದ ಇವರು, ಇದಕ್ಕೂ ಮೊದಲು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಿ.ಟೆಕ್‌, ಎಂಬಿಎ, ಎಂಎ ಪದವೀಧರರಾಗಿರುವ ಇವರು ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Ganesh Chaturthi: ಗಣೇಶ ಪ್ರತಿಮೆ ವಿಸರ್ಜನೆಗೆ ಬೆಂಗಳೂರಿನಲ್ಲಿ 41 ಕೆರೆ, 462 ಟ್ಯಾಂಕರ್‌ ನಿಗದಿ

ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಮೊಹಮ್ಮದ್‌ ರೋಷನ್‌ ಅವರು ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದ್ದಾರೆ. ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಪೊಲೀಸ್‌ ಠಾಣೆಗಳಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿ ಗಣೇಶೋತ್ಸವ ಸಂಭ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಡ್ಯಾನ್ಸ್‌!

Ganesh Chaturthi

ಹುಬ್ಬಳ್ಳಿ: ಗಣೇಶ ಚತುರ್ಥಿ ಪ್ರಯುಕ್ತ (Ganesh Chaturthi) ನಗರದ ರಾಣಿ ಚೆನ್ನಮ್ಮ ಮೈದಾನದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ ಮತ್ತು ಪಾಲಿಕೆ ಸದಸ್ಯರೂ ಸಾಥ್ ನೀಡಿದರು.

ಜೋಶಿಯವರ ಗೃಹದಲ್ಲಿ ಗಣೇಶ ಪ್ರತಿಷ್ಠಾಪನೆ

ಗಣೇಶ ಚತುರ್ಥಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ ಅವರ ಹುಬ್ಬಳ್ಳಿಯ ನಿವಾಸದಲ್ಲಿ ಸಹ ಶ್ರೀ ಗಣೇಶನ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಸಚಿವ ಜೋಶಿ ಮತ್ತು ಕುಟುಂಬದ ಸದಸ್ಯರೆಲ್ಲ ಸೇರಿ ಗಣೇಶನ ಪೂಜೆಯಲ್ಲಿ ಭಾಗಿಯಾಗಿ ಭಕ್ತಿ ಮೆರೆದರು.

ಸಚಿವರೇ ಗಣೇಶನ ವಿಗ್ರಹವನ್ನು ಡೋಲು-ವಾದ್ಯ ಮೇಳದೊಂದಿಗೆ ವಾಹನದಲ್ಲಿ ಮೆರವಣಿಗೆ ಮೂಲಕ ತಂದು ನಿವಾಸದಲ್ಲಿ ಪ್ರತಿಷ್ಠಾಪಿಸಿದರು. ಸಚಿವರೇ ಅರ್ಚಕರಾಗಿ ಮಂತ್ರೋಪದೇಶ, ಗಂಧಾಕ್ಷತೆ, ಪುಷ್ಪಾಲಂಕಾರ, ಮಹಾ ಮಂಗಳಾರತಿ ಸಮೇತ ಪೂಜಿಸಿದರು. ಗಣೇಶ ಸ್ತೋತ್ರ ಪಠಿಸಿ ವಿಘ್ನೇಶ್ವರನ ಕೃಪೆಗೆ ಪಾತ್ರರಾದರು.

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಗಣೇಶೋತ್ಸವ ಆಚರಣೆಯಲ್ಲೂ ಸಚಿವರು ಭಾಗಿಯಾಗಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | Sarvasva Song: “ಸರ್ವಸ್ವ” ಹಾಡು ಸೆ.20ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯ

ಮೂರು ದಿನಗಳ ಕಾಲ ರಾಣಿ ಚೆನ್ನಮ್ಮ ಮೈದಾನದಲ್ಲಿ ವಿಜೃಂಭಿಸಲಿರುವ ಗಣೇಶೋತ್ಸವದಲ್ಲಿ ಸರ್ವ ಭಕ್ತರೂ ಪಾಲ್ಗೊಂಡು ವಿಘ್ನ ವಿನಾಶಕ ಗಣೇಶನ ಕೃಪೆಗೆ ಪಾತ್ರರಾಗಬೇಕು ಎಂದು ಇದೇ ವೇಳೆ ಸಚಿವ ಪ್ರಲ್ಹಾದ್‌ ಜೋಶಿ ಕರೆ ಕೊಟ್ಟರು.