Thursday, 19th September 2024

Dulquer Salmaan: ರಾಣಾ ದಗ್ಗುಬಾಟಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್; ಸೆಟ್ಟೇರಿತು ʼಕಾಂತʼ

Dulquer Salmaan

ಹೈದರಾಬಾದ್‌: ಟಾಲಿವುಡ್ ಸ್ಟಾರ್‌ ರಾಣಾ ದಗ್ಗುಬಾಟಿ (Rana Daggubati) ಹಾಗೂ ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ (Dulquer Salmaan) ʼಕಾಂತʼ (Kaantha) ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹೈದರಾಬಾದ್‌ನ ರಾಮ ನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ನಟ ಕಂ ನಿರ್ಮಾಪಕ ವೆಂಕಟೇಶ್ ದಗ್ಗುಬಾಟಿ ‘ಕಾಂತ’ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದರು.

‘ಕಾಂತ’ ಸಿನಿಮಾವನ್ನು ರಾಣಾ ಒಡೆತನ ರಾಣಾಸ್ ಸ್ಪಿರಿಟ್ ಮೀಡಿಯಾ ಹಾಗೂ ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮಂ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ದುಲ್ಕರ್ ಚಿತ್ರ ನಿರ್ಮಾಣದ ಜೊತೆ ನಾಯಕನಾಗಿ ನಟಿಸುತ್ತಿರುವುದು ವಿಶೇಷ. 1950ರ ಮದ್ರಾಸ್ ಬ್ಯಾಕ್ ಡ್ರಾಪ್‌ನಲ್ಲಿ ʼಕಾಂತʼ ಚಿತ್ರದ ಕಥೆ ನಡೆಯಲಿದೆ. ದುಲ್ಕರ್‌ಗೆ ಜೋಡಿಯಾಗಿ ಮೊದಲ ಬಾರಿಗೆ ಭಾಗ್ಯಶ್ರೀ ಬೋರ್ಸೆ ಸಾಥ್ ಕೊಟ್ಟಿದ್ದು, ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ಮಾಪಕ ರಾಣಾ ದಗ್ಗುಬಾಟಿ ಮಾತನಾಡಿ, ʼʼರಾಣಾಸ್ ಸ್ಪಿರಿಟ್ ಮೀಡಿಯಾ ಮತ್ತು ವೇಫೇರರ್ ಫಿಲ್ಮಂ ಜೊತೆಯಾಗಿರುವುದು ʼಕಾಂತʼ ಚಿತ್ರಕ್ಕೆ ಹೊಸ ಆಯಾಮಾ ಸಿಕ್ಕಂತಾಗಿದೆ. ಪ್ರೇಕ್ಷಕರಿಗೆ ಸ್ಪಿರಿಟ್ ಮೀಡಿಯಾ ಕ್ವಾಲಿಟಿ ಸಿನಿಮಾ ನೀಡಲಿದೆ. ಸುರೇಶ್ ಪ್ರೊಡಕ್ಷನ್ 60ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸ್ಪಿರಿಟ್ ಮೀಡಿಯಾದೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಲು ʼಕಾಂತʼ ಅತ್ಯುತ್ತಮ ಚಿತ್ರವಾಗಿದೆʼʼ ಎಂದರು.

ಪ್ರಶಾಂತ್ ಪೊಟ್ಲೂರಿ, ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್ ಮತ್ತು ಜೋಮ್ ವರ್ಗೀಸ್ ʼಕಾಂತʼ ಚಿತ್ರ ನಿರ್ಮಾಣ ಮಾಡುತ್ತಿದ್ದು, ದಾನಿ ಸ್ಯಾಂಚೆಜ್ ಲೋಪೆಜ್ ಛಾಯಾಗ್ರಹ, ಜಾನು ಸಂಗೀತ, ರಾಮಲಿಂಗಂ ಕಲಾ ನಿರ್ದೇಶನ, ಲೆವೆಲ್ಲಿನ್ ಆಂಥೋನಿ ಗೊನ್ಸಾಲ್ವಿಸ್ ಸಂಕಲನ ಚಿತ್ರಕ್ಕಿದೆ. ʼಕಾಂತʼ ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಸದ್ಯ ದುಲ್ಕರ್ ಸಲ್ಮಾನ್ ಅಭಿನಯದ ʼಲಕ್ಕಿ ಭಾಸ್ಕರ್‌ʼ ತೆಲುಗು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಥ್ರಿಲ್ಲರ್‌ ಚಿತ್ರಕ್ಕೆ ವೆಂಕಿ ಅಟ್ಲುರಿ ಅವರ ನಿರ್ದೇಶನವಿದೆ. ದುಲ್ಕರ್ ಸಲ್ಮಾನ್‌ಗೆ ಇದೇ ಮೊದಲ ಬಾರಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಕ್ಟೋಬರ್‌ 31ರಂದು ತೆರೆಗೆ ಬರಲಿದೆ. ಈಗಾಗಲೇ ಚಿತ್ರದ 2 ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ಇದರ ಜೊತೆಗೆ ದುಲ್ಕರ್ ʼಆಕಾಶಮ್‌ ಲೊ ಒಕ ತಾರʼ ಎಂಬ ತೆಲುಗು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ.

ಸದ್ಯ ನಟನೆಗಿಂತ ಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿರುವ ರಾಣಾ ದಗ್ಗುಬಾಟಿ `ವೆಟ್ಟೈಯಾನ್‘ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಜನಿಕಾಂತ್‌, ಅಮಿತಾಭ್‌ ಬಚ್ಚನ್‌, ಓಹಾದ್‌ ಫಾಸಿಲ್‌, ಮಂಜು ವಾರಿಯರ್‌ ಮುಂತಾದ ಘಟಾನುಘಟಿ ಕಲಾವಿದರು ನಟಿಸುತ್ತಿರುವ ಈ ಸಿನಿಮಾವನ್ನು ಟಿ.ಜೆ.ಜ್ಞಾನವೇಲು ನಿರ್ದೇಶಿಸುತ್ತಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಇದು ಅಕ್ಟೋಬರ್‌ 10ರಂದು ತೆರೆಗೆ ಬರಲಿದೆ.

ಈ ಸುದ್ದಿಯನ್ನೂ ಓದಿ: OTT Release: ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ, ವೆಬ್‌ ಸಿರೀಸ್‌? ಇಲ್ಲಿದೆ ವಿಡಿಯೊ ಸಹಿತ ವಿವರ