Friday, 20th September 2024

Maoists Attack: ಪೊಲೀಸ್ ಮಾಹಿತಿದಾರರೆಂಬ ಶಂಕೆಯಲ್ಲಿ ಇಬ್ಬರನ್ನುನೇಣಿಗೇರಿಸಿ ಕೊಂದ ನಕ್ಸಲರು

Maoists Attack

ಬಿಜಾಪುರ: ಪೊಲೀಸರಿಗೆ ಮಾಹಿತಿ ನೀಡುವವರು (Police Informers) ಎಂದು ಶಂಕಿಸಿ ಇಬ್ಬರನ್ನು ಮಾವೋವಾದಿಗಳು (Maoists Attack) ನೇಣು ಬಿಗಿದು ಕೊಂದ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ( Bijapur district of Chattisgarh) ಹಳ್ಳಿಯೊಂದರಲ್ಲಿ ನಡೆದಿದೆ. ಈ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಮಿರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪೆಮಾರ್ಕ ಗ್ರಾಮದಿಂದ ಶಾಲಾ ವಿದ್ಯಾರ್ಥಿ ಸೇರಿದಂತೆ ಮೂವರು ಗ್ರಾಮಸ್ಥರನ್ನು ನಕ್ಸಲೀಯರು ಮಂಗಳವಾರ ಅಪಹರಿಸಿದ್ದಾರೆ. ಅನಂತರ ನಕ್ಸಲೀಯರು ‘ಜನ್ ಅದಾಲತ್’ ನಡೆಸುವ ಮೂಲಕ ಇಬ್ಬರನ್ನು ಮರಕ್ಕೆ ನೇಣು ಹಾಕಿದ್ದಾರೆ. ಆದರೆ ಶಾಲಾ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಿದ್ದಾರೆ.

ನೇಣಿಗೆ ಒಳಗಾದ ಮೃತ ಗ್ರಾಮಸ್ಥರನ್ನು ಮದ್ವಿ ಸುಜಾ ಮತ್ತು ಪೊಡಿಯಂ ಕೋಸ ಎಂದು ಗುರುತಿಸಲಾಗಿದೆ.
ಮಾವೋವಾದಿಗಳ ಭೈರಾಮ್‌ಗಢ ಪ್ರದೇಶ ಸಮಿತಿಯು ಈ ಕೊಲೆಯನ್ನು ಮಾಡಿರುವುದಾಗಿ ಹೇಳಿಕೊಂಡಿದೆ. ಇವರಿಬ್ಬರು ಪೊಲೀಸ್ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅದು ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗುರುವಾರ ನಡೆದ ಘಟನೆಯ ಬಗ್ಗೆ ಎಚ್ಚರಿಕೆ ನೀಡಿದ ಕೂಡಲೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು.

2023ರಲ್ಲೂ ನಡೆದಿತ್ತು ನಾಲ್ವರ ಹತ್ಯೆ

2023ರಲ್ಲಿ ಛತ್ತೀಸ್‌ಗಢದ ಕಂಕೇರ್ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೋರ್ಖಂಡಿ ಗ್ರಾಮದ ನಿವಾಸಿಗಳಾದ ಕುಲ್ಲೆ ಕಟ್ಲಾಮಿ (35), ಮನೋಜ್ ಕೊವಾಚಿ (22) ಮತ್ತು ದುಗ್ಗೆ ಕೊವಾಚಿ (27) ಎಂಬ ಮೂವರನ್ನು ಹಾಗೂ ಬಿಜಾಪುರದಲ್ಲಿ ನಡೆದ ಘಟನೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬನನ್ನು ಮಾವೋವಾದಿಗಳು ಹತ್ಯೆ ಮಾಡಿದ್ದರು.

2020ರಲ್ಲೂ ನಡೆದಿತ್ತು ಇಬ್ಬರ ಹತ್ಯೆ

2020ರಲ್ಲೂ ಮಾವೋವಾದಿಗಳು ಬಿಜಾಪುರ ಜಿಲ್ಲೆಯ ಮಾಜಿ ಉಪ ಸರಪಂಚ್ ಸೇರಿದಂತೆ ಇಬ್ಬರು ಗ್ರಾಮಸ್ಥರು ಕೊಂದಿದ್ದರು. ಜಂಗ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಬರ್ಡೇಲಾ ಗ್ರಾಮದ ಮಾಜಿ ಉಪ ಸರಪಂಚ್ ಧನಿರಾಮ್ ಕೊರ್ಸಾ ಮತ್ತು ಗೊಂಗ್ಲಾ ಗ್ರಾಮದ ಗೋಪಾಲ್ ಕುಡಿಯಮ್ ಮೃತರು. ಮಾವೋವಾದಿಗಳ ಗುಂಪು ಗ್ರಾಮಕ್ಕೆ ಬಂದು ಕೊರ್ಸಾ ಮತ್ತು ಕುಡಿಯಮ್ ಅವರನ್ನು “ಪೊಲೀಸ್ ಮಾಹಿತಿದಾರರು” ಎಂದು ಶಂಕಿಸಿ ಹರಿತವಾದ ಆಯುಧಗಳಿಂದ ಇರಿದು ಕೊಂಡಿದ್ದರು.

Actor Darshan: ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಮತ್ತೊಂದು ದಿನ ನ್ಯಾಯಾಂಗ ಬಂಧನ ವಿಸ್ತರಣೆ

ಮಾವೋವಾದಿಗಳ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆಯಿಂದಾಗಿ ಅವರು ನಿರಂತರವಾಗಿ ಗ್ರಾಮಸ್ಥರ ಮೇಲೆ ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.