Thursday, 19th September 2024

Mandya violence: ಸರ್ಕಾರದಿಂದ ಕೋಮುಗಲಭೆಗಳಿಗೆ ಕುಮ್ಮಕ್ಕು: ವಿಜಯೇಂದ್ರ ಕಿಡಿ

Mandya violence

ಬೆಂಗಳೂರು: ಈ ಭ್ರಷ್ಟ ಸರ್ಕಾರ ಕೋಮುಗಲಭೆಗಳಿಗೆ (Mandya violence) ಕುಮ್ಮಕ್ಕು ಕೊಡುವುದರ ಮೂಲಕ ಗಲಭೆಕೋರರ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಗಲಭೆಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಎಂದು ಆರೋಪಿಸಿದರು.

ನಾಗಮಂಗಲದ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಗಲಭೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಂಗಡಿಗಳನ್ನು ಸುಟ್ಟಿರುವ ಕುರಿತಂತೆ ಮಾಹಿತಿ ಪಡೆದರು. ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸುಟ್ಟು ಹೋದ ಅಂಗಡಿಗಳ ಸಂಬಂಧ ರಾಜ್ಯ ಸರಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋದ ಕುರಿತು ಜನರು ಮಾತನಾಡುತ್ತಿದ್ದಾರೆ ಎಂದರು.

ನಾಗಮಂಗಲದಲ್ಲಿ ಗಣೇಶನ ವಿಗ್ರಹದ ಶಾಂತಿಯುತ ಮೆರವಣಿಗೆ ಸಂದರ್ಭದಲ್ಲಿ ದೇಶದ್ರೋಹಿಗಳಿಂದ ಪೂರ್ವನಿಯೋಜಿತ ಕೃತ್ಯ ನಡೆದಿದೆ. ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ತಳವಾರಿನೊಂದಿಗೆ ಬೀದಿಗೆ ಬಂದು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿದೆ. ವಾಹನಗಳ ಷೋರೂಂ, ಬಟ್ಟೆ ಅಂಗಡಿ ಸುಡಲಾಗಿದೆ. ಇದೆಲ್ಲವೂ ಪೂರ್ವಯೋಜಿತ ದುಷ್ಕೃತ್ಯ ಎಂದು ಆಕ್ಷೇಪಿಸಿದರು.

ಕೈಕಟ್ಟಿ ಮೂಕಪ್ರೇಕ್ಷಕರಾಗಿದ್ದ ಪೊಲೀಸರು
ಇಷ್ಟಾದರೂ ಸಹ ಪೊಲೀಸರು ಕೈಕಟ್ಟಿಕೊಂಡು ಎಲ್ಲವನ್ನೂ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು ಎಂದರೆ, ಆಡಳಿತ ಪಕ್ಷದ ಒತ್ತಡವೇ ಇದಕ್ಕೆ ಕಾರಣ ಎಂದು ಟೀಕಿಸಿದರು. ಹಿಂದೆ ಕೆರೆಗೋಡಿನಲ್ಲಿ ಹನುಮಧ್ವಜವನ್ನು ಇಳಿಸುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯನವರ ನೇತೃತ್ವದ ಹಿಂದೂವಿರೋಧಿ ಕಾಂಗ್ರೆಸ್ ಸರಕಾರದ ನಡವಳಿಕೆ ಪರಿಣಾಮವಾಗಿ ದೇಶದ್ರೋಹಿಗಳು ಅಟ್ಟಹಾಸದಿಂದ ಮೆರೆಯುವಂತಾಗಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಮಂಡ್ಯ ಜಿಲ್ಲೆ ರೈತರ ಹೋರಾಟಕ್ಕೆ ದೇಶಾದ್ಯಂತ ಹೆಸರುವಾಸಿಯಾಗಿದೆ. ಈ ಜಿಲ್ಲೆಯ ಹೆಸರು ಕೋಮು ಗಲಭೆಗಳಿಗಾಗಿ ಚರ್ಚಿತವಾಗುತ್ತಿರುವುದು ದುರದೃಷ್ಟದ ವಿಷಯ ಎಂದರು. ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಇಂಥ ಘಟನೆಗಳು ಜಾಸ್ತಿ ಆಗುತ್ತಿವೆ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು, ಆಗಿರುವ ಸಂಪೂರ್ಣ ನಷ್ಟವನ್ನು ಭರಿಸಬೇಕು. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಲಾಂಗು, ಮಚ್ಚು ಹಿಡಿದ ಅವರು ನಿಮ್ಮ ಮನೆಗೂ ನುಗ್ಗುತ್ತಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸಚಿವರು, ಶಾಸಕರ ಮನೆಗಳಿಗೂ ನುಗ್ಗುವ ದಿನ ದೂರ ಇಲ್ಲ ಎಂದು ತಿಳಿಸಿದರು. ನಿಮ್ಮ ‘420’ ರಾಜಕಾರಣವನ್ನು ಬಿಟ್ಟು ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದು ಅವರು ಒತ್ತಾಯಿಸಿದರು. ಬಂಧಿತ ಹಿಂದುಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ನಷ್ಟಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಪೆಟ್ರೋಲ್ ಬಾಂಬ್ ಎಸೆದು ದುಷ್ಕೃತ್ಯ:ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಪೊಲೀಸರ ಎದುರೇ ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಮತಾಂಧ ಮುಸ್ಲಿಮರು ಕಾನೂನನ್ನು ಕೈಗೆ ತೆಗೆದುಕೊಂಡು ಅಟ್ಟಹಾಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಕಳೆದ ಬಾರಿಯೂ ಇಲ್ಲಿನ ಮಸೀದಿಯಿಂದ ಕಲ್ಲುಗಳನ್ನು ತೂರಲಾಗಿತ್ತು. ಇದೆಲ್ಲವೂ ಗೊತ್ತಿದ್ದರೂ ಭದ್ರತೆ ಕೊಡಬೇಕೆಂಬ ಸಾಮಾನ್ಯಜ್ಞಾನವೇ ಇಲ್ಲದ ಆಡಳಿತ ರಾಜ್ಯದ್ದು. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರೌಡಿಗಳು, ಭಯೋತ್ಪಾದಕರಿಗೆ ಇದು ನಮ್ಮ ಸರಕಾರ ಅನಿಸುತ್ತಿದೆ ಎಂದು ಟೀಕಿಸಿದರು.
ಈ ಹಿಂದೆ ಹನುಮನನ್ನು ವಿಲನ್ ಮಾಡಿದರು. ಈಗ ಗಣೇಶನನ್ನು ಕಂಡರೂ ಇವರಿಗೆ ಆಗುವುದಿಲ್ಲ. ಸಿದ್ದರಾಮಯ್ಯನವರಿಗೆ ಕೇಸರಿ ಕಂಡರೆ ಆಗುವುದಿಲ್ಲ. ಈಗ ಗಣಪತಿ ಮೇಲೂ ಇವರ ವಕ್ರದೃಷ್ಟಿ ಬಿದ್ದಿದೆ ಎಂದು ಆಕ್ಷೇಪಿಸಿದರು.

ಪೆಟ್ರೋಲ್ ಬಾಂಬ್ ಎಸೆಯುವುದು ಸಂಘಟನೆಯೇ?: ಸಿ.ಟಿ.ರವಿ
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಇದೆಲ್ಲವೂ ಪೂರ್ವಯೋಜಿತ ಎಂದರಲ್ಲದೆ, ಸನ್ಮಾನ್ಯ ಗೃಹಸಚಿವರು ಸಂಘಟನೆ ಎಂದು ಹೇಳುವುದಾದರೆ ಪೆಟ್ರೋಲ್ ಬಾಂಬ್ ಹಾಕುವುದು ಸಂಘಟನೆಯೇ? ಕೋಟ್ಯಂತರ ರೂಪಾಯಿಯ ಅಂಗಡಿಗಳನ್ನು ಸುಟ್ಟು ಹಾಕುವುದು ಸಂಘಟನೆಯೇ ಎಂದು ಪ್ರಶ್ನಿಸಿದರು. ಯಾವ ಆಧಾರದಲ್ಲಿ ಇದನ್ನು ಸಂಘಟನೆ ಎನ್ನುತ್ತೀರಿ ಎಂದು ಕೇಳಿದರು.

ಮೆರವಣಿಗೆ ಮೇಲೆ ಕಲ್ಲು ತೂರುವುದು ಸಂಘಟನೆಯೇ? ಗಲಭೆ ಮಾಡಿದವರನ್ನು ಬಂಧಿಸಿ. ಹಿಂದುಗಳನ್ನು ಬಂಧಿಸ್ತೇವೆ, ಮುಸ್ಲಿಮರನ್ನೂ ಬಂಧಿಸುವುದಾಗಿ ಖಾಜಿ ನ್ಯಾಯ ಮಾಡಬೇಡಿ ಎಂದು ಅವರು ಆಗ್ರಹಿಸಿದರು.
ಕಲ್ಲು ತೂರಿದವರು, ಮೆರವಣಿಗೆ ತಡೆದವರು, ಬೆಂಕಿ ಹಾಕಿದವರ ಮೇಲಷ್ಟೇ ಕೇಸು ಹಾಕಿ ಬಂಧಿಸಬೇಕು. ಗಣೇಶೋತ್ಸವದ ಸಂಘಟಕರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆದು ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ನಿಮ್ಮದು ತಾಲಿಬಾನಿಗಳ ಸರಕಾರ; ತಾಲಿಬಾನಿಗಳನ್ನೇ ಬೆಂಬಲಿಸುವುದಾಗಿ ಹೇಳಿ. ಆಗ ನಾವು ನಮ್ಮ ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.

ಈ ಸುದ್ದಿಯನ್ನೂ ಓದಿ | Mandya violence: ನಾಗಮಂಗಲ ಗಲಭೆ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಮಾಜಿ ಸಚಿವ ನಾರಾಯಣ ಗೌಡ, ಮಾಜಿ ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ, ರಾಜ್ಯ ಕಾರ್ಯದರ್ಶಿ ಶರಣ್ ತಳ್ಳಿಕೆರೆ, ಜಿಲ್ಲಾಧ್ಯಕ್ಷ, ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.