Thursday, 19th September 2024

DK Suresh: ನಿಮ್ಮ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಬೈದವರನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ: ಎಚ್‌ಡಿಕೆ, ಅಶೋಕ್‌ಗೆ ಸುರೇಶ್ ಟಾಂಗ್

DK Suresh

ಬೆಂಗಳೂರು: “ನಿಮ್ಮ ಸಮುದಾಯದ ಹಾಗೂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯನ್ನು ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ” ಎಂದು ಕುಮಾರಸ್ವಾಮಿ, ಅಶೋಕ್ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಪರೋಕ್ಷವಾಗಿ ತಿರುಗೇಟು ನೀಡಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಭಾನುವಾರ ಮಾತನಾಡಿದ ಅವರು, “ಮುನಿರತ್ನ ಮಾಡಿರುವ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ನಾಯಕರೇನಾದರೂ ಮಾಡಿದ್ದರೆ, ನಿಮ್ಮ ಮಾತುಗಳು ಯಾವ ರೀತಿ ಇರುತ್ತಿದ್ದವು? ಇದಕ್ಕೆ ರಾಜಕೀಯವನ್ನು ಬೆರೆಸಬೇಡಿ, ಸರಿಯಾಗಿ ಮಾತನಾಡಿ. ನಿಮ್ಮ ಪಕ್ಷ ಇದಕ್ಕೆ ಬೆಂಬಲವಾಗಿ ನಿಂತಿದ್ದೀಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.

“ಕೆಲವು ಮುಖಂಡರು, ವಿರೋಧಪಕ್ಷದ ನಾಯಕರು ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಘಟನೆಯ ಎಲ್ಲಾ ವಿವರಗಳು ತೆರೆದ ಪುಸ್ತಕದಂತೆ ಇರುವಾಗ ಸಮರ್ಥನೆ ಮಾಡಿಕೊಳ್ಳುವುದು ಸರಿಯೇ?” ಎಂದು ಪ್ರಶ್ನಿಸಿದರು.

“ನಾವುಗಳು ಯಾರು ಮುನಿರತ್ನ ಅವರಿಗೆ ಕೆಟ್ಟ ಮಾತುಗಳನ್ನು ಬೈಯಿರಿ ಹಾಗೂ ಕಮಿಷನ್ ತೆಗೆದುಕೊಳ್ಳಿ ಎಂದು ಹೇಳಿರಲಿಲ್ಲ. ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಆಗುವುದಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳು, ಜಾತಿ ಧರ್ಮಗಳನ್ನು ಬಹಳ ಕೀಳಾಗಿ ನೋಡುವಂತಹದ್ದು ಸಹಿಸಲು ಆಗುವುದಿಲ್ಲ” ಎಂದರು.

ರಾಜಕೀಯ ದ್ವೇಷದಿಂದ ಮುನಿರತ್ನ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ಬಗ್ಗೆ ಕೇಳಿದಾಗ, “ದ್ವೇಷಕ್ಕೂ ಮತ್ತು ರಾಜಕೀಯಕ್ಕೂ ಎಲ್ಲಿಯ ಸಂಬಂಧ. ನಾವು ಯಾರೂ ಬೈಯಿರಿ ಎಂದು ಅವರಿಗೆ ಹೇಳಿಲ್ಲ. ದೂರು ಕೊಟ್ಟ ನಂತರ ಘಟನೆಯ ಬಗ್ಗೆ ನಮಗೆ ತಿಳಿಯಿತು. ಪೊಲೀಸರು ಮುನಿರತ್ನಂ ಅವರನ್ನು ಬಂಧಿಸಿದ್ದು, ಮಿಕ್ಕ ಸಂಗತಿಗಳು ವಿಚಾರಣೆ ಬಳಿಕ ತಿಳಿಯುತ್ತವೆ” ಎಂದರು.

ದಿನ ಬೆಳಗಾದರೆ ರಾಜಕೀಯ ಮಾಡಲು ಆಗುತ್ತದೆಯೇ?

ಬಂಧನಕ್ಕೂ ಮುಂಚಿತವಾಗಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮುನಿರತ್ನ ಅವರು ಡಿ.ಕೆ ಸುರೇಶ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಕೇಳಿದಾಗ, “ನೀವೇ (ಮಾಧ್ಯಮದವರು) ಗಮನಿಸಿದಂತೆ ಯಾವ ವಿಚಾರದಲ್ಲೂ ನಾನು ಭಾಗಿಯಾಗುತ್ತಿಲ್ಲ. ಈ ವಿಚಾರಗಳು ಗೊತ್ತೂ ಇಲ್ಲ, ನನಗೆ ಅವಶ್ಯಕತೆಯೂ ಇಲ್ಲ. ಜನರು ತೀರ್ಪು ಕೊಟ್ಟಿರುವುದನ್ನು ಗೌರವಯುತವಾಗಿ ಸ್ವೀಕಾರ ಮಾಡಿದ್ದೇನೆ. ನನ್ನ ಕೈಲಾದಷ್ಟು ಕೆಲಸವನ್ನು ಜನರಿಗಾಗಿ ಮಾಡುತ್ತಿದ್ದೇನೆ. ನಾನು ರಾಜಕೀಯ ನಾಯಕರಿಂದ ದೂರ ಇದ್ದೇನೆ. ಜನರು ಅವರಿಗೆ ಅವಕಾಶ ಕೊಟ್ಟಿದ್ದಾರೆ, ಕೆಲಸ ಮಾಡಲಿ ಎಂದು ನಾವು ಸುಮ್ಮನಿದ್ದೇವೆ. ದಿನ ಬೆಳಗಾದರೆ, ಕೂತರೂ ನಿಂತರು ರಾಜಕೀಯ ಮಾಡಲು ಆಗುತ್ತದೆಯೇ?” ಎಂದರು.

ಈ ಸುದ್ದಿಯನ್ನೂ ಓದಿ | MLA Munirathna: ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸ್​ ಕಸ್ಟಡಿಗೆ

ಸಿನಿಮಾ ನಿರ್ಮಾಣ, ನಿರ್ದೇಶನ ಜೆಡಿಎಸ್, ಬಿಜೆಪಿಗೆ ಬಿಟ್ಟಿದ್ದೇವೆ

“ಸಿನಿಮಾ ನಿರ್ಮಾಣ ಮತ್ತು ನಿರ್ದೇಶನವನ್ನು ಬಿಜೆಪಿ ಮತ್ತು ಜೆಡಿಎಸ್ ಅವರಿಗೆ ಬಿಟ್ಟಿದ್ದೇವೆ. ನಿರ್ಮಾಣ, ಕಟ್, ಆಕ್ಷನ್ ಎಲ್ಲವನ್ನು ಅವರಿಬ್ಬರಿಗೇ ಬಿಟ್ಟಿದ್ದೇವೆ. ಡಿಕೆ ಸಹೋದರರನ್ನು ನೆನೆಸಿಕೊಳ್ಳದಿದ್ದರೆ ರಾಜಕೀಯವಾಗಿ ರಕ್ಷಣೆ ಸಿಗುವುದಿಲ್ಲ, ಮೇಲೆ ಬರಲು ಸಾಧ್ಯವಿಲ್ಲ. ಏನೇ ಮಾಡಿದರು ಡಿ.ಕೆ ಸಹೋದರರನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಎಲ್ಲರೂ ಹವಣಿಸುತ್ತಿರುತ್ತಾರೆ. ಅವರುಗಳ ರಾಜಕೀಯ ಬೆಳವಣಿಗೆಗೆ ಇದು ಸರಿಯೋ ತಪ್ಪು ಎಂಬ ಚರ್ಚೆ ಅವರಿಗೆ ಬಿಟ್ಟಿದ್ದು. ನಾವು ಗೌರವಯುತವಾಗಿ ಎಲ್ಲವನ್ನೂ ಸ್ವೀಕಾರ ಮಾಡುತ್ತೇವೆ. ಹಾಗೇ ಸಮಯ ಬಂದಾಗ ಅದಕ್ಕೆ ಉತ್ತರವನ್ನೂ ಕೊಡುತ್ತೇವೆ” ಎಂದರು.