Friday, 20th September 2024

Arvind Kejriwal: ದಿಲ್ಲಿಯ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ರೇಸ್‌ನಲ್ಲಿದೆ ಹಲವರ ಹೆಸರು

Arvind Kejriwal

ನವದೆಹಲಿ: ಅನೀರಿಕ್ಷಿತ ಬೆಳವಣಿಗೆಯೊಂದರಲ್ಲಿ ಇತ್ತೀಚೆಗಷ್ಟೇ ತಿಹಾರ್‌ ಜೈಲಿನಿಂದ ಹೊರ ಬಂದ ಆಮ್‌ ಆದ್ಮಿ ಪಾರ್ಟಿ (Aam Aadmi Party) ಮುಖಂಡ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಹುದ್ದೆ ತೊರೆಯುವುದಾಗಿ ಅವರು ಭಾನುವಾರ ಪ್ರಕಟಿಸಿದ್ದಾರೆ. ಈ ಹಿನ್ನಲೆಯಲ್ಲಿ ದಿಲ್ಲಿಯ ಮುಂದಿನ ಮುಖ್ಯಮಂತ್ರಿ (Delhi CM) ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಸಿಎಂ ರೇಸ್‌ನಲ್ಲಿ ಹಲವು ಮುಖಂಡರ ಹೆಸರು ಕೇಳಿ ಬಂದಿದೆ.

ದಿಲ್ಲಿ ಸರ್ಕಾರದಲ್ಲಿ ಸಚಿವರಾಗಿರುವ ಅತಿಶಿ, ಸೌರಭ್‌ ಭಾರದ್ವಾಜ್‌, ಕೈಲಾಶ್‌ ಗೆಹ್ಲೋಟ್‌, ಗೋಪಾಲ್‌ ರಾಯ್‌, ಸುನೀತಾ ಕೇಜ್ರಿವಾಲ್‌ ಮತ್ತು ಇಮ್ರಾನ್‌ ಹುಸೈನ್‌ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ.

ಅರವಿಂದ್‌ ಕೇಜ್ರಿವಾಲ್‌ ಪತ್ನಿಗೂ ಇದೆ ಅವಕಾಶ

ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಸಿಎಂ ಹುದ್ದೆ ಅಲಂಕರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಕೇಜ್ರಿವಾಲ್ ಅವರು ಜೈಲಿಗೆ ಹೋದ ಬಳಿಕ ಸುನೀತಾ ಕೇಜ್ರಿವಾಲ್‌ ಸಾರ್ವಜನಿಕ ರ‍್ಯಾಲಿಗಳನ್ನು ಮುನ್ನಡೆಸಿದ್ದಾರೆ. ಪಕ್ಷದ ಪ್ರಚಾರವನ್ನು ಕೈಗೊಂಡಿದ್ದಾರೆ. ಹೀಗಾಗಿ ಅವರಿಗೂ ಅವಕಾಶವಿದೆ ಎನ್ನಲಾಗಿದೆ. ಈ ಮಧ್ಯೆ ಕೆಲವು ನಾಯಕರು ದಲಿತ ನಾಯಕನನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸಬಹುದು ಎಂದು ಹೇಳಿದ್ದಾರೆ. ಆದರೆ ಅವರು ಯಾವುದೇ ನಿರ್ದಿಷ್ಟ ನಾಯಕರನ್ನು ಹೆಸರಿಸಿಲ್ಲ. ಜನರು ಮತ್ತೆ ಆಯ್ಕೆ ಮಾಡುವವರೆಗೂ ತಾವು ಮತ್ತು ಮನೀಶ್ ಸಿಸೋಡಿಯಾ ಸಿಎಂ ಹುದ್ದೆಯನ್ನು ಅಲಕಂರಿಸುವುದಿಲ್ಲ ಎಂದು ಈಗಾಗಲೇ ಅರವಿಂದ್ ಕೇಜ್ರಿವಾಲ್ ಘೋಷಿಸಿರುವುದರಿಂದ ಕುತೂಹಲ ಮೂಡಿದೆ.

ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?

ಭಾನುವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದರು. ʼʼಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನನ್ನ ಪ್ರಾಮಾಣಿಕತೆಯನ್ನು ಒಪ್ಪಿಕೊಂಡಾಗ ಮಾತ್ರ ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸುತ್ತೇನೆ. ನಿರಪರಾಧಿತ್ವವನ್ನು ಸಾಬೀತುಪಡಿಸಲು ನಾವು ಜನರ ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಅವರು ಹೇಳಿದ್ದರು.

ʼʼ2 ದಿನಗಳಲ್ಲಿ ನಾನು ಸಿಎಂ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಪಕ್ಷ ಶೀಘ್ರದಲ್ಲಿಯೇ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಶಾಸಕರ ಸಭೆಯಲ್ಲಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎನ್ನುವುದನ್ನು ತೀರ್ಮಾನಿಸಲಾಗುವುದುʼʼ ಎಂದು ಕೇಜ್ರಿವಾಲ್‌ ವಿವರಿಸಿದ್ದರು. ʼʼನವೆಂಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯೊಂದಿಗೆ ದಿಲ್ಲಿ ಚುನಾವಣೆಯನ್ನೂ ನಡೆಸಬೇಕು. ಚುನಾವಣೆ ನಡೆಯುವವರೆಗೂ ಪಕ್ಷದ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆʼʼ ಎಂದು ತಿಳಿಸಿದ್ದರು.

ಜೈಲಿನಲ್ಲಿ ಇರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಲಿಲ್ಲ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಿದ್ದರು. “ನಾನು ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿದ್ದರಿಂದ ಆಗ ರಾಜೀನಾಮೆ ನೀಡಿರಲಿಲ್ಲ. ಆ ಮೂಲಕ ಅವರ ಸೂತ್ರವನ್ನು ಒಡೆದಿದ್ದೇನೆ. ಸರ್ಕಾರವನ್ನು ಜೈಲಿನಿಂದ ನಡೆಸಲು ಯಾಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೂಡ ಕೇಂದ್ರಕ್ಕೆ ಚಾಟಿ ಬೀಸಿದೆʼʼ ಎಂದು ಕೇಜ್ರಿವಾಲ್‌ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Arvind Kejriwal : ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಡೆಲ್ಲಿಯ ಮುಂದಿನ ಮುಖ್ಯಮಂತ್ರಿ?