Friday, 20th September 2024

MLA Babasaheb Patil: ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿ -ಶಾಸಕ ಬಾಬಾಸಾಹೇಬ ಪಾಟೀಲ

ಚನ್ನಮ್ಮನ ಕಿತ್ತೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕಿತ್ತೂರಿನ ಚನ್ನಮ್ಮಾಜಿ ವೃತ್ತದಲ್ಲಿ ರವಿವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠ ಭೋಧನೆ ಮಾಡಿದ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಂವಿಧಾನ ಬಗ್ಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುತ್ನಾಳ ಹದ್ಡಿ ಯಿಂದ ಶಿವಾ ಪೆಟ್ರೋಲ್ ಪಂಪ್ ವರೆಗೆ ಸುಮಾರು 26 ಕಿ.ಮಿ ದೂರದಲ್ಲಿ ಸುಮಾರು 30 ರಿಂದ 35 ಸಾವಿರ ಜನರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವು ಕಡೆ ಜನರ ಮದ್ಯ ಅಂತರವಿತ್ತು. ಆದರೂ ಕಾರ್ಯ ಕ್ರಮ ಯಶಸ್ವಿಯಾಗಿ ನೆರವೇರಿತು ಎಂದರು.

ಇದನ್ನೂ ಓದಿ: Bagalkot story: ಭ್ರೂಣಹತ್ಯೆಗೆ ಬೀಳದ ಕಡಿವಾಣ

ಮಾನವ ಸರಪಳಿಯಲ್ಲಿ ಶಾಲಾ, ಕಾಲೇಜಿನ ಮಕ್ಕಳು, ಸರ್ಕಾರಿ ಇಲಾಖೆ ಅಧಿಕಾರಿಗಳು, ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಬಳಿಕ ಶಾಸಕ ಬಾಬಾಸಾಹೇಬ ಪಾಟೀಲ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು 50 ಕ್ಕೂ ಹೆಚ್ಚು ಸಸಿಗಳನ್ನು ಹೆದ್ದಾರಿ ಪಕ್ಕದಲ್ಲಿ 1 ಕಿ.ಮೀ. 2 ಸಸಿಗಳನ್ನು ನೆಟ್ಟರು.

ತಹಶಿಲ್ದಾರ ರವೀಂದ್ರ ಹಾದಿಮನಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಬಿಇಓ ಚನ್ನಬಸಪ್ಪ ತುಬಾಕದ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಂಜೀವ ಮಿರಜಕರ, ಆರ್ ಎಫ್ ಓ ಸಂತೋಷ ಸುಂಬಳಿ, ಉಪ ವಲಯ ಅರಣ್ಯಾಧಿಕಾರಿ ಎಸ್.ಕೆ.ಖೋತ, ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಮುಖಂಡರಾದ ಶಂಕರ ಹೋಳಿ, ಆಶ್ಪಾಕ ಹವಾಲ್ದಾರ, ಬಸವರಾಜ ಸಂಗೊಳ್ಳಿ, ಕೃಷ್ಣಾ ಬಾಳೇಕುಂದ್ರಿ, ಸುನೀಲ ಘೀವಾರಿ, ಎಂ ಎಫ್ ಜಕಾತಿ, ಚಂದ್ರಗೌಡ ಪಾಟೀಲ, ಮುದಕಪ್ಪ ಮರಡಿ, ಚನ್ನಗೌಡ ಪಾಟೀಲ ಇತರರು ಇದ್ದರು.