Monday, 28th October 2024

DumpYard: ಚಿಕ್ಕಬಳ್ಳಾಪುರ ನಗರಸಭೆ ಮತ್ತು ರೈತರ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ಬೇರ್ಪಡಿಸಿದ ನಂತರ ಹಸಿ ತ್ಯಾಜ್ಯವನ್ನು ರೈತರ ಸಹಬಾಗಿತ್ವದೊಂದಿಗೆ ರೈತರ ಜಮೀನಿನಲ್ಲಿಯೇ ಸಾವಯುವ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ನಗರಸಭೆ, ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಟಲ್ ಮೆಂಟ್ಸ್ ಮತ್ತು ಗೋದ್ರೇಜ್ ಪ್ರಾಪರ್ಟಿಸ್ ಲಿಮಿಟೆಡ್ ರವರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿರುವ “ಚಿಕ್ಕಬಳ್ಳಾಪುರ ನಗರಸಭೆ ಮತ್ತು ರೈತರ ಸಹಬಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ ಎಂಬ ವಿನೂತನ ಯೋಜನೆ”ಯ ಅನುಭವ ಹಂಚಿಕೆ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರದಲ್ಲಿ ಮಾರ್ಚ್ 2024 ರಲ್ಲಿ ಆರಂಭವಾದ ಈ  ಯೋಜನೆಗೆ ಈಗಾಗಲೇ 230 ರೈತರು ಭಾಗಿದಾರ ರಾಗಿ ಕಳೆದ ಆರು ತಿಂಗಳಿನಲ್ಲಿ ಸುಮಾರು 1800 ಟನ್ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದ್ದಾರೆ. ಈ ಯೋಜನೆ ಯನ್ನು ಅನುಷ್ಠಾನಗೊಳಿಸುತ್ತಿರುವ ಐಐಹೆಚ್‌ಎಸ್ ಮತ್ತು  ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಸಹಕಾರ ನೀಡು ತ್ತಿರುವ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ , ಚಿಕ್ಕಬಳ್ಳಾಪುರ ನಗರ ಸಭೆ, ಸಾವಯುವ ಗೊಬ್ಬರ ಉತ್ಪಾದಿ ಸುತ್ತಿ ರುವ  ರೈತರು ಮತ್ತು ಶಾಲಾ ಮಕ್ಕಳಿಗೆ  ಅಭಿನಂದನಾ ಪತ್ರ ನೀಡಿ ಇಂದು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಯೋಜನೆಯು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ಸಣ್ಣ ನಗರಗಳಿಗೆ ಅನುಕೂಲಕರ. ಯೋಜನಾ ಅನುಭವಗಳು ಎಲ್ಲಾ ಪಟ್ಟಣಗಳಿಗೆ ಲಭ್ಯವಾಗುವಂತೆ, ಯೋಜನೆಯ ಚಟುವಟಿಕೆಗಳನ್ನು ದಾಖಲಿಸ ಲಾಗಿದೆ. ಸಂಪನ್ಮೂಲಗಳೊಂದಿಗೆ ಸವಾಲಾಗಿರುವ ಭಾರತೀಯ ನಗರಗಳು ಈ ಮಾದರಿಯನ್ನು ಕಡಿಮೆ ವೆಚ್ಚದಲ್ಲಿ ಪುನರಾವರ್ತಿಸಬಹುದು.ಘನ ತ್ಯಾಜ್ಯ ನಿರ್ವಹಣೆ ಎಸ್‌ಡಬ್ಲ್ಯುಎಂ ಭಾರತದ ನಗರ ಸ್ಥಳೀಯ ಸಂಸ್ಥೆಗಳು ಎದುರಿಸು ತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಘನತ್ಯಾಜ್ಯ ನಿರ್ವಹಣೆ ಆರ್ಥಿಕವಾಗಿ ಲಾಭದಾಯಕವಲ್ಲ. ದೊಡ್ಡ ನಗರಗಳು ಘನತ್ಯಾಜ್ಯ ಸೇವೆಗಳನ್ನು ನೀಡಲು ಸಾಕಷ್ಟು ಹಣವನ್ನು ಹೊಂದಿದ್ದರೂ, ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಸಣ್ಣ ನಗರ ಗಳು ಘನತ್ಯಾಜ್ಯ ಸೇವೆಗಳನ್ನು ನೀಡಲು ಶ್ರಮಿಸುತ್ತಿವೆ ಎಂದರು.

ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್‌ನಿಂದ ಬೆಂಬಲಿತವಾಗಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ “ಚಿಕ್ಕಬಳ್ಳಾಪುರದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ನಗರ-ರೈತ ಪಾಲುದಾರಿಕೆ ಎಸ್‌ಡಬ್ಲ್ಯುಎಂ  ಎಂಬ ನವೀನ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಅಭಿನಂದನಾರ್ಹ. ಈ ಯೋಜನೆಯು ನಗರ ಸಭೆಗೆ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈತರಿಗೆ ತಮ್ಮ ಜಮೀನಿನಲ್ಲಿ ಯಾವುದೇ ವೆಚ್ಚವಿಲ್ಲದೆ ಸಾವಯವ ಗೊಬ್ಬರ ಸಿಗುವಂತಾಗುತ್ತದೆ ಎಂದು ತಿಳಿಸಿದರು.

ಸುಮಾರು 75000 ಜನಸಂಖ್ಯೆ ಹೊಂದಿರುವ ಚಿಕ್ಕಬಳ್ಳಾಪುರ ನಗರದಲ್ಲಿ ದಿನಕ್ಕೆ ಸುಮಾರು 25 ಟನ್ ಟಿಡಿಪಿ ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ನಗರ ಸಭೆ ತ್ಯಾಜ್ಯವನ್ನು ಸಂಗ್ರಹಿಸಿ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ  ತ್ಯಾಜ್ಯವನ್ನು ವಿಲೇವಾರಿ ಮಾಡುವ ಬದಲು, ಅದನ್ನು ಕೃಷಿ ಭೂಮಿಯಲ್ಲಿ ಸ್ಥಾಪಿಸಲಾದ ಕಾಂಪೋಸ್ಟಿಂಗ್ ಪಿಟ್ ಗಳಿಗೆ ನೀಡಲಾಗುತ್ತದೆ. ಹಸಿ ಕಸವನ್ನು ಸ್ವೀಕರಿಸುವ ರೈತರು ಸುಮಾರು ‌20 ಚದರ ಮೀಟರ್ ಅಳತೆಯ ಕಾಂಪೋಸ್ಟಿಂಗ್ ಪಿಟ್ನಲ್ಲಿ ಗೊಬ್ಬರ ಉತ್ಪಾದಿಸಬಹುದು. IIಊS ಸಂಸ್ಥೆಯು ಸಮರ್ಪಕವಾಗಿ ರೈತರ ಸಂಪರ್ಕ ಸಾಧಿಸಿದೆ. ನಗರಸಭೆ  ಮತ್ತು ಫಲಾನುಭವಿ ರೈತರ ನಡುವೆ ಸಮನ್ವಯ ಸಾದಿಸುವುದು, ರೈತರಿಗೆ ತರಬೇತಿ ಮತ್ತು ಕಾಂಪೋಸ್ಟಿಂಗ್ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಉತ್ತಮವಾಗಿ ಮಾಡುತ್ತಿದೆ ಎಂದರು.

ನಗರ ಸಭೆಯ ಅಧ್ಯಕ್ಷರಾದ ಗಜೇಂದ್ರ ರವರು ಮಾತನಾಡಿ, ನಗರದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯದಲ್ಲಿ ಪ್ರಸ್ತುತ 6 ಟನ್ ತ್ಯಾಜ್ಯವನ್ನು ರೈತರಿಗೆ ಪ್ರತಿದಿನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸುಮಾರು 12 ಟನ್ ಬೇರ್ಪಡಿಸಿದ ಹಸಿ ತ್ಯಾಜ್ಯವನ್ನು ನೀಡಿ ರೈತರ ಮುಖಾಂತರ ಮಣ್ಣಿನ ಗುಣಮಟ್ಟ ಉತ್ತಮ ಪಡಿಸ ಲಾಗುವುದು. ಪ್ರತ್ಯೇಕಿಸಿದ ತ್ಯಾಜ್ಯವು ರೈತರಿಗೆ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಐಐಹೆಚ್‌ಎಸ್ ಸಂಸ್ಥೆಯು ಕಳೆದ ಆರು ತಿಂಗಳಲ್ಲಿ 15 ಸ್ವಯಂಸೇವಕ ತೊಡಗಿಸಿದೆ. 3 ರೋಡ್ ಶೋಗಳು, 6 ಬೀದಿ ನಾಟಕಗಳು, 9 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಅಧಿವೇಶನಗಳು ಮೂಲಕ  ಜಾಗೃತಿ ಮೂಡಿಸುವ ಕೆಲಸವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಾಧವಿ ಕೆ, ನಗರ ಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಉಮಾಶಂಕರ್ ಪಿ, ಗೋದ್ರೇಜ್ ಸಂಸ್ಥೆಯ ಪ್ರತಿನಿಧಿ ಮೋಹಿತ್ ಡೋಲಸ್, IIಊS ಸಂಸ್ಥೆಯ ಪ್ರತಿನಿಧಿ ಮನೀಶ್ ದುಬೆ, ಗೋಪಾಲ್ ಜೈನ, ಪುಷ್ಕರ ಎಸ್ ವಿ, ನಗರಸಭೆ ಸದಸ್ಯರು  ಉಪಸ್ಥಿತರಿದ್ದರು.