Monday, 23rd September 2024

Bigg Boss Kannada 11: ಸುದ್ದಿಗೋಷ್ಠಿ ಕರೆದ ‘ಬಿಗ್‌ಬಾಸ್‌ ಕನ್ನಡ 11’ ಟೀಂ; ಸ್ಪರ್ಧಿಗಳ ಪಟ್ಟಿ ಇಂದೇ ಬಹಿರಂಗ?

ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 11 (Bigg Boss Kannada 11) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶೋಗೆ ಸೆಪ್ಟೆಂಬರ್‌ 29ರಂದು ಅ‍ದ್ಧೂರಿಯಾಗಿ ಚಾಲನೆ ನೀಡಲಾಗುತ್ತದೆ ಎಂದು ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿ ಪ್ರಕಟಿಸಿದೆ. ಎಂದಿನಂತೆ ನಟ ಕಿಚ್ಚ ಸುದೀಪ್‌ (Kiccha Sudeep) ಅವರೇ ಈ ಶೋವನ್ನು ನಿರೂಪಿಸಲಿದ್ದಾರೆ. ಕಾರ್ಯಕ್ರಮದ ಬಗ್ಗೆ ವಿವರ ನೀಡಲು ಇಂದು (ಸೆಪ್ಟೆಂಬರ್‌ 23) ಅಪರಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿದ್ದು, ಕುತೂಹಲ ಮೂಡಿಸಿದೆ.

ನಿರೂಪಕ ಕಿಚ್ಚ ಸುದೀಪ್‌ ಸೇರಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಸಂಬಂಧಿಸಿದ ತಂತ್ರಜ್ಞರು ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಪ್ರೋಮೊ ಈ ಬಾರಿಯ ಶೋ ವಿಭಿನ್ನವಾಗಿರಲಿದೆ ಎನ್ನುವ ಸೂಚನೆ ನೀಡಿದ್ದು, ಹೀಗಾಗಿ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ. ಯಾರೆಲ್ಲ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತೂ ಕೇಳಿ ಬಂದಿದೆ.

ಇವರೇ ಸಂಭಾವ್ಯ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಯಾರೆಲ್ಲ ಸ್ಪರ್ಧಿಸುತ್ತಾರೆ ಎನ್ನುವ ವಿಚಾರವನ್ನು ವಾಹಿನಿ ಇದುವರೆಗೆ ಬಹಿರಂಗಪಡಿಸಿಲ್ಲ. ಅದಾಗ್ಯಾ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಷಿಯಲ್‌ ಮೀಡಿಯಾಲ್ಲಿ ಹರಿದಾಡುತ್ತಿದೆ. ಸ್ಯಾಂಡಲ್‌ವುಡ್‌ ನಟ ಸುನೀಲ್‌ ರಾವ್‌ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಕನ್ನಡದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅವರು ಸದ್ಯ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದು, ಬಿಗ್‌ಬಾಸ್‌ ಮೂಲಕ ಮತ್ತೆ ಮಿಂಚಲಿದ್ದಾರೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಇನ್ನು ಧಾರಾವಾಹಿಗಳ ಮೂಲಕ ಮನೆ ಮಾತಾದ ನಟಿ ಸುಕೃತಾ ನಾಗ್‌ ಹೆಸರೂ ಕೇಳಿ ಬಂದಿದೆ. ʼಅಗ್ನಿ ಸಾಕ್ಷಿʼ ಮೂಲಕ ಜನಪ್ರಿಯರಾದ ಇವರು ಸದ್ಯ ʼಲಕ್ಷ್ಮೀ ಬಾರಮ್ಮʼ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ʼಹಾಯ್‌ ಫ್ರೆಂಡ್ಸ್‌ʼ ಎನ್ನುತ್ತ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ರೇಷ್ಮಾ ದೊಡ್ಡ ಮನೆಗೆ ಎಂಟ್ರಿಯಾಗಲಿದ್ದಾರಂತೆ. ಇವರು ಇತ್ತೀಚೆಗೆ ʼಗಿಚ್ಚಿ ಗಿಲಿ ಗಿಲಿʼ ಶೋದಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಟಾಪ್‌ ನಟಿಯಾಗಿದ್ದ ಪ್ರೇಮಾ ಬಿಗ್‌ಬಾಸ್‌ ಸ್ಪರ್ಧಿಯಾಗುತ್ತಾರಾ? ಸದ್ಯ ಇಂತಹದ್ದೊಂದು ಪ್ರಶ್ನೆ ಎದ್ದಿದೆ. ರಿಯಾಲಿಟಿ ಶೋ ಒಂದರ ಜಡ್ಜ್‌ ಆಗಿರುವ ಪ್ರೇಮಾ ಬಿಗ್‌ಬಾಸ್‌ ಮನೆಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್‌ 10ರ ಸ್ಪರ್ಧಿ ತುಕಾಲಿ ಸಂತು ಅವರ ಪತ್ನಿ, ʼಗಿಚ್ಚಿ ಗಿಲಿ ಗಿಲಿʼ ಶೋದಲ್ಲಿ ಕಾಣಿಸಿಕೊಂಡಿದ್ದ ಮಾನಸ ಅವರ ಹೆಸರೂ ಸಂಭಾವ್ಯರ ಪಟ್ಟಿಯಲ್ಲಿದೆ.

ಇನ್ನು ಕಿರುತೆರೆ ನಟ ಕರಣ್‌, ಜ್ಯೂನಿಯರ್‌ ದರ್ಶನ್‌ ಖ್ಯಾತಿಯ ಅವಿನಾಶ್‌, ಹುಲಿ ಕಾರ್ತಿಕ್‌, ದೀಪಕ್‌ ಗೌಡ, ಚಂದ್ರಪ್ರಭ, ಜಾಹ್ನವಿ, ವರುಣ್‌ ಆರಾಧ್ಯ, ಮೋಕ್ಷಿತಾ ಪೈ ಮುಂತಾದವರ ಹೆಸರೂ ಕೇಳಿ ಬಂದಿದೆ.

ಸ್ವರ್ಗ-ನರಕ ಇಲ್ಲೆ

ಇದು ಹೊಸ ಅಧ್ಯಾಯ ಎಂದು ಈಗಾಗಲೇ ಸುದೀಪ್‌ ಘೋಷಿಸಿದ್ದಾರೆ. ಇದುವರೆಗೆ ಒಂದು ಲೆಕ್ಕವಾದರೆ ಇನ್ನು ಮುಂದೆ ಬೇರೆಯದೇ ಲೆಕ್ಕ ಎನ್ನುವ ಸೂಚನೆಯನ್ನು ಪ್ರೋಮೊದಲ್ಲಿ ನೀಡಲಾಗಿದೆ. ಅಲ್ಲದೆ ಸ್ವರ್ಗ-ನರಕ ಇಲ್ಲೇ ಎನ್ನುವುದನ್ನೂ ತಿಳಿಸಲಾಗಿದೆ. ಹೀಗಾಗಿ ಸುದ್ದಿಗೋಷ್ಠಿಯಲ್ಲಿ ಶೋ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Kiccha Sudeep: ದುಬೈನಲ್ಲಿ ‘ಕನ್ನಡ್’ ಎಂದ ಪರಭಾಷಿಕರ ಬಾಯಲ್ಲಿ ‘ಕನ್ನಡ’ ಎಂದು ಹೇಳಿಸಿದ ಕಿಚ್ಚ ಸುದೀಪ್!