Monday, 23rd September 2024

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನ ಮೂವರು ಆರೋಪಿಗಳಿಗೆ ಜಾಮೀನು; ದರ್ಶನ್‌ ಅರ್ಜಿ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ರ (Actor Darshan) ಮೂವರು ಸಹಚರರಿಗೆ ಜಾಮೀನು ಮಂಜೂರು ಆಗಿದೆ. ಪ್ರಕರಣದ ಎ15 ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ, ಎ16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್‌ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇನ್ನು ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು 57ನೇ ಸಿಸಿಎಚ್‌ ನ್ಯಾಯಾಲಯವು ಮುಂದೂಡಿದೆ. ದರ್ಶನ್ ಜಾಮೀನು ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿದ್ದಾರೆ. ಅದೇ ರೀತಿ ನಟಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 25ಕ್ಕೆ ಮುಂದೂಡಲಾಗಿದೆ.

ತುಮಕೂರು ಜೈಲ್ಲಿನಲ್ಲಿರುವ ಆರೋಪಿ ಕೇಶವ್ ಮೂರ್ತಿ ಎರಡು ದಿನಗಳ ನಂತರ ಬಿಡುಗಡೆ ಆಗುವ ಸಾಧ್ಯತೆ ಇದೆ. ಜಾಮೀನು‌ ಆದೇಶ ಪ್ರತಿ ಹೈ ಕೋರ್ಟ್‌ನಿಂದ 24 ನೇ ಎಸಿಎಂಎಂಗೆ ಬರಬೇಕು. ಜಾಮೀನು‌ ಷರತ್ತು ಪೂರೈಸಿದ ಬಳಿಕ ಬಿಡುಗಡೆ ಆದೇಶ ಪ್ರತಿ ತುಮಕೂರು ಜೈಲಿಗೆ ತಲುಪಲಿದೆ.

ಈ ಸುದ್ದಿಯನ್ನೂ ಓದಿ | Bengaluru vs North Indians: ನಾವಿಲ್ಲದಿದ್ರೆ ಬೆಂಗಳೂರೇ ಖಾಲಿ ಎಂದಿದ್ದ ಯುವತಿ ಕೆಲಸದಿಂದ ವಜಾ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಮಂದಿ ಆರೋಪಿಗಳ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ ನ್ಯಾಯಾಲಯಕ್ಕೆ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.‌ ಇತ್ತೀಚೆಗೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾಗೌಡ ಸೇರಿ ಕೆಲ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಇದೀಗ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಪ್ರೀತಿಸಿದ್ದು ಅಣ್ಣ, ಕೊಲೆಯಾದದ್ದು ತಮ್ಮ; ಹೆತ್ತವರ ಮುಂದೆಯೇ ಇರಿದು ಕೊಲೆ

murder case kalaburagi

ಕಲಬುರಗಿ: ಅಣ್ಣ ಪ್ರೇಮ ಪ್ರಕರಣದಿಂದ (Love Affair) ರೊಚ್ಚಿಗೆದ್ದ ಯುವತಿಯ ಮನೆಯವರು, ಆತನ ಮನೆಗೆ ಆಗಮಿಸಿ ಜಗಳ ತೆಗೆದು ಆತನ ತಮ್ಮನನ್ನು ಇರಿದು ಕೊಂದ ಘಟನೆ (Kalaburagi Murder case) ಕಲಬುರಗಿ (Kalaburagi News) ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಿತ್‌ ಮಲ್ಲಾಬಾದ್ (19) ಕೊಲೆಯಾದ ಯುವಕ. ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದ ಸುಮಿತ್‌, ಮುಂಬೈನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ. ಇದೇ ಊರಲ್ಲಿ ಸುಮಿತ್ ಸಹೋದರ ಸಚಿನ್ ವಾಸವಾಗಿದ್ದಾನೆ. ಸಚಿನ್ ನಾಗನಹಳ್ಳಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಸಲ ನ್ಯಾಯ ಪಂಚಾಯಿತಿ ಮಾಡಿದ್ದರು.

ನಿನ್ನೆ ಸಂಜೆ ಸಚಿನ್ ಮನೆಗೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಬಂದಿದ್ದಾರೆ. ಆಗ ಸಚಿನ್ ಮನೆಯಲ್ಲಿರದ ಕಾರಣ ಆತನ ತಾಯಿ ಮತ್ತು ಸಹೋದರನ ಜೊತೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತೆರಳಿ ಸುಮಿತ್​​ನನ್ನು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಸುಮಿತ್‌ ತಾಯಿ ಮಗನನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹನ್ನೆರಡು ಗಂಟೆಗಳ ತೀವ್ರ ಚಿಕಿತ್ಸೆ ನೀಡಲಾಗಿದ್ದು, ಅದು ಫಲಕಾರಿಯಾಗಿದೆ ಬೆಳಗ್ಗೆ ಸುಮಿತ್ ಸಾವನ್ನಪ್ಪಿದ್ದಾನೆ.

ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಲಬುರಗಿ ಪೊಲೀಸ್ ಕಮಿಷನರ್ ಡಾ ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಕೊಲೆ‌ ನಡೆದಿದೆ. ಕೊಲೆಯಾದ ಯುವಕನ ಸಹೋದರ ಮತ್ತು ಯುವತಿಯ ನಡುವಿನ ವಿಚಾರದಿಂದ ಕೂಲೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ. ಆರೋಪಿಗಳ ಬಂಧನದ ಬಳಿಕ ಕೊಲೆಯ ಹಿಂದಿನ ಅಸಲಿ ಕಾರಣ ಬಯಲಾಗಲಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಇದನ್ನೂ ಓದಿ: Murder Case: ತಾಯಿಯ ತಿಥಿಗೆ ಬಂದಿದ್ದ ಉದ್ಯಮಿಯ ಕೊಚ್ಚಿ ಕೊಲೆ, ಪತ್ನಿ ಗಂಭೀರ

ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.