Monday, 23rd September 2024

Bengaluru News: ಇಂದಿನಿಂದ ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ಈರುಳ್ಳಿ ಮಾರಾಟ

Bengaluru News

ಬೆಂಗಳೂರು: ರಾಜಧಾನಿ ಬೆಂಗಳೂರಿನ ಈರುಳ್ಳಿ (Onion) ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ನ್ಯಾಶನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ – (ಎನ್ಸಿಸಿಎಫ್–NCCF) ಬೆಂಗಳೂರು ಶಾಖೆ (Bengaluru News) ಭಾರತವು ಸರ್ಕಾರದ ನಿರ್ದೇಶನದ ಅನುಸಾರ ಪ್ರಕಾರ ರಿಯಾಯತಿ ದರದಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್- PSF) ಅಡಿಯಲ್ಲಿ ಈರುಳ್ಳಿ ಮಾರಾಟವನ್ನು ಇಂದಿನಿಂದ ಆರಂಭಿಸಿದೆ.

ಇಂದು ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಧ್ಯಾಹ್ನ 12.30 ರಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ನಂ.27, ಡಾಲರ್ಸ್ ಕಾಲೋನಿ, 1 ಮುಖ್ಯ ರಸ್ತೆ, ನಂದಿನಿ ಲೇಔಟ್, ಬೆಂಗಳೂರು – 560096 ನಲ್ಲಿ ಆರಂಭವಾಗಿದೆ.

ಈ ಸುದ್ದಿಯನ್ನೂ ಓದಿ | Ambulance Service: ಅಪಘಾತಕ್ಕೀಡಾದವರ ರಕ್ಷಣೆಗೆ ಸಿಎಂ ಆಪತ್ಕಾಲಯಾನ ಯೋಜನೆ; 65 ನೂತನ ಆಂಬ್ಯುಲೆನ್ಸ್‌ಗೆ ಚಾಲನೆ

35 ರೂಪಾಯಿಗೆ ಒಂದು ಕಿಲೋ ಈರುಳ್ಳಿಯನ್ನು ಈ ಮೊಬೈಲ್ ವ್ಯಾನ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯ ವರದಿಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಈ ಯೋಜನೆಯಡಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಖರೀದಿಸಿದ ಈರುಳ್ಳಿ ಸೋಮವಾರದಿಂದ ಬೆಂಗಳೂರು ನಗರದಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಿಯಾಯತಿ ದರದಲ್ಲಿ ಈರುಳ್ಳಿ ದೊರೆಯಲಿದೆ.

ಎನ್‌ಸಿಸಿಎಫ್ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಸಂಚಾರಿ ಈರುಳ್ಳಿ ವ್ಯಾನ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ಶಾಖಾ ವ್ಯವಸ್ಥಾಪಕ ರವಿಚಂದ್ರ ಮಾಹಿತಿ ನೀಡಿದರು.

ಈರುಳ್ಳಿಯನ್ನು ವಿತರಿಸಲು ಒಟ್ಟು 112 ಮೊಬೈಲ್ ವ್ಯಾನ್‌ಗಳನ್ನು ಬಳಸಲಾಗುವುದು. ಈರುಳ್ಳಿ ದರಗಳು ಸಹಜ ಸ್ಥಿತಿಗೆ ಬರುವವರೆಗೂ ಮಾರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru Power Cut : ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಗುರುವಾರದ ವೇಳೆಗೆ ಈರುಳ್ಳಿ ಮಾರಾಟ ವಾಹನಗಳ ಸಂಖ್ಯೆಯನ್ನು 50 ವ್ಯಾನ್‌ಗಳಿಗೆ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮುಂದಿನ ವಾರ ಈರುಳ್ಳಿ ಮಾರಾಟ ವಾಹನಗಳ ಸಂಖ್ಯೆ 112 ಮುಟ್ಟಲಿದೆ ಎಂದು ಅವರು ವಿವರಿಸಿದರು.